ಅಣ್ಣಾವ್ರ ಕುಟುಂಬದ ಮೇಲೆ ಆಂಜನೇಯ ಸ್ವಾಮಿ ಅವಕೃಪೆ!
ಪುನೀತ್ ರಾಜ್ಕುಮಾರ್ ಸಾವು ಕನ್ನಡ ಕಲಾಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಸಾವು ತೀವ್ರ ದಿಗ್ಭ್ರಮೆಯನ್ನುಂಟು ಮಾಡಿದೆ. ನಿನ್ನೆಯಷ್ಟೆ ವೇದಿಕೆಯ ಮೇಲೆ ಶಿವಣ್ಣ, ಯಶ್ ಜೊತೆಗೆ ಉತ್ಸಾಹದಿಂದ ಕುಣಿದಿದ್ದ ಜೀವ ಇಂದು ಇಲ್ಲವೆಂದರೆ ಇದು ಕನಸಲ್ಲದೇ ಇನ್ನೇನಾಗಿರಲು ಸಾಧ್ಯ ಎಂಬುದೇ ಹಲವರ ಭಾವನೆಯಾಗಿತ್ತು. ಪುನೀತ್ ಅಗಲಿ ಐದು ದಿನವಾಗಿದ್ದು ಈಗಲೂ ಹಲವರಿಗೆ ವಾಸ್ತವಕ್ಕೆ ಮರಳಲು ಸಾಧ್ಯವಾಗಿಲ್ಲ.
ಪುನೀತ್ ಸಾವು ಹೀಗೆ ಅನಿರೀಕ್ಷಿತವಾಗಿ, ಹಠಾತ್ತನೆ ಆಗಿದ್ದರಿಂದಲೋ ಏನೋ ಅವರ ಸಾವಿಗೆ ಬೇರೆ ಕೆಲವು ಅರ್ಥಗಳನ್ನು ಸುತ್ತಲು ಯತ್ನಿಸಲಾಗುತ್ತಿದೆ. ಪುನೀತ್ಗೆ ದೈವಿ ಶಾಪವಿತ್ತೆಂದು, ಪುನೀತ್ ಸಾವು ದೇವರ ನಿರ್ಣಯವೆಂದು ಅವರಿಗೆ ಮೊದಲೇ ಸೂಚನೆಗಳು ಸಿಕ್ಕಿತ್ತೆಂದು ಹೇಳಲಾಗುತ್ತಿದೆ. ವಾದಗಳಿಗೆ ಪೂರಕವಾಗಿ ಕೆಲವು ವಿಡಿಯೋಗಳು, ಚಿತ್ರಗಳು ಹರಿದಾಡುತ್ತಿವೆ.
ಬಹು ಆಪ್ತ ವ್ಯಕ್ತಿ ಅದೂ ಕಡಿಮೆ ವಯಸ್ಸಿನಲ್ಲಿ ನಿಧನ ಹೊಂದಿದಾಗ ಅದನ್ನು ಸಾಮಾನ್ಯವೆಂದು ಪರಿಗಣಿಸಲು ಯಾವ ಮನಸ್ಸು ಒಪ್ಪುವುದಿಲ್ಲ. ಅದರಲ್ಲಿಯೂ ಪುನೀತ್ ಅಂಥಹಾ ಅದ್ಭುತ ಪ್ರತಿಭೆ, ಸಾವಿರಾರು ಕುಟುಂಬಗಳು ತಮ್ಮ ಮನೆಮಗನೆಂದು ನಂಬಿದ್ದ ವ್ಯಕ್ತಿ ಹೀಗೆ ಹಠಾತ್ತನೆ ಹೊರಟುಹೋಗಿದ್ದನ್ನು ಕನ್ನಡಿಗರಿಗೆ ಅರಗಿಸಿಕೊಳ್ಳಲು ಆಗಿಯೇ ಇಲ್ಲ. ಹಾಗಾಗಿಯೇ ಈ ಸಾವು ಸಾಮಾನ್ಯದ್ದಲ್ಲ, ಇದಕ್ಕೆ ಮನುಷ್ಯನನ್ನು ಮೀರಿದ ಕಾರಣಗಳಿಂದ ಪುನೀತ್ ಸಾವನ್ನಪ್ಪಿದ್ದಾರೆ ಎಂದು ಹೇಳಿ, ಹೇಳುವುದನ್ನು ನಂಬಿ ಸಾಂತ್ವನಗೊಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಹಾಗಾಗಿಯೇ ಪುನೀತ್ ಸಾವಿನ ಬಗ್ಗೆ ಹಲವು 'ರೋಚಕ' ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ ಕೆಲವು ಇಂತಿವೆ,

'ಅಂಜನೀಪುತ್ರ' ಸಿನಿಮಾ ಮಾಡಿದಾಗ ಎದುರಾದ ಸಮಸ್ಯೆಗಳು
ಅಣ್ಣಾವ್ರ ಕುಟುಂಬದ ಮೇಲೆ ಆಂಜನೇಯ ಸ್ವಾಮಿಯ ಅವಕೃಪೆ ಇದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುನೀತ್ ರಾಜ್ಕುಮಾರ್ 'ಅಂಜನಿಪುತ್ರ' ಸಿನಿಮಾ ಮಾಡಿದಾಗ ಆ ಸಿನಿಮಾಕ್ಕೆ ಸಾಕಷ್ಟು ಸಮಸ್ಯೆಗಳಾದವು. ಆ ಸಿನಿಮಾ ಚೆನ್ನಾಗಿ ಓಡಲಿಲ್ಲ ಸಹ. 'ಅಂಜನೀಪುತ್ರ' (ಆಂಜನೇಯ ಸ್ವಾಮಿ ಹೆಸರು) ಸಿನಿಮಾ ಒಪ್ಪಿಕೊಂಡ ಸಂದರ್ಭದಲ್ಲಿ ಪಾರ್ವತಮ್ಮ ರಾಜ್ಕುಮಾರ್ ನಿಧನರಾದರು. ಚಿತ್ರೀಕರಣದ ಸಮಯದಲ್ಲಿಯೇ ಶಿವರಾಜ್ ಕುಮಾರ್ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

'ಭಜರಂಗಿ' ಸಿನಿಮಾ ಬಿಡುಗಡೆ ಆದಾಗಲೂ ಅವಘಡ
ಇನ್ನು ಶಿವರಾಜ್ ಕುಮಾರ್ ನಟನೆಯ 'ಭಜರಂಗಿ' (ಆಂಜನೇಯ ಸ್ವಾಮಿ ಹೆಸರು) ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿಯೂ ಸಾಕಷ್ಟು ಸಮಸ್ಯೆಗಳಾಗಿತ್ತು. ಅದೇ ಸಮಯದಲ್ಲಿ ರಾಘವೇಂದ್ರ ರಾಜ್ಕುಮಾರ್ ಆಸ್ಪತ್ರೆಗೆ ದಾಖಲಾದರು. ಅವರಿಗೆ ಪಾರ್ಶ್ವವಾಯು ಉಂಟಾಯಿತು. ಸ್ವತಃ ಶಿವರಾಜ್ ಕುಮಾರ್ ಸಹ ಅದೇ ಅವಧಿಯಲ್ಲಿ ಸಮಯದಲ್ಲಿ ಅನರೋಗ್ಯ ಕಾಣಿಸಿಕೊಂಡಿತು. ಅಷ್ಟೇ ಅಲ್ಲದೆ ಶಿವಣ್ಣನವರ ಮಗಳಿಗೂ ಆ ಸಮಯದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.

ಪುನೀತ್ ಸಿಗಲಿಲ್ಲ ಆಂಜನೇಯನ ದರ್ಶನ
ಸೆಪ್ಟೆಂಬರ್ ತಿಂಗಳಲ್ಲಿ ನಟ ಪುನೀತ್ ರಾಜ್ಕುಮಾರ್ ಗಂಗಾವತಿ ಸಮೀಪದ ಅಂಜನಾದ್ರಿ ಬೆಟ್ಟಕ್ಕೆಂದು ತೆರಳಿದ್ದರು. ಆದರೆ ಅಲ್ಲಿ ಅಂದು ಅವರಿಗೆ ಆಂಜನೇಯ ಸ್ವಾಮಿಯ ದರ್ಶನ ಭಾಗ್ಯ ಸಿಗಲಿಲ್ಲ. ಕೋವಿಡ್ ನಿಯಮ ಮುರಿದು ದೇವರ ದರ್ಶನ ಮಾಡುವ ಅವಕಾಶ ಪುನೀತ್ಗೆ ಇತ್ತು ಆದರೆ ನಿಯಮ ಮುರಿಯುವುದು ಸೂಕ್ತವಲ್ಲವೆಂದು ಪುನೀತ್ ಅಂದು ವಾಪಸ್ಸಾಗಿದ್ದರು. ಅದೇ ಸಮಯದಲ್ಲಿ ಅಲ್ಲಿಯೇ ಇದ್ದ ಕುರುಬರ ಹಟ್ಟಿಗೆ ಹೋಗಿ ಕಂಬಳಿ ಮೇಲೆ ಕೂತು ಮಜ್ಜಿಗೆ ಅನ್ನ ತಿಂದಿದ್ದರು ಪುನೀತ್. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು.

'ಭಜರಂಗಿ 2' ಸಿನಿಮಾದ ಸಮಯದಲ್ಲಿ ದೊಡ್ಡ ಅನಾಹುತ
'ಭಜರಂಗಿ 2' ಸಿನಿಮಾ ಸಂದರ್ಭದಲ್ಲಿ ಸಹ ಸಾಕಷ್ಟು ಸಮಸ್ಯೆಗಳು ಎದುರಾದವು. ಸಿನಿಮಾದ ಸೆಟ್ ಸುಟ್ಟುಹೋಗಿತ್ತು. ಈ ವಿಷಯವನ್ನು ಹರ್ಷ ಅವರೇ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಸಿನಿಮಾ ರೆಡಿಯಾಗಿ ಎರಡು ವರ್ಷಗಳ ಕಾಲ ಬಿಡುಗಡೆಗೆ ಕಾಯಬೇಕಾದ ಪರಿಸ್ಥಿತಿ ಬಂತು. ಅಂತಿಮವಾಗಿ ಸಿನಿಮಾ ಬಿಡುಗಡೆ ಆದಾಗ ಅದೇ ದಿನ ಪುನೀತ್ ರಾಜ್ಕುಮಾರ್ ನಿಧನ ಹೊಂದಿದರು.

ಅಣ್ಣಾವ್ರ ಕುಟುಂಬದ ಮನೆದೇವರು ಮುತ್ತತ್ತಿರಾಯ
ಹಾಗೆ ನೋಡಿದರೆ ಅಣ್ಣಾವ್ರ ಕುಟುಂಬದ ಮನೆ ದೇವರು ಮುತ್ತತ್ತಿರಾಯ (ಆಂಜನೇಯ ಸ್ವಾಮಿ). ಆದರೆ ಆಂಜನೇಯ ಸ್ವಾಮಿಯ ಅವಕೃಪೆಗೆ ಅಣ್ಣಾವ್ರ ಕುಟುಂಬ ಪಾತ್ರವಾಗಿದೆಯೇ ಎಂಬ ಅನುಮಾನ ಮೇಲಿನ ಮಾಹಿತಿ ಮೇಲೆ ಕಣ್ಣಾಡಿಸಿದಾಗ ಸುಳಿದು ಹೋಗುತ್ತದೆ. ಅಣ್ಣಾವ್ರ ಕುಟುಂಬದವರು ತಮ್ಮ ಮನೆ ದೇವರನ್ನು ಮರೆತಿದ್ದರಿಂದಲೇ ಹೀಗಾಗುತ್ತಿದೆಯೇನೋ ಎಂದು ಅಣ್ಣಾವ್ರ ಕುಟುಂಬದ ಪ್ರಚಂಡ ಅಭಿಮಾನಿಯೊಬ್ಬರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ರಾಘವೇಂದ್ರ ಸ್ವಾಮಿಗಳ ವೀಣೆ ಬಿತ್ತು!
ಇವುಗಳ ನಡುವೆ ಪುನೀತ್ ರಾಜ್ಕುಮಾರ್ ಅವರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ಪುನೀತ್ ಮಂತ್ರಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು ಮುಂದಿನ ಆರಾಧನೆಗೆ ಭೇಟಿ ನೀಡುತ್ತೀನಿ ಎಂದಾಗಲೇ ಪುನೀತ್ ಪಕ್ಕದಲ್ಲಿದ್ದ ರಾಘವೇಂದ್ರ ಸ್ವಾಮಿಗಳ ಮೂರ್ತಿ ಅಲುಗಿ ಅಲ್ಲಿದ್ದ ವೀಣೆ ಕೆಳಗೆ ಬಿದ್ದಿದೆ. ಆ ಘಟನೆ ಬಗ್ಗೆ ಮಂತ್ರಾಲಯ ಶ್ರೀಗಳು ಸ್ಪಷ್ಟನೆ ನೀಡಿದ್ದು, ''ಪುನೀತ್ ಅವರು ಹೃದಯಾಘಾತದಿಂದಲೇ ನಿಧನರಾಗಿದ್ದಾರೆ. ಅಂದು ಭಕ್ತರು ಹೆಚ್ಚು ಸಂಖ್ಯೆಯಲ್ಲಿದ್ದ ಕಾರಣ ನೂಕಾಟದಿಂದ ದೇವರ ಮುಂದಿನ ವೀಣೆ ಬಿದ್ದಿತು. ಅದು ಅಶುಭ ಸೂಚಕ ಅಲ್ಲ'' ಎಂದಿದ್ದಾರೆ. ಆದರೆ ಜನ ನಂಬಬೇಕಲ್ಲ.


Click it and Unblock the Notifications











