'ಈಗಿನ ಸಿನಿಮಾಗಳಿಗೆ ಒಂದೆರಡು ವಾರ ಲೈಫ್ ಅಷ್ಟೇ': ಕಾರಣಗಳು ಹಲವು
ಕೆಲವು ವರ್ಷಗಳ ಬಳಿಕ 50ನೇ ದಿನದ ಸಂಭ್ರಮ, 100ನೇ ದಿನದ ಸಂಭ್ರಮ, ಬೆಳ್ಳಿ ಸಂಭ್ರಮ ಎನ್ನುವ ಪರಿಕಲ್ಪನೆ ಇರುವುದಿಲ್ಲ. ಡಿಜಿಟಲ್, ಒಟಿಟಿ ದುನಿಯಾದಲ್ಲಿ ಚಿತ್ರಮಂದಿರಗಳು ಪ್ರಾಮುಖ್ಯತೆ ಕಡಿಮೆಯಾಗುತ್ತಿವೆ. ಚಿತ್ರಮಂದಿರದಲ್ಲಿ ನೋಡುವ ಅನುಭವವೇ ಬೇರೆ ಎನ್ನುವ ಪ್ರೇಕ್ಷಕ ವರ್ಗ ಇದ್ದರೂ ಒಂದೆರಡು ದಿನಕ್ಕೆ ಸೀಮಿತವಾಗಿದ್ದಾರೆ. ಅಷ್ಟರಲ್ಲೇ ಟಿವಿಯಲ್ಲಿ, ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡಿದ್ರೆ ಜನ ಥಿಯೇಟರ್ ಕಡೆ ಬರಲ್ಲ ಎಂಬ ಆತಂಕ ಕಾಡ್ತಿದೆ.
ಅದೊಂದು ಸಮಯ ಇತ್ತು. ಸಿನಿಮಾ ರಿಲೀಸ್ ಆದರೆ 50 ದಿನ, 100 ದಿನಗಳವರೆಗೂ ಪ್ರದರ್ಶನ ಕಾಣ್ತಿದ್ದ ಉದಾಹರಣೆಗಳಿವೆ. ಅದರಲ್ಲು ಡಾ ರಾಜ್ ಕುಮಾರ್ ಚಿತ್ರಗಳು ರಿಲೀಸ್ ಆಗುತ್ತಿದ್ದ ಚಿತ್ರಮಂದಿರದಲ್ಲೆಲ್ಲಾ ಆರೇಳು ವಾರ ಪ್ರದರ್ಶನ ಮಾಡ್ತಿತ್ತು. ಸಿನಿಮಾ ವಿತರಕರು ಸಹ ಚಿತ್ರಮಂದಿರದ ಮಾಲೀಕರೊಂದಿಗೆ ಒಂದಿಷ್ಟು ವಾರ ಎಂದು ಬಾಡಿಗೆ ಕಟ್ಟುತ್ತಿದ್ದರು. ಇಷ್ಟು ವಾರ ಪ್ರದರ್ಶಿಸಲೇ ಬೇಕು ಎಂದು ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಆದ್ರೀಗ, ನಿಯಮಗಳು ಬದಲಾಗಿದೆ. ಚಿತ್ರಮಂದಿರಗಳಲ್ಲಿ ಬಾಡಿಗೆ ಒಪ್ಪಂದದ ನಿಯಮ ಹೋಗಿ, ಶೇಕಡಾವಾರು ಲೆಕ್ಕದಲ್ಲಿ ಲಾಭಹಂಚಿಕೆ ವಿಧಾನ ಅನುಸರಿಸಲಾಗುತ್ತಿದೆ. ಹಾಗಾಗಿ, ಲಾಭ ಇದ್ದರೆ ಮಾತ್ರ ಪ್ರದರ್ಶನ ಮುಂದುವರಿಸಲಾಗುತ್ತದೆ. ಇಲ್ಲವಾದಲ್ಲಿ ಬೇರೆ ಸಿನಿಮಾ ಹಾಕ್ತಾರೆ.
ಈಗಿನ ಚಿತ್ರಮಂದಿರದ ಮಾಲೀಕರು ಹೇಳುವ ಪ್ರಕಾರ, ಈಗಿನ ಸಿನಿಮಾಗಳಿಗೆ ಒಂದು ವಾರ ಅಥವಾ ಎರಡು ವಾರ ಲೈಫ್ ಅಷ್ಟೇ. ಸ್ಟಾರ್ ನಟರ ಚಿತ್ರಗಳಂದ್ರೆ ಎರಡು ವಾರ ಹೋಗುತ್ತೆ. ಹೊಸಬರು ಅಂದ್ರೆ ಒಂದು ವಾರ ಜನ ಬರ್ತಾರೆ. ಆಮೇಲೆ ಥಿಯೇಟರ್ ಖಾಲಿ ಇರುತ್ತದೆ ಅಂತಾರೆ.
ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಮಾತನಾಡಿರುವ ನವರಂಗ್ ಚಿತ್ರಮಂದಿರ ಮಾಲೀಕ, ನಿರ್ಮಾಪಕ ಕೆಸಿಎನ್ ಮೋಹನ್, ''ಆಗ ಯಾವ ಸಿನಿಮಾ ಬಂದರೂ ನಾಲ್ಕೈದು ವಾರ ಪ್ರದರ್ಶನ ಮಾಡ್ತಿದ್ವಿ. ಈಗಿನ ಚಿತ್ರಗಳಿಗೆ ಒಂದೆರಡು ವಾರ ಲೈಫ್ ಅಷ್ಟೇ'' ಎಂದಿದ್ದಾರೆ. ಮುಂದೆ ಓದಿ...

ದೂರದರ್ಶನ ಬಂದಾಗ ಆತಂಕ ಇತ್ತು
''ಸಿನಿಮಾ ನೋಡ್ಬೇಕು ಅಂದ್ರೆ ಜನ ಥಿಯೇಟರ್ಗೆ ಬರಬೇಕಿತ್ತು. ಈಗ ಇದ್ದಷ್ಟು ಚಿತ್ರಮಂದಿರಗಳು ಆಗ ಇರಲಿಲ್ಲ. ದಿನಕ್ಕೆ ಐದು ಶೋ ಇರ್ತಿತ್ತು. ಪ್ರತಿಯೊಂದು ಸಿನಿಮಾನೂ ಐದು ಅಥವಾ ಆರು ವಾರಗಳ ಕಾಲ ಪ್ರದರ್ಶನ ಆಗ್ತಿತ್ತು. ಆಮೇಲೆ ದೂರದರ್ಶನ ಬಂದಾಗ, ಜನರು ಚಿತ್ರಮಂದಿರಗಳಿಗೆ ಬರಲ್ಲ, ಟಿವಿಯಲ್ಲೇ ಸಿನಿಮಾ ನೋಡ್ತಾರೆ ಎಂಬ ಆತಂಕ ಇತ್ತು. ಆದರೆ, ಥಿಯೇಟರ್ನಲ್ಲಿ ಸಿನಿಮಾ ನೋಡುವ ಅನುಭವ ಪ್ರೇಕ್ಷಕರನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ರಾಜ್ ಕುಮಾರ್ ಬಂದ್ರೆ ತುಂಬಾ ದಿನ ಪ್ರದರ್ಶನ ಇತ್ತಿತ್ತು. ನಿರ್ಮಾಪಕರು ಬಾಡಿಗೆ ಕಟ್ಕೊಂಡು ಮುಂದುವರಿಸ್ತಿದ್ರು'' ಎಂದು ಕೆಸಿಎನ್ ಮೋಹನ್ ತಿಳಿಸಿದರು.

ಕನ್ನಡ ಸೆಂಟರ್ ಚಿತ್ರಮಂದಿರಗಳು ಇದ್ವು
''ಕನ್ನಡ ಸಿನಿಮಾ ಪ್ರದರ್ಶನ ಮಾಡುವ ಸೆಂಟರ್, ತೆಲುಗು-ತಮಿಳು ಸೆಂಟರ್ ಹಾಗೂ ಹಿಂದಿ ಸೆಂಟರ್ ಎಂದು ಚಿತ್ರಮಂದಿರಗಳು ವಿಂಗಡನೆಯಾಗಿತ್ತು. ಆದ್ರೀಗ, ಎಲ್ಲಾ ಚಿತ್ರಮಂದಿರಗಳು ಎಲ್ಲ ಸಿನಿಮಾಗಳನ್ನು ಪ್ರರ್ದಶಿಸುತ್ತಾರೆ. ಕಾಂಪಿಟೇಶನ್ ಹೆಚ್ಚಿದೆ. ಮೊದಲಿನಂತೆ ಕನ್ನಡ ಸಿನಿಮಾಗಳು ಹೆಚ್ಚು ಕಾಲ ಪ್ರದರ್ಶನ ಮಾಡಲು ಸಾಧ್ಯವಿಲ್ಲ'' ಎಂದು ಕೆಸಿಎನ್ ಮೋಹನ್ ಅಭಿಪ್ರಾಯ ಪಟ್ಟಿದ್ದಾರೆ.

ಮಲ್ಟಿಪ್ಲೆಕ್ಸ್ಗಳು ಪ್ರಭಾವ ಹೆಚ್ಚಾಯಿತು
''ಮಲ್ಟಿಪ್ಲೆಕ್ಸ್ಗಳು ಬಂದಮೇಲೆ ಒಂದೇ ಕಡೆ ಹೆಚ್ಚು ಸ್ಕ್ರೀನ್ಗಳ ವ್ಯವಸ್ಥೆ ಆಯಿತು. ಎಲ್ಲಾ ಸಿನಿಮಾಗಳನ್ನು ಒಂದೇ ಕಡೆ ಪ್ರದರ್ಶನ ಮಾಡುವ ಯೋಜನೆ ಅದು. ಹಾಗಾಗಿ, ಚಿತ್ರಮಂದಿರಗಳಲ್ಲಿ ಒಂದೇ ಸಿನಿಮಾನ ಹೆಚ್ಚು ಸಮಯ ಪ್ರದರ್ಶನ ಮಾಡಲು ಆಗಲ್ಲ. ಒಂದು ವಾರ ಮಾಡಬಹುದು. ಎರಡನೇ ವಾರಕ್ಕೆ ಹೊಸ ಸಿನಿಮಾ ಬಂದ್ರೆ ಕಲೆಕ್ಷನ್ ಚೆನ್ನಾಗಿರುತ್ತದೆ. ಇಲ್ಲಂದ್ರೆ ಎರಡನೇ ವಾರ ಕಲೆಕ್ಷನ್ ಕಮ್ಮಿಯಾಗುತ್ತದೆ. ಮಲ್ಟಿಪ್ಲೆಕ್ಸ್ನಿಂದ ಪ್ರೇಕ್ಷಕರು ಕಡಿಮೆಯಾಗಿಲ್ಲ. ಏಕಂದ್ರೆ, ಮಲ್ಟಿಪ್ಲೆಕ್ಸ್ನಲ್ಲಿ ದುಬಾರಿ ಟಿಕೆಟ್, ಹೈ-ಫೈ ಜನರು ಹೋಗ್ತಾರೆ. ಚಿತ್ರಮಂದಿರಗಳಿಗೆ ಸಾಮಾನ್ಯ ಜನರು ಬರ್ತಾರೆ'' ಎಂದು ಕೆಸಿಎನ್ ಮೋಹನ್ ವಿವರಿಸಿದರು.

ಪ್ರತಿವಾರ ಸಿನಿಮಾ ಬೇಕು
ಮೊದಲಿನಂತೆ ಒಂದೇ ಸಿನಿಮಾನ ಐದಾರು ವಾರ ಪ್ರದರ್ಶಿಸಲು ಸಾಧ್ಯವಿಲ್ಲ. ಈಗ ಪ್ರತಿವಾರವೂ ಹೊಸ ಸಿನಿಮಾ ಬೇಕು. ಹಾಗಾಗಿ, ಕನ್ನಡದ ಜೊತೆ ಜೊತೆಗೆ ತಮಿಳು, ತೆಲುಗು, ಹಿಂದಿ, ಮಲಯಾಳಂ, ಇಂಗ್ಲಿಷ್ ಹೀಗೆ ಎಲ್ಲಾ ಭಾಷೆಯ ಚಿತ್ರಗಳನ್ನು ಪ್ರದರ್ಶಿಸಲು ಥಿಯೇಟರ್ ಮಾಲೀಕರು ಮುಂದಾಗಿದ್ದಾರೆ. ಹಾಗಾಗಿ, ವಾರಕ್ಕೊಂದು ಅಥವಾ ಎರಡು ವಾರಕ್ಕೊಂದು ಚಿತ್ರ ಬದಲಾಗುತ್ತಿರುತ್ತವೆ.

ಒಟಿಟಿಗಳು ಪ್ರಭಾವ ಬೀರಿದೆ
ಈಗ ಚಿತ್ರಮಂದಿರ ಬಿಟ್ಟು ಒಟಿಟಿಯಲ್ಲಿ ನೇರವಾಗಿ ರಿಲೀಸ್ ಮಾಡಲಾಗುತ್ತಿದೆ. ಒಂದು ವೇಳೆ ಥಿಯೇಟರ್ಗೆ ಕೊಟ್ಟರು ಒಂದೆರಡು ದಿನದಲ್ಲಿ ಒಟಿಟಿಯಲ್ಲಿ ಸಿನಿಮಾ ಬರುತ್ತದೆ. ಹೀಗಿದ್ದಾಗ ಹೆಚ್ಚು ಸಮಯ ಸಿನಿಮಾ ಪ್ರದರ್ಶಿಸಲು ಹೇಗೆ ಸಾಧ್ಯ ಎಂದು ಸಿಂಗಲ್ ಸ್ಕ್ರೀನ್ ಮಾಲೀಕರು ಪ್ರಶ್ನಿಸುತ್ತಿದ್ದಾರೆ.

ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು
ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅವರು ವರ್ಷಕ್ಕೆ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಹಾಗಾಗಿ, ಚಿತ್ರಮಂದಿರಗಳಿಗೆ ಸಿನಿಮಾಗಳ ಕೊರತೆ ಇರಲಿಲ್ಲ. ಆದ್ರೀಗಿನ ಚಿತ್ರನಟರು ವರ್ಷಕ್ಕೆ ಒಂದು, ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡ್ತಾರೆ. ಇದು ಸಹಜವಾಗಿ ಥಿಯೇಟರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಹಿರಿಯ ವಿತರಕರು, ಪ್ರದರ್ಶಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











