ಅಂಬರೀಶ್ ಅತ್ಯಾಪ್ತ ಮಿತ್ರ ರಾಜೇಂದ್ರ ಸಿಂಗ್ ಬಾಬು ತೆರೆದ ನೆನಪಿನ ಪುಸ್ತಕ
ಅಂಬರೀಶ್, ವಿಷ್ಣುವರ್ಧನ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮೂವರೂ ಅತ್ಯಾಪ್ತ ಮಿತ್ರರು. ಅವರ ತುಂಟಾಟ, ಜೊತೆಯಾಗಿ ಮಾಡಿದ ಸಾಹಸಗಳು, ಎಲ್ಲಕ್ಕೂ ಕಳಶವೆಂಬಂತೆ ರಾಜೇಂದ್ರ ಸಿಂಗ್ ಬಾಬು ತನ್ನಿಬ್ಬರು ಮಿತ್ರರೊಂದಿಗೆ ಸೇರಿ ನಿರ್ಮಿಸಿದ ಸಿನಿಮಾಗಳು ಯಾವುದೂ ಮರೆಯುವಂತಿಲ್ಲ.
Recommended Video
ಇಂದು ಅಂಬರೀಶ್ ಹುಟ್ಟುಹಬ್ಬ. ಪರಮಾತ್ಮ ಗೆಳೆಯನ ಬಗ್ಗೆ ಅವನ ಅನುಪಸ್ಥಿತಿಯಲ್ಲಿ ಹಳೆಯ ದಿನಗಳನ್ನು ಮೆಲುಕು ಹಾಕುವುದು ಒಂದು ರೀತಿಯ ಭಾವನಾತ್ಮಕ ಸನ್ನಿವೇಶ. ಇಂಥಹಾ ಒಂದು ಸನ್ನಿವೇಶಕ್ಕೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಎದುರುಗೊಂಡರು, ಮಾತನಾಡಿಸಿದ್ದು 'ಫಿಲ್ಮೀಬೀಟ್ ಕನ್ನಡ'.
ಸುಮಾರು ಐವತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಅಂಬರೀಶ್ ಜೊತೆ ಒಡನಾಟ ಹೊಂದಿದ್ದ ರಾಜೇಂದ್ರ ಸಿಂಗ್ ಬಾಬು ಅವರಲ್ಲಿ ಹೇಳಿಕೊಳ್ಳಲು ಅದೆಷ್ಟು ವಿಷಯಗಳಿವೆಯೆಂದರೆ ಮಾತನಾಡುತ್ತಾ ಕೂತರೆ ಹಗಲು-ರಾತ್ರಿಗಳು ಒಂದಾಗಿಬಿಡುತ್ತವೆ. ಆದರೆ ಅಂಬರೀಶ್ ಅವರ ಬೆಟ್ಟದಂತಹಾ ವ್ಯಕ್ತಿತ್ವವನ್ನು ಚುಟುಕು ಮಾತುಗಳನ್ನೇ ಕಟ್ಟಿಕೊಟ್ಟರು.

ಅಂಬರೀಶ್ ಎಂದರೆ ಏನು?
'ಹೃದಯವಂತ, ಬತ್ತದ ಜೀವನ ಪ್ರೀತಿ, ಗಂಡೆದೆಯವ, ಸ್ನೇಹಪರ, ಕಾಳಜಿ, ಔದಾರ್ಯ ಮೂರ್ತಿ, ಕೊಡುಗೈ ದಾನಿ, ಇವೆಲ್ಲಾ ಅಂಬರೀಶ್ ವ್ಯಕ್ತಿತ್ವಸೂಚಕಗಳು. ಆತ ನನ್ನ ಸ್ನೇಹಿತ ಎಂದುಕೊಳ್ಳುವುದು ಬಹು ಹೆಮ್ಮೆಯ ವಿಷಯ' ಅಂಬರೀಶ್ ಅನ್ನು ರಾಜೇಂದ್ರ ಸಿಂಗ್ ಬಾಬು ವರ್ಣಿಸಿದ್ದು ಹೀಗೆ.

'ಜಾವಾ ಮೋಟರ್ ಬೈಕ್ ದಿನಗಳು ಮತ್ತೆ ಬಾರವು'
'ನಾನು, ಅಂಬರೀಶ್, ವಿಷ್ಣುವರ್ಧನ್ ಒಟ್ಟಿಗೆ ಜಾವಾ ಮೋಟರ್ ಬೈಕ್ನಲ್ಲಿ ಸುತ್ತಿದ ಆ ದಿನಗಳು ಅವಿಸ್ಮರಣೀಯ. ಆ ದಿನಗಳಿಗೆ ಸಾಟಿಯೇ ಇಲ್ಲ. ಅವನು ಕೊನೆಯ ವರೆಗೂ ಬದಲಾಗಲಿಲ್ಲ, ಅದೇ ತುಂಬು ಜೀವನ ಪ್ರೀತಿಯಲ್ಲಿ ಬದುಕಿದ, ತನ್ನ ಸುತ್ತಲಿರುವವರನ್ನು ಸೂಜಿಗಲ್ಲಿನಂತೆ ಸೆಳೆದ. ಮುಪ್ಪು ಅವನ ಮನಸ್ಸಿಗೆ ಎಂದೂ ಆವರಿಸಲಿಲ್ಲ' ಆಪ್ತ ಗೆಳೆಯನ ಮನತುಂಬಿ ಕೊಂಡಾಡಿದ ರಾಜೇಂದ್ರ ಸಿಂಗ್ ಬಾಬು ಮನಸ್ಸಲ್ಲಿ ಗೆಳೆಯನ ಬಗ್ಗೆ ಸಾಸಿವೆಯೆಷ್ಟು ಮಾತ್ಸರ್ಯವಿಲ್ಲ.

'ಈ ಸಮಯದಲ್ಲಿ ಅಂಬರೀಶ್ ಅವಶ್ಯಕತೆ ಹೆಚ್ಚಿಗಿತ್ತು'
'ಅಂಬರೀಶ್ ಇಂದು ಇರಬೇಕಿತ್ತು, ಆತನ ನಾಯಕತ್ವ ಕನ್ನಡ ಚಿತ್ರರಂಗಕ್ಕೆ ಅತ್ಯಂತ ಅವಶ್ಯಕವಾಗಿತ್ತು, ಅದೂ ಇಂಥಹಾ ಕೊರೊನಾ ಸಂಕಷ್ಟದ ಸಮಯದಲ್ಲಿ ಅವನ ಅಗತ್ಯತೆ ಹಿಂದೆಂದಿಗಿಂತಲೂ ಹೆಚ್ಚಿಗೆ ಇತ್ತು. ಆತ ಇದ್ದಿದ್ದರೆ ಸುಮ್ಮನೆ ಕೂರುತ್ತಿರಲಿಲ್ಲ. ದಿನಗೂಲಿ ಕಾರ್ಮಿಕರಿಗೆ, ತಂತ್ರಜ್ಞರಿಗೆ, ಜ್ಯೂನಿಯರ್ ಆರ್ಟಿಸ್ಟ್ಗಳಿಗೆ ನೆರವು ಖಂಡಿತ ಸಿಗುತ್ತಿತ್ತು, ಸಿನಿಮಾ ರಂಗದ ತಳಮಟ್ಟದ ಮಂದಿ ಸಂಕಷ್ಟದಲ್ಲಿದ್ದಾಗ ಅವನು ಒದ್ದಾಡಿಬಿಡುತ್ತಿದ್ದ' ಕೊರೊನಾ ದಿಂದ ಬಾಧಿತ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಅವಶ್ಯಕತೆಯನ್ನು ಒತ್ತಿ ಹೇಳಿದರು ರಾಜೇಂದ್ರ ಸಿಂಗ್ ಬಾಬು.

'ಬಡಿದಾಡಿಯಾದರೂ ಅಂಬರೀಶ್ ಒಳಿತು ಮಾಡುತ್ತಿದ್ದರು'
ಅಂಬರೀಶ್ ನಾಯಕತ್ವವನ್ನು ಹುಡುಕಿ ಹೋಗಲಿಲ್ಲ. ಆತನ ಡೈನಮಿಕ್ ವ್ಯಕ್ತಿತ್ವದ ಅರಿವಿದ್ದವರು ಅವನನ್ನು ನಾಯಕನನ್ನಾಗಿ ಒಪ್ಪಿಕೊಂಡರು. ನಾಯಕತ್ವವೇ ಅವನನ್ನು ಹುಡುಕಿ ಬಂತು. ಅಂಬರೀಶ್ ಕಟ್ಟಿದ ಕಲಾವಿದರ ಸಂಘ ಎಷ್ಟೋ ಕಲಾವಿದರಿಗೆ ಆಸರೆಯಾಗಿದೆ. ಆತ ಗುದ್ದಾಡಿ-ಬಡಿದಾಡಿಯಾದರೂ ಚಿತ್ರರಂಗದವರಿಗೆ ಒಳಿತು ಮಾಡುತ್ತಿದ್ದರು ಎಂದು ಅಂಬರೀಶ್ ನಾಯಕತ್ವ ಗುಣವನ್ನು ಹೊಗಳಿದರು.

ದಿಕ್ಸೂಚಿ ಇಲ್ಲದೆ ದಿಕ್ಕು ತೋಚದಂತಾಗಿದೆ ಕನ್ನಡ ಚಿತ್ರರಂಗ: ರಾಜೇಂದ್ರ ಸಿಂಗ್ ಬಾಬು
ದಿಕ್ಸೂಚಿ ಇಲ್ಲದೆ ದಿಕ್ಕು ತೋಚಿದ ಕಡೆಗೆ ಅಲೆಯುವಂತೆ ಇಂದಿನ ಕನ್ನಡ ಚಿತ್ರರಂಗ ಆಗಿದೆ. ಛೇಂಬರ್ ಒಂದು ಮಾತನಾಡುತ್ತದೆ, ಮತ್ತೊಂದು ಸಂಘ ಇನ್ನೊಂದೆನ್ನೋ ಹೇಳುತ್ತದೆ. ಮತ್ತೊಬ್ಬರದ್ದು ಇನ್ನೊಂದು ರಾಗ. ಎಲ್ಲರನ್ನೂ ಒಂದು ಸೂತ್ರದ ಅಡಿ ತಂದು, ದಿಕ್ಸೂಚಿ ಹಾಕಿಕೊಡುವವರು ಈಗ ಇಲ್ಲದಂತಾಗಿದ್ದಾರೆ. ದಿಕ್ಸೂಚಿಯ ಸ್ಥಾನವನ್ನು ಅಂಬರೀಶ್ ಯಶಸ್ವಿಯಾಗಿ ನಿರ್ವಹಿಸಿದ್ದರು. ಈಗ ಅಂಥಹರಿಲ್ಲ, ಇದ್ದರೂ ಅವರಿಗೆ ಆಸಕ್ತಿ ಇಲ್ಲ ಎಂದು ಮರುಕಪಟ್ಟರು ರಾಜೇಂದ್ರ ಸಿಂಗ್ ಬಾಬು. ಅಂಬರೀಶ್ ಈಗಿಲ್ಲವಲ್ಲ ಎಂಬ ಕೊರಗಿನೊಂದಿಗೆ ಕನ್ನಡ ಚಿತ್ರರಂಗ ಸಾಗುತ್ತಿರುವ ಹಾದಿಯ ಬಗ್ಗೆ ಆತಂಕವೂ ಇತ್ತು ರಾಜೇಂದ್ರ ಸಿಂಗ್ ಬಾಬು ಮಾತಿನಲ್ಲಿ.

ಅಂಬರೀಶ್ ಏರಿದ ಎತ್ತರ ಸಾಲದೆ: ರಾಜೇಂದ್ರ ಸಿಂಗ್ ಬಾಬು
ಇನ್ನಷ್ಟು ಶಿಸ್ತಿನ ಜೀವನ ಅಂಬರೀಶ್ ಅಳವಡಿಸಿಕೊಂಡಿದ್ದರೆ ಇನ್ನೂ ಎತ್ತರಕ್ಕೆ ಏರಬಹುದಿತ್ತಲ್ಲವೆ? ಎಂಬ ಪ್ರಶ್ನೆ ಕೇಳಿ ನಕ್ಕು ಬಿಟ್ಟ ರಾಜೇಂದ್ರ ಸಿಂಗ್ ಬಾಬು, ಇನ್ನೂ ಎಷ್ಟು ಎತ್ತರಕ್ಕೆ ಅಂಬರೀಶ್ ಏರಬೇಕಿತ್ತು? ಎಂದು ಮರುಪ್ರಶ್ನೆ ಹಾಕಿದರು. ಅಂಬರೀಶ್ ಸಿನಿಮಾ ರಂಗದಲ್ಲಿ, ರಾಜಕೀಯ ರಂಗದಲ್ಲಿ ಎರಡರಲ್ಲೂ ಎತ್ತರಕ್ಕೇರಿದವರು. ಅಮೆರಿಕ, ಫ್ರಾನ್ಸ್, ಮುಂಬೈ, ಚೆನ್ನೈ, ಹೈದರಾಬಾದ್ ಇನ್ನೂ ಹಲವು ಕಡೆ ಅವರೊಂದಿಗೆ ಸುತ್ತಿದ್ದೇನೆ, ಹೋದಲ್ಲೆಲ್ಲಾ ಅವರ ಅಭಿಮಾನಿಗಳು, ಅವರ ಗೆಳೆಯರು ತುಂಬಿರುತ್ತಿದ್ದರು. ಅವರು ಅಮೆರಿಕಕ್ಕೆ ಹೋದರೂ ಕ್ಯಾರಿಯರ್ ನಲ್ಲಿ ಊಟ ಬರುತ್ತಿತ್ತು. ಅವರು ಸಂಪಾದಿಸಿದ ಪ್ರೀತಿ ಬೆಟ್ಟದಷ್ಟು ಎಂದರು ಬಾಬು.

ತಮ್ಮ ಸಾವಿನ ಸುದ್ದಿ ನಗುತ್ತ ಸ್ವೀಕರಿಸುತ್ತಿದ್ದ ಅಂಬರೀಶ್
ಮಾತು ಅಂಬರೀಶ್ ಅವರ ಸಾವಿನ ಕುರಿತು ಸರಿಯಿತು, ರಾಜೇಂದ್ರ ಸಿಂಗ್ ಬಾಬು ಅವರ ಮಾತು ಮೆದುವಾಯಿತು. 'ಅಂಬರೀಶ್ ಬದುಕಿದ್ದಾಗಲೇ ಸಾಕಷ್ಟು ಬಾರಿ ಸಾವಿನ ಸುದ್ದಿ ಹರಡಿಬಿಟ್ಟಿತ್ತು. ಈ ಸುಳ್ಳು ಸಾವಿನ ಸುದ್ದಿ ಸೆಲೆಬ್ರಿಟಿಗಳ್ಯಾರನ್ನೂ ಬಿಟ್ಟಿಲ್ಲ. ರಾಜ್ಕುಮಾರ್ ವಿಷಯದಲ್ಲಿಯೂ ಹೀಗೆಯೇ ಆಗಿತ್ತು. ಆದರೆ ಅಂಬರೀಶ್ ತಮ್ಮ ಸಾವಿನ ಸುಳ್ಳು ಸುದ್ದಿಯನ್ನೂ ನಗುತ್ತಲೇ ಸ್ವೀಕರಿಸುತ್ತಿದ್ದರು. ನಾನು ಬದುಕಿದ್ದಾಗಲೇ ಸಾವಿನ ಸುದ್ದಿ ಹಂಚಿ ಸತ್ತ ಮೇಲೆ ಜನ ನನ್ನ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೆ ಎಂಬುದನ್ನು ತೋರಿಸಿದ್ದಾರೆ ಎಂದು ನಗುತ್ತಿದ್ದರು' ಎಂದು ಮೌನವಾದರು ರಾಜೇಂದ್ರ ಸಿಂಗ್ ಬಾಬು.


Click it and Unblock the Notifications











