ಸಂದರ್ಶನ : ರಂಗಭೂಮಿಯ ಶಾಸ್ತ್ರಿ ಕಷ್ಟ ಪಟ್ಟು 'ಕಲ್ಯಾಣ ದೇವ'ನಾದ
ಸತತ ಪ್ರಯತ್ನ ಒಂದಲ್ಲ ಒಂದು ದಿನ ಫಲ ನೀಡುತ್ತದೆ. ಸಾಧನೆ ಎನ್ನುವುದು ಒಂದು ನಿಮಿಷಕ್ಕೆ, ಒಂದು ದಿನಕ್ಕೆ ಆಗುವುದಲ್ಲ. ನಿರಂತರ ಶ್ರಮ, ಶ್ರದ್ಧೆ, ತಾಳ್ಮೆ ಇದ್ದರೆ ಬೆಟ್ಟವನ್ನು ಕೂಡ ಪುಡಿ ಮಾಡಬಹುದು.
ಈಗ ಈ ರೀತಿ ನಿಧಾನವಾಗಿ ತಮ್ಮ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರು ಚಂದ್ರಶೇಖರ ಶಾಸ್ತ್ರಿ. ತಮ್ಮ ಆಪ್ತ ಬಳಗದಲ್ಲಿ ಶಾಸ್ತ್ರಿ ಎಂದು ಕರೆಸಿಕೊಳ್ಳುವ ಇವರು ಈಗ ಕರ್ನಾಟಕದ ತುಂಬ ಹೆಸರು ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜೀ ಕನ್ನಡದ 'ಉಘೇ ಉಫೇ ಮಾದೇಶ್ವರ' ಪೌರಾಣಿಕ ಧಾರವಾಹಿಯಲ್ಲಿ ಕಲ್ಯಾಣ ದೇವನಾಗಿ ಅಭಿನಯಿಸಿದ ಶಾಸ್ತ್ರಿ 'ಬೆಸ್ಟ್ ಮೈಥಾಲಜಿ ಜೋಡಿ' ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಾಸ್ತ್ರಿ ಎಂಬ ಕಲ್ಯಾಣದೇವನ ಕನ್ನಡಕ್ಕೆ 'ಅಹುದುಹದು ಎನ್ನುತ್ತಿದ್ದಾನೆ ಮಾದೇಶ್ವರ.
ಒಂದು ಕಡೆ ಕೆಲಸ, ಮತ್ತೊಂದು ಕಡೆ ರಂಗಭೂಮಿ ಈಗ ಕಿರುತೆರೆ ಈ ರೀತಿ ಶಾಸ್ತಿ ಅವರ ಬದುಕು ಸಾಗುತ್ತಿದೆ. ಅಂದಹಾಗೆ, ತಮ್ಮ ಕಲಾ ಜೀವನದ ಪಯಣದ ಬಗ್ಗೆ ಚಂದ್ರಶೇಖರ ಶಾಸ್ತ್ರಿಯವರು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಂದೆ ಓದಿ...

ನಿಮಗೆ ರಂಗಭೂಮಿಯ ಆಸಕ್ತಿ ಹುಟ್ಟಿದ್ದು ಹೇಗೆ ?
''ನಮ್ಮ ತಂದೆಯವರು ನಮ್ಮ ಹಳ್ಳಿಯಲ್ಲಿ ತಾವೇ ನಾಟಕಗಳನ್ನು ಬರೆದು ಅಲ್ಲಿಯ ಜನರ ಸಂತೋಷದ ದೃಷ್ಟಿಯಲ್ಲಿ ನಾಟಕಗಳನ್ನು ಮಾಡಿಸ್ತಾ ಇದ್ರು. ಅಲ್ಲದೇ ನಮ್ಮ ಮನೆಯಲ್ಲೇ ನಾಟಕದ ತಾಲಿಮುಗಳು ನಡಿತಾ ಇದ್ದಿದ್ದರಿಂದ ನನಗೂ ಆ ಗೀಳು ಹತ್ತಿಕೊಂಡಿತು. ಹೀಗಾಗಿ ನಮ್ಮ ತಂದೆಯವರೇ ನನ್ನ ಮೊದಲ ಕಲಾ ಗುರುಗಳು ಅಂತ ಹೇಳಬಹುದು.''

ಮೊದಲ ನಾಟಕದ ಅನುಭವ ಹೇಗಿತ್ತು ?
''ಚಿಕ್ಕಂದಿನಲ್ಲಿ ನನಗೂ ನಾಟಕದಲ್ಲಿ ಪಾತ್ರ ಕೊಡಿ ಎಂದು ನಮ್ಮ ತಂದೆಯವರನ್ನು ಕೇಳುತ್ತಿದ್ದೆ. ಆದರೆ, ಅದೆಲ್ಲಾ ಈಗ ಬೇಡ ನೀನು ನಾಟಕ ನೋಡಿ ಚಪ್ಪಾಳೆ ತಟ್ಟು ಎಂದು ಹೇಳುತ್ತಿದ್ದರು. ಇದೇ ಕಾರಣಕ್ಕಾಗಿ ಬೇಸರ ಆಗಿದ್ದರಿಂದ ನಾನು ಮುಂದೆ ಎಸ್ಎಸ್ಎಲ್ಸಿಯಲ್ಲಿದ್ದಾಗಿ 'ಸೀತೆ ಕಿಡ್ನಾಪ್' ಅನ್ನೋ ಹಾಸ್ಯ ನಾಟಕ ಬರೆದು ನಮ್ಮ ಹಳ್ಳಿಯ ಜನರಿಗೆ ಆಡಿಸಿದೆ. ಅದನ್ನು ನೋಡಿದ ಜನರು ಇದನ್ನು ಮುಂದುವರೆಸು ಬಿಡಬೇಡ ಎಂದು ಬೆಂಬಲಿಸಿದರು.''

ಇಲ್ಲಿಯವರೆಗೆ ಎಷ್ಟು ನಾಟಕಗಳಲ್ಲಿ ಅಭಿನಯಿಸಿದ್ದೀರಿ?
''ಒಮ್ಮೆ ನಾನು ಅದ್ಹೇಗೋ ಶಿವಮೊಗ್ಗದ ಹೆಸರಾಂತ ನಿರ್ದೇಶಕ ಡಾ.ಸಾಸ್ವೆಹಳ್ಳಿ ಸತೀಶ್ ಅವರ ಕಣ್ಣಿಗೆ ಬಿದ್ದೆ. ಅವರೇ ನನಗೆ ಮುಂದಿನ ಹಂತಕ್ಕೆ ಪ್ರವೇಶಿಕೆ ಕಲ್ಪಿಸಿದರು. ಹೊಂಗಿರಣ ತಂಡದಲ್ಲಿ ಆಗುತ್ತಿದ್ದ ಎಲ್ಲಾ ಪ್ರಮುಖ ನಾಟಕಗಳಲ್ಲಿಯೂ ನನ್ನ ಸಾಮರ್ಥ್ಯಕ್ಕೆ ತಕ್ಕಂತಹ ಪಾತ್ರಗಳನ್ನು ನೀಡಿದರು. ಕೃಷ್ಣ ಸಂಧಾನದ ಭೀಮ, ಕುವೆಂಪು ರಾವಣ, ಗುಣ ಮುಖದಲ್ಲಿ ಅಲಾವಿಖಾನ್, ಇಂತಹ ಹಲವಾರು ನಾಟಕಗಳು ಜನ ಮನ್ನಣೆಯನ್ನು ತಂದುಕೊಟ್ಟಿತು. ಇಲ್ಲಿಯವರೆಗೂ ಸುಮಾರು 40 ನಾಟಕಗಳಲ್ಲಿ ಅಭಿನಯಿಸಿದ್ದೇನೆ.''

ರಂಗಭೂಮಿಯಿಂದ ಕಿರುತೆರೆಗೆ ಬಂದಿದ್ದು ಹೇಗೆ?
''ನಾಟಕದಲ್ಲೇ ಹೆಚ್ಚಿನ ಸಂತೋಷ ಸಿಗುತ್ತಿದ್ದರಿಂದ ನನಗೆ ಕಿರುತರೆಯ ಬಗ್ಗೆ ಅಷ್ಟಾಗಿ ಕನಸು ಇರಲಿಲ್ಲ. ಆದರೆ, ಒಮ್ಮೆ ನಮ್ಮ ಧಾರವಾಹಿಗೆ ಆಡಿಷನ್ ನಡೆದಾಗ ನಮ್ಮ ಗುರುಗಳಾದ ಸಾಸ್ವೆಹಳ್ಳಿ ಸತೀಶ್ ಅವರು ಕರೆ ಮಾಡಿ ಪೌರಾಣಿಕ ಧಾರವಾಹಿಯಲ್ಲಿ ಅಭಿನಯಿಸಲು ಅವಕಾಶ ಇದೆ, ಪ್ರಯತ್ನಿಸು ಎಂದರು. ಅವರ ಮಾತಿಗೆ ಅನುಸಾರವಾಗಿ ಆಡಿಷನ್ ನಲ್ಲಿ ಪಾಲ್ಗೊಂಡೆ, ಆಯ್ಕೆಯಾದೆ. ನಂತರ ಅದು ಇಲ್ಲಿಯ ವರೆಗೆ ಬೆಳೆದು ಬಂದಿದೆ.''

ಈಗ ನಟನೆಯನ್ನೇ ಫುಲ್ ಟೈಂ ಆಗಿ ತೆಗೆದುಕೊಂಡಿದ್ದೀರಾ?
''ಕಲೆಯಷ್ಟೇ ಹೊಟ್ಟೆಪಾಡು ಕೂಡ ಮುಖ್ಯ. ನಾನು ಕಳೆದ 10 ವರ್ಷಗಳಿಂದ ಜಾರ್ಜ್ ಓಕ್ಸ್ ಲಿಮಿಟೆಡ್ ಅನ್ನುವ ಸಂಸ್ಥೆಯಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡ್ತಾ ಇದ್ದೇನೆ. ಅಲ್ಲಿನ ಮ್ಯಾನೇಜರ್ ಆದ ಡಿ.ಜಿ.ಉಮೇಶ್ ಹಾಗೂ ನನ್ನ ಸಹೋದ್ಯೋಗಿಗಳು ನನ್ನ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಇನ್ನು ಕುಟುಂಬದ ಸಹನೆಗೂ ಸಹ ನನ್ನ ಬಹುದೊಡ್ಡ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.''

ನಿಮ್ಮ 'ಉಘೇ ಉಘೇ ಮಾದೇಶ್ವರ' ತಂಡದ ಬಗ್ಗೆ ಹೇಳುವಿರಾ ?
''ಬಹಳಷ್ಟು ಗಟ್ಟಿಯಾದ ತಂಡ ಅದು. ಮಲೆ ಮಹದೇಶ್ವರನ ಬದುಕನ್ನು ಜನತೆಗೆ ಪರಿಣಾಮಕಾರಿಯಾಗಿ ತಲುಪಿಸುವ ಜವಾಬ್ದಾರಿಯನ್ನು ನಿರ್ದೇಶಕ ಮಹೇಶ್ ಸುಖಧರೆಯವರು ಹೊತ್ತಿದ್ದಾರೆ. ನನ್ನನ್ನು ಈ ಧಾರವಾಹಿ ಲೋಕದ ಅಗತ್ಯಕ್ಕೆ ಬೇಕಾದಂತೆ ಮರ್ಪಾಡು ಮಾಡಿದ್ದೇ ಅವರು. ಇನ್ನು ನಮ್ಮಲ್ಲಿ ನಿರ್ದೇಶಕರಾಗಿ ನವೀನ್ ಕೃಷ್ಣ ಅವರು ಕೆಲಸ ಮಾಡುತ್ತಿದ್ದು ಅವರ ಅನನ್ಯ ಪ್ರತಿಭೆಗೆ ನಾನು ಮೂಕ ವಿಸ್ಮಿತನಾಗಿದ್ದೇನೆ.''

ಮಾದೇಶ್ವರ ಧಾರವಾಹಿಯ ಮುಂದಿನ ಬೆಳವಣಿಗೆಯ ಬಗ್ಗೆ ಹೇಳಿ
''ನನಗೆ ಕಥೆಯ ಸಂಪೂರ್ಣ ಚಿತ್ರಣ ಇದೆ. ಅಗತ್ಯ ತಿರುವುಗಳನ್ನು ಪಡೆದುಕೊಳ್ಳುವ ಲಕ್ಷಣವನ್ನು ಹೊಂದಿದೆ. ಮುಂದೆ ಹೆಚ್ಚಿನ ಪಾತ್ರಗಳು ಬರುತ್ತಾ ಹೋಗುತ್ತವೆ. ಅಲ್ಲಿ ಉತ್ತರಾಜಮ್ಮನ ಸಾಲು, ಶ್ರವಣನ ಸಾಲಿನಂತೆ ಬೇರೆ ಬೇರೆ ಸಾಲುಗಳು ಬರುತ್ತಾ ಹೋಗುತ್ತವೆ.''


Click it and Unblock the Notifications











