ಸತ್ಯಾನಂದ ಚಿತ್ರಕ್ಕೆ ಸ್ವಾಮಿ ನಿತ್ಯಾನಂದ ನೋಟೀಸ್ ಜಾರಿ
'ಸತ್ಯಾನಂದ' ಚಿತ್ರದ ನಿರ್ದೇಶಕ, ನಿರ್ಮಾಪಕ ಮದನ್ ಪಟೇಲ್ಗೆ ಹೈದರಾಬಾದ್ ವಕೀಲರ ಮೂಲಕ ಸ್ವಾಮಿ ನಿತ್ಯಾನಂದ ನೋಟೀಸ್ ಜಾರಿ ಮಾಡಿದ್ದಾರೆ. "ಚಿತ್ರದ ನಾಯಕ ನಟನ ಹೋಲಿಕೆ ನನ್ನ ರೀತಿಯೇ ಇದೆ." ಎಂದಿರುವ ಅವರು ಚಿತ್ರೀಕರಣವನ್ನು ಕೂಡಲೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಚಿತ್ರೀಕರಣವನ್ನು ನಿಲ್ಲಿಸುವುದಿಲ್ಲ ಎಂದು ಮದನ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.
ಹೈದರಾಬಾದಿನ ವಕೀಲ ಬಿ ಕೃಷ್ಣಕುಮಾರ್ ಮೂಲಕ ಸ್ವಾಮಿ ನಿತ್ಯಾನಂದ ನೋಟೀಸ್ ಜಾರಿ ಮಾಡಿದ್ದು, ನಿತ್ಯಾನಂದ ಹೆಸರು ಬಳಸಿ ಚಿತ್ರ ನಿರ್ಮಿಸದಂತೆ ಸೂಚಿಸಲಾಗಿದೆ. ಸತ್ಯಾನಂದ ಚಿತ್ರ ಮಾರ್ಚ್ 6ರಂದು ಸೆಟ್ಟೇರಿತ್ತು. ಸೆಟ್ಟೇರಿದ ಎರಡೇ ದಿನಗಳಲ್ಲಿ ಮಾರ್ಚ್ 8ರಂದು ನೋಟೀಸ್ ಬಂದಿರುವುದಾಗಿ ಮದನ್ ಪಟೇಲ್ ವಿವರ ನೀಡಿದ್ದಾರೆ.
"ಕುಂಬಳಕಾಯಿ ಕಳ್ಳ ಎಂದರೆ ನೀವ್ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಾ. ನೀವೇನು ತಪ್ಪು ಮಾಡಿಲ್ಲ ಎನ್ನುವುದಾದರೆ ನೀವ್ಯಾಕೆ ಹೆದರುತ್ತೀರಾ. ಒಂದು ವೇಳೆ ಚಿತ್ರದಲ್ಲಿನ ಪಾತ್ರಗಳು ನಿಮ್ಮನ್ನೇ ಹೋಲುವಂತಿದ್ದರೆ ಕೋರ್ಟ್ಗೆ ಹೋಗಿ. ಅಲ್ಲೇ ಇತ್ಯರ್ಥವಾಗಲಿ" ಎಂದು ಮದನ್ ಪಟೇಲ್ ನೋಟೀಸಿಗೆ ಉತ್ತರ ನೀಡಿರುವುದಾಗಿ ಹೇಳಿದ್ದಾರೆ.
ಬೆಳಗಾವಿ ವಿಶ್ವಕನ್ನಡ ಸಮ್ಮೇಳನ ನಿಮಿತ್ತ ಐದು ದಿನ ಬಿಡುವು ನೀಡಿದ್ದ ಕಾರಣ ಸತ್ಯಾನಂದ ಚಿತ್ರೀಕರಣ ನಿಲ್ಲಿಸಲಾಗಿತ್ತು. ಈಗ ಚಿತ್ರೀಕರಣ ಭರದಿಂದ ಸಾಗಿದೆ. ಸತ್ಯಾನಂದ ಚಿತ್ರೀಕರಣವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮದನ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ರವಿಚೇತನ್ ಎಂಬುವವರು 'ಸತ್ಯಾನಂದ'ನ ಪಾತ್ರವನ್ನು ಪೋಷಿಸುತ್ತಿದ್ದಾರೆ.


Click it and Unblock the Notifications











