ಕಷ್ಟದಲ್ಲೇ ಅರಳಿದ ಪ್ರತಿಭೆ ಜೀವನ್ ಗೌಡಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
ಕುಟುಂಬದಲ್ಲಿ ಕಡುಬಡತನ, ವಿದ್ಯೆ ತಲೆಗೆ ಹತ್ತಲಿಲ್ಲ, ಬದುಕಿನ ಜಂಜಾಟದಲ್ಲಿ ಏನಾದರೂ ಮಾಡಿ ಸಾಧನೆ ಮಾಡಬೇಕೆಂಬ ಹಂಬಲ. ಸಾಧನೆಗೆಂದು 17 ವರ್ಷದ ಹಿಂದೆ ಊರು ಬಿಟ್ಟು ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ತೊಡಗಿದೆ. ಮೊದ ಮೊದಲಿಗೆ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಟೀ, ಕಾಫಿ ಕೊಡುವುದು, ಪಿಎ ಆಗಿ ಕೆಲಸ, ಫೋಟೋಗ್ರಾಫರ್ ಆಗಿ ಕೊನೆಗೆ ಛಾಯಾಗ್ರಾಹಕನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ನನ್ನ ವೃತ್ತಿ ಜೀವನದಲ್ಲಿ ಚಿತ್ರರಂಗದ ಬದುಕು ನನ್ನ ಬೆಳವಣಿಗೆಯನ್ನಾ ನಾನೆ ಹಿಂತಿರುಗಿ ನೋಡುವಂತೆ ಮಾಡಿದೆ ಎನ್ನುತ್ತಾರೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪುರಸ್ಕೃತ ಜೀವನ್ ಗೌಡ.
ಕೇರಳದ ಏಳನೇ ಆರ್ಟ್ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಹಾಗೂ ಅಮೇರಿಕಾದ ನ್ಯೂ ಜೆರ್ಸಿ ಯಲ್ಲಿ ನಡೆದ ಸ್ಟಾರ್ ಹಾಲಿವುಡ್ ಅವಾರ್ಡ್ಸ್ ಅಂತಾರಾಷ್ಟ್ರೀಯ ಫೀಲ್ಡ್ ಫೆಸ್ಟಿವಲ್ನಲ್ಲಿ 'ಅನಿರೀಕ್ಷಿತ' ಸಿನಿಮಾದ ಛಾಯಾಗ್ರಹಣಕ್ಕಾಗಿ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ನೀಡಲಾಗಿದೆ.

ಕಷ್ಟದ ದಿನಗಳನ್ನು ನೆನಪಿಸಿಕೊಂಡ ಜೀವನ್ ಗೌಡ
ಒನ್ ಇಂಡಿಯಾ ಕನ್ನಡ ಜೊತೆ ದೂರವಾಣಿ ಮೂಲಕ ಮಾತನಾಡಿ ಜೀವನ್ ಗೌಡ ಪ್ರಶಸ್ತಿ ಲಭಿಸಿರುವುದಕ್ಕೆ ಖುಷಿ ಹಂಚಿಕೊಂಡರು. ಹಳೆಯ ಸೋರುತ್ತಿದ್ದ ಮಾಳಿಗೆ ಮನೆಯಲ್ಲಿ ವಾಸ, ಸಗಣಿಯಿಂದ ಸಾರಿಸುವ ನೆಲ, ತಂದೆ ತಾಯಿ ಕೃಷಿಯಲ್ಲಿ ಎಷ್ಟು ಕೆಲಸ ಮಾಡಿದರೂ ಸರಿಯಾಗಿ ಸಿಗದ ಲಾಭ, ಕುಟುಂಬದಲ್ಲಿ ಕಡುಬಡತನ, ಕುಟುಂಬವನ್ನು ಸಾಗಿಸುವುದೇ ಕಷ್ಟ, ಮನೆಗೆ ಯಾರಾದರೂ ಬಂದರೆ ಕುಳಿತು ಕೊಳ್ಳಲು ಒಂದು ಚೇರ್ ಇಲ್ಲ, ಪಕ್ಕದ ಮನೆಯಲ್ಲಿ ಮಿಕ್ಸಿ ಗ್ರೇಂಡರ್ ಇತ್ತು. ನಮ್ಮ ಮನೆಯಲ್ಲಿ ಇದೆಲ್ಲ ಯಾವಾಗ ಬರುತ್ತದೆ ಎಂಬ ಚಿಂತೆ. ಅಂತದ್ರಲ್ಲಿ ಏನಾದರೂ ಮಾಡಿ ಸಾಧಿಸಬೇಕು. ಓದೋಣ ಎಂದರೆ ತಲೆಗೆ ಹತ್ತದ ವಿದ್ಯೆ, ಪಿಯುಸಿ ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರು ಕಡೆ ಪ್ರಯಾಣ ಬೆಳಸಿದೆ. ಗುರಿ ಸಾಧನೆಗೆ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡೆ. ತಾಳ್ಮೆಯಿಂದ ಚಿತ್ರರಂಗದಲ್ಲಿ ಕೆಲಸ ಮಾಡಿಕೊಂಡು ಇದ್ದಿದ್ದಕ್ಕೆ ನನಗೆ ಇಂದು ಚಿತ್ರೋದ್ಯಮ ನನ್ನ ಕೈಯಿಡಿದಿದ್ದು ಪ್ರಶಸ್ತಿ ಬರಲು ಸಾಧ್ಯವಾಗಿದೆ ಎಂದು ಕಷ್ಟದ ದಿನಗಳನ್ನು ನೆನಪಿಸಿಕೊಂಡರು ಜೀವನ್ ಗೌಡ.

17 ವರ್ಷಗಳಿಂದ ಕ್ಯಾಮೆರಾಮನ್ ಆಗಿ ಕೆಲಸ
ಊರು ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿ, 17 ವರ್ಷಗಳಿಂದ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿಗೆ "ಪುಟಾಣಿ ಸಫಾರಿ" ಮಕ್ಕಳ ಸಿನಿಮಾಕ್ಕೆ ಚಿತ್ರೀಕರಣ ಮಾಡಿದ್ದರು. ಈ ಸಿನಿಮಾ 125 ದಿನ ಯಶಸ್ವಿ ಪ್ರದರ್ಶನಗೊಂಡಿದೆ. 'ಕೈವಲ್ಯ', 'ವರ್ಣಮಯ', 'ಕ್ಲಿಕ್', 'ಅನಿರೀಕ್ಷಿತ' ( ಪ್ರಶಸ್ತಿ ಪಡೆದುಕೊಂಡ ಚಿತ್ರ), 'ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ' ( ಸೆನ್ಸಾರ್ ಹೋಗಿದೆ). ಹೀಗೆ ಸುಮಾರು 7 ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ಧಾರಾವಾಹಿ, ರಿಯಾಲಿಟಿ ಶೋಗಳಿಗೂ ಕೆಲಸ
ಹಲವು ಧಾರಾವಾಹಿಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು ಜೀ ಕನ್ನಡದಲ್ಲಿ ಬರುತಿದ್ದ ಅಂಜಲಿ ಪ್ರಮುಖವಾದ ಧಾರಾವಾಹಿಯಾಗಿದೆ, ಉಳಿದಂತೆ ಸಾಗರ ಸಂಗಮ, ಒಂದೇ ಗೂಡಿನ ಹಕ್ಕಿಗಳು, ಮುರುಳಿ ಮಿಲ್ಟ್ರಿ ಹೋಟೆಲ್, ಚಂದನದ ಗೊಂಬೆ, ಮನೆದೇವರು, ತ್ರಿವೇಣಿ ಸಂಗಮ, ಒಗ್ಗರಣೆ ಡಬ್ಬಿ, ಇನ್ನು ಮುಂತಾದ ಧಾರಾವಾಹಿಗಳಿಗೆ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇದಲ್ಲದೆ ರಿಯಾಲಿಟಿ ಶೋಗಳಲ್ಲಿ ಸಹ ಕ್ಯಾಮೆರಾ ಮ್ಯಾನ್ ಆಗಿ ಚಿತ್ರಿಕರಿಸಿದ್ದಾರೆ. ಸೂಪರ್ ದಂಪತಿ ರಿಯಾಲಿಟಿ ಶೋ, ಬಿಲ್ ನಿಮ್ಮದು, ದುಡ್ಡು ನಮ್ಮದು ಸೇರಿದಂತೆ ಐದಾರು ರಿಯಾಲಿಟಿ ಶೋಗಳಲ್ಲಿ ಚಿತ್ರೀಕರಣ ಪೂರೈಸಿದ್ದಾರೆ.

ಗ್ರಾಮೀಣ ಪ್ರತಿಭೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ
ಜೀವನ್ ಗೌಡ ಅವರು ಲಾಕ್ ಡೌನ್ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ದೇವರ ಆಶೀರ್ವಾದದಿಂದ ಜೀವನಕೆ ತೊಂದರೆ ಇಲ್ಲ ಎನ್ನುತ್ತಾರೆ. ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಹೋಗಲು ಆಗದ ಕಾರಣ ಕೊರಿಯರ್ ಮೂಲಕ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ತಲುಪಿಸಲಿದ್ದಾರೆ. ಈ ಪ್ರಶಸ್ತಿ ಬಂದಿರುವುದರ ಜೊತೆಗೆ ನನ್ನ ಜವಾಬ್ದಾರಿ ಇನ್ನು ಹೆಚ್ಚಾಗಿದೆ. ಸಾಧನೆ ಇನ್ನೂ ಬಾಕಿ ಇದೆ ಎನ್ನುತ್ತಾರೆ ಜೀವನ್ ಗೌಡ. ಒಟ್ಟಾರೆಯಾಗಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಬಡಕುಟುಂಬದಲ್ಲಿ ಬೆಳೆದು ಚಿತ್ರರಂಗಕ್ಕೆ ಕಾಲಿಟ್ಟ ಈ ಛಾಯಾಗ್ರಾಹಕನಿಗೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.


Click it and Unblock the Notifications











