ಕನ್ನಡ ಚಿತ್ರರಂಗದ 'ನಾಗರಹಾವು' ಹೆಡೆ ಎತ್ತಿ ಇಂದಿಗೆ 50 ವರುಷ!
ಕನ್ನಡ ಸಿನಿರಸಿಕರು ಎಂದೂ ಮರೆಯದ ಸಿನಿಮಾ 'ನಾಗರಹಾವು'. ಚಂದನವನಕ್ಕೆ ವಿಷ್ಣುವರ್ಧನ್, ಅಂಬರೀಶ್ರಂತಹ ದಿಗ್ಗಜ ಕಲಾವಿದರನ್ನು ಈ ಸಿನಿಮಾ ಪರಿಚಯಿಸಿತ್ತು. ಎಲ್ಲರ ನಿರೀಕ್ಷೆ ಮೀರಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಮಾಸ್ಟರ್ಪೀಸ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಎವರ್ಗ್ರೀನ್ 'ನಾಗರಹಾವು' ಸಿನಿಮಾ ಇಂದಿಗೆ 50 ವರ್ಷ ಪೂರೈಸಿದೆ.
ಹಲವು ಮೊದಲುಗಳಿಗೆ ನಾಂದಿ ಹಾಡಿದ ಕ್ಲಾಸಿಕಲ್ ಎಂಟ್ರಟ್ರೈನರ್ ಸಿನಿಮಾ ಇದು. ತ.ರಾ ಸುಬ್ಬರಾಯರ 3 ಕಾದಂಬರಿಗಳು ಕಥೆ, ಪುಟ್ಟಣ್ಣ ಕಣಗಾಲ್ ದಕ್ಷ ನಿರ್ದೇಶನ ಹಾಗೂ ವಿಜಯ ಭಾಸ್ಕರ್ ಸಂಗೀತ ಚಿತ್ರದ ಜೀವಾಳ. ಶ್ರೀ ಈಶ್ವರಿ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಖ್ಯಾತ ನಿರ್ಮಾಪಕ ಎನ್. ವೀರಾಸ್ವಾಮಿ 'ನಾಗರಹಾವು' ಸಿನಿಮಾ ನಿರ್ಮಾಣ ಮಾಡಿದ್ದರು. 'ರಾಮಾಚಾರಿ' ಆಗಿ ವಿಷ್ಣುವರ್ಧನ್ಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಸಿಕ್ಕಿತ್ತು. ಅದಾಗಲೇ 'ವಂಶವೃಕ್ಷ' ಚಿತ್ರದಲ್ಲಿ ನಟಿಸಿದ್ದ ವಿಷ್ಣುವರ್ಧನ್ ಅವರನ್ನು ಕರೆತಂದು ಹೀರೊ ಮಾಡಿ ಪುಟ್ಟಣ್ಣ ಸಕ್ಸಸ್ ಕಂಡಿದ್ದರು.
ಅಭಿಮಾನ ಹೃದಯದಲ್ಲಿ ಇರಬೇಕು, ಕಿರುಚಾಟದಲ್ಲಲ್ಲ; ಶಿವಣ್ಣ ಗರಂ!
'ನಾಗರಹಾವು' ಚಿತ್ರದ ಪ್ರತಿ ಸನ್ನಿವೇಶ, ಹಾಡು ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಅಷ್ಟರಮಟ್ಟಿಗೆ ಮೋಡಿ ಮಾಡಿದ ಸಿನಿಮಾ ಇದು. 1972ರಲ್ಲಿ 'ನಾಗರಹಾವು' ಸಿನಿಮಾ ತೆರೆಕಂಡಿತ್ತು. ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹೊಸ ದಾಖಲೆ ಬರೆದಿತ್ತು.

ಪ್ರತಿ ಪಾತ್ರವೂ ಅದ್ಭುತ
ಪುಟ್ಟಣ್ಣ ಕಣಗಾಲ್ 'ನಾಗರಹಾವು' ಚಿತ್ರದ ಪ್ರತಿ ಪಾತ್ರವನ್ನು ತಿದ್ದಿತೀಡಿದ್ದರು. ಚಾಮಯ್ಯ ಮೇಷ್ಟ್ರ ಪಾತ್ರದಲ್ಲಿ ಕೆ. ಎಸ್ ಅಶ್ವಥ್, ರಾಮಾಚಾರಿಯ ಕ್ರಿಶ್ಚಿಯನ್ ಪ್ರೇಯಸಿ ಮಾರ್ಗರೇಟ್ ಪಾತ್ರದಲ್ಲಿ ಶುಭ, ರಾಮಾಚಾರಿಯನ್ನ ಪ್ರೀತಿಸುವ ಅಲಮೇಲು ಪಾತ್ರದಲ್ಲಿ ಆರತಿ, ಗರಡಿ ಉಸ್ತಾದ್ ಪಾತ್ರದಲ್ಲಿ ಎಂ.ಪಿ ಶಂಕರ್, ಅಲಮೇಲುನ ರೇಗಿಸುವ ಜಲೀಲನಾಗಿ ಅಂಬಿ, ಕಾಲೇಜು ಪ್ರಿನ್ಸಿಪಾಲ್ ಲೋಕನಾಥ್, ರಾಮಚಾರಿ ತಾಯಿ ಜಯಶ್ರೀ, ದೇವ್ರೇ ದೇವ್ರೇ ಎನ್ನುತ್ತ ರಾಮಾಚಾರಿಯ ಹುಡುಗಾಟವನ್ನು ಸಹಿಸಿಕೊಳ್ಳುವ ಸಾಕು ತಾಯಿ ತುಂಗಮ್ಮ ಆಗಿ ಲೀಲಾವತಿ, ರಾಮಾಚಾರಿಯ ಸ್ನೇಹಿತ ವರದನಾಗಿ ಶಿವರಾಂ ಹೀಗೆ ಎಲ್ಲಾ ಪಾತ್ರಗಳು ಪ್ರೇಕ್ಷಕರ ನೆನಪಿನಲ್ಲಿ ಉಳಿದಿವೆ.

ವಿಷ್ಣುವರ್ಧನ್ಗೆ ದೊಡ್ಡ ಬ್ರೇಕ್
ಒಂದು ತ್ರಿಕೋನ ಪ್ರೇಮಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತರಲಾಗಿತ್ತು. 'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ್ಗೆ ಸಿಕ್ಕ ಯಶಸ್ಸು ಅಂತಿಂಥ ಯಶಸ್ಸಲ್ಲ. 10 ಸೂಪರ್ ಹಿಟ್ ಸಿನಿಮಾಗಳಿಂದ ಸಿಗಬಹುದಾದ ಯಶಸ್ಸು ಒಂದೇ ಚಿತ್ರದಿಂದ ಸಿಕ್ಕಿತ್ತು. ಮುಂದೆ ದಾದಾ ಕನ್ನಡ ಚಿತ್ರರಂಗದ ದಿಗ್ಗಜ ನಟನಾಗಿ ಬೆಳೆದರು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. ಸಿನಿಮಾ ಶತದಿನೋತ್ಸವ ಆಚರಿಸಿ ದಾಖಲೆ ಬರೆದಿತ್ತು. ಅವತ್ತಿನ ಕಾಲಕ್ಕೆ ನಟಿಸಿದ ಮೊದಲ ಸಿನಿಮಾ ಶತದಿನೋತ್ಸವ ಆಚರಿಸುವುದು ಅಂದರೆ ತಮಾಷೆ ಮಾತಲ್ಲ.

50 ವರ್ಷ ಪೂರೈಸಿದ 'ನಾಗರಹಾವು'
1972ರಲ್ಲಿ ಡಿಸೆಂಬರ್ 29ರಂದು ಬಿಡುಗಡೆಯಾಗಿದ್ದ ಚಿತ್ರಕ್ಕೆ ಇದೀಗ 50 ವರ್ಷಗಳ ಸಂಭ್ರಮ. ಕನ್ನಡದಲ್ಲಿ ಚಿತ್ರರಂಗದ ಎವರ್ಗ್ರೀನ್ ಸಿನಿಮಾಗಳ ಸಾಲಿನಲ್ಲಿ 'ನಾಗರಹಾವು' ಕೂಡ ಇದೆ. ಕನ್ನಡ ಸಿನಿಮಾ ಇತಿಹಾಸದ ಪುಟಗಳಲ್ಲಿ ಒಂದು ಪುಟವನ್ನು ತನ್ನ ಹೆಸರಿನಲ್ಲಿ ಬರೆಸಿಕೊಂಡಿದೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕರು ಒಂದು ನಮ್ಮೊಂದಿಗಿಲ್ಲ. ಆದರೆ ಈ ಸಿನಿಮಾವನ್ನು ಮಾತ್ರ ಇನ್ನು 50 ವರ್ಷ ಕಳೆದರೂ ಮರೆಯಲು ಸಾಧ್ಯವಿಲ್ಲ.

ರೀ ರಿಲೀಸ್ ಆಗಿದ್ದ ಸಿನಿಮಾ
4 ವರ್ಷಗಳ ಹಿಂದೆ ನೂತನ ತಂತ್ರಜ್ಞಾನದೊಂದಿಗೆ 7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ನಲ್ಲಿ ಸಿನಿಮಾ ಮತ್ತೊಮ್ಮೆ ರೀ ರಿಲೀಸ್ ಆಗಿತ್ತು. ವೀರಾಸ್ವಾಮಿ ಕಿರಿಯ ಪುತ್ರ, ವಿ. ರವಿಚಂದ್ರನ್ ಸಹೋದರ ನಟ ಬಾಲಾಜಿ ಇಂತಹ ಪ್ರಯತ್ನ ಮಾಡಿದ್ದರು. ಸ್ವತಃ ಅಂಬರೀಶ್ ಮುಂದೆ ನಿಂತು ಸಿನಿಮಾ ಪ್ರಚಾರ ಮಾಡಿದ್ದರು. 2018 ಜುಲೈ 20ರಂದು ಚಿತ್ರವನ್ನು ರೀ ರಿಲೀಸ್ ಮಾಡಲಾಗಿತ್ತು.


Click it and Unblock the Notifications











