ಮಾಧ್ಯಮಗಳ ಮೇಲೆ ದರ್ಶನ್ ಶೌರ್ಯ ಪ್ರದರ್ಶನ
ಮಾಧ್ಯಮಗಳಿಂದ ಸದಾ ಗಾವುದ ದೂರ ಇರುವ ಛಾಲೆಂಜಿಂಗ್ ದರ್ಶನ್ ಮೊನ್ನ್ನೆ ಮಾಧ್ಯಮಗಳ ಬಗ್ಗೆ ಚಕಾರ ಎತ್ತುವ ಮೂಲಕ ಹತ್ತಿರವಾಗಿದ್ದಾರೆ. ಮಾಧ್ಯಮಗಳಲ್ಲಿ ಚಿತ್ರ ವಿಮರ್ಶೆಗಳು ಕೆಟ್ಟದಾಗಿ ಬರುತ್ತಿವೆ ಎಂಬುದು ಅವರ ಗುರುತರ ಆರೋಪ. ತಮ್ಮ ಇತ್ತೀಚೆಗಿನ 'ಶೌರ್ಯ' ಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಕೆಟ್ಟದಾಗಿ ವಿಮರ್ಶೆಗಳು ಬಂದಿವೆ ಎಂದು ದರ್ಶನ್ ನೇರವಾಗಿ ಆರೋಪಿಸಿದ್ದಾರೆ.
ಮದಲಸಾ ಶರ್ಮಾ, ರೀಮಾ ವರ್ಮಾ ಮತ್ತು ದರ್ಶನ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ 'ಶೌರ್ಯ'. ಕೆಲವು ಪತ್ರಿಕೆಗಳು ಹಾಗೂ ಅಂತರ್ಜಾಲ ತಾಣಗಳಲ್ಲಿ ತಮ್ಮ ಚಿತ್ರದ ಬಗ್ಗೆ ಬಂದ ವಿಮರ್ಶೆಗಳು ದರ್ಶನ್ ಗೆ ತೃಪ್ತಿ ತಂದಿಲ್ಲವಂತೆ. ಹಾಗಾಗಿ ಅವರು ಚಿತ್ರ ವಿಮರ್ಶಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರಗಳ ಬಗ್ಗೆ ಮಾಧ್ಯಮಗಳು ಬೆಂಬಲಿಸುತ್ತಿಲ್ಲ ಎಂದು ದರ್ಶನ್ ಕಿಡಿಕಾರಿದ್ದಾರೆ.
'ಶೌರ್ಯ' ಚಿತ್ರದ ನಿರ್ಮಾಪಕರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಕೆಲವು ಪತ್ರಿಕೆಗಳು, ಅಂತರ್ಜಾಲ ತಾಣಗಳು ಹಾಗೂ ಟಿವಿ ವಾಹಿನಿಗಳ ಬಗ್ಗೆ ದರ್ಶನ್ ಕುಪಿತಗೊಂಡಿದ್ದರು. ಚಿತ್ರವಿಮರ್ಶೆಯಾವಾಗಲು ಸಕಾರಾತ್ಮಕವಾಗಿರಲಿ ಎಂಬಕಿವಿಮಾತನ್ನು ಹೇಳಿದರು.
ಪತ್ರಕರ್ತರ ಬಗೆಗಿನ ದರ್ಶನ್ ಧೋರಣೆಗೆ ಅಲ್ಲಿನ ಕೆಲವು ಪತ್ರಕರ್ತರು ಬೇಸರಿಕೊಂಡರು. ಪತ್ರಕರ್ತರ ಬಗ್ಗೆ ಹೀಗೆ ನೇರವಾಗಿ ಆರೋಪ ಹೊರಿಸುತ್ತಿರುವ ಬಗ್ಗೆ ಅವರು ಮೌನವಹಿಸಿದ್ದರು. ವೈಯಕ್ತಿಕವಾಗಿ ದರ್ಶನ್ ಒಬ್ಬ ಉತ್ತಮ ನಟ, ನೊಂದವರಿಗೆ ಸಹಾಯ ಮಾಡುವ ಹಾಗೂ ಮೃದು ಮನಸ್ಸಿನ ನಟ ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ ಪತ್ರಕರ್ತರ ಮೇಲೆ ಹೀಗೆ ಎಗರಾಡಿದರೆ ಏನು ಪ್ರಯೋಜನ. ಚಿತ್ರ ಚೆನ್ನಾಗಿದ್ದರೆ ಜನ ಚಿತ್ರಮಂದಿರಕ್ಕೆ ಬಂದೇ ಬರ್ತಾರೆ. ಚಿತ್ರ ವಿಮರ್ಶೆ ಓದಿ ಎಷ್ಟು ಜನ ಸಿನಿಮಾಗೆ ಬರ್ತಾರೆ? ಬರೆದ ಚಿತ್ರ ವಿಮರ್ಶೆಗಳೆಲ್ಲಾ ಕೆಟ್ಟದಾಗಿಯೇ ಇರುತ್ತವೆಯೇ? ಕೆಟ್ಟ ಚಿತ್ರಕ್ಕೆ ಒಳ್ಳೆ ವಿಮರ್ಶೆ; ಒಳ್ಳೆ ಚಿತ್ರಕ್ಕೆ ಕೆಟ್ಟ ವಿಮರ್ಶೆ ಬರೆದರೆ ಜನ ಒಪ್ತಾರಾ ಹೇಳಿ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದರೆ ಹೇಗೆ ಸರ್? ಎಂಬುದು ಅಲ್ಲಿನ ಯುವ ಪತ್ರಕರ್ತರ ಅಳಲು.


Click it and Unblock the Notifications











