ಹಳೆ ಸುಮಧುರ ಗೀತೆಗೆ 'ಗುಬ್ಬಿ' ಚಿತ್ರದಲ್ಲಿ ಅಗೌರವ
ಹಳೆ ಸುಮಧುರ ಗೀತೆಗಳನ್ನು ರೀಮಿಕ್ಸ್ ಮಾಡಿ ಅದರ ಅಂದಗೆಡಿಸುತ್ತಿರುವ ಹಾಗೂ ಮೂಲ ಸೊಗಡಿಗೆ ಧಕ್ಕೆ ತರುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೆ ಇವೆ. ಉದಾಹರಣೆಗೆ ಹೇಳಬೇಕೆಂದರೆ 'ಸೊಸೆ ತಂದ' ಸೌಭಾಗ್ಯ ಚಿತ್ರದ "ರವಿವರ್ಮನ ಕುಂಚದ ಕಲೆ ಭಲೆ ಸಾಕಾರವೋ..." ಎಂಬ ಹಾಡನ್ನು ಉಪೇಂದ್ರ ಅಭಿನಯದ 'ಬುದ್ಧಿವಂತ' ಚಿತ್ರದಲ್ಲಿ ರೀಮಿಕ್ಸ್ ಮಾಡಲಾಗಿದ್ದನ್ನು ಸ್ಮರಿಸಬಹುದು. ಹಾಡು ತುಂಬ ಕೆಟ್ಟದಾಗಿ ರೀಮಿಕ್ಸ್ ಮಾಡಲಾಗಿತ್ತು ಎಂದು ಆ ಕಾಲದ ಚಿತ್ರರಸಿಕರು ಬೇಸರಿಕೊಂಡಿದ್ದರು.
ಈಗ ಅಣಜಿ ನಾಗರಾಜ್ ನಿರ್ಮಿಸಿರುವ 'ಗುಬ್ಬಿ' ಚಿತ್ರದಲ್ಲೂ ಹಳೆಯ ಸುಮಧುರ ಗೀತೆಯೊಂದನ್ನು ರಿಮಿಕ್ಸ್ ಮಾಡಿ ಅಗೌರವ ಸೂಚಿಸಲಾಗಿದೆ. ವಿಜಯ್ ನಿರ್ದೇಶಿಸಿರು ವ ಈ ಚಿತ್ರದ ಹಾಡುಗಳ ಪ್ರದರ್ಶನ ಮಲ್ಲೇಶ್ವರಂನ ರೇಣುಕಾಂಬ ಚಿತ್ರಮಂದಿರದಲ್ಲಿ ನಡೆಯಿತು. ಹಳೆಯ ಸುಮಧುರ ಗೀತೆಗಳನ್ನು ರೀಮಿಕ್ಸ್ ಮಾಡುವುದು ಎಷ್ಟು ಸರಿ ಎಂಬ ಸ್ವಾರಸ್ವಕರ ಚರ್ಚೆಗೂ ಕಾರಣವಾಗಿದೆ.
'ಗುಬ್ಬಿ' ಚಿತ್ರದಲ್ಲಿ "ನೀರಿನಲ್ಲಿ ಅಲೆಯ ಉಂಗುರ..." ಹಾಡನ್ನು ರೀಮಿಕ್ಸ್ ಮಾಡಲಾಗಿದೆ. ಈ ಸುಮಧರ ಗೀತೆಯನ್ನು ದಿವಂಗತ ಆರ್ ಎನ್ ಜಯಗೋಪಾಲ್ ರಚಿಸಿದ್ದರು. ಈ ಹಾಡು ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲಾ ಅವರ ಸುಮಧುರ ಕಂಠದಿಂದ ಹೊರಹೊಮ್ಮಿತ್ತು. 1968ರಲ್ಲಿ ತೆರೆಕಂಡ 'ಬೇಡಿ ಬಂದವಳು' ಚಿತ್ರದ ಈ ಹಾಡನ್ನು 'ಗುಬ್ಬಿ' ಚಿತ್ರದಲ್ಲಿ ರೀಮಿಕ್ಸ್ ಮಾಡಲಾಗಿದೆ. ಅಸಹ್ಯ ನೃತ್ಯ ಮಾಡುತ್ತಾ ಈ ಹಾಡನ್ನು ಚಿತ್ರದಲ್ಲಿ ಬಳಸಿಕೊಂಡಿರವ ಬಗ್ಗೆ ಅಪಸ್ವರ ಕೇಳಿಬಂದಿದೆ.
ರೇಣುಕಾಂಬ ಚಿತ್ರಮಂದಿರದಲ್ಲಿ ಈ ಹಾಡು ಪ್ರಸಾರವಾಗುತ್ತಿದ್ದಂತೆ ಹಿರಿಯ ಪತ್ರಕರ್ತರಾದ ಪಿ ಜಿ ಶ್ರೀನಿವಾಸಮೂರ್ತಿ ತೀವ್ರ ಬೇಸರ ಮಾಡಿಕೊಂಡು ಅರ್ಧದಲ್ಲೆ ಎದ್ದು ಹೊರನಡೆದರು. ಹಳೆದ ಸುಮಧುರ ಗೀತೆಗಳಲ್ಲಿ ಒಂದಾದ "ನೀರಿನಲ್ಲಿ ಅಲೆಯ ಉಂಗುರ..." ಹಾಡಿಗೆ 'ಗುಬ್ಬಿ' ಚಿತ್ರದಲ್ಲಿ ಅಗೌರ ಸೂಚಿಸಲಾಗಿದೆ ಎಂಬ ಕಾರಣಕ್ಕೆ ಅವರು ಚಿತ್ರ ಪ್ರದರ್ಶನದಿಂದ ಹೊರನಡೆದರು.
ಹಳೆಯ ಸುಮಧುರ ಗೀತೆಯೊಂದರ ಗುಣಮಟ್ಟವನ್ನು ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ. ಆರ್ ಎನ್ ಜಯಗೋಪಾಲ್ ರಚಿಸಿದ ಸುಮಧುರ ಗೀತೆಯೊಂದನ್ನು 'ಗುಬ್ಬಿ' ಚಿತ್ರದಲ್ಲಿ ರೀಮಿಕ್ಸ್ ಮಾಡಿದ್ದು ಸರಿಯಲ್ಲ ಎಂಬುದು ಶ್ರೀನಿವಾಸಮೂರ್ತಿ ಅವರ ಬೇಸರಕ್ಕೆ ಕಾರಣವಾಗಿದೆ. ಒಂದು ಹಾಡು ಹುಟ್ಟ ಬೇಕಾದರೆ, ಅದನ್ನು ಸುಂದರವಾಗಿ ಕಟ್ಟಬೇಕಾದರೆ ಅದರ ಹಿಂದೆ ಎಷ್ಟೆಲ್ಲಾ ಶ್ರಮ, ಕಾಳಜಿ ಇರುತ್ತದೆ ಎಂಬುದನ್ನು ಇಂದಿನ ನಿರ್ದೇಶಕರು ಮರೆತಂತಿದೆ ಅಲ್ಲವೆ? ಎಂಬ ಮಾತುಗಳು ಕೇಳಿಬಂದಿವೆ. ನೀವೇನಂತೀರಾ?


Click it and Unblock the Notifications











