ರತ್ನಜನ್ ರತ್ನನ್ ಪದಗಳ್ ಕೇಳುವಂತವರಾಗಿ
ನಾನು ಜೀವನದಲ್ಲಿ ಯಾರಿಗೆ ಮೋಸ ಮಾಡಿದ್ರೂ ಟೈಮಿಗೆ ಮೋಸ ಮಾಡಲ್ಲ. ನಂಗೆ ಸಮಯ ಅನ್ನೋದು ಜೀವನದ ಅಂಗ ಇದ್ದ ಹಾಗೆ. ಸರಿಯಾದ ಸಮಯಕ್ಕೆ ಬಾರದೇ ಪೋಸ್ ಕೊಡುವವರನ್ನು ಕಂಡರೆ ಕೆಂಡದಂಥ ಕೋಪ ಆತಾ ಹೈ! ನಿರ್ದೇಶಕ ರತ್ನಜ ಹಿಂದೊಮ್ಮೆ ಹೀಗೆ ಹೇಳಿದ್ದರು. ಹಾಗೆ ಹೇಳಲು ಕಾರಣವಿತ್ತು.
ವಿಷಯಕ್ಕೆ ಬರುವ ಮುನ್ನ ಈ ಫ್ಲ್ಯಾಷ್ಬ್ಯಾಕ್ ಓದಿ... ಇದೇ ರತ್ನಜ ನಿರ್ದೇಶನದ ನೆನಪಿರಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಸರಿಸುಮಾರು ಮೂರು ವರ್ಷದ ಹಿಂದೆ ನಡೆದಿತ್ತು. ನಟಿ ತಾರಾ ಮುಖ್ಯ ಅತಿಥಿಯಾಗಿದ್ದರು. ತಾರಾ ಅರ್ಧಗಂಟೆ ತಡವಾಗಿ ಬಂದರು. ಆಗ ರತ್ನಜ, ಅವರನ್ನು ವೇದಿಕೆಗೆ ಕರೆಯಲಿಲ್ಲ.
ಏಕೆಂದರೆ ಟೈಮಮ್ಮಾ ಟೈಮು. ಹತ್ತು ನಿಮಿಷ ತಡವಾಗಿ ಬಂದರೂ ನಾನು ಸಹಿಸೊಲ್ಲ... ಎಂದು ಅವಮಾನಿಸಿದ್ದರು. ಆ ತಡ ಸಕಾರಣವಾಗಿದ್ದರೂ ತಾರಾ ಕಣ್ಣೀರಿಟ್ಟಿದ್ದರು !ಆದರೆ ಅದೇ ರತ್ನಜ ಮೊನ್ನೆ ನಡೆದ ಪ್ರೇಮಿಸಂ ಚಿತ್ರದ ಆಡಿಯೊ ರಿಲೀಸ್ಗೆ ಒಂದೂವರೆ ಗಂಟೆ ತಡವಾಗಿ ಬಂದರು. ಚಿತ್ರದ ಸೂತ್ರಧಾರನೇ ಕಾಣದಿದ್ದಾಗ ಅಲ್ಲಿದ್ದ ಕೆಲ ಪತ್ರಕರ್ತರು ಗುರ್ರ್ ಎಂದರು.
ಇನ್ನೇನು ಎಲ್ಲಾ ಮುಗಿದು, ಮಂಗಳಹಾಡುವ ಹೊತ್ತಿಗೆ ರತ್ನಜ ಆಮೆ ವೇಗದಲ್ಲಿ ಬಂದು, ಲಬಕ್ ಅಂತ ವೇದಿಕೆಯಲ್ಲಿ ಸೆಟ್ಲಾದರು. ಮಾತಿಗೂ ಸಾರಿ ಕೇಳಲಿಲ್ಲ. ಹಿರಿಯಪತ್ರಕರ್ತ ಎ.ಎಸ್.ಮೂರ್ತಿ, ಯಾಕೋ ರಾಜಾ ಕ್ಷಮೆ ಕೇಳುವ ಜಾಯಮಾನ ಇಲ್ಲವಾ ಎಂದದ್ದೇ ರತ್ನಜ ಮೆತ್ತಗೆ ಮುಲು ಮುಲು ಎಂದರು. ಬಹುಶಃ ತಾರಾ ಅಂದು ಅಲ್ಲಿದ್ದರೆ ಏಟಿಗೆ ಎದಿರೇಟು ಸಿಗುತ್ತಿತ್ತೇನೊ.... ಬಾಯಿ ತುಂಬಾ ವೇದಾಂತ ಹೇಳಿ, ಅದೇ ಬಾಯಲ್ಲಿ ಬದನೇಕಾಯಿ ತಿಂದರೆ? ಸಮಯ ಪ್ರಜ್ಞೆಯ ಕುರಿತ ರತ್ನಜನ್ ರತ್ನನ್ ಪದಗಳ್ಗೆ ಈಗ ಹೊಸ ಅರ್ಥ ಬಂದಿದೆ!


Click it and Unblock the Notifications











