ಅಣ್ಣಾತ್ತೆ ಮೊದಲ ಹಾಡು: ಇದು ಎಸ್ಪಿಬಿ ಅಭಿಮಾನಿಗಳಿಗೆ ಸರ್ಪ್ರೈಸ್
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಮೊದಲಿನಿಂದಲೂ ಎಸ್ ಪಿ ಬಾಲಸುಬ್ರಹ್ಮಣ್ಯಂ ವಿಚಾರದಲ್ಲಿ ಒಂದು ನಂಬಿಕೆ ಇದೆ. ತಮ್ಮ ಚಿತ್ರಗಳಿಗೆ ಶೀರ್ಷಿಕೆ ಗೀತೆ ಇವರಿಂದಲೇ ಹಾಡಿಸಬೇಕು, ಇವರು ಹಾಡಿದ್ರೆ ಆ ಹಾಡು ಸೂಪರ್ ಡೂಪರ್ ಹಿಟ್ ಆಗುತ್ತೆ ಎಂಬ ವಾಡಿಕೆ. ಬಹುಶಃ ತಲೈವಾ ಅವರ ಈ ನಂಬಿಕೆ ನಿಜ ಎನ್ನುವಂತೆ ನಿರ್ದೇಶಕ, ನಿರ್ಮಾಪಕರು ಕೂಡ ನಡೆದುಕೊಂಡಿದ್ದಾರೆ. ರಜನಿಯ ಹಲವು ಚಿತ್ರಗಳ ಟೈಟಲ್ ಹಾಡು ಹಾಡಿರುವುದು ಇದೇ ಎಸ್.ಪಿ ಬಾಲಸುಬ್ರಹ್ಮಣ್ಯಂ. ಅವರು ಹಾಡಿರುವ ಅಷ್ಟು ಹಾಡುಗಳು ಇಂದಿಗೂ ದಿ ಬೆಸ್ಟ್.
ಇದೀಗ, ತಲೈವಾ ನಟಿಸಿರುವ ಅಣ್ಣಾತ್ತೆ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 4 ರಂದು ರಜನಿ ಸಿನಿಮಾದ ಟೈಟಲ್ ಹಾಡು ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ ಈ ಹಾಡನ್ನು ಸಹ ದಿವಂಗತ ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ.
ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಡಿ ಇಮ್ಮನ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹಾಡು ರಿಲೀಸ್ ಆಗುತ್ತಿರುವ ಬಗ್ಗೆ ನಿರ್ದೇಶಕ ಸಿರುತೈ ಶಿವ ಮಾಹಿತಿ ನೀಡಿದ್ದು, ಮತ್ತೊಂದು ಸ್ಟೈಲಿಶ್ ಪೋಸ್ಟರ್ ಅನಾವರಣ ಮಾಡಿದ್ದಾರೆ.

ಈ ಹಾಡು ಎಸ್ಪಿ ಬಾಲಸುಬ್ರಹ್ಮಣ್ಯಂ ಮತ್ತು ರಜನಿಕಾಂತ್ ಅಭಿಮಾನಿಗಳಿಬ್ಬರಿಗೂ ಭಾವನಾತ್ಮಕವಾಗಿರಲಿದೆ ಎಂದು ಹೇಳಲಾಗುತ್ತಿದೆ. ಲಿರಿಕಲ್ ವಿಡಿಯೋ ವರ್ಷನ್ನಲ್ಲಿ ಈ ಹಾಡು ರಿಲೀಸ್ ಆಗುತ್ತಿದೆ.
ಎಸ್ಪಿಬಿ ಮತ್ತು ರಜನಿ ಕಾಂಬಿನೇಷನ್
ಕೊನೆಯದಾಗಿ ದರ್ಬಾರ್ ಚಿತ್ರದ 'ಚುಮ್ಮ ಕಿಳಿ....' ಹಾಡನ್ನು ಎಸ್ಪಿಬಿ ಹಾಡಿದ್ದರು. ಈ ಹಾಡು ದೊಡ್ಡ ಹಿಟ್ ಆಗಿತ್ತು. ಅದಕ್ಕೂ ಮುಂಚೆ ಪೇಟಾ ಸಿನಿಮಾದಲ್ಲಿ ಬರುವ 'ಮರಣ ಮಾಸ್ ಮರಣ....' ಹಾಡನ್ನು ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದರು.
ರಜನಿಕಾಂತ್ ಚಿತ್ರಗಳಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಪ್ರಮುಖ ಹಾಡುಗಳನ್ನ ಪಟ್ಟಿ ಮಾಡುವುದಾದರೇ....ಪಡೆಯಪ್ಪಾ ಚಿತ್ರದಲ್ಲಿ 'ಯಾ ಪೇರು ಪಡೆಯಪ್ಪಾ.....', ಅರುಣಾಚಲಂ ಚಿತ್ರದಲ್ಲಿ 'ಅದಂಡಾ ಇದಂಡಾ....', ಮುತ್ತು ಚಿತ್ರದಲ್ಲಿ 'ಒರುವನ್ ಒರುವನ್ ಮೊದಲಾಳಿ.....', ಬಾಷಾ ಚಿತ್ರದಲ್ಲಿ 'ನಾನ್ ಆಟೋಕಾರನ್....', ಅಣ್ಣಾಮಲೈ ಚಿತ್ರದಲ್ಲಿ 'ವಂದಂಡಾ ಪಾಲಕಾರಾ.....' ಹೀಗೆ ಹಲವು ಹಿಟ್ ಗೀತೆಗಳೇ ಇವೆ.

ಕಳೆದ ವರ್ಷ ಅಂದ್ರೆ 2020ರ ಸೆಪ್ಟೆಂಬರ್ 25 ರಂದು ಎಸ್ಪಿ ಬಾಲಸುಬ್ರಹ್ಮಣ್ಯಂ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ದಿಗ್ಗಜ ಗಾಯಕನ ಅಗಲಿಕೆಗೆ ಇಡೀ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರ ಸಂತಾಪ ಸೂಚಿಸಿತ್ತು. ರಜನಿಕಾಂತ್ ಸಹ ಭಾವುಕರಾಗಿದ್ದರು.
ಅಣ್ಣಾತ್ತೆ ಚಿತ್ರದ ಕುರಿತು
ಸಿರುತೈ ಶಿವ ನಿರ್ದೇಶನ ಮಾಡಿದ್ದು, ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಜೊತೆ ನಯನತಾರ, ಕೀರ್ತಿ ಸುರೇಶ್, ಹಿರಿಯ ನಟ ಮೀನಾ, ಖುಷ್ಬೂ, ಪ್ರಕಾಶ್ ರಾಜ್, ಸೂರಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಈ ಸಿನಿಮಾ ನಿರ್ಮಿಸುತ್ತಿದ್ದು, ಡಿ ಇಮ್ಮನ್ ಸಂಗೀತ ಇದೆ. ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4 ರಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಚಿತ್ರಮಂದಿರಕ್ಕೆ ಬರಲಿದೆ.
ರಜನಿ 169 ಚಿತ್ರಕ್ಕೆ ದೇಸಿಂಗ್ ಪೆರಿಯಸ್ವಾಮಿ ಆಕ್ಷನ್ ಕಟ್
ಅಣ್ಣಾತ್ತೆ ಸಿನಿಮಾದ ನಂತರ ರಜನಿಕಾಂತ್ ಮತ್ತೊಬ್ಬ ಯುವ ನಿರ್ದೇಶಕನಿಗೆ ಕಾಲ್ಶೀಟ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ದುಲ್ಕಾರ್ ಸಲ್ಮಾನ್ ಮತ್ತು ರಿತು ಶರ್ಮಾ ನಟಿಸಿದ್ದ ಹಿಟ್ ಆಗಿದ್ದ 'ಕಣ್ಣುಂ ಕಣ್ಣುಂ ಕೊಲ್ಲೈಯಡಿತಾಳ್' ಚಿತ್ರ ನಿರ್ದೇಶಿಸಿದ್ದ ದೇಸಿಂಗ್ ಪೆರಿಯಸ್ವಾಮಿ ತಲೈವಾ 169ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ. ವಿಜಯ್ ನಟಿಸಿದ್ದ ಬಿಗಿಲ್ ಚಿತ್ರ ನಿರ್ಮಿಸಿದ್ದು ಎಜಿಎಸ್ ಸಂಸ್ಥೆ ಬಂಡವಾಳ ಹಾಕಲಿದ್ದು, ದೀಪಿಕಾ ಪಡುಕೋಣೆ ನಾಯಕಿಯಾಗುವ ಸಾಧ್ಯತೆ ಇದೆಯಂತೆ.


Click it and Unblock the Notifications











