ರಾಜ್ ಸಮಾಧಿಗೆ ಗೃಹ ಸಚಿವ ಅಶೋಕ್ ಅಗೌರವ
ಡಾ.ರಾಜ್ ಕುಮಾರ್ ಅವರ 84ನೇ ಹುಟ್ಟುಹಬ್ಬ ಸಂದರ್ಭದಲ್ಲಿ ಮಂಗಳವಾರ (ಏ.24) ಅಹಿತಕರ ಘಟನೆಯೊಂದು ನಡೆದಿದೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿಯನ್ನು ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ಹತ್ತಿ ನಿಂತು ಅಗೌರವ ತೋರಿದ್ದಾರೆ ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಕಿಡಿಕಾರಿದ್ದಾರೆ.
ರಾಜ್ ಸಮಾಧಿಗೆ ಮಾಲಾರ್ಪಣೆ ಮಾಡಿ ನುಡಿನಮನ ಸಲ್ಲಿಸುವ ವೇಳೆ ಗೃಹ ಸಚಿವರು ರಾಜ್ ಸಮಾಧಿಯ ಮೇಲೆ ಕಾಲಿಟ್ಟು ಮಾಲಾರ್ಪಣೆ ಮಾಡುತ್ತಿರುವ ವಿಡಿಯೋವನ್ನು ಸುವರ್ಣ ವಾಹಿನಿ ತನ್ನ ಮಧ್ಯಾಹ್ನದ ವಾರ್ತಾ ಸಂಚಿಕೆಯಲ್ಲಿ ಬಿತ್ತರಿಸಿದೆ. ಅಶೋಕ್ ನಡವಳಿಕೆ ಬಗ್ಗೆ ಬರಗೂರು ರಾಮಚಂದ್ರಪ್ಪ ತೀವ್ರವಾಗಿ ಖಂಡಿಸಿದ್ದಾರೆ.
"ಒಬ್ಬ ಸಾಮಾನ್ಯ ವ್ಯಕ್ತಿಯೊಬ್ಬ ಅಷ್ಟೊಂದು ಎತ್ತರಕ್ಕೆ ಏರಬಹುದು ಎಂದು ತೋರಿಸಿಕೊಟ್ಟಂತಹ ಮಹಾನ್ ಚೇತನ ರಾಜ್ ಕುಮಾರ್. ಅವರ ಸಮಾಧಿ ಮೇಲೆ ಕಾಲಿಟ್ಟು ಫೋಟೋ ತೆಗೆಸಿಕೊಂಡಿದ್ದು ನಿಜಕ್ಕೂ ಖಂಡನೀಯ ಎಂದು ಕಿಡಿಕಾರಿದರು.
ಈ ಸ್ಥಳವನ್ನು ನಾವು ದೇವಸ್ಥಾನ ಎಂದೇ ಭಾವಿಸುತ್ತೇವೆ. ಅಂತಹ ಪವಿತ್ರ ಸ್ಥಳಕ್ಕೆ ಮಾನ್ಯ ಗೃಹಸಚಿವರು ಅಗೌರವ ಸೂಚಿಸಿರುವುದು ನಿಜಕ್ಕೂ ಬೇಸರದ ಸಂಗತಿ. ಇದು ರಾಜ್ ಅವರಿಗೆ ಮಾಡಿದ ಅವಮಾನ. ಈ ಘಟನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದಾಗಿ ಬರಗೂರು ತಿಳಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











