'ಅಣ್ಣಾ ಹಜಾರೆ' ಟೈಟಲ್ಗೆ ಫಿಲಂ ಚೇಂಬರ್ ತಗಾದೆ

ಈಗ ಭ್ರಷ್ಟಾಚಾರ ವಿರುದ್ಧ ಹೋರಾಡಿದ ಗಾಂಧಿವಾದಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸ್ಫೂರ್ತಿಯಿಂದ ಕನ್ನಡದಲ್ಲಿ ಚಿತ್ರವೊಂದು ನಿರ್ಮಿಸಲು ನಿರ್ಮಾಪಕ ಸಂಪತ್ ಕುಮಾರ್ ಮುಂದಾಗಿದ್ದಾರೆ. ಚಿತ್ರಕ್ಕೆ ಅವರು 'ಅಣ್ಣಾ ಹಜಾರೆ' ಎಂಬ ಶೀರ್ಷಿಕೆಯನ್ನೂ ಇಟ್ಟಿದ್ದಾರೆ. ಆದರೆ ಈ ಶೀರ್ಷಿಕೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಗಾದೆ ತೆಗೆದಿದೆ.
ಸಾಮಾನ್ಯವಾಗಿ ಜೀವಂತವಾಗಿರುವ ಖ್ಯಾತನಾಮರ ಹೆಸರುಗಳನ್ನು ಚಿತ್ರದ ಶೀರ್ಷಿಕೆಗೆ ಬಳಸುವಂತಿಲ್ಲ ಎಂಬುದು ಫಿಲಂ ಚೇಂಬರ್ ರೂಲು. ಈ ರೂಲಿನ ಪ್ರಕಾರ, ಅಣ್ಣಾ ಹಜಾರೆ ಶೀರ್ಷಿಕೆಗೆ ನೋ ನೋ ಎಂದಿದೆ ಫಿಲಂ ಚೇಂಬರ್. ಎಲೆಕ್ಟ್ರಿಕ್ ಕಂಬ, ತಲೆ ಬುರುಡೆಯಂತಹ ತುಂಬಾ ಕೆಟ್ಟ ಕೆಟ್ಟ ಶೀರ್ಷಿಕೆಗಳೆಲ್ಲಾ ಚೇಂಬರ್ಗೆ ಬರುತ್ತಿವೆ. ಈ ರೀತಿಯ ಶೀರ್ಷಿಕೆಗಳನ್ನೆಲ್ಲಾ ಸಾರಾಸಗಟಾಗಿ ತಳ್ಳಿ ಹಾಕುತ್ತಿದ್ದೇವೆ ಎನ್ನುತ್ತದೆ ಫಿಲಂ ಚೇಂಬರ್.
ಈ ಹಿಂದೆಯೂ 'ಕಿರಣ್ ಬೇಡಿ' ಎಂಬ ಶೀರ್ಷಿಕೆಗೆ ಫಿಲಂ ಚೇಂಬರ್ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಅದು 'ಕನ್ನಡದ ಕಿರಣ್ ಬೇಡಿ' ಎಂದಾಯಿತು. ಈಗ 'ವಿಷ್ಣುವರ್ಧನ' ಶೀರ್ಷಿಕೆಗೆ ರಾಜಾ ಅಥವಾ ವೀರ ಎಂದು ಸೇರಿಸಿಕೊಳ್ಳಿ ಎಂದು ಚೇಂಬರ್ ಸಲಹೆ ನೀಡಿದೆ. 'ಅಣ್ಣಾ ಹಜಾರೆ' ಶೀರ್ಷಿಕೆಯನ್ನು ಮಾತ್ರ ಸಾರಾಸಗಟಾಗಿ ತಳ್ಳಿಹಾಕಿದೆ.
ಈಗಾಗಲೆ ಕತೆ, ಚಿತ್ರಕತೆ ಎಲ್ಲವನ್ನೂ ಸಿದ್ಧಪಡಿಸಿಕೊಂಡಿರುವ ನಿರ್ಮಾಪಕ ಸಂಪತ್ ಕುಮಾರ್, ಚೇಂಬರ್ ವಿರುದ್ಧ ಅಣ್ಣಾ ಹಜಾರೆ ಸ್ಟೈಲಲ್ಲೇ ಪ್ರತಿಭಟಿಸಲು ಮುಂದಾಗಿದ್ದಾರೆ. ಅಣ್ಣಾ ಹಜಾರೆ ಶೀರ್ಷಿಕೆಯೇ ಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಶೀರ್ಷಿಕೆ ನೋಡಿಯೇ ದೊಡ್ಡ ದೊಡ್ಡ ಸ್ಟಾರ್ಗಳು ಕಾಲ್ಶೀಟ್ ಕೊಡೋದು. ತಮಗೆ ಈ ಶೀರ್ಷಿಕೆಯೇ ಬೇಕು ಎಂಬುದು ಅವರ ವಾದ.
'ವೀರಪ್ಪನ್' ಶೀರ್ಷಿಕೆ ಕೊಟ್ಟಿರಬೇಕಾದರೆ 'ಅಣ್ಣಾ ಹಜಾರೆ' ಶೀರ್ಷಿಕೆ ಏಕೆ ಕೊಡಬಾರದು ಎಂದು ಸಂಪತ್ ಕುಮಾರ್ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಶೀರ್ಷಿಕೆಗಾಗಿ ಗುದ್ದಾಟ ಶುರುವಾಗಿದೆ. ಅಂದಹಾಗೆ ಸಂಪತ್ ಕುಮಾರ್ ಈ ಹಿಂದೆ ತಿಮ್ಮ, ಚನ್ನ ಹಾಗೂ ಪ್ರೇಮ್ ನಗರ್ ಚಿತ್ರಗಳನ್ನು ನಿರ್ಮಿಸಿದ್ದರು. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











