ಬಾರ್ ನಲ್ಲಿ 'ಮಿನುಗು' ಆಡಿಯೋ ಬಿಡುಗಡೆ
ನಟಿ ಪೂಜಾಗಾಂಧಿ ಅಭಿನಯಿಸಿರುವ 'ಮಿನುಗು' ಚಿತ್ರ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದೆ. 'ಮಿನುಗು' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಸಹ ವಿವಾದದಿಂದ ಹೊರತಾಗಿರಲಿಲ್ಲ. ನಿರ್ಮಾಪಕ ಕೆ.ಮಂಜು ಕಾರ್ಯಕ್ರಮದಿಂದ ಹೊರನಡೆದ ಘಟನೆ ನಡೆಯಿತು.
ಗ್ರೀನ್ ಹೌಸ್ ನ ನೆಲಮಹಡಿಯಲ್ಲಿ ಬೇರೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಹಾಗಾಗಿ 'ಮಿನುಗು' ಚಿತ್ರಕ್ಕೆ ಬಾರ್ ನ ಸ್ಥಳ ನಿಗದಿಯಾಗಿತ್ತು.ಆಡಿಯೋ ಸಿಡಿ ಬಿಡುಗಡೆಗಾಗಿ ನಿರ್ಮಾಪಕ ಕೆ.ಮಂಜು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆದರೆ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಗ್ರೀನ್ ಹೌಸ್ ನ ಬಾರ್ ಸೆಕ್ಷನ್ ನಲ್ಲಿ ಆಯೋಜಿಸಿದ್ದರಿಂದ ಬೇಸರಗೊಂಡು ಎದ್ದು ಹೊರನಡೆದರು!
ಅವರ ಅನುಪಸ್ಥಿತಿಯಲ್ಲೂ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಮಾತ್ರ ಮುಂದುವರಿಯಿತು. ಹಾಗೆಯೇ ಬಾರ್ ಸ್ಥಳದಲ್ಲಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದು ಎಷ್ಟು ಸಮಂಜಸ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ನಡುವೆ 'ಮಿನುಗು' ಚಿತ್ರದ ನಿರ್ಮಾಪಕ ಗಜೇಂದ್ರ ಅವರ ತಾಯಿ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು.
ಚಿತ್ರದ ಮೊದಲ ಧ್ವನಿಸುರುಳಿ ನಿರ್ದೇಶಕ ಜಯವಂತ್ ಅವರ ಕೈಗೆ ಹಸ್ತಾಂತರವಾಯಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಪೂಜಾಗಾಂಧಿ, ನಾಯಕ ನಟ ಸುನಿಲ್ ಸೇರಿದಂತೆ ಸಂಗೀತ ನಿರ್ದೇಶಕ ಗೋಪು ಚಿತ್ರದ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗ ಸಹ ಉಸಿರುಗಟ್ಟು ವ ಸ್ಥಳದಲ್ಲಿ ಉಪಸ್ಥಿತರಿದ್ದರು. ಗಜೇಂದ್ರ ಮಾತನಾಡುತ್ತಾ, ಇಡೀ ಚಿತ್ರತಂಡದ ಪ್ರಯತ್ನದ ಫಲವೇ ಮಿನುಗು ಎಂದರು.
ಚಿತ್ರದ ನಾಯಕ ನಟ ಸುನಿಲ್ ಮಾತನಾಡುತ್ತಾ, ಈ ಚಿತ್ರ ತನಗೆ ವಿಭಿನ್ನ ಅನುಭವ ನೀಡಿದೆ. ಪೂಜಾಗಾಂಧಿ ಅವರದು ಜವಾಬ್ದಾರಿಯುತವಾದ ಪಾತ್ರ. ನಾನು ಬೇಜಾಬ್ದಾರಿ ಯುವಕನಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ. ನಿರ್ದೇಶಕರಾಗಿ ಜಯವಂತ್ ಅತ್ಯದ್ಭುತವಾಗಿ ಚಿತ್ರವನ್ನು ತೆರೆಗೆ ತಂದಿದ್ದಾರೆ. ಚಿತ್ರದ ಹಾಡುಗಳು ಸೊಗಸಾಗಿ ಮೂಡಿಬಂದಿದ್ದು ಕೇಳಲು ಇಂಪಾಗಿವೆ ಎಂದರು.
ಪೂಜಾಗಾಂಧಿ ಮಾತನಾಡುತ್ತಾ, ಆರಂಭದಲ್ಲಿ ನಿರ್ದೇಶಕರ ಸಾಮರ್ಥ್ಯದ ಬಗ್ಗೆ ನನಗೆನಂಬಿಕೆ ಇರಲಿಲ್ಲ.ಚಿತ್ರೀಕರಣ ಆರಂಭವಾದ ನಂತರ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ನನ್ನ ವೃತ್ತಿ ಜೀವನದಲ್ಲಿ ಮಿನುಗು ಚಿತ್ರ ಅತ್ಯುತ್ತಮ ಚಿತ್ರವಾಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











