ಉಪೇಂದ್ರ 'ಐ ಲವ್ ಯೂ' ಹೇಳುವುದು ಯಾರಿಗೆ.?
Recommended Video

ಕೆಪಿಜೆಪಿ ಪಕ್ಷದಿಂದ ಹೊರ ಬಂದ ಉಪೇಂದ್ರ ತಮ್ಮದೇ ಹೊಸ ಪಕ್ಷ ಸ್ಥಾಪಿಸಲು ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಸದ್ಯ, ಉಪೇಂದ್ರ ಅಭಿನಯಿಸುತ್ತಿರುವ 'ಹೋಮ್ ಮಿನಿಸ್ಟರ್' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಮಧ್ಯೆ ನಿರ್ದೇಶಕ ಆರ್ ಚಂದ್ರು ಅವರ ನಿರ್ದೇಶನದಲ್ಲಿ ಉಪೇಂದ್ರ ಮತ್ತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ.
2014ರಲ್ಲಿ ತೆರೆಕಂಡಿದ್ದ 'ಬ್ರಹ್ಮ' ಸಿನಿಮಾದ ನಂತರ ಮತ್ತೆ ಉಪ್ಪಿ ಜೊತೆ ಚಂದ್ರು ಸಿನಿಮಾ ಮಾಡಿರಲಿಲ್ಲ. ಈಗ ಮತ್ತೊಮ್ಮೆ ಇವರಿಬ್ಬರು ಒಂದಾಗಲಿದ್ದಾರಂತೆ. 'ಕನಕ' ಚಿತ್ರದ ನಂತರ ಆರ್ ಚಂದ್ರು ಆಕ್ಷನ್ ಕಟ್ ಹೇಳಲಿರುವ ಬಹುಭಾಷೆ ಚಿತ್ರಕ್ಕೆ'ಐ ಲವ್ ಯೂ' ಎಂಬ ಟೈಟಲ್ ಕೂಡ ಇಡಲಾಗಿದೆಯಂತೆ.

ಉಪೇಂದ್ರ ಅವರ ಖಾತೆಯಲ್ಲಿ ಮೂರ್ನಾಲ್ಕು ಸಿನಿಮಾಗಳು ಬಾಕಿ ಇದೆ. 'ಹೋಮ್ ಮಿನಿಸ್ಟರ್' ನಂತರ 'ಉಪ್ಪಿ ರುಪ್ಪಿ' ಸಿನಿಮಾ ಶುರು ಆಗಬೇಕಿದೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಉಪೇಂದ್ರ ಮತ್ತು ರಚಿತಾ ರಾಮ್ ಜೋಡಿಯಾಗಿದ್ದಾರೆ. ಅದರ ಜೊತೆಗೆ ಮಂಜು ಮಾಂಡವ್ಯ ಹಾಗೂ ಗುರುದತ್ ನಿರ್ದೇಶನದಲ್ಲಿ ಉಪ್ಪಿ ಒಂದೊಂದು ಸಿನಿಮಾ ಮಾಡುವುದು ಬಾಕಿ ಇದೆ. ಗುರುದತ್ ನಿರ್ದೇಶನದ ಚಿತ್ರಕ್ಕೆ 'ನಾಗರ್ಜುನ' ಎಂಬ ಟೈಟಲ್ ಇಡಲಾಗಿತ್ತು. ಈ ಚಿತ್ರಗಳಿಗಿಂತ ಮುಂಚೆಯೇ ಈಗ ಆರ್ ಚಂದ್ರು ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಷ್ಟೆಲ್ಲಾ ನಿರೀಕ್ಷೆಗಳ ಮಧ್ಯೆ ಉಪೇಂದ್ರ ನಿರ್ದೇಶನ ಮಾಡಲಿರುವ ಸಿನಿಮಾಗ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. ಬಹುಶಃ ಉಪ್ಪಿಯ ಈ ವರ್ಷದ ಹುಟ್ಟುಹಬ್ಬಕ್ಕೆ (ಸಪ್ಟೆಂಬರ್ 18)ಕ್ಕೆ ಈ ಸಿನಿಮಾ ಲಾಂಚ್ ಆಗಬಹುದು. 2016ರಲ್ಲಿ ಬಿಡುಗಡೆಯಾಗಿದ್ದ 'ಮುಕುಂದ ಮುರಾರಿ' ಚಿತ್ರದಲ್ಲಿ ಉಪೇಂದ್ರ ಕೊನೆಯದಾಗಿ ಕಾಣಿಸಿಕೊಂಡಿದ್ದರು.


Click it and Unblock the Notifications











