ಪ್ರವಾಸಿಗರನ್ನು ದೋಚುತ್ತಿದ್ದ ಕನ್ನಡ ನಟನ ಬಂಧನ
ನಂದಿ ಗಿರಿಧಾಮದಲ್ಲಿ ಪ್ರವಾಸಿಗರನ್ನು ದೋಚುತ್ತಿದ್ದ ಮೂವರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕನ್ನಡ ನಟ ಕಿರಣ್ ಸಹ ಒಬ್ಬರು ಎಂದು ಪೊಲೀಸರು ತಿಳಿಸಿದ್ದಾರೆ. 'ಮಲ್ಲೇಶ್ವರಂ 18th ಕ್ರಾಸ್', 'ಮೂರನೆ ಕ್ಲಾಸ್ ಮಂಜ ಬಿಕಾಂ ಭಾಗ್ಯ' ಮತ್ತು 'ಲೈಫ್ ಸ್ಟೈಲ್' ಚಿತ್ರಗಳಲ್ಲಿ ಕಿರಣ್ ಅಭಿನಯಿಸಿದ್ದಾರೆ.
ಪೊಲೀಸರು ಬಂಧಿಸಿರುವ ಇನ್ನಿಬ್ಬರನ್ನು ಯಶವಂತಪುರ ನಿವಾಸಿಗಳಾದ ಮಂಜುನಾಥ್ ಮತ್ತು ವೀರು ಎಂದು ಗುರುತಿಸಲಾಗಿದೆ. ನಂದಿಗಿರಿಧಾಮದಲ್ಲಿ ಸಾಕಷ್ಟು ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಪಹರೆಯನ್ನು ಹೆಚ್ಚಿಸಲಾಗಿತ್ತು. ಆಗ ಮೊದಲು ಸಿಕ್ಕಿಬಿದ್ದವನೆ ವೀರು ಎಂದು ಪೊಲೀಸರು ವಿವರ ನೀಡಿದ್ದಾರೆ.
ನಂದಿಗಿರಿಧಾಮದಲ್ಲಿ ಪ್ರವಾಸಿಗರನ್ನು ಒಂದು ದರೋಡೆಕೋರರ ತಂಡ ದೋಚುತ್ತಿದೆ ಎಂದು ಜುಲೈ 2010ರಂದು ವಾಸಿಫ್ ನಿಸ್ಸಾರ್ ಎಂಬುವವರು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅವರು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ಈ ಕೆಳಕಂಡಂತೆ ತಿಳಿಸಿದ್ದಾರೆ.
" ಒಂದು ಮುಂಜಾನೆ ನಂದಿಗಿರಿಧಾಮದಿಂದ ಗೆಳೆಯರೊಂದಿಗೆ ಹಿಂತಿರುಗುತ್ತಿರಬೇಕಾದರೆ ನಾಲ್ಕು ಮಂದಿ ಎರಡು ಮೋಟರ್ ಬೈಕ್ಗಳಲ್ಲಿ ನಮ್ಮನ್ನು ಹಿಂಬಾಲಿಸಿದರು. ಬಳಿಕ ಅವರು ನಮ್ಮನ್ನು ಅಡ್ಡಗಟ್ಟಿ, ಬೆದರಿಸಿ ನಮ್ಮ ಬಳಿಯಿದ್ದ ಮೊಬೈಲ್ ಫೋನ್, ಬೈಕ್, ನಗದು ಹಾಗೂ ಎರಡು ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿದ್ದಾಗಿ" ಅವರು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನಂದಿಗಿರಿಧಾಮದಲ್ಲಿ ಪೊಲೀಸ್ ಪಹರೆಯನ್ನು ಹೆಚ್ಚಿಸಿದ್ದರು. ಪೊಲೀಸರಿಗೆ ವೀರು ಸಿಕ್ಕಿಬಿದ್ದ ಬಳಿಕ ಅವನನ್ನು ವಿಚಾರಣೆ ನಡೆಸಲಾಗಿ ಈತನೊಂದಿಗೆ ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿಬ್ಬರ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಬಂಧಿತರಿಂದ ಒಂದು ಕಾರು, ಮೋಟರ್ ಸೈಕಲ್ ಮತ್ತು ಎರಡು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೀರು ಪೊಲೀಸರಿಗೆ ತಿಳಿಸಿರುವ ಪ್ರಕಾರ, ಇವರ ತಂಡಕ್ಕೆ ನಾಯಕ ನಟ ಕಿರಣ್ ಎಂದು ತಿಳಿಸಿದ್ದಾನೆ. ಆರ್ಥಿಕವಾಗಿ ಸದೃಢವಾಗಿರುವ ಕುಟುಂಬ ಹಿನ್ನೆಲೆಯಿಂದ ಬಂದಿರುವ ಕಿರಣ್ ಕಾಲೇಜು ಡ್ರಾಪ್ ಔಟ್ ಆಗಿದ್ದ. ನಟ ಕಿರಣ್ಗೆ ಡ್ರಾಗ್ ರೇಸ್ನ ಹುಚ್ಚು ಇತ್ತು ಎಂದು ಪೊಲೀಸರು ವಿವರ ನೀಡಿದ್ದಾರೆ.
ಇವರೆಲ್ಲಾ ಜೊತೆಯಾಗಿ ನಂದಿ ಬೆಟ್ಟಕ್ಕೆ ಆಗಾಗ ಭೇಟಿ ನೀಡಿ ಅಲ್ಲಿಗೆ ಬರುತ್ತಿದ್ದ ಪ್ರವಾಸಿಗರನ್ನು ದೋಚುತ್ತಿದ್ದರು. ಸದ್ಯಕ್ಕೆ ಪೊಲೀಸರು ವೀರು ಮತ್ತು ಕಿರಣ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೂ ಈ ಕೃತ್ಯದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.


Click it and Unblock the Notifications











