Don't Miss!
- News ಹಿಂದೂ ಯುವತಿ ಬರ್ಬರ ಹತ್ಯೆ ಪ್ರಕರಣ; ಇದೊಂದು ಲಬ್ ಜಿಹಾದ್ ಎಂದ ಜೋಶಿ: ಸಿದ್ದರಾಮಯ್ಯ ಹೇಳಿದ್ದೇನು?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಸ್ಕರ್ ಗೆಲುವಿನ ಹೊಸ್ತಿಲಲ್ಲಿರುವ ಭಾರತೀಯ ಸಾಕ್ಷ್ಯಚಿತ್ರದ ಬಗ್ಗೆ ನಿಮಗೆಷ್ಟು ಗೊತ್ತು?
ಆಸ್ಕರ್ 2022ಕ್ಕೆ ಇಂದು ನಾಮಿನೇಶನ್ ಘೋಷಣೆಯಾಗಿದೆ. ಆಸ್ಕರ್ ಗೆಲ್ಲಲು ಅರ್ಹವಾಗಿರುವ ಐದು ಸಿನಿಮಾ, ನಟ, ನಟಿ, ತಂತ್ರಜ್ಞರನ್ನು ಆಸ್ಕರ್ ನಾಮಿನೀಸ್ ಎನ್ನಲಾಗುತ್ತದೆ. ಆಸ್ಕರ್ಗೆ ನಾಮಿನೇಟ್ ಆಗುವುದು ಸಹ ಬಹು ಗೌರವದ ವಿಷಯವೆಂದೇ ಭಾವಿಸಲಾಗುತ್ತದೆ.
ಇದೀಗ ಆಸ್ಕರ್ 2022ರ ಅತ್ಯುತ್ತಮ ಡಾಕ್ಯುಮೆಂಟರಿ (ಸಾಕ್ಷ್ಯಚಿತ್ರ) ವಿಭಾಗದಲ್ಲಿ ಭಾರತದ 'ರೈಟಿಂಗ್ ವಿಥ್ ಫೈಯರ್' ಸಾಕ್ಷ್ಯಚಿತ್ರ ಆಯ್ಕೆ ಆಗಿದೆ. 'ರೈಟಿಂಗ್ ವಿಥ್ ಫೈಯರ್' ಸಾಕ್ಷ್ಯಚಿತ್ರದ ಜೊತೆಗೆ ಇನ್ನೂ ನಾಲ್ಕು ಸಾಕ್ಷ್ಯಚಿತ್ರಗಳು ನಾಮಿನೇಟ್ ಆಗಿದ್ದು, 'ರೈಟಿಂಗ್ ವಿಥ್ ಫೈಯರ್' ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿದೆ.
'ರೈಟಿಂಗ್ ವಿಥ್ ಫೈಯರ್' ಆಸ್ಕರ್ಗೆ ನಾಮಿನೇಟ್ ಆಗಲು ಅದು ಬೆಳಕು ಚೆಲ್ಲಿರುವ ಪ್ರಖರ ವಿಷಯ ಹಾಗೂ ವಿಷಯವನ್ನು ಪ್ರಸ್ತುತಪಡಿಸಿರುವ ರೀತಿಯೇ ಕಾರಣ ಎನ್ನಲಾಗುತ್ತಿದೆ. ಸುಶ್ಮಿತ್ ಘೋಷ್ ಮತ್ತು ರಿಂಟು ಥಾಮಸ್ ನಿರ್ದೇಶನ ಮಾಡಿರುವ ಈ ಸಾಕ್ಷ್ಯಚಿತ್ರ ಹಲವು ವಿಶೇಷತೆಗಳನ್ನು ಹೊಂದಿದೆ.
'ಖಬರ್ ಲಹರಿಯಾ' ಪತ್ರಿಕೆ, ವರದಿಗಾರ್ತಿಯರ ಬಗ್ಗೆ ಸಾಕ್ಷ್ಯಚಿತ್ರ
ದಲಿತ ಮಹಿಳೆಯರು ನಡೆಸುವ 'ಖಬರ್ ಲಹರಿಯಾ' ಪತ್ರಿಕೆ ಹಾಗೂ ಅವರ ವರದಿ, ಪತ್ರಿಕೆ ಹುಟ್ಟಿದ ರೀತಿ, ಸನ್ನಿವೇಶ ವರದಿಗಾರ್ತಿಯರ ಕೆಲಸದ ವಿಧಾನ, ಅವರ ಜೀವನ ಇನ್ನಿತರೆ ವಿಷಯಗಳ ಬೆಳಕು ಚೆಲ್ಲುವ ಸಾಕ್ಷ್ಯ ಚಿತ್ರ 'ರೈಟಿಂಗ್ ವಿಥ್ ಫೈಯರ್'. ಉತ್ತರ ಪ್ರದೇಶದಲ್ಲಿ ಕೇವಲ ಏಳು ಜನ ದಲಿತ ಹೆಣ್ಣು ಮಕ್ಕಳು 2002 ರಲ್ಲಿ ಹೇಗೆ ಪತ್ರಿಕೆಯೊಂದನ್ನು ಪ್ರಾರಂಭ ಮಾಡಿದರು. ಎಲ್ಲ ವಿಭಾಗದಲ್ಲಿಯೂ ಪುರುಷರ ಪಾರುಪತ್ಯ ಇದ್ದ ಉತ್ತರ ಪ್ರದೇಶ ಪತ್ರಿಕೋದ್ಯಮ ರಂಗದಲ್ಲಿ ಹೇಗೆ ಪತ್ರಿಕೋದ್ಯಮವನ್ನು ನಡೆಸಿದರು ಎಂಬುದು ಹಾಗೂ ಈ ಪಯಣದಲ್ಲಿ ಅವರು ಎದುರಿಸಿದ ಸವಾಲುಗಳನ್ನು 'ರೈಟಿಂಗ್ ವಿಥ್ ಫೈರ್' ಸಾಕ್ಷ್ಯಚಿತ್ರ ಒಳಗೊಂಡಿದೆ.
ಉತ್ತರ ಪ್ರದೇಶದ ಕರ್ವಿ ಹಳ್ಳಿಯಲ್ಲಿ ಪ್ರಾರಂಭವಾದ ಪತ್ರಿಕೆ
2002 ರಲ್ಲಿ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಕರ್ವಿ ಹಳ್ಳಿಯಲ್ಲಿ ಮೊದಲಿಗೆ 'ಖಬರ್ ಲಹರಿಯಾ' ಪತ್ರಿಕೆ ಪ್ರಾರಂಭವಾಯಿತು. 'ನಿರಂತರ್' ಹೆಸರಿನ ಎನ್ಜಿಓ ಸಹಾಯದೊಂದಿಗೆ ಬೆರಳೆಣಿಕೆಯ ದಲಿತ ಮಹಿಳೆಯರು ಸೇರಿಕೊಂಡು ಪ್ರಾರಂಭಿಸಿದ ಪತ್ರಿಕೆ ಇದು. ಈಗಲೂ ಮಹಿಳೆಯರೇ ನಡೆಸುತ್ತಿರುವ ಈ ಪತ್ರಿಕೆಯ ವರದಿಗಾರ್ತಿಯರು ಗ್ರಾಮೀಣ ಭಾಗದ ಬಡ ಕುಟುಂಬದ ಹೆಣ್ಣುಮಕ್ಕಳು. ಈ ಪತ್ರಿಕೆಯು ಲಿಂಗ ಸಮಾನತೆ ಪರವಾಗಿ ಹಾಗೂ ಜಾತಿ ತಾರತಮ್ಯದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರಾರಂಭದಿಂದಲೂ ಮಾಡಿಕೊಂಡು ಬಂದಿದೆ. ಸರ್ಕಾರದ ಕಣ್ ತೆರೆಸುವ ಹಲವು ಅತ್ಯುತ್ತಮ ಕಾರ್ಯವನ್ನು ಈ ಪತ್ರಿಕೆ ಮಾಡಿದೆ.
ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ
'ರೈಟಿಂಗ್ ವಿಥ್ ಫೈಯರ್' ಸಾಕ್ಷ್ಯಚಿತ್ರದಲ್ಲಿ ಪತ್ರಿಕೆ ಪ್ರಾರಂಭವಾಗಿದ್ದು, ಪತ್ರಿಕೆಯ ಕಾರ್ಯ ವಿಧಾನದ ಜೊತೆಗೆ ವರದಿಗಾರ್ತಿಯರು ಎದುರಿಸಿದ ಸಮಸ್ಯೆಗಳು, ವರದಿ ಮಾಡುವಾಗ ಎದುರಿಸಿದ ಬೆದರಿಕೆಗಳು, ಅನುಭವಿಸಿದ ಅಪಮಾನಗಳು ಎಲ್ಲದರ ದಾಖಲೀಕರಣ ಆಗಿದೆ. ವರದಿಗಾರ್ತಿಯರು ಫೀಲ್ಡ್ನಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ರೆಕಾರ್ಡ್ ಮಾಡಿಕೊಂಡು ಸಾಕ್ಷ್ಯಚಿತ್ರವನ್ನು ಸತ್ಯಕ್ಕೆ ಸಾಕಷ್ಟು ಹತ್ತಿರವಿರುವಂತೆ ಕಟ್ಟಿಕೊಡಲಾಗಿದೆ. ಇದೇ ಕಾರಣಕ್ಕೆ ಈ ಸಾಕ್ಷ್ಯಚಿತ್ರಕ್ಕೆ ವಿಶ್ವಮಟ್ಟದಲ್ಲಿ ಮನ್ನಣೆ ದೊರೆತಿದೆ. 'ಖಬರ್ ಲಹರಿಯಾ' ಪತ್ರಿಕೆಯು 2013 ರಿಂದ ಈಚೆಗೆ ಡಿಜಿಟಲ್ ಮಾಧ್ಯಮದ ಮೂಲಕವೂ ಸುದ್ದಿ ಪ್ರಸಾರ ಮಾಡುತ್ತಿದ್ದು, ಗ್ರಾಮೀಣ ಮಹಿಳೆಯರು ಡಿಜಿಟಲ್ ಮಾಧ್ಯಮಕ್ಕೆ ತಮ್ಮನ್ನು ಒಗ್ಗಿಸಿಕೊಂಡಿದ್ದು ಇತರೆ ವಿಷಯಗಳ ಮೇಲೂ ಸಾಕ್ಷ್ಯಚಿತ್ರ ಬೆಳಕು ಚೆಲ್ಲಿದೆ.
ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶಸ್ತಿ
'ರೈಟಿಂಗ್ ವಿಥ್ ಫೈಯರ್' ಇದೀಗ ಆಸ್ಕರ್ಗೆ ನಾಮಿನೇಟ್ ಆಗಿದೆ. ಆದರೆ ಇದಕ್ಕೆ ಮುನ್ನವೇ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಸುಡಾನ್ ಫಿಲಂ ಫೆಸ್ಟಿವಲ್, ಬ್ಲಾಕ್ ಸ್ಟಾರ್ ಫಿಲಂ ಫೆಸ್ಟಿವಲ್, ಸ್ಯಾನ್ಫ್ರಾನ್ಸಿಸ್ಕೊ ಫಿಲಂ ಫೆಸ್ಟಿವಲ್, ಸಿಯಾಟಲ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್, ವಾಷಿಂಗ್ಟನ್ ಡಿಸಿ ಫಿಲಂ ಫೆಸ್ಟಿವಲ್, ಪೋಲೆಂಡ್ ಫಿಲಂ ಫೆಸ್ಟಿವಲ್, ಅಲ್ ಜಜೀರ ಡಾಕ್ಯುಮೆಂಟರಿ ಫೆಸ್ಟ್, ಅಂತಾರಾಷ್ಟ್ರೀಯ ಹೂಮನ್ ರೈಟ್ಸ್ ಫಿಲಂ ಫೆಸ್ಟಿವಲ್ ಇನ್ನೂ ಹಲವಾರು ವೇದಿಕೆಗಳಲ್ಲಿ 'ರೈಟಿಂಗ್ ವಿಥ್ ಫೈಯರ್' ಸಾಕ್ಷ್ಯಚಿತ್ರ ಪ್ರಶಸ್ತಿ ಗಳಿಸಿದೆ. ಇದೀಗ ಆಸ್ಕರ್ಗೆ ನಾಮಿನೇಟ್ ಆಗಿದ್ದು, ಮಾರ್ಚ್ 27 ರಂದು ಆಸ್ಕರ್ ಪ್ರಶಸ್ತಿ ವಿತರಣೆ ನಡೆಯಲಿದ್ದು, ಭಾರತದ ಸಾಕ್ಷ್ಯಚಿತ್ರ ಗೆಲ್ಲುವ ನಿರೀಕ್ಷೆ ಇದೆ.