''ಕೆಜಿಎಫ್' ನಿಂದ ಹಿಂಸೆಯ ಪ್ರಚಾರ' ಭಾಸ್ಕರ್ ರಾವ್ ಹೇಳಿದ್ದು ಸರಿಯೇ? ಇಲ್ಲಿದೆ ಬೇರೆಯದ್ದೇ ವಾದ
ಭಾರತದಲ್ಲಿ ಈವರೆಗೆ ವಿವಿಧ ಭಾಷೆಗಳಲ್ಲಿ ಮಹಾತ್ಮಾ ಗಾಂಧಿಯವರ ಬಗ್ಗೆ ಅವರ ಆದರ್ಶಗಳ ಬಗ್ಗೆ ಇನ್ನೂರಕ್ಕೂ ಹೆಚ್ಚು ಸಿನಿಮಾ ಬಂದಿರಬಹುದು. ಆ ಸಿನಿಮಾಗಳನ್ನು ನೋಡಿ ಗಾಂಧಿ ಆದರ್ಶಗಳನ್ನು ಅಳವಡಿಸಿಕೊಂಡವರ ಸಂಖ್ಯೆ ಎಷ್ಟಿರಬಹುದು? ನಿಮ್ಮ ಊಹೆಗೆ ಬಿಟ್ಟಿದ್ದು.
ವಿಷಯಕ್ಕೆ ಬರುವುದಾದರೆ, ಈಗ 'ಕೆಜಿಎಫ್' ಸರಣಿಯ ಎರಡನೇ ಸಿನಿಮಾ ಬಿಡುಗಡೆ ಆಗಿದೆ. ನಿವೃತ್ತ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್, 'ಕೆಜಿಎಫ್ 2' ಸಿನಿಮಾವನ್ನು ನಾನು ಒಪ್ಪುವುದಿಲ್ಲ, ಹಿಂಸೆಯ ವೈಭವೀಕರಣ ಮಾಡುವ ಸಿನಿಮಾವನ್ನು ಯಾರೂ ನೋಡಬೇಡಿ'' ಎಂದು ಕರೆ ನೀಡಿದ್ದಾರೆ.
ಭಾಸ್ಕರ್ ರಾವ್ ಎತ್ತಿರುವುದು ಮುಖ್ಯವಾದ ಪ್ರಶ್ನೆಯೇ, ಸ್ವತಃ ಪೊಲೀಸ್ ಇಲಾಖೆಯಲ್ಲಿ ದಶಕಗಳ ಕಾಲ ಕೆಲಸ ಮಾಡಿ ಅಪರಾಧಗಳನ್ನು, ಅಪರಾಧಿಗಳನ್ನು ಹತ್ತಿರದಿಂದ ನೋಡಿದ ವ್ಯಕ್ತಿ ಭಾಸ್ಕರ್ ರಾವ್ ಹಿಂಸೆಯ ಬಗ್ಗೆ ಹೇಳಿರುವ ಮಾತನ್ನು ಸಾರಾಸಗಟಾಗಿ ನಿರಾಕರಿಸಲು ಸಾಧ್ಯವಿಲ್ಲ. ಅದರ ಬಗ್ಗೆ ಚರ್ಚೆಯಂತೂ ಆಗಲೇ ಬೇಕಿದೆ.
ಭಾಸ್ಕರ್ ರಾವ್ ಅವರಿಗೆ 'ಕೆಜಿಎಫ್ 2' ಬಗ್ಗೆ ವೈಯಕ್ತಿಕ ದ್ವೇಷವಿಲ್ಲ, ಅವರಿಗೆ ಬೇಸರವಿರುವುದು ಸಿನಿಮಾಗಳಲ್ಲಿ ತೋರಿಸಲಾಗುತ್ತಿರುವ ಹಿಂಸೆಯ ಬಗ್ಗೆ ಮತ್ತು ಹಿಂಸೆಯ ವೈಭವೀಕರಣದ ಬಗ್ಗೆ. ಭಾಸ್ಕರ್ ರಾವ್ ಹೇಳಿದಂತೆ ಅಹಿಂಸಾತ್ಮಕ ಸಿನಿಮಾಗಳನ್ನು ಸಾಧ್ಯವೇ? ಎಂದರೆ ಕತೆಗಳ ಕೊರತೆಯ ಈಗಿನ ಕಾಲದಲ್ಲಿ ಆ ರೀತಿಯ ಸಿನಿಮಾ ಬಹುತೇಕ ಅಸಾಧ್ಯವೆಂದೇ ಹೇಳಬೇಕು. ಅದೂ ಅಲ್ಲದೆ, ಸಿನಿಮಾಗಳಲ್ಲಿ ಹಿಂಸೆ ಇರದಿದ್ದರೆ ಒಂದು ಸಂಪೂರ್ಣ ಸಿನಿಮಾ ಆಗಲು ಸಾಧ್ಯವಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.

ಯಾರು, ಯಾವ ಕಾರಣಕ್ಕೆ ಹಿಂಸೆ ಮಾಡುತ್ತಿದ್ದಾರೆಂಬುದು ಮುಖ್ಯ
ಸಿನಿಮಾಗಳಲ್ಲಿ ಹಿಂಸೆ ಸಮಸ್ಯೆಯಲ್ಲ, ಆದರೆ ಆ ಹಿಂಸೆಯನ್ನು ಯಾರು, ಯಾವ ಸಮಯದಲ್ಲಿ, ಯಾವ ಗುರಿ ಸಾಧಿಸಲು ಮಾಡುತ್ತಾರೆ ಎಂಬುದೇ ಮುಖ್ಯ. 'ಕೆಜಿಎಫ್; ಚಾಪ್ಟರ್ 1' ಸಿನಿಮಾದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಗರುಡ, ಇಬ್ಬರ ತಲೆ ಕಡಿದು ಮಾರಿಗೆ ಬಲಿ ನೀಡುತ್ತಾನೆ. ಆದು ಹಿಂಸೆ, ಪ್ರೇಕ್ಷಕರಿಗೂ ಗರುಡನ ರಾಕ್ಷಸ ವರ್ತನೆ ನಾಟುತ್ತದೆ. ಆದರೆ ಅದರ ಮರು ಸೆಕೆಂಡಿನಲ್ಲಿ ಅದೇ ಸ್ಥಳದಲ್ಲಿ ರಾಕಿಭಾಯ್ ಗರುಡನ ತಲೆ ಕಡಿಯುತ್ತಾನೆ. ಪ್ರೇಕ್ಷಕ ಎದ್ದು ಕುಣಿದಾಡುತ್ತಾನೆ. ಅವನಿಗೆ ಅದು ಹಿಂಸೆ ಅನಿಸುವುದಿಲ್ಲ.

ಪುರಾಣ ಕಾಲದಿಂದಲೂ ನಂಬಿಕೆ ಒಂದಿದೆ
ಗರುಡ ಕೊಲ್ಲವುದು ತನ್ನ ಪ್ರತಿಷ್ಠೆಗೆ, ತಾನು ಎಷ್ಟು ಕ್ರೂರಿ, ಎಷ್ಟು ದುಷ್ಟ ಎಂದು ತೋರಿಸಿ, ಜನರಿಗೆ ತನ್ನ ಬಗ್ಗೆ ಭಯ ಮೂಡಲೆಂದು ಆ ಇಬ್ಬರನ್ನು ಮಾರಿಗೆ ಬಲಿ ಕೊಡುತ್ತಾನೆ. ಆದರೆ ರಾಕಿಭಾಯ್ ಗರುಡನನ್ನು ಕೊಲ್ಲುವುದು ಅವನ ಕಪಿಮುಷ್ಠಿಯಿಂದ ಕೆಜಿಎಫ್ ಕಾರ್ಮಿಕರನ್ನು ಬಿಡಿಸಲು, ಅವರಿಗೆ ಸ್ವಾತಂತ್ರ್ಯ ಕೊಡಿಸಲು. ಜನ ಕಲ್ಯಾಣಕ್ಕಾಗಿ ಮಾಡಿದ ಹಿಂಸೆ, ಹಿಂಸೆ ಎನಿಸಿಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ. ರಾಮಾಯಣ-ಮಹಾಭಾರತ ಕಾಲದಿಂದಲೂ ಈ ನಂಬಿಕೆ ಹಾಗೆಯೇ ಬಂದಿದೆ. ರಾಮ, ರಾವಣನ ಹತ್ತೂ ತಲೆಗಳನ್ನು ಒಂದೊಂದಾಗಿ ಕತ್ತರಿಸಿ ಕೊನೆಗೆ ಹೃದಯ ಛಿದ್ರ ಮಾಡುತ್ತಾನೆ. ಪಾಂಡವರು ಕೌರವರ 16 ಅಕ್ಷೋಹಿಣಿ ಸೈನ್ಯವನ್ನು ಕೊಲ್ಲುತ್ತಾರೆ. ಆದರೆ ಅದನ್ನು ಹಿಂಸೆ ಎಂದು ಪರಿಗಣಿಸಲಾದೀತೆ?

ರಾಕಿಭಾಯ್ ಮಾಡುವ ಹಿಂಸೆಯನ್ನು ಒಪ್ಪಲಾದೀತೆ?
ಸಿನಿಮಾದಲ್ಲಿ ನಾಯಕ-ಖಳನಾಯಕ ಎಂಬ ಪ್ರತ್ಯೇಕತೆ ಇದೆ. ಖಳ ಮಾಡುವ ಹಿಂಸೆಯನ್ನು ನಾಯಕ ಅಂತ್ಯಗೊಳಿಸಲು ಅವನೂ ಹಿಂಸೆ ಮಾಡಲೇ ಬೇಕಾಗುತ್ತದೆ. ಅದಕ್ಕೆ ಆರಂಭದಲ್ಲಿಯೇ ಹೇಳಿದ್ದು, ಸಿನಿಮಾದಲ್ಲಿ ಯಾರು, ಯಾವ ಕಾರಣಕ್ಕೆ ಹಿಂಸೆ ಮಾಡುತ್ತಾರೆ ಎಂಬುದು ಬಹಳ ಮುಖ್ಯ. ಈಗ 'ಕೆಜಿಎಫ್ 2' ಸಿನಿಮಾವನ್ನು ಗಮನಿಸುವುದಾದರೆ, ಸಿನಿಮಾದಲ್ಲಿ ನಾಯಕ ಅಸಲಿಗೆ ಖಳನಾಯಕ. ಆತ ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದಾನೆ. ಹೀಗಿದ್ದಾಗ ಅವನು ಮಾಡುವ ಹಿಂಸೆಯನ್ನು ನ್ಯಾಯ ಸ್ಥಾಪನೆಗೆ 'ನಾಯಕ' ಮಾಡುವ ಹಿಂಸೆಗೆ ಹೋಲಿಸಲಾದೀತೆ?

ರಾಕಿಭಾಯ್ ನಾಯಕನ? ಖಳನಾಯಕನ?
'ಕೆಜಿಎಫ್ 2' ಸಿನಿಮಾದಲ್ಲಿ ರಾಕಿಭಾಯ್ ಎದುರಾಳಿ ಅಧೀರ. ಇಲ್ಲಿ ಇಬ್ಬರೂ ಖಳರೆ. ಮುಂಬೈನ ಶೆಟ್ಟಿ, ಆತ ಸಹ ಖಳನೆ. ಹಾಗಾಗಿ ಸಿನಿಮಾದ ಬಹುಭಾಗ ಖಳರ ನಡುವೆಯೇ ನಡೆವ ಹಿಂಸೆ. ಆದರೆ ಸಿನಿಮಾದಲ್ಲಿ ಒಂದು ದೃಶ್ಯವಿದೆ. ರಾಕಿಭಾಯ್ ಪೊಲೀಸ್ ಠಾಣೆಗೆ ನುಗ್ಗಿ ಠಾಣೆಯನ್ನೇ ಧ್ವಂಸ ಮಾಡುತ್ತಾನೆ. ಆ ದೃಶ್ಯದಲ್ಲಿ ರಾಕಿಭಾಯ್ಗೆ ಏನು ಬೇಕಿತ್ತೊ ಅದು ಸಿಕ್ಕಿರುತ್ತದೆ. ಪೊಲೀಸರಿಂದ ಸಾಕಷ್ಟು 'ಮರ್ಯಾದೆ, ಗೌರವ, ಬಿಲ್ಡಪ್' ಸಹ ಧಕ್ಕಿರುತ್ತದೆ. ಆದರೂ ರಾಕಿ ಭಾಯ್ ತನ್ನ 'ಪೌರುಷ' ತೋರಿಸಲಷ್ಟೆ ಪೊಲೀಸ್ ಠಾಣೆಯನ್ನು ಧ್ವಂಸ ಮಾಡುತ್ತಾನೆ. 'ಕೆಜಿಎಫ್; ಚಾಪ್ಟರ್ 1' ನಲ್ಲಿ ಗರುಡ, ಮಾರಿಗೆ ಮನುಷ್ಯರನ್ನು ಬಲಿ ಕೊಡುವ ಉದ್ದೇಶ ಸಹ ಪೌರುಷ ಪ್ರದರ್ಶನವೇ ಆಗಿರುತ್ತದೆ. ಇಲ್ಲಿ ರಾಕಿಭಾಯ್ಗೂ ಗರುಡನಿಗೂ ವ್ಯತ್ಯಾಸವಿಲ್ಲ. ಹಾಗಾಗಿ ಪೊಲೀಸ್ ಠಾಣೆ ಧ್ವಂಸ ಮಾಡುವ ದೃಶ್ಯವನ್ನು ಪೂರ್ಣವಾಗಿ ಒಪ್ಪಲಸಾಧ್ಯ.

ಸಿನಿಮಾ ನೀಡುತ್ತಿರುವ ಸಂದೇಶದ ಬಗ್ಗೆ ನೀಲ್ ಉತ್ತರವೇನು?
'ಕೆಜಿಎಫ್' ಸಿನಿಮಾದ ಸಂದೇಶ ಒಪ್ಪತಕ್ಕ ಸಂದೇಶವೇ? ಎಂದರೆ ಖಂಡಿತ ಇಲ್ಲವೆಂದೇ ಹೇಳಬೇಕಾಗುತ್ತದೆ. ದೊಡ್ಡವನಾಗಬೇಕೆಂದರೆ, ಜನ ಗೌರವ ಕೊಡಬೇಕೆಂದರೆ ಯಾರನ್ನಾದರೂ ಹೊಡೆಯಲೇ ಬೇಕು ಎಂಬ ದಿಕ್ಕು ತಪ್ಪಿಸುವ ಅಂಶ 'ಕೆಜಿಎಫ್; ಚಾಪ್ಟರ್ 1' ನಲ್ಲಿದೆ. ಚಾಪ್ಟರ್ 2 ನಲ್ಲೂ ಅದೇ ಮುಂದುವರೆದಿದೆ. ಆದರೆ ಒಬ್ಬ ರೌಡಿಯ ಕತೆಯನ್ನೇ ನಾನು ನೋಡುತ್ತಿರುವಾಗ ಇದು ಅವನ ವೈಯಕ್ತಿಕ ವ್ಯಕ್ತಿತ್ವವಾಗಿ ಎಂದು ಭಾವಿಸಿಕೊಂಡೇ ಸಿನಿಮಾ ನೋಡಬೇಕಾಗಿರುತ್ತದೆ. ಆದರೆ ಆ ವ್ಯಕ್ತಿತ್ವದ ವೈಭವೀಕರಣದ ಮೇಲೆ ಮಿತಿ ಇಡಬೇಕಾದುದು ನಿರ್ದೇಶಕರ ಕರ್ತವ್ಯ. ''ಹಿಟ್ಲರ್ ಸಿನಿಮಾ ಮಾಡುವಾಗ ಏನು ಸಂದೇಶ ಕೊಡಬೇಕು? ಸಂದೇಶವನ್ನು ನಿರೀಕ್ಷಿಸಲಾದರೂ ಸಾಧ್ಯವೇ'' ಎಂದು 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಸುದ್ದಿಗೋಷ್ಠಿಯೊಂದರಲ್ಲಿ ಪ್ರಶ್ನೆ ಮಾಡಿದ್ದರು. ಸಿನಿಮಾದಲ್ಲಿ ಅವರು ಹಿಂಸೆಯ ವೈಭವೀಕರಣ ಮಾಡಿದ್ದಾರೆ, ದುಷ್ಟ ವ್ಯಕ್ತಿತ್ವವುಳ್ಳ ವ್ಯಕ್ತಿಯ ವೈಭವೀಕರಣ ಮಾಡಿದ್ದಾರೆ. ಆದರೆ ಅಂತ್ಯದಲ್ಲಿ 'ಸತ್ಯಕ್ಕೇ ಜಯ' ಎಂದು ಷರಾ ಬರೆದಿದ್ದಾರೆ. ಅದುವೇ ಸಮಾಧಾನ.

'ಗರುಡ ಗಮನ ವೃಷಭ ವಾಹನ'
ಇತ್ತೀಚೆಗೆ ಬಿಡುಗಡೆ ಆದ 'ಗರುಡ ಗಮನ ವೃಷಭ ವಾಹನ' ಸಿನಿಮಾದಲ್ಲಿ ಶಿವನದ್ದು ಹಿಂಸಾತ್ಮಕ ವ್ಯಕ್ತಿತ್ವ. ಆತ ಹಿಂಸೆ ಮಾಡುತ್ತಾನೆ, ಆದರೆ ಆ 'ಮಾದೇವ' ಹಾಡಿದೆಯಲ್ಲ ಅದು ಹಿಂಸೆಯ, ಹಿಂಸಾತ್ಮಕ ವ್ಯಕ್ತಿತ್ವದ ವೈಭವೀಕರಣ. ಆದರೆ ಅಂತ್ಯದಲ್ಲಿ ಶಿವನ ಸಾವು ಪೊಯೆಟಿಗ್ ಜಸ್ಟಿಸ್. ಸಿನಿಮಾದಿಂದ ಹಿಂಸೆಯನ್ನು ಬೇರೆ ಮಾಡಲು ಸಾಧ್ಯವೇ ಇಲ್ಲ. ಹಿಂಸೆಯನ್ನು ಯಾರು, ಯಾವಾಗ, ಯಾವ ಕಾರಣಕ್ಕೆ, ಯಾರ ಮೇಲೆ ಹಿಂಸೆ ಮಾಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಆದರೆ ನಾಯಕ-ಖಳನಾಯಕ ಯಾರೇ ಮಾಡಲಿ ಆ ಹಿಂಸೆಯ ವೈಭವೀಕರಣದ ಮೇಲೆ ಮಿತಿ ಹೇರಬೇಕಾದುದು ನಿರ್ದೇಶಕನ ಜವಾಬ್ದಾರಿ.


Click it and Unblock the Notifications











