ಬಣ್ಣದ ಜಗತ್ತಿಗಿಂತಲೂ ವರ್ಣಮಯವಾಗಿತ್ತು ಸುಶಾಂತ್ ಜೀವನ ಮತ್ತು ಕನಸು...
ನಟ ಸುಶಾಂತ್ ಸಿಂಗ್ ರಜಪೂತ್ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ಹೊತ್ತು ನಟನೆಯ ಕ್ಷೇತ್ರಕ್ಕೆ ಕಾಲಿಟ್ಟವರಲ್ಲ. ಆರಂಭದಲ್ಲಿ ಅವರಿಗೆ ಅಭಿನಯ ಎನ್ನುವುದು ಆಸಕ್ತಿಯ ಕ್ಷೇತ್ರವೇನೂ ಆಗಿರಲಿಲ್ಲ. ಆದರೆ ಸಿನಿಮಾಗಳನ್ನು ನೋಡುತ್ತಿದ್ದರು. ಎಂಜಿನಿಯರಿಂಗ್ ಓದಲು ಹೊರಟವರು ನೃತ್ಯ ಕಲಿತರು. ಅಲ್ಲಿಂದ ಕಿರುತೆರೆಗೆ ಪ್ರವೇಶ ದೊರಕಿತು. ಸಿನಿಮಾ ಹಾದಿ ತೆರೆದುಕೊಂಡಿತು. ಶಾರುಖ್ ಖಾನ್ ಅವರ ಮೆಚ್ಚಿನ ನಟ. ಅಪಾರ ಬುದ್ಧಿವಂತರಾಗಿದ್ದ ಸುಶಾಂತ್, ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿದ್ದರು.
ಸುಶಾಂತ್ ಸಿಂಗ್ ಒಬ್ಬ ನಟನಾಗಿ ಹೆಚ್ಚಿನವರಿಗೆ ಗೊತ್ತು. ಕಡಿಮೆ ಸಿನಿಮಾಗಳಲ್ಲಿ ನಟಿಸಿದ್ದರೂ ಆ ಸಿನಿಮಾಗಳ ಮೂಲಕವೇ ಜನರ ಮನಸಲ್ಲಿ ಅಚ್ಚೊತ್ತಿದ್ದರು. ಅವರ ಆತ್ಮಹತ್ಯೆಯ ಸುತ್ತ ಅನೇಕ ಬಗೆಯ ಚರ್ಚೆ, ಅಭಿಪ್ರಾಯಗಳು ನಡೆಯುತ್ತಿವೆ. ಆದರೆ ಅವರೊಬ್ಬ ನಟ ಅಥವಾ ನೃತ್ಯಪಟು ಮಾತ್ರವಲ್ಲ. ಅದರಾಚೆಗೂ ಅವರ ಸಾಧನೆಗಳು ಸಾಕಷ್ಟಿದ್ದವು. ಅವುಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಮುಂದೆ ಓದಿ...

ಎರಡೂ ಕೈಗಳಲ್ಲಿ ಬರೆಯುವ ಸಾಮರ್ಥ್ಯ
'ಥ್ರೀ ಈಡಿಯಟ್ಸ್' ಚಿತ್ರದಲ್ಲಿ ಕಾಲೇಜಿನ ಡೈರೆಕ್ಟರ್ ಪಾತ್ರದಲ್ಲಿ ನಟಿಸಿದ್ದ ಬೊಮನ್ ಇರಾನಿ, ಬೋರ್ಡ್ ಮೇಲೆ ಎರಡೂ ಕೈಗಳಲ್ಲಿ ಬರೆಯುವ ಸನ್ನಿವೇಶವನ್ನು ನೀವು ನೋಡಿರಬಹುದು. ಅದೇ ರೀತಿ ಎಡಗೈ ಮತ್ತು ಬಲಗೈ ಎರಡರಲ್ಲಿಯೂ ಒಂದೇ ಬಾರಿಗೆ ಬರೆಯುವ ಸಾಮರ್ಥ್ಯ ಸುಶಾಂತ್ ಅವರಿಗೆ ಇತ್ತು. ಅವರ ಈ ಕೌಶಲದ ವಿಡಿಯೋ ವೈರಲ್ ಆಗಿತ್ತು.

ಕೆಂಡಲ್ ಜೆನ್ನರ್ ಜತೆ ಫೋಟೊಶೂಟ್
ಫ್ಯಾಷನ್ ಮ್ಯಾಗಜಿನ್ ಒಂದರ ಕವರ್ ಫೋಟೊಕ್ಕಾಗಿ ಅಮೆರಿಕದ ಸೂಪರ್ ಮಾಡೆಲ್ ಕೆಂಡಲ್ ಜೆನ್ನರ್ ಜತೆ ಸುಶಾಂತ್ ಸಿಂಗ್ ಫೋಟೊಶೂಟ್ನಲ್ಲಿ ಭಾಗವಹಿಸಿದ್ದರು. ಕೆಂಡಲ್ ಜತೆ ಹೀಗೆ ಪೋಸ್ ನೀಡಿದ ಭಾರತದ ಏಕೈಕ ನಟ ಸುಶಾಂತ್. ಸುಶಾಂತ್ ಸಿಂಗ್ ಕೊನೆಯುಸಿರೆಳೆಯುವ ಮುನ್ನ ಅವರ ಇನ್ಸ್ಟಾಗ್ರಾಂ ಫಾಲೋವರ್ಗಳ ಸಂಖ್ಯೆ ಸುಮಾರು 9 ಮಿಲಿಯನ್ ಇತ್ತು. ಆದರೆ ಅವರೊಂದಿಗೆ ಪೋಸ್ ನೀಡಿದ್ದ ಖ್ಯಾತ ಮಾಡೆಲ್ ಕೆಂಡಲ್ ಜೆನ್ನರ್ ಫಾಲೋವರ್ಗಳ ಸಂಖ್ಯೆ 132 ಮಿಲಿಯನ್!

ಐಶ್ವರ್ಯ ರೈ ಜತೆ ನರ್ತಿಸಿದ್ದರು
2006ರಲ್ಲಿ ಭಾರತದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ನ ಸಮಾರೋಪ ಸಮಾರಂಭದಲ್ಲಿ ಐಶ್ವರ್ಯಾ ರೈ ನೃತ್ಯ ಪ್ರದರ್ಶಿಸಿದ್ದರು. ಅದರ ಹಿನ್ನೆಲೆಯಲ್ಲಿ ಶೈಮಕ್ ದಾವರ್ ಡ್ಯಾನ್ಸ್ ತಂಡ ನರ್ತಿಸಿತ್ತು. ಅದರಲ್ಲಿ ಸುಶಾಂತ್ ಸಿಂಗ್ ಕೂಡ ಇದ್ದರು. ಐಶ್ವರ್ಯಾ ಜತೆ ಸಹ ನೃತ್ಯಪಟುವಾಗಿ ನರ್ತಿಸಿದ್ದ ಈ ಕಾರ್ಯಕ್ರಮ ಸುಶಾಂತ್ ಅವರ ಪಾಲಿನ ಬಹುದೊಡ್ಡ ಕಾರ್ಯಕ್ರಮವಾಗಿತ್ತು.

ಒಲಿಂಪಿಯಾಡ್ ವಿನ್ನರ್
ಸುಶಾಂತ್ ಬಿಹಾರದ ಪಟ್ನಾ ಮೂಲದವರು. ಅವರ ನಾಲ್ವರು ಸಹೋದರಿಯರ ಪೈಕಿ ಮಿತು ಸಿಂಗ್, ರಾಜ್ಯಮಟ್ಟದ ಕ್ರಿಕೆಟ್ ಆಟಗಾರ್ತಿ. ಓದಿನಲ್ಲಿ ಅಪಾರ ಜಾಣರಾಗಿದ್ದ ಸುಶಾಂತ್, ಭೌತಶಾಸ್ತ್ರದಲ್ಲಿ ರಾಷ್ಟ್ರಮಟ್ಟದ ಒಲಿಂಪಿಯಾಡ್ ವಿನ್ನರ್ ಆಗಿದ್ದರು.

ಎಐಇಇಇಯಲ್ಲಿ ಏಳನೇ ರಾಂಕ್
ಎಂಜಿನಿಯರಿಂಗ್ ಪದವಿಗಾಗಿ ದೆಹಲಿಗೆ ತೆರಳಿದ್ದ ಸುಶಾಂತ್ 11 ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನು ಪಾಸ್ ಮಾಡಿದ್ದರು. 2003ರಲ್ಲಿ ಎಐಇಇಇಯಲ್ಲಿ ಏಳನೇ ರಾಂಕ್ ಪಡೆದಿದ್ದರು. ಎಂಜಿನಿಯರಿಂಗ್ ಓದುವಾಗ ಅವರು ಶೈಮುಕ್ ದಾವರ್ ಅವರ ನೃತ್ಯಶಾಲೆ ಸೇರಿಕೊಂಡರು. ಅನೇಕ ಕಡೆ ನೃತ್ಯ ಪ್ರದರ್ಶನ ನೀಡಿದ್ದರು. ಅಲ್ಲಿಂದ ನಟನೆಯತ್ತ ಗಮನ ಹೊರಳಿತು. ಹೀಗಾಗಿ ಎಂಜಿನಿಯರಿಂಗ್ ಮೂರನೇ ವರ್ಷದಲ್ಲಿಯೇ ಓದನ್ನು ಕೈಬಿಟ್ಟು ನಟನೆಗೆ ತೆರಳಿದರು.

ಸ್ಕಾಲರ್ ಶಿಪ್ ತಿರಸ್ಕರಿಸಿದ್ದರು
ಸುಶಾಂತ್ ಅವರಿಗೆ ಕ್ಯಾಲಿಫೋರ್ನಿಯಾದ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ ಸ್ಕಾಲರ್ ಶಿಪ್ ಆಫರ್ ಮಾಡಿತ್ತು. ಏಷ್ಯಾದ ಅತಿ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಓದಿದ್ದು ಇದೇ ವಿಶ್ವವಿದ್ಯಾಲಯದಲ್ಲಿ. ಆದರೆ ನಟನಾಗುವ ಆಸೆ ಹೊತ್ತಿದ್ದ ಸುಶಾಂತ್, ಈ ಆಫರ್ ತಿರಸ್ಕರಿಸಿದ್ದರು.

ಪವಿತ್ರ ರಿಷ್ತಾದಲ್ಲಿ ಪ್ರೇಮ
ಬಾರಿ ಜಾನ್ ಅವರ ಅಭಿನಯ ವರ್ಕ್ ಶಾಪ್ಗಳಲ್ಲಿ ಭಾಗವಹಿಸಿದ್ದ ಸುಶಾಂತ್, ಮುಂಬೈಗೆ ತೆರಳಿ ನಾದಿರಾ ಬಬ್ಬರ್ ಅವರ ಏಕ್ಜುತೆ ರಂಗಭೂಮಿ ತಂಡವನ್ನು ಸೇರಿಕೊಂಡರು. ಕಿಸ್ ದೇಶ್ ಮೇನ್ ಹೈ ಮೇರಾ ದಿಲ್ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು. ಏಕ್ತಾ ಕಪೋರ್ ನಿರ್ಮಾಣದ 'ಪವಿತ್ರ ರಿಷ್ತಾ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಹೆಸರು ಗಳಿಸಿದರು. ಸಹನಟಿ ಅಂಕಿತಾ ಲೋಖಂಡೆ ಜತೆ ಪ್ರೇಮ ಬೆಳೆಯಿತು. 2016ರವರೆಗೂ ಇಬ್ಬರೂ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು.

ಅಪರೂಪದ ಟೆಲಿಸ್ಕೋಪ್ಗಳು
ಖಗೋಳಶಾಸ್ತ್ರದ ಕುರಿತು ಸುಶಾಂತ್ಗೆ ಅಪರಿಮಿತ ಆಸಕ್ತಿ ಇತ್ತು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ನಕ್ಷತ್ರ ಮತ್ತು ಗ್ರಹಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದರು. ಖಗೋಳ ವೀಕ್ಷಣೆಗಾಗಿ ಬಹ ದುಬಾರಿಯಾಗಿದ್ದ ಬೋಯಿಂಗ್ 737 ಫಿಕ್ಸಡ್ ಬೇಸ್ ಫ್ಲೈಟ್ ಸಿಮುಲೇಟರ್ ಖರೀದಿಸಿದ್ದರು. ಅಷ್ಟೇ ಅಲ್ಲ, ಅವರ ಬಳಿ ವಿವಿಧ ಬಗೆಯ ಟೆಲಿಸ್ಕೋಪ್ಗಳಿದ್ದವು.

ಶಾರುಖ್ ಖಾನ್ಗೆ ಹೋಲಿಕೆ
ಚಿಕ್ಕಂದಿನಿಂದಲೂ ಶಾರುಖ್ ಖಾನ್ ಅಭಿಮಾನಿಯಾಗಿದ್ದ ಸುಶಾಂತ್, ಹುಡುಗಿಯರನ್ನು ಇಂಪ್ರೆಸ್ ಮಾಡಲು ಶಾರುಖ್ ಅವರನ್ನು ಅನುಕರಿಸುತ್ತಿದ್ದುದ್ದಾಗಿ ಹೇಳಿಕೊಂಡಿದ್ದರು. ಗಾಡ್ ಫಾದರ್ಗಳಿಲ್ಲದೆ ಬಹಳ ಕಷ್ಟಪಟ್ಟು ಕಿರುತೆರೆ ಮೂಲಕ ಚಿತ್ರರಂಗಕ್ಕೆ ಬಂದಿದ್ದ ಅವರನ್ನು ಶಾರುಖ್ಗೆ ಹೋಲಿಸಲಾಗುತ್ತಿತ್ತು.

ಅಭಿಮಾನಿಗಳನ್ನೂ ಫಾಲೋ ಮಾಡುತ್ತಿದ್ದರು
ಚಿತ್ರರಂಗದಲ್ಲಿ ಬಹುತೇಕ ಕಲಾವಿದರು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುತ್ತಾರೆ. ಅವರು ಫಾಲೋ ಮಾಡುವುದು ಕೆಲವೇ ಮಂದಿಯನ್ನು ಮಾತ್ರ. ಆದರೆ ಸುಶಾಂತ್ ಸಾವಿರಾರು ಖಾತೆಗಳನ್ನು ಫಾಲೋ ಮಾಡುತ್ತಿದ್ದರು. ತಮ್ಮ ಪೋಸ್ಟ್ಗಳಿಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದ ಅಭಿಮಾನಿಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದದ್ದು ಮಾತ್ರವಲ್ಲ, ಅವರ ಖಾತೆಗಳನ್ನೂ ಫಾಲೋ ಮಾಡುತ್ತಿದ್ದ ಅಪರೂಪದ ನಟ.

ಐವತ್ತು ಕನಸುಗಳ ಪಟ್ಟಿ
ಸುಶಾಂತ್ ಸುಮಾರು 50 ಕನಸುಗಳ ಪಟ್ಟಿ ಮಾಡಿಕೊಂಡಿದ್ದರು. ಪೈಲಟ್ ಆಗುವುದು, ನಾಸಾ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಗಳಿಗೆ ಭೇಟಿ ನೀಡುವುದು, ಮಕ್ಕಳನ್ನು ನಾಸಾದ ವರ್ಕ್ಶಾಪ್ಗೆ ಕಳುಹಿಸುವುದು ಅವರ ಕನಸುಗಳಲ್ಲಿ ಸೇರಿದ್ದವು.

ಮಾರ್ಷಿಯಲ್ ಆರ್ಟ್ಸ್ ಕಲಿತಿದ್ದರು
ಸುಶಾಂತ್ ಧರಿಸುತ್ತಿದ್ದ ಟಿ ಶರ್ಟ್ಗಳಲ್ಲಿ ಸಾಮಾನ್ಯವಾಗಿ ಸ್ಫೂರ್ತಿದಾಯಕ ಸಾಲುಗಳಿದ್ದರೆ, ಅವರ ಅನೇಕ ಉಡುಪುಗಳಲ್ಲಿ ವಿಜ್ಞಾನದ ಸೂತ್ರಗಳು ಇರುತ್ತಿದ್ದವು. ತಮ್ಮ ವೈಜ್ಞಾನಿಕ ತಿಳಿವಳಿಕೆಯನ್ನು ಅವರು ಸ್ನೇಹಿತರೊಂದಿಗೂ ಹಂಚಿಕೊಳ್ಳುತ್ತಿದ್ದರು. ಇಂಡಿಯನ್-ಆಸ್ಟ್ರೇಲಿಯನ್ ಕೊರಿಯೊಗ್ರಾಫರ್ ಆಶ್ಲೆ ಲೋಬೋ ತಂಡದೊಂದಿಗೆ ನೃತ್ಯ ಮಾಡಿದ್ದ ಸುಶಾಂತ್, ಮಾರ್ಷಿಯಲ್ ಆರ್ಟ್ಸ್ನಲ್ಲಿಯೂ ತರಬೇತಿ ಪಡೆದಿದ್ದರು.

ಅಮ್ಮನ ನೆನಪು
'ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ' ಚಿತ್ರಕ್ಕಾಗಿ ಒಂದೂವರೆ ವರ್ಷ ತಯಾರಿ ನಡೆಸಿದ್ದರು. ಧೋನಿ ಅವರೊಂದಿಗಿದ್ದು ಅವರ ಪ್ರತಿ ಹಾವಭಾವಗಳನ್ನು ಕಲಿಯುತ್ತಿದ್ದರು. ಈ ಚಿತ್ರದ ಒಂದೇ ಒಂದು ಸನ್ನಿವೇಶವಾದ ಹೆಲಿಕಾಪ್ಟರ್ ಶಾಟ್ಗಾಗಿ ದಿನವೂ 225 ಬಾರಿ ಅಭ್ಯಾಸ ನಡೆಸುತ್ತಿದ್ದರು. 12ನೇ ತರಗತಿ ಓದುವಾಗ ಅಮ್ಮನನ್ನು ಕಳೆದುಕೊಂಡಿದ್ದ ಸುಶಾಂತ್, ಪ್ರತಿ ಬಾರಿಯೂ ಅಮ್ಮನನ್ನು ನೆನೆದು ಕಣ್ಣೀರಿಡುತ್ತಿದ್ದರು. ಅವರ ಕೊನೆಯ ಇನ್ಸ್ಟಾಗ್ರಾಂ ಪೋಸ್ಟ್ ಕೂಡ ಅಮ್ಮನ ಕುರಿತಾಗಿತ್ತು.

ಹೆಸರು ಹೇಳದೆ ಕೋಟಿ ನೀಡಿದ್ದರು...
2018ರಲ್ಲಿ ಕೇರಳ ಪ್ರವಾಹದ ದುರಂತಕ್ಕೆ ಒಳಗಾದಾಗ ಸುಶಾಂತ್ ಸಿಂಗ್, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದರು. ಆದರೆ ವಿಶೇಷವೆಂದರೆ ಸುಶಾಂತ್ ಅದನ್ನು ತಮ್ಮ ಹೆಸರಿನಲ್ಲಿ ನೀಡಿರಲಿಲ್ಲ. ಅಭಿಮಾನಿಯ ಹೆಸರಿನಲ್ಲಿ ಕೊಟ್ಟಿದ್ದರು.
'ನನ್ನ ಬಳಿ ಹಣವಿಲ್ಲ. ಆದರೆ ಸ್ವಲ್ಪ ಆಹಾರ ವಿತರಣೆ ಮಾಡಲು ಬಯಸಿದ್ದೇನೆ, ಹೇಗೆ ದೇಣಿಗೆ ನೀಡುವುದು? ದಯವಿಟ್ಟು ಹೇಳಿ' ಎಂದು ಅಭಿಮಾನಿಯೊಬ್ಬರು ಕೇಳಿದ್ದರು. ಆ ಕಾಮೆಂಟ್ ಗಮನಿಸಿದ್ದ ಸುಶಾಂತ್, ನಿಮ್ಮ ಹೆಸರಿನಲ್ಲಿ 1 ಕೋಟಿ ರೂ. ನೀಡುತ್ತೇನೆ. ಅದು ಅಲ್ಲಿನ ನಿಮ್ಮ ಸ್ನೇಹಿತರನ್ನು ತಲುಪುವಂತೆ ನೋಡಿಕೊಳ್ಳಿ' ಎಂದಿದ್ದ ಸುಶಾಂತ್, ಕೊಟ್ಟ ಮಾತಿನಂತೆ ಹಣ ನೀಡಿದ್ದರು. ಸುಶಾಂತ್ ಸಾವಿನ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಸಂಗತಿ ಹಂಚಿಕೊಂಡಿದ್ದರು.


Click it and Unblock the Notifications











