ಸಂದರ್ಶನ: ಬಿಗ್ ಬಾಸ್ ವಿನ್ನರ್ 'ಮಾಡರ್ನ್ ರೈತ'ನ ಆಸೆಗಳನ್ನ ಕೊಲ್ಲಬೇಡಿ
Recommended Video

ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿಯ ವಿನ್ನರ್ ಆಗಿ 'ಮಾಡರ್ನ್ ರೈತ' ಶಶಿ ಕುಮಾರ್ ಹೊರಹೊಮ್ಮಿದ್ದಾರೆ. ಶಶಿಯ ಆಟಕ್ಕೆ ವಿಜಯಲಕ್ಷ್ಮಿ ಒಲಿದಿದ್ದು ಅರ್ಧಕೋಟಿ ಬಹುಮಾನವಾಗಿದೆ ಸಿಕ್ಕಿದೆ. ಶಶಿ ಬಿಗ್ ಬಾಸ್ ಗೆದ್ದಿದಕ್ಕೆ ಅನೇಕರು ಖುಷಿ ವ್ಯಕ್ತಪಡಿಸಿದ್ರೆ, ಕೆಲವರು ವಿರೋಧ ಕೂಡ ಮಾಡಿದ್ದಾರೆ.
ಶಶಿ ಫೇಕ್ ರೈತ, ಮಾಡರ್ನ್ ರೈತ ಎಂದು ಹೇಳಿಕೊಂಡು ಬಿಗ್ ಬಾಸ್ ಗೆದ್ದು ಬಿಟ್ಟರು, ಕವಿತಾ ಜೊತೆ ಹೆಚ್ಚು ಇರ್ತಿದ್ರು, ಮೈಂಡ್ ಗೇಮ್ ಆಡ್ತಿದ್ರು ಎಂದೆಲ್ಲ ಹೇಳುವವರಿದ್ದಾರೆ. ಹಾಗೆ, ಶಶಿಯ ಆಟವನ್ನ ಮೆಚ್ಚಿಕೊಂಡು ಪ್ರೇಕ್ಷಕರು ಇದ್ದಾರೆ. ಈ ಎಲ್ಲದರ ಗೊಂದಲಗಳಿಗೆ, ಆಟದ ಬಗ್ಗೆ ಶಶಿ ಕುಮಾರ್ ಫಿಲ್ಮಿಬೀಟ್ ಕನ್ನಡದ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಬಹುಮಾನವಾಗಿ ಬಂದ 50 ಲಕ್ಷ ಹಣವನ್ನ ಶಶಿ ಏನು ಮಾಡಲಿದ್ದಾರೆ? ರೈತನಾಗಿ ಬಿಗ್ ಬಾಸ್ ಮನೆಗೆ ಬಂದ ಶಶಿ ಕೃಷಿ ಹಾಗೂ ರೈತರಿಗಾಗಿ ಏನು ಒಳ್ಳೆಯ ಕೆಲಸ ಮಾಡ್ತಾರೆ? ಕವಿತಾ ಜೊತೆಗಿನ ಸಂಬಂಧವೇನು? ಎಲ್ಲದಕ್ಕೂ ಶಶಿ ಉತ್ತರಿಸಿದ್ದಾರೆ. ಪೂರ್ತಿ ಸಂದರ್ಶನಕ್ಕಾಗಿ ಮುಂದೆ ಓದಿ....
ಸಂದರ್ಶನ: ನವೀನ್ ಎಂ.ಎಸ್

ಬಿಗ್ ಬಾಸ್ ಗೆಲ್ಲಲು ನಿಮ್ಮಲಿದ್ದ ಕಾನ್ಫಿಡೆನ್ಸ್ ಏನು?
''ಪ್ರತಿಯೊಬ್ಬರಲ್ಲೂ ಕಾನ್ಫಿಡೆನ್ಸ್ ಇರಬೇಕು. ನನ್ನಲ್ಲೂ ಆ ಕಾನ್ಫಿಡೆನ್ಸ್ ಇದ್ದಿದ್ದಕ್ಕೆ ನಾನು ಬಿಗ್ ಬಾಸ್ ಗೆ ಬಂದೆ, ಇಲ್ಲ ಅಂದಿದ್ರೆ ನಾನು ನನ್ನ ಕೆಲಸ ಮಾಡ್ಕೊಂಡು ಇರಬಹುದಿತ್ತು. ಕಾನ್ಫಿಡೆನ್ಸ್ ಇದ್ದಿದ್ದಕ್ಕೆ ನಾನು ಕೃಷಿ ಮಾಡ್ತಿರೋದು, ಇಲ್ಲ ಅಂದ್ರಿದ್ರೆ ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡ್ತಿದ್ದೆ. ಈ ಕಾನ್ಫಿಡೆನ್ಸ್ ನಮ್ಮ ಗುರಿ ಮತ್ತು ಉದ್ದೇಶಗಳನ್ನ ಪೂರೈಸಿಕೊಳ್ಳಲು ಸಹಾಯವಾಗುತ್ತೆ. ನಾನು ಟಾಪ್ 5ನಲ್ಲಿ ಇದ್ದೇ ಇರ್ತೀನಿ ಅಂತ ಹೇಳ್ತಿದ್ದೆ. ಅಂತಿಮವಾಗಿ ವಿನ್ ಆಗ್ತೀನಿ ಅಂತ ನನಗೂ ಗೊತ್ತಿರಲಿಲ್ಲ''

ರೈತರ ಹೆಸರು ದುರ್ಬಳಕೆ ಮಾಡಿಕೊಂಡ್ರು ಅಂತಾರೆ ನಿಜಾನ?
''ಹಾಗೆ ದುರ್ಬಳಕೆ ಮಾಡೋದಾದರೇ ನನ್ನ ಪರ್ಸನಲ್ ಕೆಲಸ ನಾನು ಮಾಡಬಹುದಿತ್ತು. ಈಗ ಬಂದ ಹಣದಿಂದ ನನ್ನ ಹಿತಾಸಕ್ತಿ ನೋಡಿಕೊಳ್ಳಬಹುದಿತ್ತು. ಬೆಂಗಳೂರಿನಲ್ಲಿ ನನಗೆ ಮನೆ ಇಲ್ಲ, ಮನೆ ಕಟ್ಟಿಸಬಹುದಿತ್ತು. ಓಡಾಡಲು ದುಬಾರಿ ಕಾರು ಖರೀದಿಸಬಹುದು. ಬಟ್, ನನ್ನ ಗುರಿ ಅದಲ್ಲ. ನಾನು ಮಾಡಬೇಕೆಂದುಕೊಂಡಿರುವ ಕೃಷಿ ತಂತ್ರಜ್ಞಾನದ ಕೆಲಸಗಳನ್ನ ಮಾಡೇ ಮಾಡ್ತೀನಿ''

ನನ್ನ ಕನಸನ್ನ ಮೊಳಕೆಯಲ್ಲಿ ಕೊಲ್ಲಬೇಡಿ
''ನನ್ನಲ್ಲಿ ಹಲವು ಕನಸುಗಳಿವೆ, ಉದ್ದೇಶಗಳಿವೆ. ಆಧುನಿಕ ಕೃಷಿ ಕಡೆ ಯುವಕರನ್ನ ಕರೆದುಕೊಂಡು ಬರಬೇಕು. ಅದನ್ನ ನಾನು ಮಾಡ್ತೀನಿ. ಮೊದಲು ನನ್ನನ್ನು ನಂಬಿ. ನನ್ನನ್ನೇ ನಂಬುತ್ತಿಲ್ಲ ಅಂದ್ಮೇಲೆ ಮುಂದೆ ನಾನು ಮಾಡಬೇಕೆಂದುಕೊಂಡಿರುವ ಕೆಲಸಗಳಿಗೆ ಬೆಲೆ ಇಲ್ಲದಂತಾಗುತ್ತೆ. ನನ್ನ ಆಸೆಯನ್ನ ಮೊಳಕೆಯಲ್ಲಿ ಕೊಲ್ಲುತ್ತಿದ್ದೀರಾ, ಅದು ಮರವಾಗಿ ಬೆಳೆದರೇ ಅನೇಕರಿಗೆ ಆಶ್ರಯವಾಗುತ್ತೆ''

ಬಹುಮಾನದ ಹಣ ಏನು ಮಾಡ್ತೀರಾ?
''ಬಹುಮಾನ ಹಣ ಮತ್ತು ಸಂಭಾವನೆ ಹಣ ಎಲ್ಲವನ್ನೂ ನಾನು ನನ್ನ ಕೃಷಿಗೆ ಬಳಸುತ್ತೇನೆ. ತಂತ್ರಜ್ಞಾನವನ್ನ ಬಳಸುವುದಕ್ಕೆ ಖರ್ಚು ಮಾಡ್ತೀನಿ. ನನ್ನ ಯಾವುದೇ ಖಾಸಗಿ ಕೆಲಸಕ್ಕೆ ನಾನು ಖರ್ಚು ಮಾಡಲ್ಲ. ಅದರಿಂದ ಇತರರಿಗೆ ಸಹಾಯ ಮಾಡುತ್ತೇನೆ. ಯುವಕರನ್ನ ಈ ಕ್ಷೇತ್ರಕ್ಕೆ ಕರೆದುಕೊಂಡು ಬರಬೇಕು ಎಂದುಕೊಂಡಿದ್ದೇನೆ''

ಚಿತ್ರರಂಗಕ್ಕೆ ಬರ್ತೀರಾ?
''ನಾನು ಬಿಗ್ ಬಾಸ್ ಗೆ ಬರುವ ಮುಂಚೆ ಮಾಡುತ್ತಿದ್ದ ಕೆಲಸವನ್ನೇ ಈಗಲೂ ಮಾಡಿದ್ರೆ ನನ್ನ ಉದ್ದೇಶ ಹಾಗೂ ಜನರ ನಂಬಿಕೆಗೆ ಬೆಲೆ ಇರಲ್ಲ. ಈಗ ಇತರರಿಗೆ ಹೇಳುವ ಸ್ಥಾನ ಪಡೆದುಕೊಂಡಿದ್ದೇನೆ. ನನ್ನ ಕೆಲಸದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕಿದೆ. ಶಶಿ ಅಂದ್ರೆ ಮಲ್ಟಿಟ್ಯಾಲೆಂಟೆಡ್ ಅಂತ ಜನ ಗುರುತಿಸಿದ್ದಾರೆ. ಹಾಗಾಗಿ, ನನ್ನ ಕೃಷಿ ಕೆಲಸವನ್ನ ಬಿಡದ ರೀತಿ ಎಲ್ಲವನ್ನ ಬ್ಯಾಲೆನ್ಸ್ ಮಾಡ್ತೀನಿ''

ಬಿಗ್ ಬಾಸ್ ಬಳಿಕ ಹೇಗಿದೆ ಲೈಫ್?
''ನಾನು ಬಿಗ್ ಬಾಸ್ ಮನೆಗೆ ಹೋಗಿದ್ದು ಕಾಮನ್ ಮ್ಯಾನ್, ಒಬ್ಬ ರೈತನಾಗಿ. ಗೆದ್ದ ಬಳಿಕ ಈಗ ಸೆಲೆಬ್ರಿಟಿ ರೀತಿ ಜನ ನೋಡ್ತಿದ್ದಾರೆ. ಆದ್ರೆ, ನಾನು ಸೆಲೆಬ್ರಿಟಿ ಎಂದು ಹೇಳಲು ಇಷ್ಟಪಡುವುದಿಲ್ಲ. ಜನರು ಹೆಚ್ಚು ಇಷ್ಟ ಪಡ್ತಿದ್ದಾರೆ. ಎಲ್ಲ ಕಡೆಯೂ ಗುರುತಿಸ್ತಿದ್ದಾರೆ. ನಮ್ಮನ್ನ ಭೇಟಿ ಮಾಡಿ, ನಾವು ವೋಟ್ ಮಾಡಿದ್ದೀನಿ ಅಂತ ಕೇಳ್ತಿದ್ದಾರೆ. ನಾನು ಎಲ್ಲರನ್ನೂ ಭೇಟಿ ಮಾಡ್ತೀನಿ. ಸ್ವಲ್ಪ ಸಮಯ ಕೊಡಿ''

ಕವಿತಾ ಜೊತೆ ಸ್ನೇಹನಾ ಅಥವಾ ಪ್ರೀತಿನಾ?
ಟಾಸ್ಕ್ ವಿಚಾರದಲ್ಲಿ ಮಾತ್ರ ನಮ್ಮಿಬ್ಬರ ಮಧ್ಯೆ ನಾವು ಆರ ರೀತಿ ಮಾತಾಡ್ಬೇಕಾಗಿತ್ತೇ ಹೊರತು ಬೇರೆ ಏನೂ ಇಲ್ಲ. ಇದನ್ನ ಇಬ್ಬರು ಸ್ಪಷ್ಟನೆ ಮಾಡಿಕೊಂಡಿದ್ದೇವೆ. ಸಂತೋಷ ಮತ್ತು ನೋವುಗಳನ್ನ ಹಂಚಿಕೊಳ್ತೀವಿ. ನಾವಿಬ್ಬರು ಬರಿ ಸ್ನೇಹಿತರು ಮಾತ್ರ. ಅವರು ಕೂಡ ಅದೇ ಹೇಳಿದ್ದಾರೆ.

ನಿಮ್ಮನ್ನ ಬಿಟ್ಟು ಬೇರೆ ಯಾರು ಗೆಲ್ಲಬೇಕಿತ್ತು
''ಧನರಾಜ್ ಅವರು ಗೆದ್ದಿದ್ರೆ ನನಗೆ ಖುಷಿ ಆಗ್ತಿತ್ತು. ಅವರಲ್ಲಿ ನಾಟಕೀಯ ಗುಣ ಕಂಡಿಲ್ಲ. ಅವರಿಗೆ ಪರ್ಸನಲ್ ಆಗಿ ಸಹಾಯವಾಗ್ತಿತ್ತು. ತುಂಬಾ ಕಷ್ಟಪಟ್ಟಿ ಬಂದಿದ್ದರು. ಅದೇ ರೀತಿ ಕವಿತಾ ಕೂಡ ಗೆದ್ದಿದ್ರು ಖುಷಿ ಆಗ್ತಿತ್ತು''


Click it and Unblock the Notifications











