ಕ್ಷಮೆಗೆ ಮೊರೆ ಹೋದ ನಟಿ ರಮ್ಯಾ
ಜಸ್ಟ್ ಮಾತ್ ಮಾತಲ್ಲಿ ಚಿತ್ರೀಕರಣದ ಸಮಯದಲ್ಲಿ ಉಂಟಾಗಿದ್ದ ವಿವಾದ ಸುಖಾಂತ್ಯ ಕಂಡಿದೆ. ಚಿತ್ರ ನಟಿ ರಮ್ಯಾ ಅವರು ನೃತ್ಯ ನಿರ್ದೇಶಕ, ಚಿತ್ರತಂಡ ಹಾಗೂ ಸುದೀಪ್ ರಲ್ಲಿ ಕ್ಷಮೆ ಬೇಡಿದ್ದಾರೆ. ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಈ ಪ್ರಕರಣಕ್ಕೆ ಶುಭಂ ಎನ್ನಲಾಯಿತು.
"ಹರ್ಷ ಒಳ್ಳೆ ಕೆಲಸಗಾರ, ಕೋಪದಲ್ಲಿ ನಾನು ಮಾತಾಡಿರಬಹುದು. ಆದರೆ, ಕೆಟ್ಟಪದ ಬಳಸಿಲ್ಲ. ಕ್ಷಮೆ ಕೇಳುವುದರಿಂದ ಯಾರೂ ಚಿಕ್ಕವರಾಗುವುದಿಲ್ಲ, ದೊಡ್ಡವರಾಗುವುದಿಲ್ಲ. ಸಹನೃತ್ಯಗಾರ್ತಿಯರೊಡನೆ ಅನುಚಿತವಾಗಿ ನಡೆದುಕೊಳ್ಳುವಷ್ಟು ಕೆಟ್ಟವಳಲ್ಲ. ನಾನು ಚಿತ್ರದ ನೃತ್ಯ ನಿರ್ದೇಶಕ ಹರ್ಷ ಹಾಗೂ ನಟ ಸುದೀಪ್ ರಲ್ಲಿ ಕ್ಷಮೆ ಕೋರಿದ್ದೇನೆ" ಎಂದು ರಮ್ಯಾ ಸುದ್ದಿಗಾರರಿಗೆ ತಿಳಿಸಿದರು.
"ಯಾವುದೇ ಕಲಾವಿದನಿಗಾದರೂ ಗೌರವ ಮುಖ್ಯ. ಪರಸ್ಪರ ಮನಸ್ತಾಪವಿದ್ದರೆ ಕೊನೆಗೆ ಚಿತ್ರಕ್ಕೆ ಪೆಟ್ಟು ಬೀಳುವುದು ಸಹಜ, ಪ್ರಚಾರಕ್ಕಾಗಿ ನಾನು ಇದೆಲ್ಲಾ ಮಾಡಿಲ್ಲ" ಎಂದು ಸುದೀಪ್ ಹೇಳಿದರು. ಜಯಮಾಲ ಅವರ ಅನುಪಸ್ಥಿತಿಯಲ್ಲಿ ಸಂಧಾನ ಸಭೆಯ ನೇತೃತ್ವವನ್ನು ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಹಿಸಿದ್ದರು.
ಸುಮಾರು 3 ಗಂಟೆಗೂ ಹೆಚ್ಚು ಕಾಲ ಸಭೆ ನಡೆಯಿತು. ಸಭೆಯಲ್ಲಿ ಕೆಸಿಎನ್ ಕುಮಾರ್, ಎನ್ ಎಂ ಸುರೇಶ್, ಮುನಿರತ್ನಂ, ಕೆ.ಮಂಜು, ಸುರೇಶ್ ಗೌಡ, ಜಸ್ಟ್ ಮಾತ್ ಮಾತಲ್ಲಿ ನಿರ್ಮಾಪಕ ಶಂಕರೇ ಗೌಡ, ಫೈವ್ ಸ್ಟಾರ್ ಗಣೇಶ್, ಹರ್ಷ, ನೃತ್ಯ ಕಲಾವಿದರ ಸಂಘದ ಅಧ್ಯಕ್ಷ ರಾಜೇಂದ್ರ ಬಹ್ಮಾವರ್ ಮತ್ತಿತ್ತರು ಉಪಸ್ಥಿತರಿದ್ದರು.
(ದಟ್ಸ್ ಸಿನಿವಾರ್ತೆ)


Click it and Unblock the Notifications











