ಇಸ್ಲಾಂ ತ್ಯಜಿಸಿ, ಹಿಂದು ಧರ್ಮ ಸೇರಿದ ನಿರ್ದೇಶಕ: ಹೊಸ ಹೆಸರಲ್ಲಿದೆ ವಿಶೇಷತೆ
ಮಲಯಾಳಂ ಸಿನಿಮಾ ನಿರ್ದೇಶಕ, ಚಿತ್ರ ಸಾಹಿತಿ ಅಲಿ ಅಕ್ಬರ್ ಇಸ್ಲಾಂ ಧರ್ಮ ತ್ಯಜಿಸಿ ಹಿಂದು ಧರ್ಮಕ್ಕೆ ಧರ್ಮಾಂತರವಾಗಿದ್ದಾರೆ.
ತಮ್ಮ ಪತ್ನಿ ಲೂಸಿಅಮ್ಮನ್ ಅವರೊಟ್ಟಿಗೆ ಸೇರಿ ಅಲಿ ಅಕ್ಬರ್ ಹಿಂದು ಧರ್ಮಕ್ಕೆ ಬದಲಾಗಿದ್ದಾರೆ. ಕೆಲವು ಹಿಂದು ಆಚರಣೆಗಳನ್ನು ಮಾಡುವ ಮೂಲಕ ಅವರು ಧರ್ಮ ಸ್ವೀಕರಿಸಿದ್ದಾರೆ. ಅಲಿ ಅಕ್ಬರ್ಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರು ಹಿಂದು ಧರ್ಮ ಸ್ವೀಕರಿಸಿಲ್ಲ. ''ನನ್ನ ಮಕ್ಕಳ ಮೇಲೆ ನಾನು ಯಾವುದೇ ಧರ್ಮವನ್ನು ಹೇರುವುದಿಲ್ಲ. ಅವರಿಗೆ ಇಷ್ಟವಿದ್ದರೆ ಅವರು ಹಿಂದು ಧರ್ಮ ಸ್ವೀಕರಿಸಬಹುದು'' ಎಂದು ಈ ಹಿಂದೆ ಅಲಿ ಅಕ್ಬರ್ ಹೇಳಿದ್ದರು.
ಅಲಿ ಅಕ್ಬರ್ ಅವರು ಇಸ್ಲಾಂ ತ್ಯಜಿಸಿದ್ದಕ್ಕೆ ಬಲವಾದ ಕಾರಣವೂ ಇದೆ. ಸೇನಾ ಮುಖ್ಯಾಧಿಕಾರಿ ಬಿಪಿನ್ ರಾವತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಅಲಿ ಅಕ್ಬರ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಆ ಪೋಸ್ಟ್ಗೆ ಹಲವರು ವ್ಯಂಗ್ಯ ಮಾಡಿದ್ದರು, ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿದ್ದರು. ಹೀಗೆ ಸಂಭ್ರಮಿಸಿದವರಲ್ಲಿ ಮುಸ್ಲೀಮರೇ ಹೆಚ್ಚಿದ್ದರು.

ಪ್ರತಿಭಟನಾರ್ತ ಹಿಂದು ಧರ್ಮ ಸ್ವೀಕರಿಸಿದ ಅಲಿ ಅಕ್ಬರ್
ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿದ ಮುಸ್ಲೀಮರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲೆಂದು ತಾವು ಹಿಂದು ಧರ್ಮ ಸೇರುವುದಾಗಿ ಅಲಿ ಅಕ್ಬರ್ ಡಿಸೆಂಬರ್ ತಿಂಗಳ ಆರಂಭದಲ್ಲಿ ಘೋಷಿಸಿದ್ದರು. ಆ ಸಂಬಂಧ ವಿಡಿಯೋ ಒಂದನ್ನು ಸಹ ಹರಿಬಿಟ್ಟಿದ್ದ ಅಲಿ ಅಕ್ಬರ್, ''ನನ್ನ ಹುಟ್ಟಿನಿಂದ ನನಗೆ ಸಿಕ್ಕಿದ್ದ ಉಡುಪೊಂದನ್ನು ಇಂದು ಕಿತ್ತು ಎಸೆಯುತ್ತಿದ್ದೇನೆ. ನಾನು ಮುಸ್ಲಿಂ ಅಲ್ಲ, ಇಂದಿನಿಂದ ನಾನು ಭಾರತೀಯ. ಸೇನಾ ಮುಖ್ಯಸ್ಥನ ಸಾವನ್ನು ಸಂಭ್ರಮಿಸಿದವರಿಗೆ ಇದೇ ನನ್ನ ಉತ್ತರ'' ಎಂದು ಅಲಿ ಅಕ್ಬರ್ ಹೇಳಿದ್ದರು. ಆ ವಿಡಿಯೋ ಬಹಳ ವೈರಲ್ ಆಗಿತ್ತು. ಹಿಂದು ಧರ್ಮಕ್ಕೆ ಮತಾಂತರಗೊಂಡಿರುವ ಅಲಿ ಅಕ್ಬರ್ ತಮ್ಮ ಹೆಸರನ್ನು ಸಹ ಬದಲಿಸಿಕೊಂಡಿದ್ದಾರೆ. ಇನ್ನು ಮುಂದೆ ಅಲಿ ಅಕ್ಬರ್ ಹೆಸರು 'ರಾಮಸಿಂಹನ್'. ಇದೇ ಹೆಸರನ್ನು ಅಲಿ ಅಕ್ಬರ್ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವಿದೆ.

ರಾಮಸಿಂಹನ್ ಹೆಸರು ಆಯ್ಕೆ ಮಾಡಿಕೊಂಡಿದ್ದು ಏಕೆ?
ರಾಮಸಿಂಹನ್ ಸಹ ಮುಸ್ಲಿಂ ವ್ಯಕ್ತಿಯಾಗಿದ್ದ. 1947 ರಲ್ಲಿ ರಾಮಸಿಂಹನ್ ಇಸ್ಲಾಂ ತ್ಯಜಿಸಿ ಹಿಂದು ಧರ್ಮಕ್ಕೆ ಸೇರಿಕೊಂಡರು. ಇದರಿಂದಾಗಿ 1947ರ ಆಗಸ್ಟ್ 2 ರಂದು ಕೇರಳದ ಮಲಪ್ಪುರಂನ ಮಲಪ್ಪುರಂಬ್ನಲ್ಲಿ ರಾಮಸಿಂಹನ್ ಹಾಗೂ ಅವರ ಇಡೀಯ ಕುಟುಂಬವನ್ನು ಇಸ್ಲಾಂ ಮೂಲಭೂತವಾದಿಗಳು ಕೊಚ್ಚಿ ಕೊಂದು ಹಾಕಿದ್ದರು. ಆ ಸಾಮೂಹಿಕ ನರಹತ್ಯೆಯಲ್ಲಿ ರಾಮಸಿಂಹನ್, ಅವರ ಸಹೋದರ ದಯಾಸಿಂಹನ್, ಅವರ ಪತ್ನಿ ಕಮಲ, ರಾಮಸಿಂಹನ್ ಅವರ ಕುಟುಂಬದ ಬಾಣಿಸಿಗ ರಾಜು ಐಯ್ಯರ್ ಮತ್ತು ಕುಟುಂಬದ ಇತರ ಸದಸ್ಯರನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಯಿತು. ಸ್ವಾತಂತ್ರ್ಯ ಸಿಗುವ ಎರಡು ವಾರದ ಹಿಂದೆ ಈ ಕ್ರೂರ ಘಟನೆ ನಡೆದಿತ್ತು. ಹಾಗಾಗಿ ಇಸ್ಲಾಂ ಮೂಲಭೂತವಾದಿಗಳ ವಿರುದ್ಧ ಪ್ರತಿಭಟನಾರ್ತವಾಗಿ ಇದೇ ಹೆಸರನ್ನು ಅಲಿ ಅಕ್ಬರ್ ಇಟ್ಟುಕೊಂಡಿದ್ದಾರೆ.

ರಾಜಕಾರಣಿಯೂ ಆಗಿರುವ ರಾಮಸಿಹಂನ್ (ಅಲಿ ಅಕ್ಬರ್)
ರಾಮಸಿಹಂನ್ (ಅಲಿ ಅಕ್ಬರ್), ಸಿನಿಮಾ ನಿರ್ದೇಶಕರಾಗಿರುವ ಜೊತೆಗೆ ರಾಜಕಾರಣಿಯೂ ಆಗಿದ್ದಾರೆ. 2014 ರಲ್ಲಿ ಅವರು ಕೇರಳದ ಕೊಡವಲ್ಲಿ ಲೋಕಸಭಾ ಕ್ಷೇತ್ರದಿಂದ ಎಎಪಿ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಬಳಿಕ ಬಿಜೆಪಿ ಪಕ್ಷ ಸೇರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದರು. ಬಳಿಕ ಪಕ್ಷದ ಮುಖಂಡರೊಡನೆ ಕಿತ್ತಾಡಿ ಬಿಜೆಪಿಯ ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ
ಈ ಹಿಂದೆಯೂ ರಾಮಸಿಹಂನ್ (ಅಲಿ ಅಕ್ಬರ್) ಅವರ ಕೆಲವು ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ತಾವು ಎಂಟು ವರ್ಷದವರಾಗಿದ್ದಾಗ ಮದರಸಾನಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆಗಿತ್ತೆಂದು ಅಲಿ ಅಕ್ಬರ್ ಆರೋಪ ಮಾಡಿದ್ದರು. ವೈನಾಡ್ನ ಮೀನಂಗಡಿಯ ಮದರಸಾನಲ್ಲಿ ಅಲ್ಲಿನ ಮುಖ್ಯ ಗುರು (ಉಸ್ತಾದ್) ತಮಗೆ ಲೈಂಗಿಕ ಹಿಂಸೆ ನೀಡಿದ್ದ, ಮದರಸಾಗಳಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಸಾಮಾನ್ಯ ಎಂದು ಅಲಿ ಅಕ್ಬರ್ ಹೇಳಿಕೆ ನೀಡಿದ್ದರು. ಇದು ವಿವಾದವಾಗಿತ್ತು. 1988 ರಿಂದಲೂ ಮಲಯಾಳಂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ರಾಮಸಿಹಂನ್ (ಅಲಿ ಅಕ್ಬರ್) ಈ ವರೆಗೆ 12 ಸಿನಿಮಾಗಳಲ್ಲಿಯಷ್ಟೆ ಕೆಲಸ ಮಾಡಿದ್ದಾರೆ. ಆದರೆ ಒಂದು ರಾಷ್ಟ್ರ ಪ್ರಶಸ್ತಿ ಮತ್ತು ಕೇರಳ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.


Click it and Unblock the Notifications











