ಅನಾರೋಗ್ಯದ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್!
Recommended Video
ಮಾರು ದಶಕಗಳ ಸಿನಿಮಾ ಬದುಕಿನಲ್ಲಿ ಸ್ಟಾರ್ ಆಗಿಯೇ ಮೆರೆಯುತ್ತಿರುವವರು ಡಾ. ಶಿವರಾಜ್ ಕುಮಾರ್. ಅದೇ ವೇಳೆ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಮತ್ತು ಧಾರಾವಾಹಿಗಳ ನಿರ್ಮಾಪಕರಾಗಿಯೂ ಗುರುತಿಸಿಕೊಂಡವರು. ಇತ್ತೀಚೆಗೆ ವೆಬ್ ಸೀರೀಸ್ ನಿರ್ಮಿಸಿ ಕೂಡ ಸುದ್ದಿಯಾಗಿರುವ ಶಿವಣ್ಣ ಸದ್ಯದಲ್ಲೇ ತಾವು ಸ್ವತಃ ನಟಿಸುವ ವೆಬ್ ಸೀರೀಸ್ ಹೊರತರಲು ಸಜ್ಜಾಗಿದ್ದಾರೆ.
ಇಷ್ಟು ಕೆಲಸಗಳ ನಡುವೆ ತಮ್ಮ ಆರೋಗ್ಯದ ಬಗ್ಗೆ ಶಿವಣ್ಣ ಗಮನ ನೀಡುತ್ತಿದ್ದಾರೆ. ಶಿವಣ್ಣನಿಗೆ ಭುಜದ ನೋವು ಹೆಚ್ಚಾಗಿದ್ದು, ಅದರ ಚಿಕಿತ್ಸೆಗೆ ಲಂಡನ್ ಗೆ ಹೋಗುತ್ತಿದ್ದಾರೆ. ಈ ಕಾರಣ ಈ ವರ್ಷದ ಹುಟ್ಟುಹಬ್ಬದ ಕೂಡ ಆಚರಣೆ ಮಾಡುತ್ತಿಲ್ಲ.
ಅಂದಹಾಗೆ, ಶಿವಣ್ಣ ನಟನೆಯ 'ರುಸ್ತುಂ' ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದ್ದು, ಇದರ ಪತ್ರಿಕಾಗೋಷ್ಠಿ ಇತ್ತೀಚಿಗೆ ನಡೆಯಿತು. ಈ ಚಿತ್ರದ ನಾಯಕರಾಗಿರುವ ಶಿವಣ್ಣ, ಮಾಧ್ಯಮದ ಮಿತ್ರರ ಜತೆಗೆ ಹಂಚಿಕೊಂಡ 'ರುಸ್ತುಂ 'ಹೊರತಾದ ವಿಶೇಷ ವಿವರಗಳು ಇಲ್ಲಿವೆ. ಮುಂದೆ ಓದಿ...

ಚಿಕಿತ್ಸೆಗಾಗಿ ಫ್ಯಾಮಿಲಿ ಜತೆ ಲಂಡನ್ ಗೆ ಪ್ರಯಾಣ
ಜುಲೈ ಆಗಸ್ಟ್ ನಲ್ಲಿ ಸಂಪೂರ್ಣ ರೆಸ್ಟ್ ನಲ್ಲಿರುತ್ತೇನೆ. ಬಹುಶಃ ಸಪ್ಟೆಂಬರ್ ವೇಳೆಗೆ ಸಣ್ಣಪುಟ್ಟ ಸನ್ನಿವೇಶಗಳಲ್ಲಿ ನಟಿಸಬಹುದು. ನವೆಂಬರ್ ಬಳಿಕ ಸಂಪೂರ್ಣ ಗುಣಮುಖನಾಗುವ ಭರವಸೆ ಇದೆ. ಆಮೇಲೆ 'ಭಜರಂಗಿ 2'ರ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ಇರುತ್ತದೆ. ಸಂಪೂರ್ಣ ನನ್ನ ಅನಾರೋಗ್ಯದ ಕೇಸ್ ಅನ್ನು ಮಗಳು ಮತ್ತು ಗೀತ ಹ್ಯಾಂಡಲ್ ಮಾಡುತ್ತಿದ್ದಾರೆ. ಲಂಡನ್ ಗೆ ನನ್ನ ಜತೆ ಮಧು, ಪುನೀತ್, ಗೀತಾ ಮತ್ತು ಚಿಕ್ಕ ಮಗಳು ಎಲ್ಲ ಬರುತ್ತಾರೆ.

'ಭಜರಂಗಿ 2' ಗೆ ಸದ್ಯ ಸಣ್ಣ ಬ್ರೇಕ್
'ಭಜರಂಗಿ 2' ಚಿತ್ರದಲ್ಲಿ ಈಗಾಗಲೇ ಹದಿನೈದು ದಿನಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಅದು ಸೆಟ್ ಹಾಕಿರುವುದರಿಂದ, ಆ ಸೆಟ್ ತುಂಬ ಮುಖ್ಯವಾಗಿರುವುದರಿಂದ ನಟಿಸಿದ್ದೇನೆ. ಕೀ ಹೋಲ್ ಸರ್ಜರಿ ಆದ ಬಳಿಕ ಬಹುಶಃ ಮೂರು ತಿಂಗಳು ಪ್ರಾಪರ್ ರೆಸ್ಟ್ ಮಾಡಬೇಕಿದೆ.

ಸುಮ್ಮನಿದ್ದಾಗಲೇ ನೋವು ಕಾಣಿಸೋದು!
ಫೈಟ್ ಮಾಡುವ ಸಂದರ್ಭದಲ್ಲಿ ಆ ಬಗ್ಗೆ ಗಮನ ನೀಡಲ್ಲ. ಯಾಕೆಂದರೆ, ಅದನ್ನು ಕ್ಯಾರೇ ಮಾಡಿರಲ್ಲ. ಸಾಮಾನ್ಯವಾಗಿ ರಾತ್ರಿ ಮಲಗುವಾಗ ಒಂದೇ ಕಡೆ ಮೈ ಮಾಡಿರಲ್ಲ. ಹೊರಳಾಡುತ್ತ ಮಲಗೋದೇ ಅಭ್ಯಾಸ. ಆದರೆ, ಆ ಘಟನೆ ಆದ ಬಳಿಕ ಹೊರಳಾಟದಲ್ಲಿ ನೋವು ಕಾಣುವಂತಾಗುತ್ತದೆ. ನಿದ್ದೆ ಮಾತ್ರವಲ್ಲ, ಸುಮ್ಮನಿದ್ದರೂ ಭುಜದಲ್ಲಿ ನೋವು ಮೂಡುತ್ತದೆ.

ಫೋನಲ್ಲೇ ಧೈರ್ಯ ತುಂಬಿದ ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆಯವರು ಕೂಡ ನನ್ನಲ್ಲಿ ಮಾತನಾಡಿದರು. ನಾನೇ ನಮ್ಮ ಫಿಸಿಯೋಥೆರಪಿಸ್ಟ್ ನ ಕಳಿಸಿ ಕೊಡುತ್ತೇನೆ. ನೀವು ಆದಷ್ಟು ಬೇಗ ಸುಧಾರಿಸಿಕೊಳ್ಳುತ್ತೀರಿ. ಯಾವುದೇ ಚಿಂತೆ ಬೇಡ ಎಂದು ಅವರು ಹೇಳಿದ್ದಾರೆ. ನನಗಂತು ಪೂರ್ತಿ ಗುಣಮುಖವಾಗುವ ಆತ್ಮವಿಶ್ವಾಸ ಇದೆ. ಯಾಕೆಂದರೆ, ಈ ಹಿಂದೆ ಶಾರುಖ್, ಎಸ್ ಎಮ್ ಕೃಷ್ಣ ಮೊದಲಾದವರು ಇದೇ ನೋವಿಗೆ ತುತ್ತಾದಾಗ ಚಿಕಿತ್ಸೆ ನೀಡಿದಂಥ ವೈದ್ಯರೇ ನನಗೆ ಚಿಕಿತ್ಸೆ ನೀಡಲಿದ್ದಾರೆ.

ಭುಜದ ನೋವಿಗೆ ಕಾರಣವಾದ ಆ ಘಟನೆ
ನ್ಯೂಯಾರ್ಕ್ ನಲ್ಲಿ ಹಾಲಿಡೇಗೆ ಹೋಗಿದ್ದೆವು. ನಾನು ಶ್ರೀಕಾಂತ್ ವಾಕ್ ಹೊರಟಾಗ ನಡೆದ ಘಟನೆ ಅದು. ಹಿಂದಿನ ದಿನ ಮಳೆ ಬಂದು ಐಸ್ ಬಿದ್ದಿದ್ದು ನನಗೆ ಗೊತ್ತಾಗಿರಲಿಲ್ಲ. ಜಾರಿ ಬಿದ್ದು ಭುಜಕ್ಕೆ ಏಟಾಗಿ ಬಿಡ್ತು. ಆಗ ತುಂಬ ನೋವಿತ್ತು. ಆಗ ಪೈನ್ ಕಿಲ್ಲರ್ ನಲ್ಲೇ ಗುಣವಾಗಿತ್ತು. ಮರಳಿ ಬಂದ ಬಳಿಕ ಅಲೆಪ್ಪಿ ಶೂಟಿಂಗ್, ಫಾರೆಸ್ಟ್ ಫೈಟ್ ಮೊದಲಾದವುಗಳಲ್ಲಿ ಪಾಲ್ಗೊಂಡೆ. ಒಂದು ವೇಳೆ ಬ್ರೇಕ್ ತಗೊಂಡರೆ ಮತ್ತೆ ಚಿತ್ರ ನಾಲ್ಕು ತಿಂಗಳು ಮುಂದೆ ಹಾಕಬೇಕಾಗುತ್ತದೆ. ಅಲ್ಲದೆ ಚಿತ್ರದಲ್ಲಿ ಬಹಳಷ್ಟು ಸಿ.ಜಿ ವರ್ಕ್ ಕೂಡ ಇರೋದರಿಂದ ಮೊದಲು ದ್ವಾರಕೀಶ್ ಸಿನಿಮಾದ ಚಿತ್ರೀಕರಣ ಮುಗಿಸಿಕೊಟ್ಟು ಬಳಿಕ ಬ್ರೇಕ್ ತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ಅದರಲ್ಲೂ ಅಂಡರ್ ವಾಟರ್ ಫೈಟ್ ಬೇರೆ ಇತ್ತು. ಆದರೆ ಅವೆಲ್ಲವೂ ತುಂಬ ಚೆನ್ನಾಗಿ ಬಂದಿದೆ.

ಅಭಿಮಾನಿಗಳು ಜತೆಗಿರದ ಜನ್ಮದಿನ
ಬರ್ತ್ ಡೇಯನ್ನು ಅಭಿಮಾನಿಗಳ ಜತೆಗೆ ಕಳೆಯುವ ಆಸೆ ನನಗೂ ಇತ್ತು. ಆದರೆ ಡಾಕ್ಟರ್ ಈಗ ನೀಡಿರುವ ದಿನಗಳಲ್ಲಿ ನಾನು ಚಿಕಿತ್ಸೆ ಪಡೆಯಲು ಹೋಗದಿದ್ದರೆ ಮತ್ತೆ ಅವರ ಅಪಾಯಿಂಟ್ಮೆಂಟ್ ಸಿಗೋದು ಆಗಸ್ಟ್ ಕೊನೆಯಲ್ಲಿ. ಟ್ಯಾಬ್ಲೆಟ್ಸ್ ಇವೆ. ಆದರೆ ಅವುಗಳು ಬರೇ ಪೆಯ್ನ್ ಕಿಲ್ಲರ್ ಗಳು. ಆದರೆ, ಅದನ್ನು ತೆಗೆದುಕೊಂಡು ಕಾಲಹರಣ ಮಾಡೋದು ನನಗೆ ಇಷ್ಟ ಇಲ್ಲ. ತುಂಬ ಕಾಯೋದು ಬೇಡ ಎಂಬ ಕಾರಣಕ್ಕಾಗಿ ಜುಲೈನಲ್ಲೇ ಹೋಗುತ್ತಿದ್ದೇನೆ. ಜುಲೈ 9ಕ್ಕೆ ಅಡ್ಮಿಟ್ ಆಗಲಿದ್ದೇನೆ. ಮರುದಿನವೇ ಸರ್ಜರಿ. ಆದರೆ, ಬರ್ತ್ ಡೇ ದಿನಕ್ಕೂ ಮೊದಲೇ ಹಾಸ್ಪಿಟಲ್ ನಿಂದ ಡಿಸ್ಚಾರ್ಜ್ ಆಗಿರುತ್ತೇನೆ.

ನಮ್ಮ ಕೈಯ್ಯಲ್ಲಿ ಏನಿದೆ ಹೇಳಿ?!
ಯಾವಾಗ ಏನಾಗುತ್ತೆ ಅಂತ ಯಾರಿಗೂ ಹೇಳೋಕೆ ಆಗಲ್ಲ. ಕೆಲವೊಮ್ಮೆ ಚೆನ್ನಾಗಿರದ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣುತ್ತವೆ. 'ಕವಚ'ದಂಥ ಒಳ್ಳೆಯ ಚಿತ್ರಗಳು ಹಿಟ್ ಆಗೋದೇ ಇಲ್ಲ! ಬರುವಾಗ ಎಲ್ಲವನ್ನು ಎದುರಿಸಲು ಸಿದ್ಧವಾಗಿರಬೇಕು ಎನ್ನುವುದಷ್ಟೇ ನಮ್ಮ ಪಾಲಿಗೆ ಇರುವ ಅವಕಾಶ. ಹಾಗಾಗಿ ಇದನ್ನು ಸಾಲು ಸಾಲು ಚಿತ್ರಗಳ ನಡುವೆ ಸಿಕ್ಕ ಒಂದು ರೆಸ್ಟ್ ಎಂದು ಪರಿಗಣಿಸುತ್ತೇನೆ. ಸಿನಿಮಾ ನೋಡೋದು, ಮಗಳ ಜತೆಗೆ ತಿರುಗಾಡೋದು, ಚೆನ್ನೈ, ಹೈದರಾಬಾದ್ ಫ್ರೆಂಡ್ಸ್ ಭೇಟಿ.. ಬಹುಶಃ ವಿರಾಮದ ದಿನಗಳು ಹೀಗೆ ಇರಬಹುದು.

ಈ ವರ್ಷ ತೆರೆಕಾಣಲಿರುವ ಚಿತ್ರಗಳು
ನಿಮಗೆ ತಿಳಿದಿರುವ ಹಾಗೆ 'ರುಸ್ತುಂ' ಈ ವಾರ ಬಿಡುಗಡೆಯಾಗುತ್ತಿದೆ. 'ದ್ರೋಣ' ಮತ್ತು ಪಿ ವಾಸು ನಿರ್ದೇಶನದ ಸಿನಿಮಾ ಇದೇ ವರ್ಷ ತೆರೆಗೆ ಬರುವ ಸಕಲ ಸಿದ್ಧತೆಗಳು ನಡೆದಿವೆ. ಉಳಿದ ಸಿನಿಮಾಗಳು ಮುಂದಿನ ವರ್ಷಕ್ಕೆ ಮುಂದುವರಿಯಬಹುದು.

ವೆಬ್ ಸೀರೀಸ್ ನಲ್ಲಿ ನಟಿಸಲಿದ್ದೇನೆ
ವೆಬ್ ಸೀರೀಸ್ ಒಂದು ಮುಗೀತು. ಇನ್ನೊಂದು ಕೊನೆಯ ಹಂತದಲ್ಲಿದೆ. ಅದರ ಬಿಡುಗಡೆಗೆ ಒಳ್ಳೆಯ ಪ್ಲಾಟ್ ಫಾರ್ಮ್ ಗಾಗಿ ಹುಡುಕುತ್ತಿದ್ದೇವೆ. ಜೊತೆಗೆ ಮುಂದಿನ ವರ್ಷ ನಾನೇ ಒಂದು ವೆಬ್ ಸೀರೀಸ್ ನಲ್ಲಿ ನಟಿಸುವ ಯೋಜನೆ ಹಾಕಿದ್ದೇನೆ. ಸಿನಿಮಾದಲ್ಲಿ ಮಾಡಲಾಗದೇ ಇರುವಂಥದ್ದನ್ನು ಮಾಡುವ ಸ್ವಾತಂತ್ರ್ಯ ವೆಬ್ ಸೀರೀಸ್ ನೀಡುತ್ತದೆ. ಹಾಗಾಗಿ ಏನಾದರೂ ಹೊಸತನ ತೋರಿಸುವ ಪಾತ್ರ ಮಾಡೋಣ ಅಂತ ಯೋಜನೆ ಇದೆ.


Click it and Unblock the Notifications











