ಸಂದರ್ಶನ: ಬೇರೆ ಶೋಗಳು TRPಗೆ ಆದ್ರೆ, 'ಕನ್ನಡದ ಕಣ್ಮಣಿ' ಆತ್ಮತೃಪ್ತಿಗೆ
ಟಿವಿ ಮುಂದೆ ಕೂತರೆ ಸೀರಿಯಲ್ ಹಾವಳಿ. ಅದು ಬಿಟ್ಟರೆ ಡ್ಯಾನ್ಸ್ ಶೋ, ಸಿಂಗಿಂಗ್ ಶೋ, ಕಾಮಿಡಿ ಶೋ ಹೀಗೆ ಅದೇ ಅದೇ ಕಾರ್ಯಕ್ರಮಗಳನ್ನು ನೋಡಿ ಬೇಸತ್ತ ವೀಕ್ಷಕರಿಗೆ ಒಂದು ಹೊಸತನ ನೀಡುತ್ತಿರುವ ಕಾರ್ಯಕ್ರಮವೇ 'ಕನ್ನಡದ ಕಣ್ಮಣಿ'.
ಒಂದು ವಿಷಯ, ಅದನ್ನು ಅದ್ಬುತವಾಗಿ ಮಾತನಾಡುವ ಮಕ್ಕಳು. ಬೋಧನೆ, ಸಂದೇಶದ ಜೊತೆಗೆ ಒಂದಷ್ಟು ಮನರಂಜನೆ. ಕಿವಿಗೊಟ್ಟು ಕೇಳಬೇಕು ಎನ್ನುವ ತೀರ್ಪಗಾರರ ಅಭಿಪ್ರಾಯಗಳು. ಕಾರ್ಯಕ್ರಮ ನೋಡುತ್ತಿದ್ದರೆ, ಮುಂಜಾನೆ ಒಂದು ಒಳ್ಳೆಯ ಕಾಫಿ ಕುಡಿದ ಫ್ರೆಶ್ ಅನುಭವ ಆಗುತ್ತದೆ.
ಇಂತಹ ವಿಭಿನ್ನ, ವಿನೂತನ ಕಾರ್ಯಕ್ರಮ ಈಗ ಫೈನಲ್ ಹಂತ ತಲುಪಿದೆ. ಈ ವಿಶೇಷವಾಗಿ ಕಾರ್ಯಕ್ರಮದ ನಿರ್ದೇಶಕ ಸ್ವಾಮಿ ಅವರು ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ.
'ಕನ್ನಡದ ಕಣ್ಮಣಿ' ಜನನಕ್ಕೆ ಕಾರಣ, ಮಕ್ಕಳ ಆಯ್ಕೆ, ಕಾರ್ಯಕ್ರಮದ ವಿಶೇಷತೆಗಳು, ಟಿ ಆರ್ ಪಿ, ಫೈನಲ್ ತಯಾರಿ ಹೀಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...
ಸಂದರ್ಶನ : ನವೀನ್ ಎಮ್ ಎಸ್ (ನವಿ ಕನಸು)

'ಕನ್ನಡದ ಕಣ್ಮಣಿ' ಯಾಕೆ?, ಕಾರ್ಯಕ್ರಮ ಪ್ಲಾನಿಂಗ್ ಹೇಗೆ ಶುರುವಾಯ್ತು?
''ನಾನು 10 ವರ್ಷದಿಂದ ಕಿರುತೆರೆಯಲ್ಲಿ ಇದ್ದೇನೆ. ಡ್ಯಾನ್ಸ್ ಶೋ, ಸಿಂಗಿಂಗ್ ಶೋ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಆದರೆ, ಮನುಷ್ಯನಿಗೆ ಆತ್ಮ ತೃಪ್ತಿ ಬೇಕಾಗುತ್ತದೆ. ನಮ್ಮ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸರ್ ಕನ್ನಡಿಗರಿಂದ, ಕನ್ನಡಿಗರಿಗಾಗಿ, ಕನ್ನಡಿಗರಿಗೋಸ್ಕರ ಒಂದು ಶೋ ಮಾಡಬೇಕು ಎಂಬ ಆಸೆ ಹೊಂದಿದ್ದರು. ಕಮರ್ಷಿಯಲ್ ಅಂಶಗಳನ್ನು ತುಂಬದೇ, ಬರೀ ಮಾತನ್ನು ಸಹ ಕೇಳಿಸಬೇಕು ಎನ್ನುವ ಪ್ಲಾನ್ ಅವರದ್ದು, ಈ ಗೆಲುವು ಅವರಿಗೆ ಸಲ್ಲುತ್ತದೆ.''

ಮಕ್ಕಳ ಆಯ್ಕೆ ಹೇಗೆ ಆಗಿತ್ತು? ಇಡೀ ಜರ್ನಿ ಹೇಗಿದೆ?
''ಹೊಸ ಪ್ರಯತ್ನ ಇದ್ದ ಕಾರಣ ಮೊದಲು ಭಯ ಇತ್ತು. ಆದರೆ, ಆಡಿಷನ್ ನಲ್ಲಿಯೇ ಅದು ಹೋಯ್ತು. 7 ಸಾವಿರ ಮಕ್ಕಳು ಆಡಿಷನ್ ನೀಡಿದರು. ಅದರಲ್ಲಿ 14 ಮಕ್ಕಳನ್ನು ಆಯ್ಕೆ ಮಾಡಿದ್ವಿ. ಈಗ 10 ಜನರು ಸೆಮಿ ಫೈನಲ್ ಗೆ ಬಂದಿದ್ದಾರೆ. ಅದರಲ್ಲಿ 8 ಮಕ್ಕಳು ಫೈನಲ್ ಗೆ ಬರುತ್ತಾರೆ. ಈ ಇಡೀ ಜರ್ನಿಯಲ್ಲಿ ಮಕ್ಕಳಿಂದ ನಾವು ಎಷ್ಟೋ ವಿಷಯ ತಿಳಿದುಕೊಂಡ್ವಿ.''

ಪ್ರೇಕ್ಷಕರ ಕೋರಿಕೆ ಇದ್ದರೂ ಕಾರ್ಯಕ್ರಮದ ಸಮಯ ಬದಲಾವಣೆ ಮಾಡಲೇ ಇಲ್ಲ ಏಕೆ?
''ಚಾನಲ್ ನಲ್ಲಿ ಕಾರ್ಯಕ್ರಮಗಳ ಪ್ರಸಾರದ ಪಟ್ಟಿ ಇರುತ್ತದೆ. ಸಂಜೆ 6 ಗಂಟೆಯಿಂದ ಎಲ್ಲ ಕಾರ್ಯಕ್ರಮಗಳು ಶುರು ಆಗುತ್ತಿದ್ದವು. ಆದರೆ, 'ಕನ್ನಡದ ಕಣ್ಮಣಿ' 5 ಗಂಟೆಗೆ ಪ್ರಾರಂಭ ಮಾಡಿದ್ವಿ. ಒಳ್ಳೆಯ ಕಾರ್ಯಕ್ರಮ ಕೊಟ್ಟರೆ ಜನ ಯಾವಾಗ ಬೇಕಾದರೂ ನೋಡುತ್ತಾರೆ ಎನ್ನುವುದು ನಮ್ಮ ನಂಬಿಕೆ. ಜನ ನೋಡುವ ಸಮಯದಲ್ಲೇ ಕಾರ್ಯಕ್ರಮ ಹಾಕುವುದಕ್ಕಿಂತ, ನಮ್ಮ ಕಾರ್ಯಕ್ರಮದ ಸಮಯಕ್ಕೆ ಜನರನ್ನು ನೋಡುವಂತೆ ಮಾಡುವುದು ನಮ್ಮ ರಿಯಲ್ ಸಕ್ಸಸ್. ಈ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಜನರ ಗೆಲ್ಲಬಹುದು.''

ಮೊದಲು ಕಾರ್ಯಕ್ರಮಕ್ಕೆ ಬಂದಾಗ, ಮತ್ತು ಈಗ ಮಕ್ಕಳಲ್ಲಿ ಏನು ಬದಲಾವಣೆಯಾಗಿದೆ?
''ಪ್ರತಿ ಮಕ್ಕಳ ಪ್ರಬುದ್ಧತೆ ಜಾಸ್ತಿಯಾಗಿದೆ. ಅವರು ಕಾರ್ಯಕ್ರಮಕ್ಕೆ ಆಯ್ಕೆ ಆದಗಲೇ ವಯಸ್ಸಿಗೆ ವೀರಿದ ವಿಚಾರವಂತಿಕೆ ಅವರಿಗಿತ್ತು. ಪ್ರತಿ ವಾರ ಹೋಗ್ತಾ ಹೋಗ್ತಾ ಅವರ ಬೆಳವಣಿಗೆ ನೋಡಿದ್ದೇವೆ. ಈಗ ಅವರನ್ನು ವಿಧಾನ ಸೌಧ, ಕೋರ್ಟ್ ಎಲ್ಲಿಯೇ ಬಿಟ್ಟರು ಧೈರ್ಯವಾಗಿ ಮಾತನಾಡುತ್ತಾರೆ.''

ಇದು ಮಾತಿನ ಮೇಲೆ ನಿಂತ ಕಾರ್ಯಕ್ರಮ, ಸೋ, ಮಕ್ಕಳಿಗೆ ಮಾತು ತುಂಬಿಸುವವರು ಯಾರು?
''ನಾವು ಒಂದು ವಿಷಯ ನೀಡುತ್ತೇವೆ. ಮಕ್ಕಳಿಗೆ ತಂದೆ ತಾಯಿಯೇ ಹಾಗೂ ಶಿಕ್ಷಕರೇ ರೈಟರ್ ಗಳು. ಮಕ್ಕಳು ತಯಾರು ಮಾಡಿದ್ದ ಮಾತಿನಲ್ಲಿ ಯಾವುದೇ ಬೇಕು, ಯಾವುದೇ ಬೇಡ ಎಂದು ತಿದ್ದುತ್ತೇವೆ. ಮಕ್ಕಳ ಕಂಟೆಂಟ್ ಇಟ್ಟುಕೊಂಡು ನಾವು ಮೆಂಟರಿಂಗ್ ಮಾಡುತ್ತೇವೆ.''

ತೀರ್ಪುಗಾರರ ಆಯ್ಕೆ ತುಂಬ ಸೂಕ್ತವಾಗಿದೆ, ಅದು ಹೇಗೆ ಮಾಡಿದ್ದು?
''ಅದು ನಮ್ಮ ಬಾಸ್ ರಾಘವೇಂದ್ರ ಹುಣಸೂರು ಸರ್ ಅವರ ಪ್ಲಾನ್. ಜಯಂತ್ ಕಾಯ್ಕಿಣಿ ಸರ್ ಪದಗಳು ಎಲ್ಲರಿಗೂ ಇಷ್ಟ. ಮಕ್ಕಳಿಗೆ ಅವರು ಹೇಳುವ ಮಾತುಗಳು ಅಜ್ಜಿಯ ಕಥೆ ತರ ಇರುತ್ತದೆ. ಪ್ರಾಣೇಶ್ ಸರ್ ಅವರ ಬದುಕಿನ ಪುಟವನ್ನು ತೆರೆಯುತ್ತಾರೆ. ಜಗೇಶಣ್ಣ ನಮ್ಮ ಸೆಟ್ ನಲ್ಲಿ ಕನ್ನಡದ ಬಗ್ಗೆ ನಾವು ತಪ್ಪು ಮಾಡಿದರೆ ಅದನ್ನು ತಿದ್ದುತ್ತಾರೆ.''

ಒಂದು ಶೋ ಸ್ಥಾನ ನಿರ್ಧಾರ ಆಗುವುದು ಟಿ ಆರ್ ಪಿ ಮೂಲಕ, ಸೋ ಟಿ ಆರ್ ಪಿ ಹೇಗಿದೆ?
''ಜೀ ಕನ್ನಡ ಈಗ ನಂಬರ್ ಒನ್ ಟಿ ಆರ್ ಪಿ ಯಲ್ಲಿ ಇದೆ. ಆದರೆ, ಟಿ ಆರ್ ಪಿ ಬಿಟ್ಟು ಗುಡ್ ವಿಲ್ ಅಂತ ಇರುತ್ತದೆ. ನಮಗೂ ಆತ್ಮತೃಪ್ತಿ ಬೇಕಾಗುತ್ತದೆ. ತುಂಬ ಒಳ್ಳೆಯ ಟಿ ಅರ್ ಪಿ ಇಲ್ಲದೆ ಇದ್ದರೂ, 5 ಗಂಟೆಯ ಸ್ಲಾಟ್ ಗೆ ಒಂದು ಒಳ್ಳೆಯ ಒಪನಿಂಗ್ ಸಿಕ್ಕಿದೆ. ಎಲ್ಲರೂ 6 ಗಂಟೆಗೆ ಶೋ ಶುರು ಆಗಬೇಕು ಎನ್ನುವ ನಿಯಮ ಹಾಕಿಕೊಂಡಿದ್ದರು. ಆದರೆ, 5 ಗಂಟೆಗೆ ಜನರನ್ನು ಟಿವಿ ಮುಂದೆ ಕುರಿಸುವ ಪ್ರಯತ್ನ ಇದು.''

ಫೈನಲ್ ತಯಾರಿ ಹೇಗೆ ನಡೆಯುತ್ತಿದೆ ?
''ಫಿನಾಲೆ ತಯಾರಿ ತುಂಬ ಚೆನ್ನಾಗಿ ನಡೆಯುತ್ತಿದೆ. ಎಚ್ಚರಿಕೆ ಗಂಟೆಯ ರೀತಿ ವಿಷಯ ಇದೆ. ''ವ್ಯಕ್ತಿತ್ವಗಳನ್ನು ಸಂಭ್ರಮ ಪಡೋಣ'' ಎನ್ನುವ ಕಾನ್ಸೆಪ್ಟ್ ತೆಗೆದುಕೊಂಡಿದ್ದೇವೆ. ಜೀವನದಲ್ಲಿ ತಮ್ಮದೆ ಆದ ಸಾಧನೆ ಮಾಡಿರುವ, ಯಾರಿಗೂ ತಿಳಿಯದ ವ್ಯಕ್ತಿಗಳ ಪರಿಚಯ ಇಲ್ಲಿ ಆಗಲಿದೆ. ಮಕ್ಕಳ ಮೂಲಕ ಅವರ ಕೆಲಸಕ್ಕೆ ಗೌರವ ಸೂಚಿಸುತ್ತಿದ್ದೇವೆ.''


Click it and Unblock the Notifications











