ಅಂಬಾರಿ ಹುಡುಗಿ ಸುಪ್ರೀತಾಗೆ ಆದ ಅನ್ಯಾಯವೇನು?
ಅಂಬಾರಿ ಸರಳ ಸುಂದರಿ ಮಂಗಳೂರಿನ ಸುಪ್ರೀತಾಗೆ ಅದೇನೋ ಅನ್ಯಾಯವಾಗಿದೆಯಂತೆ. ಅದೇನೋ ಅಂದರೆ ಅದೇನು ಎಂಬುದನ್ನು ಅವರೂ ಹೇಳಿಲ್ಲ. ಏನೂ ಹೇಳದೇ ಸುಮ್ಮನಿರಲು ಅವರಿಂದಲೂ ಸಾಧ್ಯವಾಗಿಲ್ಲ. "ನನ್ನ ನೆಮ್ಮದಿ ಹಾಳಾಗಿದೆ. ಹೆಣ್ಮಕ್ಕಳು ಇಲ್ಲಿ ಬದುಕುವುದು ತುಂಬಾ ಕಷ್ಟ" ಎಂದು ಸುಪ್ರೀತಾ ರವಿ ಮಂಜುನಾಥ್ ನಿರ್ದೇಶನ ಹಾಗೂ ಜಯಂತ್ ನಾಯಕತ್ವದ 'ಕಾವೇರಿ ನಗರ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಗೋಡೆ ಮೇಲೆ ದೀಪ ಇಟ್ಟಂತೆ "ಸಿನಿಮಾ ರಂಗ ಬಣ್ಣದ ಲೋಕವೆಂದು ಹೇಳೋದು ಸುಲಭ, ಆದರೆ ಇಲ್ಲಿ ಬದುಕೋದು ತುಂಬಾ ಕಷ್ಟ. ಅದರಲ್ಲೂ ಹೆಣ್ಮಕ್ಕಳಿಗೆ ಸಮಸ್ಯೆಗಳ ಮೇಲೆ ಸಮಸ್ಯೆ. ಎಲ್ಲವನ್ನೂ ಎದುರಿಸಬೇಕು. ಅದನ್ನು ಬಿಟ್ಟು ಬಹಿರಂಗವಾಗಿ ಹೇಳಿಕೊಂಡರೆ, ನಮಗೇ ತೊಂದರೆ. ಕಹಿ ಅನುಭವಗಳನ್ನು ನುಂಗಿಕೊಂಡೇ ಮುಂದೆ ಸಾಗಬೇಕು." ಹೀಗೆ ಸಾಗುತ್ತಿದ್ದ ಸುಪ್ರೀತಾ ಒಗಟಾದ ಮಾತಿಗೆ ಎಲ್ಲರೂ ಮೌನ ಬಿಟ್ಟು ಇನ್ಯಾವ ಉತ್ತರವನ್ನೂ ಕೊಡಲು ಸಾಧ್ಯವಿರಲಿಲ್ಲ.
ಸುಪ್ರೀತಾ ಮೊದಲಿನಿಂದಲೂ ಒಂದು ಮಿತಿಗಿಂತ ಹೆಚ್ಚು ಮಾತನಾಡಿದವರಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಇದ್ದು ಬಿಟ್ಟವರು. ಆದರೆ ಆಗಾಗ ತಮ್ಮ ನೋವನ್ನು ಒಗಟಿನಂತೆ ಹೊರಹಾಕುತ್ತಾ ಬಂದವರು. ಅವರು ಬೇರೆಯವರ ಉಸಾಬರಿಗೆ ಹೋಗಿಲ್ಲ, ಆದರೆ ಯಾರೋ ಅವರ ಉಸಾಬರಿಗೆ ಬಂದಿದ್ದಾರೆ ಎನ್ನುವಂತೆ ಮಾತನಾಡಿದ್ದಾರೆ. ಯಾರೆ? ಯಾಕೆ? ಎಂಬುದನ್ನು ಅವರು ಬಾಯಿಬಿಡುತ್ತಿಲ್ಲ.
ಈಗಾಗಲೇ ಅಂಬಾರಿ ಸೇರಿದಂತೆ ಕೇಳದೆ ನಿಮಗೀಗ, ಅಜ್ಞಾನಿ, ನೆನಪಿನಂಗಳ, ರಣ, ಮೊದಲ ಮಿಂಚು, ಕಾವೇರಿ ನಗರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಸುಪ್ರೀತಾಗೆ ಅದೇನು ತೊಂದರೆಯೋ! ಆದರೆ ಅಷ್ಟೊಂದು ತೊಂದರೆಯಿದ್ದೂ ಅವರೇಕೆ ಸುಮ್ಮನಿದ್ದಾರೆ? ಅಷ್ಟಕ್ಕೂ ಚಿತ್ರರಂಗದಲ್ಲೇ ಇರುವಂತೆ ಅವರನ್ನು ಕಟ್ಟಿಹಾಕಿದವರ್ಯಾರು? ಯಾವುದೂ ಸದ್ಯಕ್ಕೆ ಅರ್ಥವಾಗುತ್ತಿಲ್ಲ. ಇರಲಿ, ಎಲ್ಲದಕ್ಕೂ ಕಾಲವೇ ಉತ್ತರ ಹೇಳಬಹುದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











