ರಂಗಾಯಣಕ್ಕೆ ನಕ್ಸಲರು ಭೇಟಿ ನೀಡಿದ್ದರೆ?
ಮೈಸೂರು ರಂಗಾಯಣದಲ್ಲಿ ಯಶಸ್ವಿ ರಂಗ ಪ್ರಯೋಗ ಕಾಣುತ್ತಿರುವ 'ಮಲೆಗಳಲ್ಲಿ ಮದುಮಗಳು' ನಾಟಕ ವೀಕ್ಷಣೆಗೆ ನಕ್ಸಲೀಯರು ಭೇಟಿ ನೀಡಿದ್ದರು ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಕುವೆಂಪು ಅವರ ಅತ್ಯುತ್ತಮ ಗದ್ಯ ಕೃತಿಗಳಲ್ಲಿ ಒಂದಾದ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ರಂಗರೂಪಕ್ಕೆ ಇಳಿಸುವ ಪ್ರಯೋಗ ಕಳೆದ 20 ದಿನಗಳಿಂದ ರಂಗಾಯಣದಲ್ಲಿ ನಡೆಯುತ್ತಿದೆ.
ಪ್ರತಿ ಪ್ರದರ್ಶನದಲ್ಲಿ 300 ಮಂದಿಯಂತೆ ಇದುವರೆಗೂ 3 ಸಾವಿರ ಮಂದಿ ನಾಟಕವನ್ನು ವೀಕ್ಷಿಸಿದ್ದಾರೆ. ಮಲೆನಾಡಿನ ಸಾಮಾಜಿಕ ಪರಿಸ್ಥಿತಿಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನು ಸಿ ಬಸವಲಿಂಗಯ್ಯ ರಂಗಭೂಮಿಕೆ ತರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮಧ್ಯೆ ಮಲೆನಾಡಿನಲ್ಲಿ ನಕ್ಸಲೀಯ ಚಟುವಟಿಕೆಗಳು ನಿಗೂಢವಾಗಿ ಬೆಳವಣಿಗೆಯಾಗುತ್ತಿರುವು ಆತಂಕಕ್ಕೆ ಕಾರಣವಾಗಿದೆ.
ಮೇ.19 ಹಾಗೂ 21ರಂದು ನಡೆದ 'ಮದುಮಗಳು' ಕೊನೆಯ ಪ್ರದರ್ಶನಕ್ಕೆ ನಕ್ಸಲರು ಆಗಮಿಸಿದ್ದರು ಎನ್ನಲಾಗಿದೆ. ನಕ್ಸಲ್ ಸಂಘಟನೆಯಲ್ಲಿ ಸಕ್ರಿಯರಾಗಿರುವ ಕೆಲವರು ಅಂದು ಮದುಮಗಳು ನಾಟಕ ವೀಕ್ಷಿಸಿದ್ದಾಗಿ ಗುಮಾನಿ ವ್ಯಕ್ತವಾಗಿದೆ. ಶಿಮೊಗ್ಗದಿಂದ ಏಳು ಮಂದಿಯಿದ್ದ ನಕ್ಸಲರ ತಂಡ ನಾಟಕ ವೀಕ್ಷಿಸಿ ಮರುದಿನ ಬೆಳಗ್ಗೆ ಮೈಸೂರಿನಿಂದ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿಷಯ ಇಷ್ಟು ಗಂಭೀರವಾಗಿದ್ದರೂ ಇದುವರೆಗೂ ಪೊಲೀಸ್ ಗುಪ್ತಚರ ಇಲಾಖೆಗೆ ಈ ಬಗ್ಗೆ ಸುಳಿವೇ ಸಿಕ್ಕಿಲ್ಲ. ಯಾರು ಬೇಕಾದರು ನಾಟಕ ವೀಕ್ಷಿಸಬಹುದಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ರಂಗಪ್ರಿಯರು ಬಂದು ಮದುಮಗಳನ್ನು ನೋಡಿಕೊಂಡು ಹೋಗಿದ್ದಾರೆ. ರಂಗಾಯಣಕ್ಕೆ ಹೊಸ ನಿರ್ದೇಶಕ ಲಿಂಗದೇವರು ಹಳೆಮನೆ ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಈ ಘಟನೆ ನಡೆದಿದೆ.


Click it and Unblock the Notifications











