ಪಾರ್ವತಮ್ಮಗೆ ಅಪ್ರಯೋಜಕ ಡಿಡಿ ನೀಡಿದ ಸರಕಾರ
ಕಿತ್ತೂರುರಾಣಿ ಚನ್ನಮ್ಮ ಪ್ರಶಸ್ತಿ ಗಳಿಸಿರುವ ಪಾರ್ವತಮ್ಮ ರಾಜಕುಮಾರ್ ಗೆ ನಮ್ಮ ಘನ ಸರಕಾರ 'ಅವಧಿ ಮುಗಿದ ಡಿಡಿ' ನೀಡಿ ಆವಾಂತರ ಮಾಡಿಕೊಂಡಿದೆ. ಕಿತ್ತೂರುರಾಣಿ ಚನ್ನಮ್ಮ ಪ್ರಶಸ್ತಿಯ ನಗದು ಬಹುಮಾನ ಹತ್ತು ಸಾವಿರ ರೂಪಾಯಿಗಳ ಡಿಡಿಯನ್ನು ಸಂಬಂಧಿಸಿದ ಅಧಿಕಾರಿಗಳು ಪಾರ್ವತಮ್ಮ ಅವರ ಮನೆಗೆ ತೆರಳಿ ಶನಿವಾರದಂದು ಹಸ್ತಾಂತರಿಸಿ ತಕ್ಷಣವೇ ನಗದುಗೊಳಿಸಬಹುದು ಎಂದು ಹೇಳಿದ್ದಾರೆ.
ಡಿಡಿ ಪಡೆದು ಬ್ಯಾಂಕಿಗೆ ಹೋದ ಪಾರ್ವತಮ್ಮಗೆ ಇದು ಅವಧಿ ಮುಗಿದಿರುವ ಡಿಡಿ ಆಗಿರುವುದರಿಂದ ಇದನ್ನು ಸ್ವೀಕರಿಸಲಾಗುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ. ಇದರಿಂದ ಅವಮಾನಗೊಂಡ ಪಾರ್ವತಮ್ಮ ಸರಕಾರ ನಡೆಸುವ ಯಾವುದೇ ಸಭೆ ಸಮಾರಂಭಗಳಿಗೆ ಇನ್ನು ಮುಂದೆ ತಾನು ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ.
ಕೆಚ್ಚೆದೆಯ ರಾಣಿ 'ಕಿತ್ತೂರು ಚನ್ನಮ್ಮ' ಹೆಸರಿನಲ್ಲಿ ನೀಡುವ ಈ ಪ್ರಶಸ್ತಿಯನ್ನು ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನದಂದು ನೀಡುವುದು ವಾಡಿಕೆ. ಆದರೆ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸರಕಾರ ಈ ಕಾರ್ಯಕ್ರಮವನ್ನು ಮುಂದೂಡಿತ್ತು. ಪ್ರಶಸ್ತಿ ಮಾತ್ರ ಘೋಷಿಸಿದ್ದ ಸರಕಾರ ಕಾರ್ಯಕ್ರಮ ಆಯೋಜಿಸುವುದನ್ನು ಮರೆತಿತ್ತು, ಜೂನ್ 21 ರಂದು ತಮ್ಮ ತಪ್ಪಿನ ಅರಿವಾದ ಸರಕಾರ ಎಚ್ಚೆತ್ತು ಈ ಅವಧಿ ಮುಗಿದ ಡಿಡಿ ನೀಡಿ ಇನ್ನೊದು ಆವಾಂತರ ಸೃಷ್ಟಿಸಿಕೊಂಡಿದೆ.
(ದಟ್ಸ್ ಕನ್ನಡ ಸಿನಿಮಾ ವಾರ್ತೆ)


Click it and Unblock the Notifications











