twitter
    For Quick Alerts
    ALLOW NOTIFICATIONS  
    For Daily Alerts

    ಅನೇಕರಿಗೆ ಗೊತ್ತಿಲ್ಲದ 'ವಜ್ರಮುನಿ'ಯ 'ವಜ್ರ'ದಂಥ ಮನಸ್ಸು.!

    |

    ಕೆಕ್ಕರಿಸಿ ನೋಡುವ ಕೆಂಗಣ್ಣುಗಳು.. ಭಯಾನಕ ನಗು.. ಭೀಭತ್ಸ ಮುಖ.. ವಜ್ರ ಕಂಠದಿಂದ 'ಎಲಾ ಕುನ್ನಿ...' ಎಂದು ಗುಡುಗಿದರೆ ಎದುರಿಗಿದ್ದವರು ಬೆಚ್ಚಿ ಬೀಳುತ್ತಿದ್ದರು. ಅಷ್ಟರಮಟ್ಟಿಗೆ ಖಳನಟ ವಜ್ರಮುನಿ ಕ್ರೂರ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡುತ್ತಿದ್ದರು. ತೆರೆಮೇಲೆ ಕುತಂತ್ರಿಯಾಗಿ, ಕೇಡಿಯಾಗಿ ವಜ್ರಮುನಿ ಘರ್ಜಿಸುತ್ತಿದ್ದರೆ ಪ್ರೇಕ್ಷಕರು ಕೂಡ ಹೆದರಿಕೊಂಡ ನಿದರ್ಶನಗಳು ಬೇಕಾದಷ್ಟಿವೆ.

    ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಖಳನಟನಾಗಿ ಮಿಂಚಿದವರು ಇದೇ ವಜ್ರಮುನಿ. ನಟನೆಯಿಂದ 'ನಟ ಭೈರವ', 'ನಟ ಭಯಂಕರ' ಎಂದು ಬಿರುದು ಪಡೆದಿದ್ದ ವಜ್ರಮುನಿ ನಿಜ ಜೀವನದಲ್ಲಿ ತದ್ವಿರುದ್ಧ. ವಜ್ರಮುನಿ ಸೌಮ್ಯ ಜೀವಿ ಮತ್ತು ಮೃದು ಸ್ವಭಾವದ ವ್ಯಕ್ತಿ.

    ತಮ್ಮ ವೃತ್ತಿ ಜೀವನದಲ್ಲಿ ಮನೆಮುರುಕ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿರುವ ವಜ್ರಮುನಿ ಹಲವು ರೇಪ್ ಸೀನ್ ಗಳಲ್ಲಿ ಅಭಿನಯಿಸಿದ್ದಾರೆ. ಅಂತಹ ದೃಶ್ಯಗಳಲ್ಲಿ ಅಭಿನಯಿಸುವ ಮುನ್ನ ಸಹ ನಟಿಯ ಮುಂದೆ ಕೈಮುಗಿದು ವಜ್ರಮುನಿ ತಪ್ಪದೇ ಒಂದು ಮಾತು ಹೇಳುತ್ತಿದ್ದರು. ವಜ್ರಮುನಿ ಎಂತಹ ಜೆಂಟಲ್ ಮ್ಯಾನ್ ಅನ್ನೋದಕ್ಕೆ 'ಆ' ಮಾತು ಸಾಕ್ಷಿ.

    ವಜ್ರಮುನಿಯ 'ವಜ್ರ'ದಂಥ ಮನಸ್ಸು

    ವಜ್ರಮುನಿಯ 'ವಜ್ರ'ದಂಥ ಮನಸ್ಸು

    ತೆರೆಮೇಲೆ ಕ್ರೌರ್ಯದ ಮುಖವನ್ನು ಅನಾವರಣಗೊಳಿಸುತ್ತಿದ್ದ ವಜ್ರಮುನಿ, ನಿಜ ಜೀವನದಲ್ಲಿ ಸ್ನೇಹ ಜೀವಿ. ಯಾರ ಜೊತೆಗೂ ದ್ವೇಷ ಸಾಧಿಸದ ಸೌಮ್ಯವಾದಿ. ಚಿತ್ರೀಕರಣದಲ್ಲಿ ವಜ್ರಮುನಿ ಹೆಣ್ಣನ್ನು ಪೂಜಿಸುತ್ತಿದ್ದ ಸದ್ಗುಣ ಸಂಪನ್ನ ಅಂದ್ರೆ ನೀವು ನಂಬಲೇಬೇಕು. ಎಷ್ಟೋ ಸಿನಿಮಾಗಳಲ್ಲಿ ವಜ್ರಮುನಿ 'ರೇಪ್ ಸೀನ್'ಗಳಲ್ಲಿ ನಟಿಸಿದ್ದಾರೆ. ಅಂತಹ ದೃಶ್ಯಗಳಲ್ಲಿ ಬಣ್ಣ ಹಚ್ಚುವ ಮುನ್ನ, ''ನೋಡಮ್ಮ.. ಇದು ನನ್ನ ವೃತ್ತಿ ಧರ್ಮ. ಹಾಗೂ ವೃತ್ತಿ ಕರ್ಮ. ಪಾತ್ರಕ್ಕೆ ನಾನು ನ್ಯಾಯ ಒದಗಿಸುವ ಸಲುವಾಗಿ ಈ ಸೀನ್ ನಲ್ಲಿ ಭಾಗಿಯಾಗಬೇಕಿದೆ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡ. ಏನಾದರೂ ಅಚಾತುರ್ಯವಾದರೆ ಕ್ಷಮಿಸು'' ಅಂತ ಆ 'ರೇಪ್ ಸೀನ್'ನಲ್ಲಿ ಭಾಗಿಯಾಗುವ ಹೆಣ್ಣು ಮಗಳಿಗೆ ವಜ್ರಮುನಿ ಕೈಮುಗಿದು ಕ್ಷಮೆ ಕೇಳುತ್ತಿದ್ದರು. ವಜ್ರಮುನಿಯ ವಜ್ರದಂತಹ ಮನಸ್ಸಿಗೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಾ.?

    'ವಜ್ರ'ಮುನಿ ಬಗ್ಗೆ ಯಾರಿಗೂ ತಿಳಿಯದ ಸತ್ಯ ಸಂಗತಿ'ವಜ್ರ'ಮುನಿ ಬಗ್ಗೆ ಯಾರಿಗೂ ತಿಳಿಯದ ಸತ್ಯ ಸಂಗತಿ

    ಸಮಾಜ ಸೇವೆ ಮಾಡಿದ್ದ ವಜ್ರಮುನಿ

    ಸಮಾಜ ಸೇವೆ ಮಾಡಿದ್ದ ವಜ್ರಮುನಿ

    ನಿಜ ಬದುಕಿನಲ್ಲಿ ಕರುಣಾಮಯಿ ಆಗಿದ್ದ ವಜ್ರಮುನಿ ಸಂಘ, ಸಂಸ್ಥೆ, ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿ ಸಮಾಜ ಸೇವೆ ಮಾಡಿದ್ದಾರೆ. ಜಯನಗರ ಹೌಸಿಂಗ್ ಬೋರ್ಡ್ ಸೊಸೈಟಿಗೆ ಅಧ್ಯಕ್ಷ ಆಗಿದ್ದ ವಜ್ರಮುನಿ, ಸುಮಾರು 2000 ಸೈಟ್ ಗಳನ್ನು ಹಂಚಿದ್ದಾರೆ. ಶಾಲೆಯನ್ನೂ ನಡೆಸಿದ ವಜ್ರಮುನಿ ಬಡಮಕ್ಕಳಿಗೆ ಶಿಕ್ಷಣ ಕೊಟ್ಟಿದ್ದಾರೆ.

    ನಮ್ಮ ವಜ್ರಮುನಿ, ನೆನೆದವರ ಮನದಲ್ಲಿ ಮಾತ್ರ !ನಮ್ಮ ವಜ್ರಮುನಿ, ನೆನೆದವರ ಮನದಲ್ಲಿ ಮಾತ್ರ !

    'ಕೇಡಿ ಬಂದ ಕೇಡಿ' ಎನ್ನುತ್ತಿದ್ದ ಮಹಿಳೆಯರು.!

    'ಕೇಡಿ ಬಂದ ಕೇಡಿ' ಎನ್ನುತ್ತಿದ್ದ ಮಹಿಳೆಯರು.!

    ತೆರೆಮೇಲೆ ಕೇಡಿ ಪಾತ್ರಗಳನ್ನೇ ಮಾಡುತ್ತಿದ್ದ ವಜ್ರಮುನಿಯ ಅಸಲಿ ಮುಖದ ದರ್ಶನ ಅಂದಿನ ಜನತೆಗೆ ಆಗಲೇ ಇಲ್ಲ.! ಇದು ವಜ್ರಮುನಿಯ ಅರಿವಿಗೆ ಬಂದಿದ್ದು 1994 ಚುನಾವಣೆಯಲ್ಲಿ. ಅಂದು ಬಸವನಗುಡಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ ವಜ್ರಮುನಿ ಹೀನಾಯ ಸೋಲು ಅನುಭವಿಸಿದರು. ವಜ್ರಮುನಿ ವಿಲನ್ ಎಂಬ ಕಾರಣಕ್ಕೆ ಎಷ್ಟೋ ಮಂದಿ ಅವರಿಗೆ ವೋಟು ಹಾಕಲಿಲ್ಲ. ಅಷ್ಟಕ್ಕೂ, ಚುನಾವಣೆ ಪ್ರಚಾರಕ್ಕೆಂದು ವಜ್ರಮುನಿ ಮನೆ ಮನೆಗೆ ಹೋಗುತ್ತಿದ್ದಾಗ, ಕೇಡಿ ಬಂದ ಕೇಡಿ ಅಂತ ಜನ ಭಯದಿಂದ ಮನೆ ಬಾಗಿಲು ಹಾಕಿಕೊಳ್ಳುತ್ತಿದ್ದರು. ಅಷ್ಟರಮಟ್ಟಿಗೆ ವಜ್ರಮುನಿ ನಟನೆ ಜನರ ಮನಸ್ಸಿನಲ್ಲಿ ಅಚ್ಚೊತ್ತಿತ್ತು.

    ಹೆಂಡತಿಯೇ ಹೆದರಿಕೊಂಡಿದ್ದರು.!

    ಹೆಂಡತಿಯೇ ಹೆದರಿಕೊಂಡಿದ್ದರು.!

    ವಜ್ರಮುನಿ ನಟನೆಗೆ ಪ್ರೇಕ್ಷಕರು ಹೋಗಲಿ, ಸ್ವಂತ ಪತ್ನಿಯೇ ಹೆದರಿಕೊಂಡಿದ್ದರು ಅನ್ನೋದು ನಿಮಗೆ ಗೊತ್ತಾ.? ''ಮದುವೆಗೆ ಮುಂಚೆ 'ಪ್ರಚಂಡ ರಾವಣ' ನಾಟಕ ನೋಡಿದ್ದೆ. ಅವರ ನಟನೆ ನೋಡಿ ನನಗೆ ತುಂಬಾ ಭಯ ಆಗಿತ್ತು. ಹೀಗಾಗಿ, ತುಂಬಾ ದೂರ ಕೂತು ನಾಟಕ ನೋಡ್ತಿದ್ದೆ. ಆಕ್ಟಿಂಗ್ ನಲ್ಲಿ ಮಾತ್ರ ಅವರು ಹಾಗೆ. ನಿಜ ಜೀವನದಲ್ಲಿ ತುಂಬಾ ಸಾಫ್ಟ್'' ಎಂದು ಸಂದರ್ಶನವೊಂದರಲ್ಲಿ ವಜ್ರಮುನಿ ಪತ್ನಿ ಲಕ್ಷ್ಮಿ ಹೇಳಿಕೊಂಡಿದ್ದರು.

    ಶ್ರೇಷ್ಠ ಖಳನಾಯಕ

    ಶ್ರೇಷ್ಠ ಖಳನಾಯಕ

    ಕನ್ನಡ ಚಿತ್ರರಂಗದಲ್ಲಿ ಶ್ರೇಷ್ಠ ಖಳನಾಯಕನಾಗಿ ಗುರುತಿಸಿಕೊಂಡಿರುವವರ ಪೈಕಿ ವಜ್ರಮುನಿ ಅಗ್ರಗಣ್ಯರು. ಡಾ.ರಾಜ್ ಕುಮಾರ್ ಗೆ ಸರಿಸಮಾನವಾಗಿ ನಟನೆ ಮಾಡುತ್ತಿದ್ದ ವಜ್ರಮುನಿ, 1969 ರಿಂದ 1996 ರವರೆಗೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ವಜ್ರಮುನಿ ಭಿನ್ನ-ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಹುಟ್ಟಿದ್ದು ಯಾವಾಗ.?

    ಹುಟ್ಟಿದ್ದು ಯಾವಾಗ.?

    1944 ಮೇ 11 ರಂದು ಬೆಂಗಳೂರಿನ ಕನಕನಪಾಳ್ಯದಲ್ಲಿ ಹುಟ್ಟಿದವರು ವಜ್ರಮುನಿ. ಇವರ ತಂದೆ ವಜ್ರಪ್ಪ, ಬೆಂಗಳೂರು ಸಿಟಿ ಮುನಿಸಿಪಾಲಿಟಿಯಲ್ಲಿ ಕಾರ್ಪೊರೇಟರ್ ಆಗಿದ್ದರು. ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ವಜ್ರಮುನಿ, ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ 'ಪ್ರಚಂಡ ರಾವಣ' ನಾಟಕದಲ್ಲಿ ರಾವಣನ ಪಾತ್ರದಲ್ಲಿ ಅಬ್ಬರಿಸಿದರು. ರಾವಣನಾಗಿ ವಜ್ರಮುನಿ ಘರ್ಜಿಸಿದ್ದನ್ನು ಕಂಡು ಮೆಚ್ಚಿದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ 'ಮಲ್ಲಮ್ಮನ ಪವಾಡ' ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಆಯ್ಕೆ ಮಾಡಿದರು. ತಮ್ಮ ಮೊದಲ ಚಿತ್ರದಲ್ಲೇ ಎಲ್ಲರ ಮನ ಗೆಲ್ಲುವಲ್ಲಿ ವಜ್ರಮುನಿ ಯಶಸ್ವಿಯಾದರು.

    ಅರ್ಧಕ್ಕೆ ನಿಂತು ಹೋದ ಬಣ್ಣ ಹಚ್ಚಿದ ಮೊದಲ ಚಿತ್ರ

    ಅರ್ಧಕ್ಕೆ ನಿಂತು ಹೋದ ಬಣ್ಣ ಹಚ್ಚಿದ ಮೊದಲ ಚಿತ್ರ

    ಅಸಲಿಗೆ, ವಜ್ರಮುನಿ ಅಭಿನಯಿಸಿದ ಮೊಟ್ಟ ಮೊದಲ ಸಿನಿಮಾ 'ಸಾವಿರ ಮೆಟ್ಟಿಲು'. ಕಾರಣಾಂತರಗಳಿಂದ ಆ ಚಿತ್ರ ಅರ್ಧಕ್ಕೆ ನಿಂತು ಹೋಯ್ತು. 'ಸಾವಿರ ಮೆಟ್ಟಿಲು' ಬಳಿಕ 'ಮಲ್ಲಮ್ಮನ ಪವಾಡ' ಚಿತ್ರಕ್ಕಾಗಿ ವಜ್ರಮುನಿಗೆ ಅವಕಾಶ ಸಿಕ್ತು. ಹೀಗಾಗಿ, ತೆರೆಮೇಲೆ ವಜ್ರಮುನಿ ಮಿಂಚಿದ ಮೊದಲ ಸಿನಿಮಾ 'ಮಲ್ಲಮ್ಮನ ಪವಾಡ'.

    ಬಹುಬೇಡಿಕೆಯ ಖಳನಟ

    ಬಹುಬೇಡಿಕೆಯ ಖಳನಟ

    'ಮಲ್ಲಮ್ಮನ ಪವಾಡ' ಹಿಟ್ ಆಗುತ್ತಿದ್ದಂತೆಯೇ ಖಳನಟ ವಜ್ರಮುನಿಗೆ ಬೇಡಿಕೆ ಹೆಚ್ಚಾಯ್ತು. 'ಬಹದ್ದೂರ್ ಗಂಡು', 'ಮಯೂರ', 'ಶಂಕರ್ ಗುರು', 'ಸಂಪತ್ತಿಗೆ ಸವಾಲ್' ಸೇರಿದಂತೆ ಹಲವು ಚಿತ್ರಗಳಲ್ಲಿ ವಜ್ರಮುನಿ ಅಬ್ಬರಿಸಿ ಬೊಬ್ಬಿರಿದರು. 'ಬೆತ್ತಲೆ ಸೇವೆ' ಚಿತ್ರದ ನಟನೆಗೆ ವಜ್ರಮುನಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. 2005 ರಲ್ಲಿ ಇವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ಲಭಿಸಿದೆ.

    ಕೈಸುಟ್ಟುಕೊಂಡ ವಜ್ರಮುನಿ

    ಕೈಸುಟ್ಟುಕೊಂಡ ವಜ್ರಮುನಿ

    ನಟನೆಯಿಂದ ಯಶಸ್ಸಿನ ಉತ್ತುಂಗಕ್ಕೆ ಏರಿದ ವಜ್ರಮುನಿ ಕೈಸುಟ್ಟುಕೊಂಡಿದ್ದು ಚಿತ್ರ ನಿರ್ಮಾಣಕ್ಕೆ ಮುಂದಾದ ಮೇಲೆ. 'ತಾಯಿಗಿಂತ ದೇವರಿಲ್ಲ' ಎಂಬ ಚಿತ್ರವನ್ನ ವಜ್ರಮುನಿ ನಿರ್ಮಾಣ ಮಾಡಿದ್ದರು. ಬಳಿಕ 'ಗಂಡಭೇರುಂಡ' ಚಿತ್ರಕ್ಕೆ ಬಂಡವಾಳ ಹಾಕಿದರು. ವಜ್ರಮುನಿ ಸಂಕಷ್ಟಕ್ಕೆ ಸಿಲುಕಿದ್ದು ಇದೇ 'ಗಂಡಭೇರುಂಡ' ಚಿತ್ರದಿಂದ. ಸಾಲ ಮಾಡಿ 'ಗಂಡಭೇರುಂಡ' ಚಿತ್ರ ನಿರ್ಮಿಸಿದ ವಜ್ರಮುನಿಗೆ ಗಾಂಧಿನಗರದವರೇ ತೊಂದರೆ ಮಾಡಿದರು ಅನ್ನೋದು ಕಟು ಸತ್ಯ.

    ನೊಂದಿದ್ದ ವಜ್ರಮುನಿ

    ನೊಂದಿದ್ದ ವಜ್ರಮುನಿ

    'ಗಂಡಭೇರುಂಡ' ಚಿತ್ರದಿಂದ ವಜ್ರಮುನಿಗೆ ಆರ್ಥಿಕ ನಷ್ಟ ಉಂಟಾಯಿತು. ಮನೆಯನ್ನ ಮಾರಬೇಕಾದ ಪರಿಸ್ಥಿತಿ ಬಂತು. ಇದರಿಂದ ತೀರಾ ನೊಂದ ವಜ್ರಮುನಿ, ಮಕ್ಕಳನ್ನ ಚಿತ್ರರಂಗಕ್ಕೆ ಪರಿಚಯಿಸಲಿಲ್ಲ. ರಂಗಭೂಮಿಯಲ್ಲಿ ಪ್ರಚಂಡ ರಾವಣನ ಪಾತ್ರದಿಂದ ಜನಪ್ರಿಯತೆ ಗಳಿಸಿದ್ದ ನಟ ವಜ್ರಮುನಿ, ಪರದೆ ಮೇಲೆ ಮತ್ತೆ ಅದೇ ವೈಭವವನ್ನ ಮರುಕಳಿಸಬೇಕೆನ್ನುವಷ್ಟರಲ್ಲಿ ಚಿತ್ರರಂಗದ ವಜ್ರದ ಕೊಂಡಿ ಕಳಚಿ ಬಿದಿತ್ತು.

    ಅನಾರೋಗ್ಯದಿಂದ ಬಳಲಿದ್ದ ವಜ್ರಮುನಿ

    ಅನಾರೋಗ್ಯದಿಂದ ಬಳಲಿದ್ದ ವಜ್ರಮುನಿ

    ರಾಜಕೀಯ ರಂಗದಲ್ಲಿ ಹತಾಶೆ, ಚಿತ್ರ ನಿರ್ಮಾಣದಲ್ಲಿ ಸೋಲು, ಗಾಂಧಿನಗರದಲ್ಲಿ ಮೋಸ... ಹೀಗೆ ಒಂದಾದ ಮೇಲೊಂದರಂತೆ ಪೆಟ್ಟು ತಿಂದಿದ್ದ ವಜ್ರಮುನಿಗೆ ಗಾಯದ ಮೇಲೆ ಬರೆ ಎಳೆದದ್ದು ಅನಾರೋಗ್ಯ. ಎರಡೂ ಮೂತ್ರಪಿಂಡಗಳ ವೈಫಲ್ಯದಿಂದ ವಜ್ರಮುನಿ ಯಮ ಯಾತನೆ ಅನುಭವಿಸಿದ್ದರು. ರಕ್ತದೊತ್ತಡ ಮತ್ತು ಡಯಾಬಿಟೀಸ್ ನಿಂದ ಬಳಲುತ್ತಿದ್ದ ವಜ್ರಮುನಿಗೆ ಅತಿಯಾದ ಧೂಮಪಾನ, ಮಧ್ಯಪಾನ ಮಾರಕವಾಯ್ತು. ಎರಡೂ ಕಿಡ್ನಿಗಳು ಕೈಕೊಟ್ಟಿದ್ರಿಂದ ಎಂಟು ವರ್ಷಗಳ ಕಾಲ ತಿಂಗಳಿಗೆ 12 ರಂತೆ 1500ಕ್ಕೂ ಹೆಚ್ಚು ಬಾರಿ ಡಯಾಲಿಸಿಸ್ ಗೆ ಒಳಪಟ್ಟಿದ್ದರು.

    ಕೊನೆಯುಸಿರೆಳೆದು ಹದಿನಾಲ್ಕು ವರ್ಷ

    ಕೊನೆಯುಸಿರೆಳೆದು ಹದಿನಾಲ್ಕು ವರ್ಷ

    ಕಿಡ್ನಿ ಟ್ರ್ಯಾನ್ಸ್ ಪ್ಲಾಂಟ್ ಮಾಡಿದರೂ ವಜ್ರಮುನಿಗೆ ಹೊಂದಾಣಿಕೆ ಆಗಲಿಲ್ಲ. ಮನೆಯಲ್ಲಿ ಜಾರಿ ಬಿದ್ದು, ಕಾಲು ಮುರಿದುಕೊಂಡಿದ್ದ ವಜ್ರಮುನಿ ಜನವರಿ 5, 2006 ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು. ವಜ್ರದಂಥ ಮನಸ್ಸಿನ ವಜ್ರಮುನಿ ನಮ್ಮನ್ನ ಅಗಲಿ ಇಂದಿಗೆ 14 ವರ್ಷಗಳು ಉರುಳಿವೆ.

    English summary
    Here is the detailed report on Kannada Actor Vajramuni's life story.
    Sunday, January 5, 2020, 17:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X