ವೀರ ಮದಕರಿ ನಿರ್ಮಾಪಕ ದಿನೇಶ್ ಗಾಂಧಿ ಬಂಧನ
ಚೆಕ್ ಬೌನ್ಸ್ ಕೇಸ್ ಗೆ ಸಂಬಂಧಿಸಿದಂತೆ ಕನ್ನಡ ಚಿತ್ರನಿರ್ಮಾಪಕ ದಿನೇಶ್ ಗಾಂಧಿ ಅವರನ್ನು ಸಂಜಯನಗರ ಪೊಲೀಸರು ಬೆಂಗಳೂರಿನಲ್ಲಿ ಬುಧವಾರ ಬಂಧಿಸಿದ್ದಾರೆ. ಈ ಸಂಬಂಧ ರವಿ ಎಂಬುವವರು ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಹಿಂದೆ ಕೋರ್ಟ್ ಗೆ ಹಾಜರಾಗುವಂತೆ ದಿನೇಶ್ ಗಾಂಧಿಗೆ ನ್ಯಾಯಾಲಯ ನೋಟೀಸ್ ಜಾರಿ ಮಾಡಿತ್ತು. ಆದರೆ ದಿನೇಶ್ ಗಾಂಧಿ ಅವರು ಕೋರ್ಟ್ ಗೆ ಹಾಜರಾಗಿರಲಿಲ್ಲ. ಈ ಪ್ರಕರಣದಲ್ಲಿ ದಿನೇಶ್ ಗಾಂಧಿ ಅವರು ನೇರವಾಗಿ ಭಾಗಿಯಲ್ಲದಿದ್ದರೂ ಅವರ ಸ್ನೇಹಿತ ಚಂದ್ರಶೇಖರ್ ಎಂಬುವವರಿಗೆ ರವಿ ಮೂಲಕ ಹಣ ಕೊಡಿಸಿದ್ದರು. ಸೆಕ್ಯುರಿಟಿಯಾಗಿ ದಿನೇಶ್ ಗಾಂಧಿ ಸಹಿ ಹಾಕಿದ್ದರು.
ಚಂದ್ರಶೇಖರ್ ಕಾರಣಾಂತರಗಳಿಂದ ರವಿಗೆ ಹಣಹಿಂತಿರುಗಿಸಲಿಲ್ಲ. ರವಿ ವಿಧಿ ಇಲ್ಲದೆ ದಿನೇಶ್ ಗಾಂಧಿಗೆ ದುಂಬಾಲು ಬಿದ್ದರು. ದಿನೇಶ್ ಗಾಂಧಿ ಕೊಟ್ಟಿದ್ದ ಚೆಕ್ ಬೌನ್ಸ್ ಆಗಿದೆ ಎನ್ನಲಾಗಿದೆ. ಈ ಸಂಬಂಧ ರವಿ ಅವರು ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರವಿ ಅವರಿಗೆ ಸುಮಾರು ರು.4ಲಕ್ಷ ಹಣ ಕೊಡಬೇಕಾಗಿದೆ ಎನ್ನುತ್ತವೆ ಮೂಲಗಳು.
ಸಂಜಯನಗರ ಪೊಲೀಸರು 24ಗಂಟೆಯಲ್ಲಿ ದಿನೇಶ್ ಗಾಂಧಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಾಗಿದೆ.ಸದ್ಯಕ್ಕೆ ಅವರನ್ನು ಸಂಜಯನಗರ ಪೊಲೀಸ್ ಠಾಣೆಯಲ್ಲಿಡದೆ ಗುಪ್ತ ಸ್ಥಳದಲ್ಲಿ ಇಡಲಾಗಿದೆ ಎಂದು ಕನ್ನಡಟಿವಿ ವಾಹಿನಿಗಳು ವರದಿ ಮಾಡಿವೆ. ದಿನೇಶ್ ಗಾಂಧಿ ವೀರ ಮದಕರಿ ಚಿತ್ರವನ್ನು ನಿರ್ಮಿಸಿದ್ದರು. ಪ್ರಸ್ತುತ ಅವರು ರವಿಚಂದ್ರನ್ ನಾಯಕ ನಟನಾಗಿ 'ಹೂ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











