ರಮ್ಯಾ 'ಕನಸು' ವಿವಾದಕ್ಕೆ ಕಾರಣಗಳೇ ಬೇರೆ
'ನಾನು ನನ್ನ ಕನಸು' ಚಿತ್ರದಿಂದ ನಟಿ ರಮ್ಯಾ ಹೊರಬಿದ್ದಿದ್ದು ಸಂಭಾವನೆ ವಿಚಾರಕ್ಕೆ ಅಲ್ಲ ಎಂಬ ಸುದ್ದಿ ಗಾಂಧಿನಗರದಲ್ಲಿ ಬರಸಿಡಿಲಿನಂತೆ ಎರಗಿದೆ. ಹಾಗಿದ್ದರೆ ರಮ್ಯಾ ಹೊರಬರಲು ಕಾರಣ ಏನು? ಎಂಬ ಪ್ರಶ್ನೆಗೆ 'ನಾನು ನನ್ನ ಕನಸು' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಬಿ ಸುರೇಶ್ ಹೇಳುವುದೇ ಬೇರೆ.
ರಮ್ಯಾ ಮೊದಲು ಮಾತನಾಡಿದ ಸಂಭಾವನೆಯೇ ಬೇರೆ ಆಮೇಲೆ ಕೇಳಿದ್ದೆ ಬೇರೆ. ಆಕೆಯ ಮೂಲ ಸಂಭಾವನೆಗಿಂತ ನಾಲ್ಕು ಪಟ್ಟು ಹೆಚ್ಚು ಕೇಳಿದ್ದಾರೆ. ಸಂಭಾವನೆ ವಿಚಾರಕ್ಕಿಂತ ನನಗೆ ಬೇಸರ ತರಿಸಿದ್ದು ರಮ್ಯಾ ಅವರ ಧೋರಣೆ. ಆಕೆ ಈ ಮೊದಲು ಒಪ್ಪಿಕೊಂಡಿದ್ದ ಸಂಭಾವನೆಗೂ ಚಿತ್ರೀಕರಣ ಸಂದರ್ಭದಲ್ಲಿ ಬೇಡಿಕೆ ಇಟ್ಟ ಸಂಭಾವನೆಗೂ ಅಜಗಜಾಂತರ ವ್ಯತ್ಯಾಸವಿತ್ತು ಎನ್ನುತ್ತಾರೆ ಬಿ ಸುರೇಶ್.
ನಾಲ್ಕು ಪಟ್ಟು ಹೆಚ್ಚು ಸಂಭಾವನೆ ಕೇಳಿದರೆ ಒಪ್ಪಲು ಸಾಧ್ಯವೆ? ಮೊದಲೆಲ್ಲಾ ಉತ್ತಮ ಚಿತ್ರ, ಬ್ಯೂಟಿಫುಲ್ ಕಾನ್ಸೆಪ್ಟ್, ಚಿತ್ರವನ್ನು ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ ಎಂದು ಓಡಾಡಿಕೊಂಡಿದ್ದ ರಮ್ಯಾ ಬರಬರುತ್ತಾ ಚಿತ್ರವನ್ನು ನೋಡುವ ಧೋರಣೆಯೇ ಬದಲಾಯಿತು. ಆರಂಭದಲ್ಲೇ ಹೀಗಾದರೆ ಮುಂದೇನು ಎಂಬ ಚಿಂತೆ ನಮಗೆ ಶುರುವಾಯಿತು ಎಂದು ವಿವರ ನೀಡಿದ್ದಾರೆ ಸುರೇಶ್.
ಒಳ್ಳೆಯ ಸಿನಿಮಾ ಮಾಡಲು ಹೊರಟಿದ್ದೇವೆ. ಅದಕ್ಕೆ ಬೇಕಾಗಿರುವುದು ಉತ್ತಮ ಕಲಾವಿದರ ತಂಡ. ರಮ್ಯಾ ಇದಕ್ಕೆ ಹೊರತಾಗಿದ್ದರು. ಸಂಭಾವನೆ ವಿಚಾರ ಇಲ್ಲಿ ಗೌಣ. ಆರಂಭದಲ್ಲೇ ಹೀಗಾರೆ ಮುಂದೆ ದೊಡ್ಡ ಸಮಸ್ಯೆಗಳು ಸೃಷ್ಟಿಯಾಗಬಹುದು ಎಂಬ ಕಾರಣಕ್ಕೆ ಆಕೆಯನ್ನು ಕೈಬಿಟ್ಟಿದ್ದೇವೆ ಎನ್ನುತ್ತಾರೆ ಸುರೇಶ್. ಒಟ್ಟಿನಲ್ಲಿ ರಮ್ಯಾ ಕಿರುಕ್ಕುಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿರುವು ಮೇಲ್ನೊಟಕ್ಕೆ ಗೋಚರಿಸುತ್ತಿವೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











