ದಿನೇಶ್ ಬಾಬು ಮೇಲೆ ಮಂಜು ಮುನಿಸು
ಕಳೆದ ವಾರ ಬಿಡುಗಡೆಯಾದ 'ಬಳ್ಳಾರಿ ನಾಗ' ನಿಗೆ ಹೊಸ ವಿವಾದ ಎದುರಾಗಿದೆ. ಚಿತ್ರದ ನಿರ್ಮಾಪಕ ಕೆ ಮಂಜು ಮತ್ತು ನಿರ್ದೇಶಕ ದಿನೇಶ್ ಬಾಬು ನಡುವಿನ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದೆ. ತಮ್ಮ ವೃತ್ತಿಯನ್ನ್ನು ದಿನೇಶ್ ಬಾಬು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪವನ್ನ್ನು ಮಂಜು ಮಾಡಿದ್ದಾರೆ.
''ನನ್ನ ದೃಷ್ಟಿಯಲ್ಲಿ ದಿನೇಶ್ ಬಾಬು ಕ್ರಿಯಾಶೀಲತೆ ಕಳೆದುಕೊಂಡಿದ್ದಾರೆ. ಒಳ್ಳೆಯ ಚಿತ್ರಗಳನ್ನು ಕೊಡುವುದನ್ನು ಬಿಟ್ಟು ಹಣದ ಹಿಂದೆ ಬಿದ್ದಿದ್ದಾರೆ. ಸಿಕ್ಕಾಪಟ್ಟೆ ಕಮಿಟ್ ಮೆಂಟ್ ಗಳನ್ನು ಇಟ್ಟುಕೊಂಡು ಯಾವುದನ್ನೂನೆಟ್ಟಗೆ ಮಾಡುತ್ತಿಲ್ಲ'' ಎಂದು ದಿನೇಶ್ ಬಾಬು ಮೇಲೆ ನಿರ್ಮಾಪಕ ಮಂಜು ಆರೋಪಗಳ ಸುರಿಮಳೆ ಗರೆದಿದ್ದಾರೆ.
ಬಳ್ಳಾರಿ ನಾಗ ಚಿತ್ರ ಮುಗಿಸಿದ ಕೂಡಲೆ ನಿರ್ಮಾಣೇತರ ಕೆಲಸಗಳಿಗೆ ಬಾಬು ಕೈಕೊಟ್ಟರು. ರೀ ರೆಕಾರ್ಡಿಂಗ್ ಕೆಲಸಕ್ಕೆ ಎರಡು ಮೂರು ಸಲ ಬಂದಿದ್ದಾರೆ ಅಷ್ಟೆ. ಡಬ್ಬಿಂಗ್ ಕೆಲಸಕ್ಕೆ ಬರಲೇ ಇಲ್ಲ. ಚಿತ್ರದ ಪ್ರಚಾರ ಕಾರ್ಯದ ಕಡೆಗೆ ತಲೆ ಹಾಕಲೇ ಇಲ್ಲ ಎಂದು ಮಂಜು ಆರೋಪಿಸಿದ್ದಾರೆ.
ಸಿಕ್ಕಾಪಟ್ಟೆ ಕಮಿಟ್ ಮೆಂಟ್ ಗಳೇ ಇದಕ್ಕೆಲ್ಲಾ ಕಾರಣ. ಅವರ ಸಂಭಾವನೆ ಸಂದಾಯವಾಗಿದ್ದರೂ ಉಳಿದ ನಟರ ಹಿಂದೆ ದುಡ್ಡಿಗಾಗಿ ಅಲೆಯುತ್ತಿದ್ದಾರೆ. ಎಲ್ಲಾ ದುಡ್ಡು ಮಾಡುವ ಉದ್ದೇಶ. ಕ್ರಿಯಾಶೀಲತೆ ಅನ್ನುವುದು ಅವರಲ್ಲಿ ನಶಿಸಿದೆ ಎಂದು ಮಂಜು ಮುನಿಸಿಕೊಂಡಿದ್ದಾರೆ.
ದಿನೇಶ್ ಬಾಬು ಜತೆ ಸಾಕಷ್ಟು ಚಿತ್ರಗಳನ್ನು ಮಾಡಿದ್ದೇನೆ. ಇನ್ನು ಅವರೊಂದಿಗೆ ಚಿತ್ರ ಮಾಡುವ ಸಾಹಸಕ್ಕೆ ಹೋಗುವುದಿಲ್ಲ, ಬಳ್ಳಾರಿ ನಾಗ ಚಿತ್ರವೇ ಕೊನೆ.ಚಿತ್ರ ನಿರ್ದೇಶಿಸುವುದರಲ್ಲಿ ಅವರಿಗೆ ಆಸಕ್ತಿಯಿಲ್ಲ. ಇನ್ನು ಅವರೊಂದಿಗೆ ಯಾವುದೇ ಚಿತ್ರ ಮಾಡುವುದಿಲ್ಲ. ನಿರ್ಮಾಪಕರೊಬ್ಬರು ಫೋನ್ ಕಾಲ್ ಗಳನ್ನು ರಿಸೀವ್ ಮಾಡಲ್ಲ ಅಂದ್ರೆ ಏನ್ರಿ. ಇಂತವರ ಹತ್ತಿರ ಕೆಲಸ ಮಾಡುವುದಾದರೂ ಹೇಗೆ? ಎಂದು ಪ್ರಶ್ನಿಸುತ್ತಾರೆ ಮಂಜು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











