ನಿಗೂಢವಾಗಿ ಕಣ್ಮರೆಯಾಗಿದ್ದ ಅಂಜಲಿ ಪ್ರತ್ಯಕ್ಷ!
ಹೈದರಾಬಾದ್, ಏ. 13 : ನಾಟಕೀಯ ಬೆಳವಣಿಗೆಯೊಂದರಲ್ಲಿ, ಅತ್ಯಂತ ನಿಗೂಢವಾಗಿ ಕಣ್ಮರೆಯಾಗಿ ನಾನಾ ಊಹಾಪೋಹಗಳಿಗೆ ಕಾರಣರಾಗಿದ್ದ ಟಾಲಿವುಡ್ ನಟಿ ಅಂಜಲಿ ಶುಕ್ರವಾರ ರಾತ್ರಿ 10.15ರ ಸುಮಾರಿಗೆ ಪೊಲೀಸ್ ಕಮಿಷನರ್ (ಪಶ್ಚಿಮ ವಿಭಾಗ) ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಅಂಜಲಿ ಅವರನ್ನು ಅಪಹರಿಸಲಾಗಿದೆ, ಎಲ್ಲಿಯೋ ಬಚ್ಚಿಡಲಾಗಿದೆ ಎಂಬಿತ್ಯಾದಿಯಾಗಿ ಸುದ್ದಿಗಳು ಹರಿದಾಡುತ್ತಿದ್ದವು. ಅವರು ಕಣ್ಮರೆಯಾಗಿರುವ ದೂರು ಕೂಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅಂಜಲಿಯವರು ಮುಂಬೈಗೆ ತೆರಳಿದ್ದರು ಮತ್ತು ಅಲ್ಲಿಂದ ಅನೇಕ ಸ್ಥಳಗಳಿಗೆ ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತೆಲುಗಿನಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ನಾಯಕಿಯಾಗಿದ್ದ ಅಂಜಲಿ 'ಕಣ್ಮರೆ'ಯಾಗಿದ್ದು, ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಎಲ್ಲವೂ ಪೂರ್ವನಿಯೋಜಿತವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅವರ ನಡವಳಿಕೆಗಳು ಮತ್ತಷ್ಟು ಸಂಶಯಗಳಿಗೆ ಕಾರಣವಾಗುತ್ತಿವೆ. ಹಿಂದಿರುಗಿ ಬಂದ ಮೇಲೆ ಸುಮಾರು 1 ಗಂಟೆ ಕಾಲ ಅಂಜಲಿಯವರು ಕಮಿಷನರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸದ್ಯಕ್ಕೆ ಈ ಪ್ರಕರಣವಂತೂ ನಿಗೂಢವಾಗಿಯೇ ಇದೆ. ಮೊದಲು ಅಂಜಲಿ ಹೇಳಿದ್ದೇನೆಂದರೆ, ಅವರ ಮಲತಾಯಿ ತಮ್ಮನ್ನು ಹಿಂಸಿಸುತ್ತಾರೆ. ತನ್ನನ್ನು ಎಟಿಎಂ ಮಷೀನಿನಂತೆ ಬಳಸಿಕೊಳ್ಳುತ್ತಾರೆ. ಹೆಚ್ಚು ಕೆಲಸ ಮಾಡುವಂತೆ ಒತ್ತಾಯಿಸುತ್ತಾರೆ. ಸ್ವಂತ ಅಕ್ಕ ಅಣ್ಣನನ್ನು ಭೇಟಿಯಾಗಲು ಕೂಡ ಬಿಡುವುದಿಲ್ಲ ಎಂದಿದ್ದರು. ನಂತರ ಕೆಲವೇ ದಿನಗಳಲ್ಲಿ ಅವರು ಕಾಣೆಯಾಗಿದ್ದರು.
ಹಿಂದಿಯ 'ಬೋಲ್ ಬಚ್ಚನ್' ಚಿತ್ರದ ರಿಮೇಕ್ 'ಬಾಲುಪು' ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಅದರ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದರೂ ಅವರು ಚಿತ್ರೀಕರಣಕ್ಕೆ ಬಂದಿರಲಿಲ್ಲ. ತನ್ನ ಮೇಲೆ ಕಣ್ಮರೆಯಾಗಿರುವ ದೂರು ದಾಖಲಾಗಿದ್ದರಿಂದ ಪೊಲೀಸರಿಗೆ ಶರಣಾಗಲು ನಿರ್ಧರಿಸಿದೆ ಎಂದು ಅಂಜಲಿ ಹೇಳಿದ್ದಾರೆ. ಆದರೆ, ಈ ಪ್ರಕರಣದ ಬಗ್ಗೆ ಪೊಲೀಸರು ತುಟಿ ಪಿಟಕ್ ಅನ್ನುತ್ತಿಲ್ಲ.


Click it and Unblock the Notifications












