ನನ್ನ ಮೊದಲ ಸಿನಿಮಾ : ಬೀದಿ ಬೀದಿ ಸುತ್ತಿ ಸಿನಿಮಾ ಮಾಡಿದ್ದರು ಮಂಜು ಸ್ವರಾಜ್
ಒಂದು ಸಿನಿಮಾದ ಹಿಂದೆ ಅನೇಕ ರೋಚಕ ಕಥೆಗಳು ಇರುತ್ತದೆ. ಅದೇ ರೀತಿ ನಿರ್ದೇಶಕ ಮಂಜು ಸ್ವರಾಜ್ ಅವರ ಮೊದಲ ಸಿನಿಮಾದ ತೆರೆ ಹಿಂದಿನ ಕಥೆ ಸಖತ್ ಕುತೂಹಲಕಾರಿಯಾಗಿದೆ. ಶಿವರಾಜ್ ಕುಮಾರ್, ಗಣೇಶ್ ರೀತಿಯ ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳಿದ್ದ ಮಂಜು ಸ್ವರಾಜ್ ಅವರ ಮೊದಲ ಸಿನಿಮಾ 'ಶಿಶಿರ' ಆಗಿತ್ತು.
ಸಿನಿಮಾ ಮಾಡುವ ಕನಸು ಹೊಂದಿದ್ದ ಮಂಜು ಸ್ವರಾಜ್ ಶತಾಯ ಗತಾಯ ಸಿನಿಮಾ ಮಾಡಲು ಹೊರಟರು. ಗೋಲಿ ಆಡುವ ಹುಡುಗರ ರೀತಿ ಇದ್ದಾರೆ ಎಂದೆಲ್ಲ ಎಷ್ಟೋ ಜನರು ಆಡಿಕೊಂಡಿದ್ದರು. ಆದರೆ, ಮನೆ ಮನೆಗೆ ತಿರುಗಿ ಬೀದಿಯಲ್ಲಿ ಬೀದಿಯಲ್ಲಿ ನಿರ್ಮಾಪಕರನ್ನು ಹುಡುಕಿದ ಅವರು ಅಂತು ಸಿನಿಮಾ ಮಾಡಿದ್ದರು.
ಅಂದಹಾಗೆ, ನಿರ್ದೇಶಕ ಮಂಜು ಸ್ವರಾಜ್ ಅವರ ಮೊದಲ ಸಿನಿಮಾ 'ಶಿಶಿರ' ಹುಟ್ಟಿದ ಕಥೆ ಮುಂದಿದೆ ಓದಿ...

ಮೊದಲ ಥಾಟ್ ಬಂದಿದ್ದು ಹೀಗೆ
''ನಾನು ಡಿಗ್ರಿ ಓದುವಾಗ ಒಂದು ಶಾರ್ಟ್ ಫಿಲ್ಮ್ ಮಾಡಬೇಕು ಅಂತ ಪ್ಲಾನ್ ಮಾಡಿದ್ವಿ. ಆಗ ನಮ್ಮ ಬಳಿ ಅಷ್ಟೊಂದು ಹಣ ಇರಲಿಲ್ಲ. ಬೇರೆ ಬೇರೆ ಲೊಕೇಶನ್ ನಲ್ಲಿ ಶೂಟಿಂಗ್ ಮಾಡಲು ಆಗುವುದಿಲ್ಲ ಎಂದು ತಿಳಿದು ಒಂದೇ ಮನೆಯಲ್ಲಿ ಒಬ್ಬ ಕಲಾವಿದನನ್ನು ಇಟ್ಟುಕೊಂಡು ಶೂಟ್ ಮಾಡಿದರೆ ಹೇಗೆ ಎನ್ನುವ ಥಾಟ್ ಬಂತು. ನಮ್ಮ ಮನೆಯಲ್ಲಿ ನೀನು ಸಿನಿಮಾದಲ್ಲಿ ಏನಾದರೂ ಮಾಡುವುದಾದರೆ ಎರಡು ವರ್ಷದಲ್ಲಿ ಮಾಡು ಎಂದು ಟೈಂ ಕೊಟ್ಟಿದ್ದರು. ಆ ಸಮಯದ ಒಳಗೆ ಸಿನಿಮಾ ಮಾಡದಿದ್ದರೆ ನಾನು ಮತ್ತೆ ಓದು ಮುಂದುವರೆಸಬೇಕಿತ್ತು.''

ನಾಗತಿಹಳ್ಳಿ ಚಂದ್ರಶೇಖರ ಸರ್ ಬಳಿ ಕೆಲಸ ಮಾಡಿದ್ದೆ
''ನಾಗತಿಹಳ್ಳಿ ಚಂದ್ರಶೇಖರ ಸರ್ ಅವರ 'ಅಮೃತಧಾರೆ' ಸಿನಿಮಾಗೆ ನಾನು ಕೆಲಸ ಮಾಡಿದ್ದೆ. ಆ ಸಿನಿಮಾದ ನಂತರ ನಾನೇ ಒಂದು ಸಿನಿಮಾ ಮಾಡಬೇಕು ಎಂದಾಗ ಮತ್ತೆ ನನ್ನ ಶಾರ್ಟ್ ಮೂವಿ ಕಾನ್ಸೆಪ್ಟ್ ನಲ್ಲಿಯೇ ಸಿನಿಮಾ ಮಾಡಿದರೆ ಹೇಗೆ ಅನಿಸಿತು. 12 ಗಂಟೆಗಳಲ್ಲಿ ಒಬ್ಬ ಮನುಷ್ಯನ ಮನಸ್ಥಿತಿ ಹೇಗೆ ಬದಲಾಗುತ್ತದೆ ಎನ್ನುವ ಸೈಕಾಲಜಿಕಲ್ ಕಥೆ ಮಾಡಿಕೊಂಡೆ. ನಿಮಾನ್ಸ್ ಡೈರೆಕ್ಟರ್ ಚಂದ್ರಶೇಖರ್ ಹಾಗೂ ಶಿವಮೊಗ್ಗದಲ್ಲಿ ಡಾ.ಅಶೋಕ್ ಪೈ ಅವರ ಬಳಿ ಮಾಹಿತಿ ಕಲೆ ಹಾಕಿದೆ.''

ರಾತ್ರಿ ಕೂತು ದೆವ್ವ ಇದೆಯಾ ಅಂತ ಪರೀಕ್ಷೆ ಮಾಡಿದ್ದೆ
''ಶಿಕಾರಿಪುರ, ಸೂಳೆಕೆರೆ ಹಾಗೂ ಜಯನಗರದ ಒಂದು ಪಾಳು ಮನೆಯಲ್ಲಿ ರಾತ್ರಿ ಕೂತು ದೆವ್ವ ಇದೆಯಾ?, ನನಗೆ ಆಗುವ ಅನುಭವವನ್ನು ಸಿನಿಮಾ ಮಾಡಬೇಕು ಅಂತ ಹೊರಟೆ. ಸೈಕಾಲಜಿಕಲ್ ಆಗಿ ಒಂದು ಒಳ್ಳೆಯ ಸಿನಿಮಾ ಮಾಡಬೇಕು ಎಂದು ತುಂಬ ರಿಸರ್ಚ್ ಮಾಡಿದೆ. ಒಬ್ಬ ಮನುಷ್ಯನಿಗೆ ಯಾಕೆ ಹುಚ್ಚು ಹಿಡಿಯುತ್ತದೆ?, ನಿಜವಾಗಿಯೂ ಅಗೋಚರ ಶಕ್ತಿ ಎನ್ನುವುದು ಇದೆಯಾ?, ಯಾಕೆ ದೇವರನ್ನು ನಂಬುತ್ತೇವೆ? ಈ ರೀತಿ ತುಂಬ ಮಾಹಿತಿಗಳನ್ನು ಓದಿದೆ.''

ಇನ್ನೂ ಮೀಸೆ ಗಡ್ಡ ಕೂಡ ಸರಿಯಾಗಿ ಬಂದಿರಲಿಲ್ಲ
''ನಮಗೆ ಇನ್ನೂ ಮೀಸೆ ಗಡ್ಡ ಕೂಡ ಸರಿಯಾಗಿ ಬಂದಿರಲಿಲ್ಲ ಆಗಲೇ ನಿರ್ಮಾಪಕರನ್ನು ಹುಡುಕುವುದಕ್ಕೆ ಶುರು ಮಾಡಿದ್ವಿ. 35 ರಿಂದ 40 ಜನ ನಿರ್ಮಾಪಕರನ್ನು ಸಂಪರ್ಕ ಮಾಡಿದ್ವಿ. ಆದರೆ ಯಾರು ಬಂಡವಾಳ ಹಾಕಲು ಮುಂದೆ ಬರಲಿಲ್ಲ. ಸಿನಿಮಾಗೆ 85 ಲಕ್ಷ ಬೇಕಿತ್ತು. ಆಗ ನನಗೆ ಮತ್ತು ಅಜನೀಶ್ ಲೋಕನಾಥ್ ಇಬ್ಬರಿಗು cord funding ಸಿನಿಮಾ ಮಾಡೋಣ ಎನ್ನುವ ಪ್ಲಾನ್ ಬಂತು. ಆಗ ಅದು ಕನ್ನಡಕ್ಕೆ ಬಹಳ ಹೊಸತಾಗಿತ್ತು. ಅದಕ್ಕೆ ತುಂಬ ಕಾನೂನು ಇದೆ ಎಂದು ನಮ್ಮ ಸ್ನೇಹಿತ ಹಾಗೂ ಕುಟುಂಬದಲ್ಲಿಯೇ ಹಣ ಹುಡುಕಲು ಪ್ರಯತ್ನ ಮಾಡಿದ್ವಿ.''

ಕಮಲ್ ಹಾಸನ್ ಮಾಡುವ ರೀತಿಯ ಕಥೆ ಎಂದಿದ್ದರು
''ಆಗ ಒಬ್ಬ ನಟ ಒಂದೆರಡು ಸಿನಿಮಾ ಮಾಡಿ ಒಳ್ಳೆಯ ಹೆಸರು ಮಾಡಿದ್ದರು. ಅವರಿಗೆ ಕಥೆ ಹೇಳಿದ್ವಿ. ಅವರು ಖುಷಿ ಆಗಿ ಇದು ಕಮಲ್ ಹಾಸನ್ ನಟನೆ ಮಾಡುವ ಸಿನಿಮಾದ ರೀತಿಯ ಕಥೆ ಎಂದರು. ಕಥೆ ಕೇಳಿ ಬಳಿಕ ಒಪ್ಪಿದರು. ಆದರೆ, ಅವರಿಗೆ ಇನ್ನೊಂದು ಸಿನಿಮಾ ಸಿಕ್ತು ಎಂಬ ಕಾರಣಕ್ಕೆ ನಮ್ಮ ಸಿನಿಮಾ ಬಿಟ್ಟರು. ಮತ್ತೆ ನಮಗೆ ಹಿನ್ನಡೆ ಆಯ್ತು.''

ಮನೆ ಮನೆಗೆ ಸೇಲ್ಸ್ ಮ್ಯಾನ್ ರೀತಿ ಹೋಗಿದ್ದೇವೆ
''ಚಿತ್ರಕ್ಕೆ ಹಾಡು ರೆಡಿ ಮಾಡಿಕೊಡ್ವಿ. ಒಂದು ಫೈಲ್ ಮಾಡಿಕೊಂಡು ಅದರಲ್ಲಿ ಸಿನಿಮಾ ಕಥೆ, ಬಜೆಟ್, ಹಾಡುಗಳ ಟ್ಯೂನ್ ಸಿಡಿ ಹೀಗೆ ಎಲ್ಲವನ್ನು ಇಟ್ಟುಕೊಂಡು ಯಾರೇ ಶ್ರೀಮಂತರು ಅನಿಸಿದರು ಅವರಿಗೆ ಕಥೆ ಹೇಳುತಿದ್ವಿ. ಕುಮಾರಸ್ವಾಮಿ ಲೇ ಔಟ್ ನಲ್ಲಿ ದೊಡ್ಡ ದೊಡ್ಡ ಮನೆಗೆ ಸೇಲ್ಸ್ ಮ್ಯಾನ್ ರೀತಿ ಹೋಗಿದ್ದೇವೆ. ತುಂಬ ಮನೆಯಲ್ಲಿ ನಮ್ಮನ್ನು ನೋಡಿ ನಾಯಿಗಳನ್ನು ಬಿಟ್ಟಿದ್ದಾರೆ. ನಂತರ ಕುರುಬರ ಹಳ್ಳಿಯಲ್ಲಿ ರಮೇಶ್ ಅಂತ ಒಬ್ಬರಿಗೆ ಕಥೆ ಹೇಳಿದ್ವಿ. ಅವರು ಅವರ ಫ್ರೆಂಡ್ಸ್ ಗಳ ಜೊತೆಗೆ ತಮಾಷೆಯಾಗಿ ಮಾತನಾಡುತ್ತ ನಮ್ಮ ಬಗ್ಗೆ ಹೇಳಿದ್ದರು''

ಗೋಲಿ ಆಡುವ ಹುಡುಗರು ಎಂದಿದ್ದರು
''ಆ ಗುಂಪಿನಲ್ಲಿ ಒಬ್ಬರು ನಮ್ಮನ್ನು ಕರೆಸಿದರು. ಅಲ್ಲಿಗೆ ಹೋದಾಗ ಕೆಲವರು ಗೋಲಿ ಆಡುವ ಹುಡುಗರು ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ ಎಂದು ಆಡಿಕೊಳ್ಳುತ್ತಿದ್ದರು. ನಾನು ಶ್ರದ್ದೆಯಿಂದ ಕಥೆ ಹೇಳಿದೆ. ಅವರು ತುಂಬ ಇಷ್ಟಪಟ್ಟು ಹಣ ಹಾಕಲು ಮುಂದೆ ಬಂದರು. ಅದಾಗಲೇ, ಮನೆಯಲ್ಲಿ ನೀಡಿದ್ದ ಟೈಂ ಆಗುತ್ತಾ ಬಂದಿತ್ತು. ಆದರೆ, ನಾಗತಿಹಳ್ಳಿ ಸರ್ ಎರಡು ವರ್ಷದಲ್ಲಿ ಯಾರು ಸಾಧನೆ ಮಾಡುವುದಕ್ಕೆ ಆಗಲ್ಲ ಅಂತ ಅವರಿಗೆ ಸ್ಪಲ್ಪ ಸಮಯ ಕೊಡಿ ಎಂದು ನಮ್ಮ ಮನೆಯಲ್ಲಿ ಹೇಳಿದ್ದರು.''

ಜೋರು ಮಳೆಯಲ್ಲೇ ಬೈಕ್ ನಲ್ಲಿ ಹೋದ್ವಿ
''ಕೆಲವು ದಿನಗಳ ನಂತರ ನಿರ್ಮಾಪಕರು ಬರಲು ಹೇಳಿದ್ದರು. ಅವರು ಹೇಳಿದ್ದ ಸಮಯಕ್ಕೆ ಹೋಗಬೇಕು ಎಂಬ ಕಾರಣಕ್ಕೆ ಮಳೆಯಲ್ಲೇ ಬೈಕ್ ನಲ್ಲಿ ನಾನು ಅಜನೀಶ್ ಹೋದ್ವಿ. ಜೋರು ಮಳೆಯಲ್ಲಿ ನೆನೆದು ಅವರ ಮನೆ ತಲುಪಿದರೆ ಪ್ಯಾಂಟ್ ನಿಂದ ನೀರು ಹರಿಯುತ್ತಿತ್ತು. ನಮ್ಮನ್ನು ನೋಡಿ ಅವರು ಕೂಡ ಸಿನಿಮಾ ಮಾಡಲು ಒಪ್ಪಿಕೊಂಡರು.''

ಬಳಿಕ ಪ್ರೇಮಾ ಮೇಡಂ ಅವರನ್ನು ಸಂಪರ್ಕ ಮಾಡಿದ್ವಿ
''ಆಮೇಲೆ ಪ್ರೇಮಾ ಮೇಡಂ ಅವರನ್ನು ಸಂಪರ್ಕ ಮಾಡಿದ್ವಿ ಅವರು ಕೂಡ ಒಪ್ಪಿಕೊಂಡರು. 'ಆಪ್ತಮಿತ್ರ' ನಂತರ ಅವರು ಯಾವ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಇದು ಅವರ ಕಮ್ ಬ್ಯಾಕ್ ಸಿನಿಮಾದ ರೀತಿ ಇತ್ತು. ಯಶಸ್ ಅವರು ಹೀರೋ ಅಂತ ಆಯ್ತು. ಸಿನಿಮಾ ಶುರುವಾಗಿ 20 ದಿನಕ್ಕೆ ನನಗೆ ತುಂಬ ಹುಷಾರಿಲ್ಲದ ಹಾಗೆ ಆಯ್ತು. ಅರ್ಧ ಸಿನಿಮಾಗೆ ನಿಲ್ಲಿಸಿದರೆ ಅದು ಏನಾಗುತ್ತದೆಯೋ ಎಂದು ಸಿನಿಮಾ ಮಾಡಿದೆ. ಪ್ರತಿದಿನ ಬೆಳ್ಳಗೆ ಆಸ್ಪತ್ರೆಗೆ ಹೋಗಿ ಶೂಟಿಂಗ್ ಗೆ ಬರುತ್ತಿದೆ. ಸಿನಿಮಾ ಮುಗಿಯುವ ಹೊತ್ತಿಗೆ ಪೇಶಂಟ್ ತರ ಆಗಿದ್ದೆ.''

ಭಾರತದಲ್ಲಿಯೇ ಮೊದಲ ಸಿಂಗಲ್ ಶಾಟ್ ಹಾಡು
''ಸಿನಿಮಾದಲ್ಲಿ ಒಂದು ಹಾಡಿತ್ತು ಅದು ಸಿಂಗಲ್ ಶಾಟ್ ನಲ್ಲಿ ತೆಗೆದಿದ್ವಿ. ಭಾರತದಲ್ಲಿಯೇ ಮೊದಲ ಸಿಂಗಲ್ ಶಾಟ್ ಹಾಡು ಇದಾಗಿತ್ತು. ಆದರೆ, ಅದನ್ನು ಆ ಸಮಯದಲ್ಲಿ ಸರಿಯಾಗಿ ಪ್ರಮೋಟ್ ಮಾಡಿಕೊಳ್ಳಲಿಲ್ಲ. 'ಮೇ ಹೂ ನಾ' ಎಂಬ ಶಾರೂಖ್ ಖಾನ್ ಅವರ ಸಿನಿಮಾದಲ್ಲಿ 2 ನಿಮಿಷ 18 ಸೆಕೆಂಡ್ ಹಾಡು ಸಿಂಗಲ್ ಶಾಟ್ ನಲ್ಲಿ ತೆಗೆದಿದ್ದರು. ನಮ್ಮ ಹಾಡು 3 ನಿಮಿಷ 50 ಸೆಕೆಂಡ್ ಇತ್ತು.''

ಇವತ್ತೂ 'ಶಿಶಿರ' ರೀತಿಯ ಸಿನಿಮಾ ಮಾಡಿ ಎನ್ನುತ್ತಾರೆ
''ಎಲ್ಲ ಕಷ್ಟಗಳ ನಂತರ ಸಿನಿಮಾ ರಿಲೀಸ್ ಆಯ್ತು. ಆದರೆ, ಚಿತ್ರದ ರಿಲೀಸ್ ಸಮಯ ಸರಿ ಇರಲಿಲ್ಲ. ಆ ಟೈಂ ನಲ್ಲಿ 'ಥ್ರೀ ಇಡಿಯಟ್ಸ್' ಸಿನಿಮಾ ಬಂದಿತ್ತು. ಪುನೀತ್ ಅವರ 'ರಾಮ್' ಸಿನಿಮಾ, ಗಣೇಶ್ ಅವರ 'ಮಳೆಯಲಿ ಜೊತೆಯಲಿ' ಸಿನಿಮಾ ಚೆನ್ನಾಗಿ ಓಡುತ್ತಿತ್ತು. ಈ ಚಿತ್ರಗಳ ನಡುವೆ ನಮ್ಮ ಸಿನಿಮಾ ಜನರಿಗೆ ತಲುಪುವ ಮುನ್ನವೇ ಚಿತ್ರಮಂದಿರದಿಂದ ತೆಗೆದರು. ಸಿನಿಮಾ ಏನೇ ಆಗಿರಬಹುದು ಆದರೆ, ಇವತ್ತೂ ನನ್ನನ್ನು ಅನೇಕರು 'ಶಿಶಿರ' ರೀತಿಯ ಸಿನಿಮಾ ಮಾಡಿ ಎಂದು ಕೇಳುತ್ತಾರೆ. ಆಮೇಲೆ ಆ ಸಿನಿಮಾ ಬೇರೆ ಭಾಷೆಗಳಿಗೆ ಡಬ್, ರಿಮೇಕ್
ಗಿದೆ. ಈ ಸಿನಿಮಾ ನನಗೆ ತುಂಬ ಖುಷಿ ನೀಡಿದ ಸಿನಿಮಾ.''


Click it and Unblock the Notifications











