Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀವನ ಬದಲಿಸಿದ 'ಗರ್ಭದಿ ನನ್ನಿರಿಸಿ' ಹಾಡು: ಚಿತ್ರಸಾಹಿತಿ ಕಿನ್ನಾಳ ರಾಜ ಸಂದರ್ಶನ
ಗಾಂಧಿನಗರ ಎಂಬ ಮಾಯಾನಗರಿಗೆ ಪ್ರತಿ ವರ್ಷ ನೂರಾರು ಯುವಕರು ಬಣ್ಣಬಣ್ಣದ ಕನಸುಗಳನ್ನು ಹೊತ್ತು ಭವಿಷ್ಯ ಅರಿಸುತ್ತ ಬರುತ್ತಾರೆ. ಆದರೆ ಇಲ್ಲಿ ನಿತ್ಯ ಎದುರಾಗುವ ಅಪಮಾನಗಳು, ಅವಕಾಶ ಸಿಕ್ಕಿ, ಸಿಕ್ಕಂತೆ ಕೈ ಬಿಟ್ಟು ಹೋಗುವ ಪ್ರಸಂಗಗಳು, ನಿರೀಕ್ಷೆಗಳು ಕೈಗೂಡದೆ ಎದುರಾಗುವ ಒತ್ತಡಗಳು ಇದೆಲ್ಲವನ್ನು ಮೆಟ್ಟಿ ನಿಂತವರು ಮಾತ್ರವೇ ತಾವು ಕಂಡ ಕನಸನ್ನು ನನಸಾಗಿಸಿಕೊಳ್ಳುವದರಲ್ಲಿ ಸಫಲರಾಗುತ್ತಾರೆ. ಹೀಗೆ ದೂರದ ಕೊಪ್ಪಳ ಜಿಲ್ಲೆಯ 'ಕಿನ್ನಾಳ' ಎಂಬ ಗ್ರಾಮದಿಂದ ಬಂದ ಯುವಕನೊಬ್ಬ ಯಾವುದೇ ಗಾಡ್ ಫಾದರ್ಗಳ ಬೆಂಬಲವಿಲ್ಲದೆ ಗಾಂಧಿನಗರದ ಗಲ್ಲಿಗಳಲ್ಲಿ ಅಲೆದು, ಸಿಕ್ಕ ಸಣ್ಣಪುಟ್ಟ ಅವಕಾಶಗಳನ್ನು ಬಳಸಿಕೊಂಡು, ತನ್ನ ಗುರಿಯ ಕಡೆಗೆ ತನ್ನೆಲ್ಲ ಗಮನವನ್ನು ನೆಟ್ಟು, ಸೈಡ್ ಆರ್ಟಿಸ್ಟ್ ಕೆಲಸದಿಂದ ಮೊದಲು ಕೊಂಡು, ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಜೊತೆಗೆ ಮ್ಯೂಸಿಕ್ ಡೈರೆಕ್ಟರ್ಗಳಿಗೆ ಅಸಿಸ್ಟೆಂಟ್ ಆಗಿ, ಪ್ರೋಗ್ರಾಮರ್ ಆಗಿ, ಸಿನಿಮಾ ಸಾಹಿತಿಯಾಗಿ ಕೊನೆಗೆ ಈಗ ನವೆಂಬರ್12 ರಂದು ಬಿಡುಗಡೆಯಾಗುತ್ತಿರುವ 'ಹಿಟ್ಲರ್' ಚಿತ್ರದ ಮೂಲಕ ನಿರ್ದೇಶಕರಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವ 'ಕಿನ್ನಾಳ ರಾಜ್' ಅವರು ತಮ್ಮ ಮನದಾಳದ ಮಾತುಗಳನ್ನು 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಹಂಚಿಕೊಂಡಿದ್ದಾರೆ.
'ಕೆಜಿಎಫ್' ಸಿನಿಮಾದ 'ಗರ್ಭದಿ ನನ್ನಿರಿಸಿ..' ಹಾಡಿನ ಮೂಲಕ ಜನಪ್ರಿಯತೆ ಗಳಿಸಿಕೊಂಡ ಚಿತ್ರಸಾಹಿತಿ ಕಿನ್ನಾಳ ರಾಜ್ 'ಹಿಟ್ಲರ್' ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ತಮ್ಮ ಸಿನಿಮಾ ಪಯಣ, ಮೊದಲ ಅವಕಾಶ, ನಿರ್ದೇಶಿಸುತ್ತಿರುವ ಮೊದಲ ಸಿನಿಮಾದ ವಿಶೇಷತೆಗಳು, ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಸಂಪಾದಿಸಿ ರೀತಿ ಇನ್ನೂ ಹಲವು ವಿಷಯಗಳ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದಾರೆ.
ಕಿನ್ನಾಳ ರಾಜ್
ನಾನು ಮೂಲತಃ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮಕ್ಕೆ ಸೇರಿದ ಮಧ್ಯಮವರ್ಗದ ನೇಕಾರ ಕುಟುಂಬದಿಂದ ಬಂದವನು. ಸಣ್ಣ ವಯಸ್ಸಿನಿಂದಲೇ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ. ಶಾಲಾ ದಿನಗಳಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಸಿನಿಮಾಗಳನ್ನು ನೋಡ ನೋಡುತ್ತಲೇ ಅದರ ಬಗ್ಗೆ ಒಂದು ವಿಶೇಷವಾದ ವ್ಯಾಮೋಹ ಉಂಟಾಯಿತು. ಹೀಗಾಗಿ ಸಿನಿಮಾರಂಗದಲ್ಲಿ ನೆಲೆ ಕಂಡುಕೊಳ್ಳಬೇಕೆಂಬ ಕನಸು, ಅದರಲ್ಲೂ ನಿರ್ದೇಶಕನಾಗಿ ಬೆಳೆಯಬೇಕೆಂಬ ಆಸೆ ಚಿಗುರೊಡೆಯಿತು. ಅದೇ ಆಸೆ ಮತ್ತು ಕನಸು ಕಿನ್ನಾಳ ದಿಂದ ನನ್ನನ್ನು ಬೆಂಗಳೂರಿನ ಕಡೆಗೆ ಮುಖ ಮಾಡುವಂತೆ ಮಾಡಿತು.
ಫಿಲ್ಮಿಬೀಟ್ ಕನ್ನಡ: ಬೆಂಗಳೂರಿಗೆ ಬಂದಾಗ ಆರಂಭದ ದಿನಗಳು ಹೇಗಿದ್ದವು?
ಕಿನ್ನಾಳ ರಾಜ್: ನನಗೆ ಸಿನಿಮಾದ ಯಾವುದೇ ಹಿನ್ನೆಲೆ ಇರಲಿಲ್ಲ. ನಿಜ ಹೇಳಬೇಕೆಂದರೆ ಅದಕ್ಕಿಂತ ಹೆಚ್ಚಾಗಿ ಗಾಂಧಿನಗರದ ಗಲ್ಲಿಗಳನ್ನು ಕೂಡ ಅಲ್ಲಿವರೆಗೂ ನೋಡಿರಲಿಲ್ಲ. ನಿರ್ದೇಶಕನಾಗುವ ಕನಸು ಹೊತ್ತು ಬಂದಿದ್ದು ನಿಜ, ಹಾಗಂತ ಯಾರು ತಾನೇ ಅವಕಾಶ ಕೇಳಿಕೊಂಡು ಹೋದ ತಕ್ಷಣ ಅಸಿಸ್ಟೆಂಟ್ ಡೈರೆಕ್ಟಾಗಿ ಸೇರಿಸಿಕೊಳ್ಳುತ್ತಾರೆ ಹೇಳಿ? ಆದರೆ ಸಿನಿಮಾರಂಗದಲ್ಲಿ ನೆಲೆಕಂಡುಕೊಳ್ಳುವ ನನ್ನ ಆಸಕ್ತಿಯ ಹಿನ್ನೆಲೆಯಲ್ಲಿ ಸಿನಿಮಾದ ಯಾವುದೇ
ಕ್ರಾಫ್ಟ್ ನಲ್ಲಾದರೂ ಸರಿ, ಕೆಲಸ ಮಾಡಬೇಕು ಅಂತಲೇ ನಿರ್ಧರಿಸಿದ್ದೆ. ಹೀಗಾಗಿ ಆರಂಭದ ಹಂತದಲ್ಲಿ ಸಿಕ್ಕ ಸಣ್ಣ ಸಣ್ಣ ಪಾತ್ರಗಳ ಪೋಷಣೆ ಕೂಡ ಮಾಡಿದೆ. ತದನಂತರ ಸ್ನೇಹಿತರಾದ ಅಮರ್ ಅವರ 'ದಿಲ್ದಾರ್' ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದೆ. ಹೀಗೆ ಕೆಲಕಾಲ ನನ್ನ ಸಿನಿ ಜರ್ನಿ ನಡೆಯಿತು.
ಫಿಲ್ಮಿಬೀಟ್ ಕನ್ನಡ: ನೀವು ಸಿನಿಮಾ ನಿರ್ದೇಶಕರಾಗಲು ಬಂದವರು, ಆದರೆ ಚಿತ್ರಸಾಹಿತಿ ಆಗಿದ್ದು ಹೇಗೆ?
ಕಿನ್ನಾಳ ರಾಜ್: ನಾನು ಮೊದಲೇ ಹೇಳಿದಂತೆ ಸಿನಿಮಾದ ಯಾವ ಕ್ರಾಫ್ಟನಲ್ಲಾದರೂ ನಾನು ಕೆಲಸ ಮಾಡಲು ಸಿದ್ದನಿದ್ದೆ. ನಾನು ಇದೇ ಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ 'ಅರ್ಜುನ್ ಜನ್ಯ' ಅವರ ಹತ್ತಿರ ಪ್ರೋಗ್ರಾಮರ್ ಆಗಿ ಕೆಲಸ
ಕೆಲಸ ಮಾಡುತ್ತಿದ್ದ ರವಿ ಬಸ್ರೂರ್ ಸರ್ ಅವರ ಸಂಪರ್ಕ ದೊರೆಯಿತು.ನನಗೆ ಇಂದು ಮಾರ್ಗದರ್ಶಕರೆಂದು ಹೆಮ್ಮೆಯಿಂದ ಹೇಳಬಹುದಾದ ರವಿ ಬಸ್ರೂರ್ ಅವರ ಹತ್ತಿರ
ಅಲ್ಲಿಂದ ಮುಂದೆ ಸಹಾಯಕನಾಗಿ, ಪ್ರೋಗ್ರಾಮರ್ ಆಗಿ ಕೆಲಸ ಮಾಡುತ್ತಿದ್ದೆ. ಇದೇ ಕ್ರಮದಲ್ಲಿ ನಿರ್ದೇಶಕ ನವರಸನ್ ನಟಿಸಿ-ನಿರ್ದೇಶಿಸಿದ 'ವೈರ' ಚಿತ್ರದಲ್ಲಿ ರವಿ ಬಸ್ರೂರು ಅವರು ನೀಡಿದ ಅವಕಾಶದಿಂದಾಗಿ 'ಮನಸಾರೆ ಇಂದು...ಕೇಳಲೇ ಮಾತೊಂದು...' ಹಾಡನ್ನು ಬರದೆ. ಈ ಹಾಡಿನ ಮೂಲಕ ಚಿತ್ರಸಾಹಿತಿಯಾಗಿ ಸಿನಿಮಾರಂಗದಲ್ಲಿ ಮೊದಲ ಮೆಟ್ಟಿಲು ಏರಿದೆ.
ಫಿಲ್ಮಿಬೀಟ್ ಕನ್ನಡ: ಮುಂದೆ ಯಾವ ಯಾವ ಚಿತ್ರಗಳಿಗೆ ನೀವು ಚಿತ್ರಸಾಹಿತಿಯಾಗಿ ಕೆಲಸ ಮಾಡಿದ್ರಿ?
ಕಿನ್ನಾಳ ರಾಜ್: 'ಆನಂತರ', 'ಅಂಜನಿಪುತ್ರ', 'ಲೈಟಾಗಿ ಲವ್ವಾಗಿದೆ', 'ಕೆಜಿಎಫ್-1', 'ಬಜಾರ್', 'ದಮಯಂತಿ', 'ಗಿರ್ಮಿಟ್', 'ಜೆಂಟಲ್ ಮೆನ್', ಇತ್ತೀಚಿನ 'ಮದಗಜ'ದವರಿಗೆ ಹಲವಾರು ಚಿತ್ರಗಳಿಗೆ ಸುಮಾರು ಮೂವತ್ತಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದೇನೆ.
ಫಿಲ್ಮಿಬೀಟ್ ಕನ್ನಡ: 'ಗರ್ಭದಿ ನನ್ನಿರಿಸಿ...' ನಿಮಗೆ ಗುರುತು ತಂದುಕೊಟ್ಟ ಹಾಡು, ಈ ಹಾಡಿನ ಬಗ್ಗೆ ನಿಮ್ಮ ಅನುಭವ ಹಂಚಿಕೋಳ್ಳಬಹುದೇ?
ಕಿನ್ನಾಳ ರಾಜ್: ಕಿನ್ನಾಳ ರಾಜ್ ಎಂಬ ಚಿತ್ರಸಾಹಿತಿ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತು ಮಾಡಿಸಿದ ಹಾಡು ಇದು. ಕೆಜಿಎಫ್ ಅಂತಹ ದೊಡ್ಡ ಪ್ರಾಜೆಕ್ಟ್ ಲ್ಲಿ ಹಾಡನ್ನು ಬರೆಯಲು ಅವಕಾಶ ಸಿಗುತ್ತದೆಂಬ ಕಲ್ಪನೆ ಖಂಡಿತ ನನಗೆ ಇರಲಿಲ್ಲ. 'ಕೆಜಿಎಫ್' ಸಿನಿಮಾದಲ್ಲಿ ನಾನು ಈ ಹಾಡು ಬರೆಯಲಿಕ್ಕೆ ಮುಖ್ಯಕಾರಣ 'ಅಂಜನಿಪುತ್ರ' ಚಿತ್ರದ ಟೈಟಲ್ ಸಾಂಗ್ ಅಂತಲೇ ಹೇಳಬೇಕು. ಅಪ್ಪು ಸಾರ್ ಅಭಿನಯಿಸಿದ 'ಅಂಜನಿಪುತ್ರ' ಚಿತ್ರದ ಪವರ್ ಫುಲ್ ಟೈಟಲ್ ಸಾಂಗ್ ಕೇಳಿದ ಪ್ರಶಾಂತ್ ನೀಲ್ ಸರ್ ಅವರು ನನ್ನ ಮೇಲೆ ನಂಬಿಕೆ ಇರಿಸಿ 'ಕೆಜಿಎಫ್' ಚಿತ್ರದಲ್ಲಿ ಹಾಡನ್ನು ಬರೆಯಲು ಅವಕಾಶ ಮಾಡಿಕೊಟ್ಟರು. ಹಾಡಿನ ಪ್ರತಿಪದ, ಪ್ರತಿ ಸೆಂಟೆನ್ಸ್ ಪರ್ಫೆಕ್ಟಾಗಿ ಅವರಿಗೆ ಕನ್ವೆನ್ಸ್ ಆಗೋವರೆಗೂ ಬರೆಯುತ್ತಲೇ ಇದ್ದೆ. ಪ್ರಶಾಂತ್ ನೀಲ್ ಸರ್ ಜೊತೆ ಕೆಲಸ ಮಾಡಿದ ಅನುಭವ ಮರೆಯಲಾಗದು. ನನ್ನ ಮೇಲೆ ನಂಬಿಕೆ ಇಟ್ಟು 'ಕೆಜಿಎಫ್' ಚಿತ್ರದಲ್ಲಿ ಹಾಡು ಬರೆಯಲು ಅವಕಾಶ ಮಾಡಿಕೊಟ್ಟ ನನ್ನ ಗುರುಗಳಾದ ರವಿ ಬಸ್ರೂರು ಮತ್ತು ಪ್ರಶಾಂತ್ ನೀಲ್ ಸರ್ ಅವರಿಗೆ ನಾನು ಆಭಾರಿಯಾಗಿದ್ದೇನೆ.
ಫಿಲ್ಮಿಬೀಟ್ ಕನ್ನಡ: ಮುಂಬರುವ 'ಕೆಜಿಎಫ್-2' ಚಿತ್ರದಲ್ಲಿ ನಿಮ್ಮ ಸಾಹಿತ್ಯ ಮತ್ತು ಅದರ ಅನುಭವ?
ಕಿನ್ನಾಳ ರಾಜ್: 'ಕೆಜಿಎಫ್-2' ಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಮಾಹಿತಿಯನ್ನು ಈ ಹಂತದಲ್ಲಿ ಹಂಚಿಕೊಳ್ಳಲಾರೆ. ಆದರೆ ಒಂದು ಮಾತಂತೂ ಸತ್ಯ 'ಕೆಜಿಎಫ್-2' ಕನ್ನಡಿಗರು ಹೆಮ್ಮೆಪಡುವಂತಹ ಅದ್ಭುತ ಚಿತ್ರ ಅಂತ ಮಾತ್ರ ಈ ಸಂದರ್ಭದಲ್ಲಿ ಹೇಳಬಲ್ಲೆ. ನಾನು ಕೂಡ ಎಲ್ಲರಂತೆ 'ಕೆಜಿಎಫ್-2' ಚಿತ್ರವನ್ನು ಬೆಳ್ಳಿ ತೆರೆಯ ಮೇಲೆ ನೋಡಲು ಕಾತರದಿಂದ ಎದುರು ನೋಡುತ್ತಿದ್ದೇನೆ.
ಫಿಲ್ಮಿಬೀಟ್ ಕನ್ನಡ: ಚಿತ್ರ ಸಾಹಿತಿಯಿಂದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದೀರಿ. ನಿಮ್ಮ ನಿರ್ದೇಶನದ ಮೊದಲ ಚಿತ್ರ 'ಹಿಟ್ಲರ್ ' ಬಗ್ಗೆ ವಿಶೇಷತೆಗಳ ಬಗ್ಗೆ ಹೇಳಿ?
ಕಿನ್ನಾಳ ರಾಜ್: ನಾನು ಕಿನ್ನಾಳ ದಿಂದ ಬೆಂಗಳೂರಿಗೆ ಹೊರಟು ಬಂದಿದ್ದೆ ನಿರ್ದೇಶಕನಾಗಲು. ಈಗ ಆ ಕನಸು ನನಸಾಗುವ ಸಮಯ ಬಂದಿದೆ. 'ಹಿಟ್ಲರ್' ಚಿತ್ರದ ಮೂಲಕ ನಾನು ಮೊದಲ ಬಾರಿಗೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿದ್ದೇನೆ. ಈ ಚಿತ್ರವನ್ನು ನೋಡಿ ಆಶೀರ್ವದಿಸಬೇಕೆಂದು ನಾನು ಪ್ರತಿಯೊಬ್ಬ ಕನ್ನಡಿಗರಲ್ಲಿ ಈ ಮೂಲಕ ಮೊದಲನೆಯದಾಗಿ ಕೋರುತ್ತಿದ್ದೇನೆ. ಇನ್ನು 'ಹಿಟ್ಲರ್' ಚಿತ್ರಕ್ಕೆ ಬರುವುದಾದರೆ ಇದು ರೌಡಿಯೊಬ್ಬನ ಬದುಕಿನ ಸುತ್ತಲೂ ಹೆಣೆಯಲಾಗಿರುವ ಕಥೆ. ಹಾಗಂತ ಇದರಲ್ಲಿ ಅತಿಯಾದ ಕ್ರೌರ್ಯ, ದ್ವಂದ್ವಾರ್ಥದ ಸಂಭಾಷಣೆಗಳು ಕಾಣುವುದಿಲ್ಲ. ಮಾನವೀಯ ಸಂಬಂಧಗಳು, ಅಣ್ಣ-ತಂಗಿಯ ಸೆಂಟಿಮೆಂಟ್, ವಾಸ್ತವಕ್ಕೆ ಹತ್ತಿರವೆನಿಸುವ ಸ್ಕ್ರೀನ್ ಪ್ಲೇ ಮೂಲಕ ಸಿನಿಮಾ ತಯಾರಿಸಲಾಗಿದೆ. ಇದು ಎಲ್ಲಾ ವರ್ಗದ ಜನರಿಗೂ ಕೂಡ ಇಷ್ಟವಾಗುತ್ತದೆ ಅಂತ ಆತ್ಮವಿಶ್ವಾಸದಿಂದ ಹೇಳಬಲ್ಲೆ.
ಫಿಲ್ಮಿಬೀಟ್ ಕನ್ನಡ: 'ಹಿಟ್ಲರ್' ಚಿತ್ರದ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಬಗ್ಗೆ ಒಂದೆರಡು ವಿಷಯ ಹೇಳಬಲ್ಲಿರಾ?
ಕಿನ್ನಾಳ ರಾಜ್: 'ಹಿಟ್ಲರ್' ಚಿತ್ರದಲ್ಲಿ ಲೋಹಿತ್ ಅವರು ನಾಯಕನಟರಾಗಿ ನಟಿಸುತ್ತಿದ್ದು. ಅವರ ಸಹಕಾರದಿಂದಲೇ ನಾನು ನಿರ್ದೇಶಕನಾಗಿ ಈ ಚಿತ್ರ ಮಾಡಲು ಸಾಧ್ಯವಾಗಿದೆ. ತುಂಬಾ ಕಷ್ಟಪಟ್ಟು ಮೇಲೆ ಬಂದಿರುವ ವ್ಯಕ್ತಿ ಅವರು. ಮೂಲತಃ ಬಸ್ ಕಂಡಕ್ಟರ್ ಆಗಿದ್ದ ಅವರು ಇಂದು ಈ ಚಿತ್ರದ ನಾಯಕ ಜೊತೆಗೆ ನಿರ್ಮಾಪಕರು ಕೂಡ ಆಗಿದ್ದಾರೆ. ಈ ಚಿತ್ರದ ನಿರ್ಮಾಣದಲ್ಲಿ ಅವರ ಪಾತ್ರ ತುಂಬಾ ಪ್ರಮುಖವಾದದ್ದು. 'ಸಾಸ್ಯ' ಚಿತ್ರದ ನಾಯಕ ನಟಿಯಾಗಿ ನಟಿಸಿದ್ದಾರೆ. ಬಾಲ್ ರಾಜ್ ವೈದಿ, ವಿಜಯ್ ಚಂಡೂರು ಮುಂತಾದ ಹಿರಿಯ ಮತ್ತು ಹೊಸ ಕಲಾವಿದರು ವಿಶೇಷವಾಗಿ ರಂಗಭೂಮಿಯ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಇನ್ನು ಬಾಲ ಕೋಗಿಲೆ ಅರ್ಜುನ್ ಇಟಗಿ ಇದರಲ್ಲಿ ಜೂನಿಯರ್ ಹಿಟ್ಲರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ತಾಂತ್ರಿಕ ವರ್ಗಕ್ಕೆ ಬರುವುದಾದರೆ,ಆಕಾಶ್ ಪರ್ವ ಅವರ ಸಂಗೀತ, G V. ನಾಗರಾಜ್ ಅವರ ಛಾಯಾಗ್ರಹಣ,ಗಣೇಶ್ ತೋರಗಲ್ ಅವರ ಸಂಕಲನವಿದೆ.
ಚಿತ್ರದ ಹಾಡುಗಳು, ಟೀಸರ್ ಮತ್ತು ಟ್ರೈಲರ್ಗೆ ಈಗಾಗಲೇ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರ ಬಿಡುಗಡೆಯಾದ ಮೇಲೆ ಖಂಡಿತ ಜನರು ಈ ನಮ್ಮ ಚಿತ್ರ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ.
ಫಿಲ್ಮಿಬೀಟ್ ಕನ್ನಡ: ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ?
ಕಿನ್ನಾಳ ರಾಜ್: ನವೆಂಬರ್ 12ರಂದು ದೊಡ್ಡ ಮಟ್ಟದಲ್ಲಿ 'ಹಿಟ್ಲರ್' ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಹೊಸ ಪ್ರಯತ್ನಕ್ಕೆ ಜನರು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕೆಂದು ಮತ್ತೊಮ್ಮೆ 'ಫಿಲ್ಮಿಬೀಟ್ ಕನ್ನಡ' ಮೂಲಕ 'ಹಿಟ್ಲರ್' ಚಿತ್ರ ತಂಡದ ಪರವಾಗಿ ಕೋರುತ್ತಿದ್ದೇನೆ.
ಫಿಲ್ಮಿಬೀಟ್ ಕನ್ನಡ: ನಿಮ್ಮ ಮುಂದಿನ ಯೋಜನೆಗಳು ಯಾವುವು?
ಕಿನ್ನಾಳ ರಾಜ್: ಚಿತ್ರದ ಟ್ರೈಲರ್ ನೋಡಿ ನನ್ನ ನಿರ್ದೇಶನದ ಮೇಲೆ ಭರವಸೆ ಮೂಡಿ ಒಂದಷ್ಟು ನಿರ್ಮಾಪಕರು ಚಿತ್ರ ನಿರ್ಮಿಸಲು ಮುಂದೆ ಬಂದಿದ್ದಾರೆ, ಆದರೆ ಸದ್ಯಕ್ಕೆ ಯಾವುದನ್ನು ಇನ್ನೂ ಅಂತಿಮಗೊಳಿಸಿಲ್ಲ. ಪ್ರಸ್ತುತ ನಾನು ಪ್ರಿಯಾಂಕ ಉಪೇಂದ್ರ ಅಭಿನಯದ ಚಿತ್ರವೊಂದಕ್ಕೆ ಸಾಹಿತ್ಯ ಮತ್ತು ಸಂಭಾಷಣೆ ಬರೆಯುತ್ತಿದ್ದೇನೆ. ನವೆಂಬರ್ 12ರಂದು ರಾಜ್ಯದಾದ್ಯಂತ 'ಹಿಟ್ಲರ್' ಚಿತ್ರ ಬಿಡುಗಡೆಯಾಗುತ್ತಿದೆ.