ರಿಷಬ್ ಶೆಟ್ಟಿ ಆಡಿದ ಆ ಮಾತು ಅವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ?
ಸದ್ಯ ಊರೆಲ್ಲಾ ಮನೆಮಾತಾಗಿರುವ 'ಕಾಂತಾರ' ಚಿತ್ರದ ನಾಯಕ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಆಡಿದ ಮಾತೊಂದರಿಂದ ಅವರನ್ನು ಬಲಪಂಥೀಯ ವರ್ಗಕ್ಕೆ ಸೇರಿಸಲಾಗುತ್ತಿದೆ. ರಿಷಬ್ ಆಡಿದ ಆ ಮಾತು ಅವರ ಮನದಾಳದ ಇಂಗಿತವಾಗಿರಬಹುದು.
ಚಿತ್ರದ ಭರ್ಜರಿ ಯಶಸ್ಸಿನ ಬಗ್ಗೆ ನಡೆಯುತ್ತಿದ್ದ ಚರ್ಚೆ ಈಗ ಇನ್ನೊಂದು ವಿಷಯದ ಸುತ್ತ ಗಿರಿಗಿಟ್ಲೆ ಹೊಡೆಯುತ್ತಿದೆ. ಹಾಗಾದರೆ, ಕಲಾವಿದರು ಯಾವುದಾದರೂ ಪಕ್ಷದ ಪರವಾಗಿ ಎನ್ನುವುದಕ್ಕಿಂತ ಜನನಾಯಕನ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿದ್ದರೆ ತಪ್ಪೇ ಎನ್ನುವುದು ಒಂದು ವರ್ಗದ ವಾದ.
ಕನ್ನಡ ಚಿತ್ರೋದ್ಯಮದವರೂ ಸೇರಿದಂತೆ ನಮ್ಮ ದೇಶದ ಹಲವು ಕಲಾವಿದರು ಒಂದಲ್ಲಾ ಒಂದು ಪಕ್ಷದ ಜೊತೆಗೆ ಗುರುತಿಸಿಕೊಂಡವರು ಅಥವಾ ಆ ಪಕ್ಷದ ಪರವಾಗಿ ನಿಲ್ಲುವವರ ಪಟ್ಟಿ ತುಂಬಾ ದೊಡ್ಡದಿದೆ. ಈ ಪಟ್ಟಿಗೆ ಈಗ ರಿಷಬ್ ಹೊಸ ಸೇರ್ಪಡೆ.
ಈ ಒಂದು ಕಾರಣಕ್ಕಾಗಿಯೇ ಏನೋ ಕಾಂತಾರ ಚಿತ್ರದ ಒಂದು ಹಾಡನ್ನು ಸಂಗೀತ ನಿರ್ದೇಶಕ ಅಜನೀಸ್ ಲೋಕನಾಥ್ ಕದ್ದಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಅಜನೀಸ್ 'ಫಿಲ್ಮಿಬೀಟ್' ಗೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ದೈವಾರಾಧನೆ ಮತ್ತು ನಾಗಾರಾಧನೆಗೆ ಹೆಚ್ಚಿನ ಮಹತ್ವ
ಪರಶುರಾಮ ಸೃಷ್ಟಿ ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ದೇವತಾರಾಧನೆಗಿಂತ ದೈವಾರಾಧನೆ ಮತ್ತು ನಾಗಾರಾಧನೆಗೆ ಹೆಚ್ಚಿನ ಮಹತ್ವ. ಚಿತ್ರೀಕರಣದ ವೇಳೆ ಎಷ್ಟು ಶಿಸ್ತುಬದ್ದವಾಗಿ ಶೂಟಿಂಗ್ ಮಾಡಲಾಗಿದೆ ಎನ್ನುವ ಬಗ್ಗೆ ರಿಷಬ್ ಹಲವು ಸಂದರ್ಶನದಲ್ಲಿ ಹೇಳಿದ್ದಾರೆ. ಆ ವೇಳೆ ಈ ವಿಚಾರದ ಬಗ್ಗೆ ರಿಷಬ್ ಅವರನ್ನು ಹೊಗಳಿದ್ದ ಜನರು ಈಗ ಹಿಂದುತ್ವವನ್ನು ಚಿತ್ರದ ಮೂಲಕ ರಿಷಬ್ ಸಾರಲು ಹೊರಟಿದ್ದಾರೆ, ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಏಜೆಂಟ್ ಎಂದು ಜರಿಯುವ ಕೆಲಸವೂ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಮೋದಿ ಬಗ್ಗೆ ಕೇಳಿದ್ದ ಪ್ರಶ್ನೆಗೆ ಅದ್ಭುತ ನಾಯಕ ಎಂದಿದ್ದ ರಿಷಬ್
ಟಿವಿ ವಾಹಿನಿಯ ಸಂದರ್ಶನದಲ್ಲಿ ಪ್ರಧಾನಿ ಮೋದಿ ಬಗ್ಗೆ ಕೇಳಿದ್ದ ಪ್ರಶ್ನೆಗೆ ಅದ್ಭುತ ನಾಯಕ, ರಾಹುಲ್ ಗಾಂಧಿ ಬಗ್ಗೆ ಕೇಳಿದ ಪ್ರಶ್ನೆಗೆ ನೋ ಕಾಮೆಂಟ್ ಎಂದು ರಿಷಬ್ ಹೇಳಿದ್ದರು. ಇಲ್ಲಿ ರಾಹುಲ್ ಅವರನ್ನು ಟೀಕಿಸುವ ಕೆಲಸವನ್ನು ರಿಷಬ್ ಮಾಡಿರಲಿಲ್ಲ. ರಿಷಬ್ ಅವರ ಈ ಒಂದು ಹೇಳಿಕೆ ಬಲ ಮತ್ತು ಎಡಪಂಥೀಯರ ನಡುವೆ ಮತ್ತೊಮ್ಮೆ ವಾಕ್ಸಮರಕ್ಕೆ ಕಾರಣವಾಗಿದೆ.

ರಾಜ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ
ಕರಾವಳಿಯ ಮೂವರು ಶೆಟ್ಟಿಗಳು ಸ್ಯಾಂಡಲ್ ವುಡ್ ಉದ್ಯಮದ ಮುಂದಿನ ಆಶಾಕಿರಣಗಳು ಎಂದು ವಿಶ್ಲೇಷಿಸಲಾಗುತ್ತಿತ್ತು. ರಾಜ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಈ ಮೂವರು ಕೊನೆಗೆ ನಿಲ್ಲುವುದು ಮೋದಿ ಅಕ್ಕಪಕ್ಕ ಅದು ಆಗದಿದ್ದರೆ ಸಿ.ಟಿ.ರವಿ ಪಕ್ಕ ಎಂದು ಒಂದು ವರ್ಗದಿಂದ ಲೇವಡಿ ಮಾಡಲಾಗುತ್ತಿದೆ. ಯಾವುದೇ ಕಲಾವಿದರು ಅಧಿಕೃತವಾಗಿ ಒಂದು ಪಕ್ಷದ ಸೇರಿದ ನಂತರ ಟೀಕಿಸುವುದೋ ಅಥವಾ ಹೊಗಳುವುದನ್ನು ಮಾಡಬಹುದಲ್ಲವೇ ಎನ್ನುವ ಮಾತೂ ಸಾಮಾಜಿಕ ಜಾಲತಾಣದಲ್ಲಿ ಬಂದು ಬೀಳುತ್ತಿದೆ.

ಕಲಾವಿದರು ಯಾವುದೇ ಹೇಳಿಕೆಗಳನ್ನು ನೀಡುವುದಕ್ಕೆ ಸ್ವತಂತ್ರರು
ಕಲಾವಿದರು ಯಾವುದೇ ಹೇಳಿಕೆಗಳನ್ನು ನೀಡುವುದಕ್ಕೆ ಸ್ವತಂತ್ರರು ಎನ್ನುವುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯ. ಒಂದು ವೇಳೆ ಕಾಂತಾರ ಚಿತ್ರ ಬಿಡುಗಡೆಗೆ ಮುನ್ನ ರಿಷಬ್ ಅವರು ಮೋದಿಯವರ ಬಗ್ಗೆ ಹೇಳಿದ್ದರೆ, ಈ ಚಿತ್ರಕ್ಕೂ 'ಬಾಯ್ಕಾಟ್' ಬಿಸಿ ತಟ್ಟುತ್ತಿತ್ತೋ ಏನೋ? ಕಲೆ ಬೇರೆ, ಕಲಾವಿದ ಬೇರೆ, ಸಂಪ್ರದಾಯಗಳು ಬೇರೆ, ಜಾತಿ ವ್ಯವಸ್ಥೆ ಬೇರೆ, ರಾಜಕೀಯವೂ ಬೇರೆ ಎನ್ನುವುದನ್ನು ಈ ಸಮಯದಲ್ಲಿ ಅರಿತುಕೊಂಡರೆ ಸಿನಿಮಾ ಎನ್ನುವುದು ಸಿನಿಮಾ ಆಗಿಯೇ ಉಳಿದುಕೊಳ್ಳುತ್ತದೆ. ಅಲ್ಲವೇ?


Click it and Unblock the Notifications











