‘ಏಕಾಂಗಿ’ ರೀಶೂಟ್ ಆದಂತೆ ‘ಇತಿಹಾಸ’ ರೀರೈಟ್ ಆಗಬಾರದೇಕೆ?
ರವಿಚಂದ್ರನ್ ಅಭಿನಯದ 'ಏಕಾಂಗಿ' ಸಿನಿಮಾ 'ಕನ್ನಡ ಚಲನಚಿತ್ರ ಇತಿಹಾಸ' ಕೃತಿ ವಿವಾದ ಪ್ರಕರಣಕ್ಕೆ ಪರಿಹಾರಕ್ಕೆ ಬೆಳಕಿಂಡಿಯಾದೀತೆ?
ಇಂಥದೊಂದು ಪ್ರಶ್ನೆಯನ್ನು ಎತ್ತಿದ್ದು- ಕನ್ನಡ ಸಾಹಿತ್ಯ ಪರಿಷತ್ತಿನ ಮುಖವಾಣಿ 'ಕನ್ನಡ ನುಡಿ' ಪತ್ರಿಕೆಯ ಮಹದೇವ್ ಪ್ರಕಾಶ್. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ 'ಕನ್ನಡ ಚಲನಚಿತ್ರ ಇತಿಹಾಸ ಕೃತಿ ನಿಷೇಧ' ಚರ್ಚಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಮಹದೇವ ಪ್ರಕಾಶ್- ಏಕಾಂಗಿ, H2O ಚಿತ್ರಗಳು ಬಿಡುಗಡೆಯಾದ ನಂತರ ಜನರ ಅಭಿರುಚಿಗೆ ತಕ್ಕಂತೆ ಮಾರ್ಪಡಿಸಿದ್ದನ್ನು ಸ್ಮರಿಸಿಕೊಂಡರು. ಇದೇ ರೀತಿ ಸಿನಿಮಾ ಇತಿಹಾಸ ಸಂಪುಟಗಳನ್ನು ಸಂಪಾದಕ ಮಂಡಳಿ ತಿದ್ದುಪಡಿ ಮಾಡಬೇಕೆನ್ನುವುದು ಅವರ ಅಭಿಪ್ರಾಯ. ಅಂದಹಾಗೆ, ಚರ್ಚಾಗೋಷ್ಠಿ ನಡೆದದ್ದು ಮಂಗಳವಾರ (ಜೂ.18), ಪರಿಷತ್ತಿನ ಶ್ರೀಕೃಷ್ಣರಾಜೇಂದ್ರ ಪರಿಷನ್ಮಂದಿರದಲ್ಲಿ.
ಕೃತಿಯಲ್ಲಿನ ಬೇಕು-ಬೇಡಗಳ ಬಗ್ಗೆ ವಿವರಿಸಿದ ಮಹದೇವ್ ಪ್ರಕಾಶ್,'ಕನ್ನಡ ಚಿತ್ರರಂಗದ ಇತಿಹಾಸವನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಈ ಕೃತಿಯು ಒಂದು ಉತ್ತಮ ಹಾಗೂ ಪ್ರಾಮಾಣಿಕ ಪ್ರಯತ್ನ. ಆದರೆ, ಮೊದಲ ಕನ್ನಡ ಚಿತ್ರದಿಂದ ಹಿಡಿದು ಇಂದಿನ ಚಿತ್ರಗಳ ವಿಮರ್ಶೆಯೇ ಇತಿಹಾಸವಾಗುವುದಿಲ್ಲ. ಇದರ ಅರಿವು ಕೃತಿಯ ಸಂಪಾದಕ ಮಂಡಳಿಗೆ ಇಲ್ಲದಿದ್ದುದು ಚಿತ್ರರಂಗದ ದುರಾದೃಷ್ಟ ಎಂದರು.
ಮೂಕಿ ಚಿತ್ರ, ವಾಕ್ ಚಿತ್ರ, ಕುಮಾರ ತ್ರಯರ (ರಾಜ್ಕುಮಾರ್, ಉದಯಕುಮಾರ್ ಮತ್ತು ಕಲ್ಯಾಣ್ಕುಮಾರ್) ಕೊಡುಗೆಯಿಂದ ಹಿಡಿದು, ಹೊಸ ಅಲೆ ಸಿನಿಮಾಗಳ ಬಗ್ಗೆ ಹಾಗೂ ಆಧುನಿಕ ತಂತ್ರಜ್ಞಾನ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಗ್ಗೆ ಯಾವ ವಿವರವೂ ಇಲ್ಲದಿರುವುದರ ಬಗೆಗೆ ಮಹದೇವ್ ಪ್ರಕಾಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.


Click it and Unblock the Notifications











