ಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿ ಸುದೀಪ್: ಹೃದಯ ತುಂಬಿ ಮಾತಾಡಿದ ನಿರ್ದೇಶಕರು
'ಅಭಿನಯ ಚಕ್ರವರ್ತಿ', ಅಭಿಮಾನಿಗಳ ಪ್ರೀತಿಯ 'ನಲ್ಲ' ಕಿಚ್ಚ ಸುದೀಪ್ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿವೆ. ಈ 25 ವರ್ಷಗಳಲ್ಲಿ ಕಲ್ಲು, ಮುಳ್ಳು, ಹೂವಿನ ಹಾದಿಯಲ್ಲಿ ಸಾಗಿ ಬಂದಿರುವ ಸುದೀಪ್ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿದ್ದಾರೆ.
ಸಣ್ಣ ಪಾತ್ರಕ್ಕಾಗಿ ಬಣ್ಣ ಹಚ್ಚುವ ಮೂಲಕ ಚಿತ್ರ ಪ್ರಪಂಚಕ್ಕೆ ಕಾಲಿಟ್ಟ ಸುದೀಪ್ ಇಂದು ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ.. ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಬಹು ಬೇಡಿಕೆ ಹೊಂದಿದ್ದಾರೆ.
25 ವರ್ಷಗಳಲ್ಲಿ ನ್ಯಾಷನಲ್ ಸ್ಟಾರ್ ಆಗಿ ಬೆಳೆದು ನಿಂತಿರುವ ಸುದೀಪ್ ಗೆ ಕನ್ನಡ ಚಿತ್ರರಂಗದ ನಿರ್ದೇಶಕರು ಮನಸಾರೆ ಶುಭ ಹಾರೈಸಿದ್ದಾರೆ. ನಟ ಸುದೀಪ್ ಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕರುಗಳಾದ ಸುನೀಲ್ ಕುಮಾರ್ ದೇಸಾಯಿ, ಎಸ್.ಮಹೇಂದರ್, ಶಿವಮಣಿ, ಶಶಾಂಕ್ ಮತ್ತು ಕೃಷ್ಣ 'ಫಿಲ್ಮಿಬೀಟ್ ಕನ್ನಡ'ದ ಮೂಲಕ ಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿರುವ ಸುದೀಪ್ ಗೆ ಟ್ರಿಬ್ಯೂಟ್ ಸಲ್ಲಿಸಿದ್ದಾರೆ.
25 ವರ್ಷಗಳ ಸುದೀಪ್ ಸಕ್ಸಸ್ ಜರ್ನಿಯಲ್ಲಿ ಭಾಗಿಯಾಗಿದ್ದ ನಿರ್ದೇಶಕರುಗಳು ಸುದೀಪ್ ಬಗ್ಗೆ ಹೃದಯ ತುಂಬಿ ಆಡಿರುವ ಮಾತುಗಳು ಇಲ್ಲಿವೆ, ಓದಿರಿ...

ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ
''ಸುದೀಪ್ ಕನ್ನಡ ಚಿತ್ರರಂಗಕ್ಕೆ ಬಂದು 25 ವರ್ಷ ತುಂಬಿದೆ. ಈ ಸಂಭ್ರಮಕ್ಕೆ ನಾನು ಸುದೀಪ್ ಗೆ ಶುಭಾಶಯ ಕೋರುತ್ತೇನೆ. ಈ 25 ವರ್ಷದಲ್ಲಿ ಅವರ ಏಳಿಗೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ವೃತ್ತಿ ಬದುಕಿನಲ್ಲಿ ಏಳು-ಬೀಳು ಇರುತ್ತದೆ. ಎದ್ದಿದ್ದು-ಬಿದ್ದಿದ್ದು ನಡುವೆ ಎದ್ದು ನಿಂತಿದ್ದು ಇದ್ಯಲ್ಲ, ಅದು ಮೆಚ್ಚುವಂಥದ್ದು'' ಎನ್ನುತ್ತಾರೆ ಸುದೀಪ್ ಗೆ 'ಪ್ರತ್ಯರ್ಥ' ಮತ್ತು 'ಸ್ಪರ್ಶ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ.

ಸುದೀಪ್ ಬಗ್ಗೆ ಹೆಮ್ಮೆ ಇದೆ
''ಸಿನಿಮಾ ಬಗ್ಗೆ ಸುದೀಪ್ ಗೆ ತುಂಬಾ ಪ್ಯಾಶನ್ ಇದೆ. ಈಗಲೂ ಕೆಲಸದ ಮೇಲೆ ಸುದೀಪ್ ಗೆ ಇರುವ ಶ್ರದ್ಧೆ, ನಿಷ್ಠೆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಯಾವುದೇ ರಿಸ್ಕ್ ಇದ್ದರೂ, ಮಾಡಬೇಕೆಂಬ ಹಠ-ಛಲ ಸುದೀಪ್ ಗೆ ಇದೆ. ಅದಕ್ಕೆ ಈ 25 ವರ್ಷದಲ್ಲಿ ಈ ಮಟ್ಟಕ್ಕೆ ಬೆಳೆದಿದ್ದಾರೆ'' - ಸುನೀಲ್ ಕುಮಾರ್ ದೇಸಾಯಿ, ನಿರ್ದೇಶಕ

ಸುನೀಲ್ ಕುಮಾರ್ ದೇಸಾಯಿಗೆ ಇರುವ ಆಸೆ
''ಸುದೀಪ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಾರೆ ಅಂತ ನಾನು ಒಮ್ಮೆ ಹೇಳಿದ್ದೆ. ಸುದೀಪ್ ಈಗಾಗಲೇ ನ್ಯಾಷನಲ್ ಸ್ಟಾರ್. ತಮಿಳು, ತೆಲುಗು, ಹಿಂದಿ ಭಾಷೆಯ ಚಿತ್ರರಂಗಗಳಲ್ಲಿ ಸುದೀಪ್ ಬೆಳೆದಿದ್ದಾರೆ. ಮುಂದೆ ಇಂಗ್ಲೀಷ್ ನಲ್ಲೂ ಗುರುತಿಸಿಕೊಳ್ಳುತ್ತಾರೆ. ಆ ಭರವಸೆ ನನಗೆ ಇದೆ. ಕನ್ನಡದ ನಟ ಸುದೀಪ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು, ಅದನ್ನ ನಾನು ನೋಡಬೇಕು. ಇದೇ ನನ್ನ ಆಸೆ. ಆ ಮಟ್ಟಕ್ಕೆ ಬೆಳೆಯಲಿ ಅಂತ ನಾನು ಈ ಸಂದರ್ಭದಲ್ಲಿ ಹಾರೈಸುತ್ತೇನೆ'' - ಸುನೀಲ್ ಕುಮಾರ್ ದೇಸಾಯಿ, ನಿರ್ದೇಶಕ

ನಿರ್ದೇಶಕ ಎಸ್.ಮಹೇಂದರ್
''ನಾನು ಸುದೀಪ್ ಜೊತೆಗೆ 'ವಾಲಿ' ಎಂಬ ಸಿನಿಮಾ ಮಾಡಿದ್ದೆ. ಅದರಲ್ಲಿ ಅವರದ್ದು ಡಬಲ್ ಆಕ್ಟಿಂಗ್. ಆ ಎರಡೂ ಪಾತ್ರಗಳು ತುಂಬಾ ವಿಭಿನ್ನವಾದವು. ಅದನ್ನ ನಿಭಾಯಿಸುವುದು ಬಹಳ ಕಷ್ಟ. ಚಿತ್ರವನ್ನು ಪ್ರೆಸೆಂಟ್ ಮಾಡುವ ರೀತಿ ಕೂಡ ಕಷ್ಟ ಆಗಿತ್ತು. ಆಗಿನ್ನೂ ಸುದೀಪ್ ಚಿತ್ರರಂಗಕ್ಕೆ ಹೊಸಬರು. ಸುದೀಪ್ ಪ್ರಾಮಿಸಿಂಗ್ ನಟ ಅಂತ ನಾನು ಅವತ್ತೇ ಪ್ರತಿ ಶಾಟ್ ನಲ್ಲೂ ಹೇಳುತ್ತಿದ್ದೆ. ಸುದೀಪ್ ತುಂಬಾ ಎತ್ತರಕ್ಕೆ ಬೆಳೆಯುತ್ತಾರೆ ಅಂತಲೂ ಹೇಳಿದ್ದೆ. ಒಂದು ಶಾಟ್ ಇಟ್ಟರೆ, ಅದರ ಟೈಮಿಂಗ್ ಮತ್ತು ಡ್ಯುರೇಶನ್ ನ ಸುದೀಪ್ ತುಂಬಾ ಅಚ್ಚುಕಟ್ಟಾಗಿ ಬಳಸಿಕೊಳ್ಳುತ್ತಿದ್ದರು. ಸುದೀಪ್ ಇವತ್ತು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ ನನಗೇನೂ ಆಶ್ಚರ್ಯ ಇಲ್ಲ. ಯಾಕಂದ್ರೆ, ಅವತ್ತೇ ನಾನು ಅದನ್ನ ನೋಡಿದ್ದೆ. ತುಂಬಾ ಪರ್ಫೆಕ್ಷನ್ ಇರುವ ನಟ ಸುದೀಪ್'' ಎನ್ನುತ್ತಾರೆ ಸುದೀಪ್ ಅಭಿನಯದ 'ವಾಲಿ' ಚಿತ್ರದ ನಿರ್ದೇಶಕ ಎಸ್.ಮಹೇಂದರ್.

ಯಶಸ್ಸು ಉಳಿಸಿಕೊಳ್ಳುವುದು ದೊಡ್ಡ ವಿಚಾರ.!
''ಎಲ್ಲರಿಗೂ ಯಶಸ್ಸು ಅನ್ನೋದು ಸಿಗುತ್ತದೆ. ಆದ್ರೆ, ಅದನ್ನ ಉಳಿಸಿಕೊಂಡು ಹೋಗುವುದು ಬಹಳ ದೊಡ್ಡ ವಿಚಾರ. ಚಿತ್ರದಿಂದ ಚಿತ್ರಕ್ಕೆ 25 ವರ್ಷ ಯಶಸ್ಸನ್ನು ಸಸ್ಟೇನ್ ಮಾಡಿಕೊಂಡಿರುವ ಸುದೀಪ್ ಬಹಳ ಬ್ರಿಲ್ಲಿಯಂಟ್ ನಟ. ಕರ್ನಾಟಕದಿಂದ ಇಡೀ ದೇಶವ್ಯಾಪಿ ಅವರ ಮಾರ್ಕೆಟ್ ನ ವಿಸ್ತಾರ ಮಾಡಿಕೊಂಡು ಹೋಗಿದ್ದು ತುಂಬಾ ಜಾಣ್ಮೆ ಹಾಗೂ ಪರಿಪೂರ್ಣ ನಡೆ. ಸುದೀಪ್ ಗೆ ಇರುವ ಟ್ಯಾಲೆಂಟ್ ಗೆ ಇನ್ನೂ ಎತ್ತರಕ್ಕೆ ಬೆಳೆಯುತ್ತಾರೆ. ಸುದೀಪ್ ಬಗ್ಗೆ ನಮಗೆ ತುಂಬಾ ಖುಷಿ ಆಗುತ್ತದೆ, ಹೆಮ್ಮೆ ಆಗುತ್ತದೆ. ಸುದೀಪ್ ರವರ ಶ್ರಮ ಸಾಕಾರ ಆಗಿದೆ'' - ಎಸ್.ಮಹೇಂದರ್, ನಿರ್ದೇಶಕ

ನಿರ್ದೇಶಕ ಶಿವಮಣಿ
''ನಾನು ಸುದೀಪ್ ಜೊತೆಗೆ 'ತಿರುಪತಿ' ಅಂತ ಸಿನಿಮಾ ಮಾಡಿದ್ದೆ. ಬರೀ 25 ವರ್ಷ ಅಲ್ಲ. 50, 75, 100 ಆಗಬೇಕು. ನಮ್ಮ ಕನ್ನಡ ಚಿತ್ರರಂಗ ಇರುವವರೆಗೂ, ಅವರ ಸಾಧನೆ, ಯಶಸ್ಸು, ಕೀರ್ತಿ, ಮಾಡಿದ ಸಿನಿಮಾಗಳು ಹಾಗೆ ಉಳಿಯುತ್ತದೆ. ಯಾಕಂದ್ರೆ, ಅಷ್ಟು ಶಕ್ತಿ ಇರುವ ಮಹಾನ್ ನಟ ಸುದೀಪ್. ತುಂಬಾ ಟ್ಯಾಲೆಂಟೆಡ್ ಆಕ್ಟರ್. 'ತಿರುಪತಿ' ಸಿನಿಮಾದಲ್ಲಿ ಅವರೊಂದಿಗೆ ಒಳ್ಳೆ ಅನುಭವ ನನಗೆ ಆಗಿತ್ತು. ತುಂಬಾ ಕಮಿಟೆಡ್, ಪ್ಯಾಶನ್ ಇರುವ ನಟ. ಭಾರತೀಯ ಚಿತ್ರರಂಗದಲ್ಲಿ ಯಾರಾದರೂ ಫೈನೆಸ್ಟ್ ಆಕ್ಟರ್ಸ್ ಇದ್ದರೆ, ಅದರಲ್ಲಿ ಸುದೀಪ್ ಕೂಡ ಒಬ್ಬರು'' ಎನ್ನುತ್ತಾರೆ ಸುದೀಪ್ ಗೆ 'ತಿರುಪತಿ' ಚಿತ್ರದಲ್ಲಿ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಶಿವಮಣಿ.

ಒಳ್ಳೆಯ ಮನುಷ್ಯ
''ಸುದೀಪ್ ಉತ್ತಮ ನಿರ್ದೇಶಕ. ತುಂಬಾ ಒಳ್ಳೆಯ ಮನುಷ್ಯ. ಅವರು ಮಗು ತರಹ. ಪೂರ್ವಾಗ್ರಹ ಪೀಡಿತ ಆಲೋಚನೆಗಳು ಇಲ್ಲದೆ, ಪಾತ್ರಕ್ಕೆ ನ್ಯಾಯ ಒದಗಿಸುವ ಬಗ್ಗೆ ಹೆಜ್ಜೆ ಹೆಜ್ಜೆಗೂ ಯೋಚಿಸುವ ವ್ಯಕ್ತಿ ಅವರು. 'ತಿರುಪತಿ' ಮಾಡುವಾಗಲೇ ಅವರು 'ಮೈ ಆಟೋಗ್ರಾಫ್' ಚಿತ್ರ ಡೈರೆಕ್ಟ್ ಮಾಡುತ್ತಿದ್ದರು. ನನ್ನ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಹೋಗಿ, ರಾತ್ರಿ 4 ಗಂಟೆಯವರೆಗೂ ಅವರ ಚಿತ್ರದ ಎಡಿಟಿಂಗ್ ಕೆಲಸ ಮಾಡಿ, ಬೆಳಗ್ಗೆ 7 ಗಂಟೆವರೆಗೂ ನಿದ್ದೆ ಮಾಡಿ, ವಾಪಸ್ 9 ಗಂಟೆಗೆ ನಮ್ಮ ಚಿತ್ರದ ಶೂಟಿಂಗ್ ನಲ್ಲಿರ್ತಿದ್ರು. ಸಿನಿಮಾ ಮೇಲೆ ಅಷ್ಟು ಪ್ರೀತಿ ಅವರಿಗೆ. ಸುದೀಪ್ ಜೊತೆಗೆ ನಾನು ಸಿನಿಮಾ ಮಾಡಿದ್ದೇನೆ ಎಂಬ ಹೆಮ್ಮೆ ನನಗೆ ಇದೆ, ಭಾರಿ ಖುಷಿ ಇದೆ. ಅವರ ಸಾಧನೆಯ ಹಾದಿಯಲ್ಲಿ ನಾವೂ ಇದ್ವಿ ಅನ್ನೋದೇ ಖುಷಿ ನನಗೆ. ನನಗೆ ಸುದೀಪ್ ಅಂದ್ರೆ ತುಂಬಾ ಇಷ್ಟ'' - ಶಿವಮಣಿ, ನಿರ್ದೇಶಕ

ನಿರ್ದೇಶಕ ಶಶಾಂಕ್
''ಆಡು ಮುಟ್ಟದ ಸೊಪ್ಪಿಲ್ಲ, ಚಿತ್ರರಂಗದಲ್ಲಿ ಸುದೀಪ್ ಅವರು ಮಾಡದ ಕೆಲಸವಿಲ್ಲ.! 25 ವರ್ಷ ಪೂರೈಸಿದ್ದಷ್ಟೇ ಸಾಧನೆಯಲ್ಲ, ಅವರ ಏಳು-ಬೀಳಿನ ಈ ಹಾದಿ, ಲಕ್ಷಾಂತರ ಮಂದಿಗೆ ಸ್ಫೂರ್ತಿಯಾಗಿರುವುದು ಅತಿ ದೊಡ್ಡ ಸಾಧನೆ. ಅವರ ಮುಂದಿನ ಪಯಣ ಇನ್ನಷ್ಟು ಸ್ಫೂರ್ತಿದಾಯಕವಾಗಲಿ ಎಂದು ಹಾರೈಸುತ್ತೇನೆ'' ಎನ್ನುತ್ತಾರೆ ಸುದೀಪ್ ಅಭಿನಯದ 'ಬಚ್ಚನ್' ಚಿತ್ರದ ನಿರ್ದೇಶಕ ಶಶಾಂಕ್.

ನಿರ್ದೇಶಕ ಕೃಷ್ಣ
''ಈ 25 ವರ್ಷ.. ಸಿಲ್ವರ್ ಜ್ಯುಬಿಲಿ ವರ್ಷ.. ಇಂಡಸ್ಟ್ರಿಯಲ್ಲಿ ಯಶಸ್ವಿಯಾಗಿ ಸರ್ವೈವ್ ಆಗುವುದು ಬಹಳ ಕಷ್ಟ. ದೇಶ ಪೂರ್ತಿ ಅವರು ಖ್ಯಾತಿ ಗಳಿಸಿದ್ದಾರೆ. ಅವರಿಂದ ಕನ್ನಡ ಚಿತ್ರರಂಗಕ್ಕೂ ದೇಶಾದ್ಯಂತ ಒಳ್ಳೆಯ ಹೆಸರು ಬಂದಿದೆ. ನಾನು ಮನಃಪೂರ್ವಕವಾಗಿ ಅವರಿಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಅವರಿಗೆ ದೇವರು ಒಳ್ಳೆಯದ್ದು ಮಾಡಲಿ. ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಅನ್ನೋದು ನನ್ನ ಆಸೆ'' ಅಂತಾರೆ ಸುದೀಪ್ ಗೆ 'ಹೆಬ್ಬುಲಿ' ಮತ್ತು 'ಪೈಲ್ವಾನ್' ಚಿತ್ರಗಳನ್ನು ನಿರ್ದೇಶಿಸಿದ್ದ ಡೈರೆಕ್ಟರ್ ಕೃಷ್ಣ.

ಕನ್ನಡ ಚಿತ್ರರಂಗದ ಆಸ್ತಿ
''ರಂಗ ಎಸ್.ಎಸ್.ಎಲ್.ಸಿ' ಚಿತ್ರದಲ್ಲಿ ನಾನು ಕ್ಯಾಮರಾ ಮ್ಯಾನ್ ಆಗಿದೆ. ನಾನು ಮೊದಲು ಅವರ ಜೊತೆ ಕೆಲಸ ಮಾಡಿದ್ದು ಆ ಚಿತ್ರದಲ್ಲೇ. ಅದಾದ ಮೇಲೆ, ಅವರ ಡೈರೆಕ್ಷನ್ ನಲ್ಲಿ 'ಕೆಂಪೇಗೌಡ' ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. 'ಹೆಬ್ಬುಲಿ' ಮತ್ತು 'ಪೈಲ್ವಾನ್' ಚಿತ್ರದಲ್ಲೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ನನ್ನ ಮತ್ತು ಅವರ ನಡುವೆ ತುಂಬಾ ಒಳ್ಳೆ ಒಡನಾಟ ಇದೆ. ಫ್ರೆಂಡ್ ಶಿಪ್ ಇದೆ. ನನ್ನನ್ನ ಅವರು ಯಾವಾಗಲೂ ಸಪೋರ್ಟ್ ಮಾಡಿದ್ದಾರೆ. ಹೀಗೆ ಹಲವು ಪ್ರತಿಭಾವಂತರಿಗೆ ಅವರು ಸಪೋರ್ಟ್ ಮಾಡಬೇಕು. ಕನ್ನಡ ಚಿತ್ರರಂಗಕ್ಕೆ ಅವರು ದೊಡ್ಡ ಆಸ್ತಿ'' - ಎಸ್.ಕೃಷ್ಣ, ನಿರ್ದೇಶಕ


Click it and Unblock the Notifications











