ಕನ್ನಡ ಚಿತ್ರರಂಗದಲ್ಲಿ ಯುವ ಬರಹಗಾರರನ್ನು ಕಡಗಣನೆ ಮಾಡಲಾಗುತ್ತಿದೆಯೇ?
''ದೊಡ್ಡವರು ಅಂದ್ರೆ ಹಾಡು ಬರೆದ ತಕ್ಷಣ ಹಣ ಕೊಡ್ತಾರೆ, ಗಾಯಕರಿಗೆ ಹಾಡು ಹಾಡಿದ ತಕ್ಷಣ ಸಂಭಾವನೆ ಫುಲ್ ಕ್ಲಿಯರ್ ಮಾಡ್ತಾರೆ. ನಮ್ಮಂತವರಿಗೆ ಹಾಡು ಬರೆದು, ಸಿನಿಮಾ ರಿಲೀಸ್ ಆದ್ಮೇಲೂ ಹಣ ಕೊಡೋದಕ್ಕೆ ಹಿಂದುಮುಂದು ನೋಡ್ತಾರೆ'' ಎಂದು ಯುವ ಬರಹಗಾರರೊಬ್ಬರು ತಮ್ಮ ಬೇಸರ ಹೊರಹಾಕಿದ್ದಾರೆ.
ಸಿನಿಮಾ ಇಂಡಸ್ಟ್ರಿಯಲ್ಲಿ ಬರಹಗಾರರನ್ನು ಕಡೆಗಣನೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಸುಮಾರು ಹತ್ತು ವರ್ಷದಿಂದ ಗೀತೆ ರಚನೆ, ಬರವಣಿಗೆಯಲ್ಲಿ ತೊಡಗಿಕೊಂಡಿರುವ ಬರಹಗಾರರೊಬ್ಬರನ್ನು ಫಿಲ್ಮಿಬೀಟ್ ಸಂಪರ್ಕಿಸಿದಾಗ ''ಹೌದು, ನಮ್ಮ ಇಂಡಸ್ಟ್ರಿ ಬರಹಗಾರರಿಗೆ ತಕ್ಕ ಬೆಲೆ ಇಲ್ಲ, ಖ್ಯಾತಿ ಹೊಂದಿರುವ ಕೆಲವರಿಗೆ ಮಾತ್ರ ಗೌರವ, ಉಳಿದವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ'' ಎಂದು ನೋವು ಹಂಚಿಕೊಂಡಿದ್ದಾರೆ.
''ಹೊಸ ಬರಹಗಾರರಿಗೆ ಅಥವಾ ಸ್ವಲ್ಪ ಮಟ್ಟಿಗೆ ಖ್ಯಾತಿ ಹೊಂದಿರುವ ಗೀತೆ ರಚನೆಕಾರ ಹಾಗೂ ಬರಹಗಾರರಿಗೆ ಸರಿಯಾದ ಅವಕಾಶ ಸಿಗಲ್ಲ. ಒಂದು ವೇಳೆ ಅವಕಾಶ ಸಿಕ್ಕಿದರೂ ಅದಕ್ಕೆ ತಕ್ಕ ಸಂಭಾವನೆ ಸಿಗಲ್ಲ'' ಎಂದು ಅಸಹಾಯಕತೆ ತೋರಿದ್ದಾರೆ.

ಆ ಬರಹಗಾರನ ಮಾತಿನಲ್ಲಿ ನೋವಿತ್ತು. ಹೇಳಿದ ವಿಷಯಗಳಲ್ಲಿ ಸತ್ಯವಿತ್ತು. ಕೆಲಸ ಬೇಕು ಎಂಬ ಅನಿವಾರ್ಯತೆ ಇತ್ತು. ಅವಕಾಶಗಳು ಇಲ್ಲ ಎಂಬ ಕೊರಗು ಕಾಣುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಡಬ್ಬಿಂಗ್ ಸಿನಿಮಾಗಳು ಹೆಚ್ಚಾಗಿವೆ. ಅದರಲ್ಲಿ ಹಾಡು ಅಥವಾ ಸಂಭಾಷಣೆ ಬರೆಯಬಹುದು ಅಲ್ವಾ ಎಂದು ಪ್ರಶ್ನಿಸಿದ್ದಕ್ಕೆ ಅದಕ್ಕೂ ನಿರಾಸೆಯ ಉತ್ತರ.
''ಡಬ್ಬಿಂಗ್ ಸಿನಿಮಾ ಮಾಡುವವರು ಸ್ವಲ್ಪ ಮಟ್ಟಿಗೆ ಗುರುತಿಸಿಕೊಂಡಿರುವ ಬರಹಗಾರರನ್ನು ಕರೆಯಲ್ಲ. ಏಕಂದ್ರೆ, ನಮ್ಮ ಬಳಿ ಅಷ್ಟು ಬಜೆಟ್ ಇಲ್ಲ ಅಂತಾರೆ. ಅದಕ್ಕೆ ಹೊಸಬರನ್ನು ಹಿಡಿದು ಕಡಿಮೆ ಸಂಭಾವನೆ ಕೊಟ್ಟು ಕೆಲಸ ಮಾಡಿಕೊಳ್ಳುತ್ತಾರೆ. ಡಬ್ಬಿಂಗ್ ಚಿತ್ರಗಳಲ್ಲಿ ಸಾಹಿತ್ಯ ಸರಿಯಿಲ್ಲ, ಸಂಭಾಷಣೆ ಸರಿಯಿಲ್ಲ ಅಂತಾರೆ. ನಮ್ಮಂತವರಿಗಾದರೂ ಅವಕಾಶ ಕೊಟ್ಟರೆ ಒಂದು ಮಟ್ಟಕ್ಕೆ ನ್ಯಾಯ ಒದಗಿಸಬಹುದು ಅಲ್ವೇ'' ಎಂದು ಪ್ರಶ್ನಿಸಿದ್ದಾರೆ.

''ಬಿಗ್ ಬಾಸ್ ಹೋಗಿ ಬಂದ ನಟನ ಚಿತ್ರದಲ್ಲಿ ಎರಡು ಹಾಡು ಬರೆದೆ, ಈಗಲೂ ಸಂಭಾವನೆ ಕೊಟ್ಟಿಲ್ಲ. ಆ ಹಾಡುಗಳನ್ನು ಖ್ಯಾತ ಗಾಯಕರಿಂದ ಹಾಡಿಸಿದ್ದರು. ಅವರಿಗೆ ಮಾತ್ರ ಸಂಭಾವನೆ ಪೂರ್ತಿ ಕೊಟ್ಬಿಡ್ತಾರೆ. ಅವರಲ್ಲಿ ಕಾಲು ಭಾಗ ನಮ್ಮ ಸಂಭಾವನೆ ಇರಲ್ಲ'' ಎಂದು ಅಳಲು ತೋಡಿಕೊಂಡಿದ್ದಾರೆ.
''ಸರಿ ದುಡ್ಡು ಕೇಳೋಣ ಅಂದ್ರೆ ಅದೊಂಥರ ಭಯ, ಮುಂದಿನ ಸಿನಿಮಾಗೆ ಕರಿತಾರೋ ಇಲ್ವೋ ಎಂಬ ಆತಂಕ'' ಎಂಬ ದುಗುಡವನ್ನು ವ್ಯಕ್ತಪಡಿಸುತ್ತಾರೆ.
ಇದು ಕೇವಲ ಯಾರೋ ಒಬ್ಬ ಗೀತೆ ರಚನೆಕಾರ ಅಥವಾ ಬರಹಗಾರನ ಕಥೆಯಲ್ಲ. ಇಂಡಸ್ಟ್ರಿಯಲ್ಲಿ ಬಹುತೇಕರ ಪರಿಸ್ಥಿಯೂ ಇದೆ ಆಗಿದೆ. ಬಹಿರಂಗವಾಗಿ ಈ ಕುರಿತು ಚರ್ಚೆ ಮಾಡಿದ್ರೆ ಅದರಿಂದ ವೃತ್ತಿ ಜೀವನಕ್ಕೆ ಹೊಡೆತ ಬೀಳುತ್ತೆ ಎಂಬ ಆತಂಕದಿಂದಲೇ ಹೆಜ್ಜೆಯಿಡುತ್ತಾ ಸಾಗುತ್ತಿದ್ದಾರೆ.


Click it and Unblock the Notifications











