ದರ್ಶನ್ 'ಅಂಬರೀಶ'ನಿಗೆ 'ಭೂತ'ದ ಕಾಟ
''ತೆರೆಮೇಲೆ ದುಷ್ಟರನ್ನ ಬಗ್ಗು ಬಡಿಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಭೂತ'ದ ಕಾಟ ಶುರುವಾಗಿದೆ. ಇದೇ ಕಾರಣಕ್ಕೆ 'ಅಂಬರೀಶ'ನಿಗೆ ಗಾಂಧಿನಗರದಲ್ಲಿ ನೆಲೆ ಸಿಗಲಿಲ್ಲ!'' ಹೀಗಂತ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಗುಲ್ಲೆದ್ದಿದೆ.
ಅರೇ, ದರ್ಶನ್ ಎಲ್ಲಾದರೂ ಭೂತ-ಪ್ರೇತಗಳನ್ನ ನಂಬುತ್ತಾರಾ ಅಂದ್ರೆ, ಸಿಗುವ ಉತ್ತರ ''ಖಂಡಿತ ಇಲ್ಲ.'' ಆದ್ರೆ, ದರ್ಶನ್ ಗೆ ಕಾಡುತ್ತಿರುವುದು ಕೋಮಲ್ ಅಭಿನಯದ 'ನಮೋ ಭೂತಾತ್ಮ' ಚಿತ್ರ.

'ಅಂಬರೀಶ'ನಿಗೂ 'ನಮೋ ಭೂತಾತ್ಮ' ಚಿತ್ರಕ್ಕೂ ಸಂಬಂಧ ಕಲ್ಪಿಸಿರುವುದು 'ಮೇನಕಾ' ಚಿತ್ರಮಂದಿರ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕೆಂಪೇಗೌಡ ರಸ್ತೆಯಲ್ಲಿ ಉತ್ತಮ ಚಿತ್ರಮಂದಿರವನ್ನ ಪಡೆಯುವುದಕ್ಕೆ 'ಅಂಬರೀಶ' ಚಿತ್ರತಂಡ ತುಂಬಾ ಪ್ರಯತ್ನಿಸಿತ್ತು. [ಕಡೆಗೂ 'ಪ್ರಸನ್ನ'ನಾದ ದರ್ಶನ್ 'ಅಂಬರೀಶ']
ನರ್ತಕಿಯಲ್ಲಿ 'ಬಹದ್ದೂರ್', ಸಂತೋಷ್ ನಲ್ಲಿ 'ಪವರ್ ***'', ಸೇರಿದಂತೆ ಗಾಂಧಿನಗರದ ಬಹುತೇಕ ಥಿಯೇಟರ್ ಗಳಲ್ಲಿ ಇದ್ದ ಸಿನಿಮಾಗಳೇ ಕಚ್ಚಿಕೊಂಡಿವೆ. ಕಲೆಕ್ಷನ್ ಚೆನ್ನಾಗಿರುವುದರಿಂದ ಹೊಸ ಚಿತ್ರಗಳಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಹಾಗೂ ಹೀಗೂ ತ್ರಿಭುವನ್, ಮೂವಿಲ್ಯಾಂಡ್ ಮತ್ತು ಮೇನಕಾ ಚಿತ್ರಮಂದಿರಕ್ಕೆ 'ಅಂಬರೀಶ' ಚಿತ್ರತಂಡ ಟ್ರೈ ಮಾಡಬಹುದು.
ಆದರೆ ಇದ್ಯಾವುದೂ ದರ್ಶನ್ ರಂತ ಸ್ಟಾರ್ ಸಿನಿಮಾಗಳಿಗೆ ತಕ್ಕುದಾದದ್ದಲ್ಲ ಅಂತ ಕೆ.ಜಿ.ರೋಡ್ ಬದಲು ಮಾಗಡಿ ರೋಡ್ ನಲ್ಲಿನ ಪ್ರಸನ್ನ ಚಿತ್ರಮಂದಿರಕ್ಕೆ ಮೇನ್ ಥಿಯೇಟರ್ ಶಿಫ್ಟ್ ಆಗಿದೆ.

ಥಿಯೇಟರ್ ವಿವರಗಳನ್ನ ಕುರಿತು ಈಗ ಜಗಜ್ಜಾಹೀರಾಗಿರುವ ಜಾಹೀರಾತನ್ನ ನೀವು ಸರಿಯಾಗಿ ಗಮನಿಸಿದರೆ ಪ್ರಮುಖ ಚಿತ್ರಮಂದಿರ ಪ್ರಸನ್ನ ಕೆಳಗೆ, ಕೆ.ಜಿ.ರೋಡ್ ನಲ್ಲಿನ ಮೇನಕಾ ಹೆಸರೂ ಇದೆ. ಆದರೂ ಚಿತ್ರತಂಡ 'ಪ್ರಸನ್ನ' ಫಿಕ್ಸ್ ಮಾಡುವುದಕ್ಕೆ ಕಾರಣ 'ನಮೋ ಭೂತಾತ್ಮ' [ದರ್ಶನ್ 'ಅಂಬರೀಶ'ನಿಗೆ ಥಿಯೇಟರ್ ಸಮಸ್ಯೆ?]
ದರ್ಶನ್ V/S ಕೋಮಲ್
ಇದೀಗ ಸೆನ್ಸಾರ್ ಅಂಗಳದಲ್ಲಿರುವ 'ನಮೋ ಭೂತಾತ್ಮ' ಮುಂದಿನ ವಾರ ತೆರೆ ಕಾಣುವ ಸಾಧ್ಯತೆಗಳು ದಟ್ಟವಾಗಿದೆ. ಈಗಾಗಲೇ 'ನಮೋ ಭೂತಾತ್ಮ' ವಿತರಕರು ಮೇನಕಾ ಥಿಯೇಟರ್ ನ ಬುಕ್ ಮಾಡಿದ್ದಾಗಿದೆ. ಒಂದ್ವೇಳೆ ಮುಂದಿನ ವಾರ ಕೋಮಲ್ ಭೂತ ತೆರೆಗೆ ಬಂದ್ರೆ, ಒಂದೇ ವಾರದಲ್ಲಿ ದರ್ಶನ್ ಸಿನಿಮಾ ಎತ್ತಂಗಡಿ!? ['ನಾಡಪ್ರಭು' ಗೆಟಪ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್]

ಈ ಸಾಧ್ಯತೆಯನ್ನ ಲೆಕ್ಕಹಾಕಿ, ಕೆ.ಜಿ.ರೋಡ್ ಸಹವಾಸವೇ ಬೇಡ ಅಂತ ಮಾಗಡಿ ರೋಡ್ ಗೆ 'ಅಂಬರೀಶ' ಕಾಲಿಟ್ಟಿದ್ದಾನೆ. ಯಾವುದಕ್ಕೂ ಇರಲಿ ಅಂತ ಮೇನಕಾದಲ್ಲೂ ಚಿತ್ರ ರಿಲೀಸ್ ಆಗ್ತಿದೆ ಅಂತ ಗಾಂಧಿನಗರದ ಪಂಡಿತರು ಲೆಕ್ಕ ಹಾಕ್ತಿದ್ದಾರೆ. ಯಾರು ಏನೇ ಮಾತನಾಡಲಿ, ಬಿಡಲಿ, ದರ್ಶನ್ ಅಭಿಮಾನಿಗಳು ಮಾತ್ರ ಚಿತ್ರವನ್ನ ಕಣ್ತುಂಬಿಸಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.


Click it and Unblock the Notifications











