ಸಂದರ್ಶನ: 'ಕ್ರೇಜಿ ಬಾಯ್' ದಿಲೀಪ್ ಗೆ ದರ್ಶನ್ ಸ್ಫೂರ್ತಿಯಂತೆ.!
ಇತ್ತೀಚೆಗೆ ಗಾಂಧಿನಗರಕ್ಕೆ ಹಲವಾರು ನವ ಪ್ರತಿಭೆಗಳು ಎಂಟ್ರಿಯಾಗುತ್ತಿದ್ದಾರೆ. ಅದರಲ್ಲಿ ಕೆಲವರಿಗೆ ಅದೃಷ್ಟ ಸಿಕ್ಕಿ ಮತ್ತೆ-ಮತ್ತೆ ಅವಕಾಶಗಳು ದೊರೆತರೆ, ಇನ್ನು ಕೆಲವರಿಗೆ ಅದೃಷ್ಟ ಕೈ ಕೊಟ್ಟು ಒಂದೇ ಸಿನಿಮಾ ಮಾಡಿ ಬಂದ ಹಾಗೆ ಮಾಯವಾಗುತ್ತಾರೆ.
ಈಗಾಗಲೇ ಹಲವಾರು ನವ ನಟ-ನಟಿಯರು ಸ್ಯಾಂಡಲ್ ವುಡ್ ಗೆ ಕಾಲಿಟ್ಟು, ಹೊಸಬರ ಸಿನಿಮಾಗಳಲ್ಲಿ ಮಿಂಚಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ.[ನೀವು ದರ್ಶನ್ ಫ್ಯಾನ್ ಆದ್ರೆ, ದರ್ಶನ್ ಯಾರ ಫ್ಯಾನ್.?]
ಇದೀಗ ಇವರೆಲ್ಲರ ಸಾಲಿಗೆ ಹೊಸ ಸೇರ್ಪಡೆ ನವ ನಟ ದಿಲೀಪ್ ಪ್ರಕಾಶ್. ಅಂದಹಾಗೆ ದಿಲೀಪ್ ಪ್ರಕಾಶ್ ಅವರು ಖ್ಯಾತ ನಿರ್ದೇಶಕ ಮಹೇಶ್ ಬಾಬು ಅವರ ಹೊಸ ಚಿತ್ರ 'ಕ್ರೇಜಿ ಬಾಯ್' ಮೂಲಕ ಸ್ಯಾಂಡಲ್ ವುಡ್ ಗೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಲಿಟ್ಟಿದ್ದಾರೆ.
ಆದರೆ ಇವರಿಗೆ ಕ್ಯಾಮರಾ ಎದುರಿಸೋದು ಹೊಸದೇನಲ್ಲ, ಈ ಮೊದಲು ನಟಿ ಮಾಲಾಶ್ರೀ ಅವರ 'ಮಹಾಕಾಳಿ' ಚಿತ್ರದಲ್ಲಿ ಸೈಡ್ ರೋಲ್ ಮಾಡಿದ್ದರು.[ಚೊಚ್ಚಲ ಪ್ರತಿಭೆಗಳಿಗೆ ಬೆನ್ನುಲುಬಾದ ಮಹೇಶ್ ಬಾಬು]
ದಿಲೀಪ್ ಪ್ರಕಾಶ್ ನಟನೆಯ 'ಕ್ರೇಜಿಬಾಯ್' ನಾಳೆ (ಆಗಸ್ಟ್ 19) ತೆರೆ ಕಾಣುತ್ತಿದ್ದು, ಇವರಿಗೆ ನಾಯಕಿಯಾಗಿ ನಟಿ ಆಶಿಕಾ ರಂಗನಾಥ್ ಅವರು ಸಾಥ್ ನೀಡಿದ್ದಾರೆ. ನಟಿ ಅಶಿಕಾ ಅವರು ಕೂಡ ಸ್ಯಾಂಡಲ್ ವುಡ್ ಗೆ ನವನಟಿ ಅನ್ನೋದು ವಿಶೇಷ.
ಇನ್ನು ಚೊಚ್ಚಲ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ನಟ ದಿಲೀಪ್ ಪ್ರಕಾಶ್ ಅವರ ಜೊತೆ ನಿಮ್ಮ ಫಿಲ್ಮಿಬೀಟ್ ಕನ್ನಡ ಚಿಟ್ ಚಾಟ್ ನಡೆಸಿದ್ದು, ದಿಲೀಪ್ ಅವರು ತಮ್ಮ ಚೊಚ್ಚಲ ಚಿತ್ರದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಚಿಟ್ ಚಾಟ್ ನೋಡಿ ಕೆಳಗಿನ ಸ್ಲೈಡ್ ಗಳಲ್ಲಿ.....

- 'ಕ್ರೇಜಿ ಬಾಯ್' ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಹೇಗೆ.?
* ನಾನು ಸಿನಿಮಾ ರಂಗಕ್ಕೆ ಬಂದಿದ್ದು ತುಂಬಾ ಆಕಸ್ಮಿಕವಾಗಿ. ನಾನು ಹೀರೋ ಆಗ್ಬೇಕು ಅಂತ ಅಂದುಕೊಂಡಿರಲಿಲ್ಲ. ನಾನು ಕನ್ನಡ ಸಿನಿಮಾ ಕ್ಷೇತ್ರಕ್ಕೆ ಬರುತ್ತೇನೆ ಅಂತಲೂ ಅಂದುಕೊಂಡಿರಲಿಲ್ಲ. ಇದಕ್ಕಿಂತ ಮುಂಚೆ ಮಾಲಾಶ್ರೀ ಮೇಡಂ ಅವರ 'ಮಹಾಕಾಳಿ' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದೆ. ಅಲ್ಲಿಂದ ನನ್ನ ಸಿನಿಮಾ ಜರ್ನಿ ಶುರು ಆಯ್ತು. ಆದರೆ ಪೂರ್ತಿ ಹೀರೋ ಆಗಿ 'ಕ್ರೇಜಿ ಬಾಯ್' ಚಿತ್ರವೇ ನನ್ನ ಮೊದಲ ಸಿನಿಮಾ.[ಹುಟ್ಟುಹಬ್ಬದ ಸಡಗರದಲ್ಲಿ ಸೃಜನ್ ಜೊತೆ ಒಂದ್ ಸಿಂಪಲ್ ಟಾಕ್.!]

- ನಿಮಗೆ ಸಿನಿಮಾ ಕ್ಷೇತ್ರಕ್ಕೆ ಬರಲು ಸ್ಫೂರ್ತಿ ಕೊಟ್ಟಿದ್ದು ಯಾರು.?
* ನನಗೆ ತುಂಬಾ ಇಷ್ಟವಾದ ಹೀರೋ ಮತ್ತು ನನಗೆ ಸದಾ ಸ್ಫೂರ್ತಿ ತುಂಬೋ ನಟ ದರ್ಶನ್ ಅವರು. ನನಗೆ ಚಿಕ್ಕಂದಿನಿಂದಲೂ ದರ್ಶನ್ ಸರ್ ಅಂದ್ರೆ ತುಂಬಾ ಇಷ್ಟ. ನನ್ನ ಸಿನಿಮಾ ಶುರು ಆದಾಗಿನಿಂದ ದರ್ಶನ್ ಸರ್ ಬೆಂಬಲ ನೀಡುತ್ತಿದ್ದಾರೆ. ಸಿನಿಮಾ ಮುಹೂರ್ತದಿಂದ ಹಿಡಿದು ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೂ ಬಂದು ಶುಭ ಹಾರೈಸಿ ಹೋಗಿದ್ದಾರೆ.

- ಶೂಟಿಂಗ್ ಅನುಭವ ಸ್ವಲ್ಪ ಹಂಚಿಕೊಳ್ಳಿ
* ಶೂಟಿಂಗ್ ಅನುಭವ ತುಂಬಾನೇ ಚೆನ್ನಾಗಿತ್ತು, ಮೊದಲ ಸಿನಿಮಾದಲ್ಲಿ ದೊಡ್ಡ-ದೊಡ್ಡ ನಟರ ಜೊತೆ ತೆರೆ ಹಂಚಿಕೊಂಡಿದ್ದು, ತುಂಬಾನೇ ಖುಷಿ ಆಯ್ತು. ಸಾಧು ಕೋಕಿಲಾ ಸರ್, ರಂಗಾಯಣ ರಘು ಸರ್, ರವಿಶಂಕರ್ ಸರ್ ಅವರ ಜೊತೆ ಎಲ್ಲ ಫಸ್ಟ್ ಸಿನಿಮಾದಲ್ಲಿ, ತೆರೆ ಹಂಚಿಕೊಳ್ಳೋಕೆ ತುಂಬಾನೇ ಅದೃಷ್ಟ ಮಾಡಿರಬೇಕು.

- ನಿರ್ದೇಶಕ ಮಹೇಶ್ ಬಾಬು ಅವರ ಜೊತೆ ಶೂಟಿಂಗ್ ಅನುಭವ ಹೇಗಿತ್ತು.?
* ಸ್ಟಾರ್ ನಟರಿಗೆ ನಿರ್ದೇಶನ ಮಾಡಿದ ನಿರ್ದೇಶಕ ಮಹೇಶ್ ಬಾಬು ಅವರ ಜೊತೆ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ನಮ್ಮ ನಿರ್ಮಾಪಕರಿಂದ. ಚಂದ್ರು ಜಿ ಅಂತ ನಿರ್ಮಾಪಕರು, ಅವರು ಮಹೇಶ್ ಬಾಬು ಸರ್ ಗೆ ಕಥೆ ಹೇಳಿ ಒಪ್ಪಿಸಿದ್ದು. ಜೊತೆಗೆ ಅವರೇ ಬಂಡವಾಳ ಹೂಡಿದ್ದಾರೆ. ಮಹೇಶ್ ಬಾಬು ಅವರು ಸಣ್ಣ ಮಕ್ಕಳ ಹಾಗೆ ಟ್ರೀಟ್ ಮಾಡುತ್ತಾರೆ. ''ನಾನು ದರ್ಶನ್-ಪುನೀತ್ ಅವರಿಗೆಲ್ಲಾ ನಿರ್ದೇಶನ ಮಾಡಿದ್ದೇನೆ ಅನ್ನೋ ಗರ್ವ ಅವರಿಗಿಲ್ಲ. ತುಂಬಾ ಚೆನ್ನಾಗಿ, ನೀಟಾಗಿ ಮಕ್ಕಳಿಗೆ ಹೇಳಿಕೊಟ್ಟಂತೆ ಸೆಟ್ ನಲ್ಲಿ ಸೀನ್ ಗಳನ್ನು ವಿವರಿಸ್ತಾ ಇದ್ರು. ಒಟ್ನಲ್ಲಿ ನಮಗೆ ಯಾವುದೇ ರೀತಿಯ ತೊಂದರೆ ಆಗದೇ ಇರೋ ತರ ನೋಡಿಕೊಂಡಿದ್ದಾರೆ.

-ನಿಮ್ಮನ್ನೇ ಯಾಕೆ ಹೀರೋ ಆಗಿ ಆಯ್ಕೆ ಮಾಡಿಕೊಂಡರು, ಅದೂ ಮಹೇಶ್ ಬಾಬು ಡೈರೆಕ್ಷನ್ ನಲ್ಲಿ.?
* ಎಲ್ಲದಕ್ಕೂ ನಮ್ಮ ನಿರ್ಮಾಪಕ ಚಂದ್ರು ಅವರೇ ಕಾರಣ. ಇನ್ನೊಬ್ಬರು ಅಜಯ್ ಕುಮಾರ್ ಅಂತ ಇದ್ದಾರೆ. 'ಮಹಾಕಾಳಿ' ಚಿತ್ರಕ್ಕೂ ಅವರೇ ಕಥೆ ಬರೆದಿದ್ದರು. ಈ ಚಿತ್ರಕ್ಕೂ ಅವರೇ ಕಥೆ ಬರೆದಿದ್ದಾರೆ. ಸೋ ಅಜಯ್ ಕುಮಾರ್ ಅವರು ಚಂದ್ರು ಅವರಿಗೆ ಪರಿಚಯ ಆಗಿ, ತದನಂತರ ಇವರಿಬ್ಬರ ಮೂಲಕ ಮಹೇಶ್ ಬಾಬು ಸರ್ ಪರಿಚಯ ಆಗಿ, ಇದೀಗ ನನ್ನನ್ನು ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಪರಿಚಯ ಮಾಡುತ್ತಿದ್ದಾರೆ.

- ಹಿರೋಯಿನ್ ಬಗ್ಗೆ ಒಂಚೂರು ಹೇಳಿ
* ಹಿರೋಯಿನ್ ಅಶಿಕಾ ರಂಗನಾಥ್ ಅಂತ, ಅವರಿಗೂ ಇದು ಮೊದಲ ಸಿನಿಮಾ. ಅವರನ್ನು ಮಹೇಶ್ ಬಾಬು ಅವರೇ ಆಡಿಷನ್ ಮತ್ತು ಫೋಟೋ ಶೂಟ್ ಮಾಡಿ ಸೆಲೆಕ್ಟ್ ಮಾಡಿದ್ದು. ಅವರ ಬಗ್ಗೆ ಹೇಳಬೇಕು ಅಂದ್ರೆ ಅವರು ತುಂಬಾ ಒಳ್ಳೆ ಕೋ-ನಟಿ. ತುಂಬಾ ತಾಳ್ಮೆ ಇದೆ ಅವರಿಗೆ ಹಾಗೂ ಎಲ್ಲದಕ್ಕೂ ಅಡ್ಜೆಸ್ಟ್ ಆಗುತ್ತಿದ್ದರು. ನಮಗೆ ಅವರ ಜೊತೆ ನಟಿಸಲು ಸಂಕೋಚ ಆಗ್ತಾ ಇರ್ಲಿಲ್ಲ. ತುಂಬಾ ಬೋಲ್ಡ್ ಕ್ಯಾರೆಕ್ಟರ್. ಅವರ ಜೊತೆ ತುಂಬಾ ಚೆನ್ನಾಗಿತ್ತು ಅನುಭವ. ಜೊತೆಗೆ ನಮ್ಮ ಟೆಕ್ನಿಕಲ್ ಟೀಮ್ ತುಂಬಾ ಚೆನ್ನಾಗಿತ್ತು.

- 'ಕ್ರೇಜಿ ಬಾಯ್' ಅಂದ್ರೆ
* ಪೂರ್ತಿ ಯೂತ್ ಫುಲ್, ಕಾಲೇಜ್ ರಿಲೇಟೆಡ್ ಸಿನಿಮಾ. ಹೆಸರೇ ಹೇಳುವಂತೆ ಇದೊಂಥರಾ ಕ್ರೇಜ್ ಇರೋ ಸಿನಿಮಾ. ಇದರಲ್ಲಿ ನನ್ನ ಪಾತ್ರ ಬಂದು, ತುಂಬಾ ಕ್ರೇಜ್ ಇರೋ ಹುಡುಗ, ಬೈಕ್ ಕ್ರೇಜ್ ಜಾಸ್ತಿ ಇದೆ. ಆತ ಯಾರನ್ನೂ ಬಿಟ್ಟುಕೊಡಲ್ಲ, ತನ್ನ ಮನೆಯವರು, ತನ್ನ ಲವರ್, ಫ್ರೆಂಡ್ಸ್ ಹೀಗೆ ಎಲ್ಲರನ್ನೂ ತುಂಬಾ ಪ್ರೀತಿ ಮಾಡೋ ಹುಡುಗ. ಇದು ಪೂರ್ತಿ ಯೂತ್ ಗೆ ಇಷ್ಟವಾಗೋ ಸಿನಿಮಾ. ಈಗಿನ ಯುವಕರಿಗೆ ಏನೇನೂ ಹೇಳಬೇಕೋ, ಅದನ್ನೆಲ್ಲಾ ನಾವು ಈ ಸಿನಿಮಾದ ಮೂಲಕ ಹೇಳಲಿದ್ದೇವೆ.

- ಕೊನೆಯದಾಗಿ ಒಂದು ಮಾತು
* ನಾವು ನಮ್ಮ ಶಕ್ತಿ ಮೀರಿ ಸಿನಿಮಾ ಮಾಡಿದ್ದೇವೆ. ಏನಾದ್ರೂ ತಪ್ಪಿದ್ರೆ, ಅದನ್ನು ಕ್ಷಮಿಸಿ ದಯವಿಟ್ಟು ಸಿನಿಮಾ ನೋಡಿ. ಮಹೇಶ್ ಬಾಬು ಸರ್ ಸಿನಿಮಾ ಅಂದ್ರೆ ಎಲ್ಲರಿಗೂ ಗೊತ್ತೇ ಇದೆ. ಯಾವುದೇ ರೀತಿಯ ವಲ್ಗರ್ ಸೀನ್ ಇರೋದಿಲ್ಲಾ. ಸಂಪೂರ್ಣ ಕೌಟುಂಬಿಕ ಸಿನಿಮಾ ಆಗಿರುತ್ತೆ, ಎಲ್ಲರೂ ಒಟ್ಟಿಗೆ ಕುಳಿತು ನೋಡಬಹುದು. ಚಿತ್ರದ ಮೇಕಿಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ದಯವಿಟ್ಟು ಎಲ್ಲರೂ ಸಿನಿಮಾ ನೋಡಿ ನಮ್ಮನ್ನು ಹರಸಬೇಕು ಅಂತ ಜನರಲ್ಲಿ ಕೇಳಿಕೊಳ್ಳುತ್ತೇನೆ.

- ಟ್ರೈಲರ್ ನೋಡಿ ಹೊಸ ಅವಕಾಶ ಸಿಕ್ತಾ.?
* ಹಾ...ಹೌದು ತುಂಬಾ ಅವಕಾಶ ಸಿಕ್ತಾ ಇದೆ. ಹಲವಾರು ನಿರ್ದೇಶಕರು ಮತ್ತು ನಿರ್ಮಾಪಕರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಎಲ್ಲಾ ಕಡೆಯಿಂದ ಟ್ರೈಲರ್ ಗೆ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ಆದರೆ ನಾನು ಮೊದಲ ಸಿನಿಮಾ ಆದ ಮೇಲೆ ನಂತರ ನೋಡೋಣ ಅಂತ ಯಾರಿಗೂ ಏನೂ ಹೇಳಿಲ್ಲ.

ದಿಲೀಪ್ ಪ್ರಕಾಶ್ ಪರಿಚಯ
ಸದ್ಯಕ್ಕೆ ಅನೇಕಲ್ ಅಲೆಯನ್ಸ್ ಯೂನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ್ದಾರೆ. ಸಿನಿಮಾ ಒಪ್ಪಿಕೊಂಡಾಗ ದಿಲೀಪ್ ಅವರು ಕೊನೆಯ ವರ್ಷದ ವ್ಯಾಸಂಗ ಮಾಡುತ್ತಿದ್ದರು. ಚಿತ್ರದ ಶೂಟಿಂಗ್ ಗೂ ಸ್ಟಡೀಸ್ ಗೂ ಯಾವುದೇ ರೀತಿಯ ತೊಂದರೆ ಆಗಲಿಲ್ಲ ಎನ್ನುತ್ತಾರೆ ದಿಲೀಪ್. (ಸಂದರ್ಶನ: ಸುನೀತಾ ಗೌಡ)


Click it and Unblock the Notifications











