ರಾಜೇಂದ್ರ ಸಿಂಗ್ ಬಾಬು ಬಿಡದಂತೆ ಕಾಡುತ್ತಿರುವ 'ಮೋಹಿನಿ'
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಹೊಸ ಹೊಸ ಯೋಜನೆಗಳನ್ನು ಪ್ರಕಟಿಸುತ್ತಾ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿರುವ ಸಮಯದಲ್ಲೇ 'ಮೋಹಿನಿ' ಕಾಟ ಶುರುವಾಗಿದೆ.
ಪುತ್ರ ಆದಿತ್ಯಾ ಅಭಿನಯದ 'ಮೋಹಿನಿ' ಚಿತ್ರ ವಿವಾದಗಳಿಂದಲೇ ಸದ್ದು ಮಾಡಿತ್ತು. ಆದರೆ, ಈಗ ನಾಗರಾಜ್ ಎಂಬುವವರಿಂದ ಮುಂಗಡ ಹಣ ಪಡೆದು ಹಿಂತಿರುಗಿಸದ ತಪ್ಪಿಗೆ ಭಾರಿ ದಂಡ ತೆರಬೇಕಾಗಿದೆ.[ಚಲನಚಿತ್ರ ಅಕಾಡೆಮಿಗೆ ರಾಜೇಂದ್ರಸಿಂಗ್ ಬಾಬು ಸಾರಥ್ಯ]
ಮೋಹಿನಿ 9886788888 ಎಂಬ ಹೆಸರಿನ ಹಾರರ್ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ಅವರು ನಿರ್ಮಿಸಿ, ನಿರ್ದೇಶಿಸಿದ್ದರು. ಈ ಚಿತ್ರದ ನಿರ್ಮಾಣ ಸಂದರ್ಭದಲ್ಲಿ ನವಶಕ್ತಿ ಎಂಟರ್ಪ್ರೈಸಸ್ ಮಾಲೀಕ ಸಿ.ನಾಗರಾಜ್ ಅವರಿಂದ7,20,053 ರು ಹಣವನ್ನು ಪಡೆದುಕೊಂಡು ಹಿಂತಿರುಗಿಸಿರಲಿಲ್ಲ.

ಮುಂಗಡ ಹಣ ಪಡೆದು ಹಿಂತಿರುಗಿಸದ ಹಿನ್ನಲೆಯಲ್ಲಿ ನಾಗರಾಜ್ ಅವರು ಸಿಟಿ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಾವು ನೀಡಿರುವ ಹಣವನ್ನು ಹಿಂದಿರುಗಿಸಬೇಕೆಂದು ನಾಗರಾಜ್ ಅವರು ಬಾಬು ಅವರಿಗೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಅವರ ವಿರುದ್ಧ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ರಾಜೇಂದ್ರಸಿಂಗ್ಬಾಬುಗೆ ಸೇರಿದ ಚರಾಸ್ತಿಯನ್ನು ಜಫ್ತಿ ಮಾಡಬೇಕೆಂದು ಆದೇಶ ಹೊರಡಿಸಿದೆ.
ಆದಿತ್ಯಾ, ಅದಿ ಲೋಕೇಶ್, ಸದಾ, ಸುಹಾಸಿನಿ, ಅನು ಪ್ರಭಾಕರ್ ಅಭಿನಯದ ಮೋಹಿನಿ 9886788888 ಚಿತ್ರಕ್ಕೆ ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಸಿಕ್ಕಿರಲಿಲ್ಲ. ಪ್ರೇಕ್ಷಕರು, ವಿಮರ್ಶಕರಿಂದಲೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು.
ನಾಗರಹೊಳೆ, ಕಿಲಾಡಿ ಜೋಡಿ, ಅಂತ, ಬಂಧನ, ಮುತ್ತಿನಹಾರ, ಕುರಿಗಳು ಸಾರ್ ಕುರಿಗಳು ಸೇರಿದಂತೆ ವಿಭಿನ್ನ, ವಿಶಿಷ್ಟ ಚಿತ್ರಗಳನ್ನು ಕನ್ನಡ ತೆರೆಗೆ ತಂದಿರುವ ನಾಲ್ಕು ದಶಕಗಳಿಂದ ಚಿತ್ರ ನಿರ್ಮಾಣ, ನಿರ್ದೇಶನದಲ್ಲಿ ಸಕ್ರಿಯವಾಗಿರುವ ಬಾಬು ಅವರು ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


Click it and Unblock the Notifications











