'ಈ ಹೃದಯ ಹಾಡಿದೆ' ವಿಷ್ಣು ವಿಶೇಷ ಸಂಗೀತ ಸಂಜೆ
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಗೀತೆಗಳೆಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. 'ವಿಷ್ಣುಸೇನೆ' ಚಿತ್ರದಲ್ಲಿ "ಅಭಿಮಾನಿಗಳೇ ನನ್ನ ಪ್ರಾಣ.." ಎಂದು ಹಾಡುವ ಮೂಲಕ ಅವರ ಹೃದಯ ಸಿಂಹಾಸವನ್ನು ನೇರವಾಗಿ ಅಲಂಕರಿಸಿದ ಕಲಾವಿದ ವಿಷ್ಣುದಾದಾ.
ವಿಷ್ಣು ಅವರ ಕಂಠಸಿರಿಯಲ್ಲಿ ಹಲವಾರು ಗೀತೆಗಳು ಮೂಡಿಬಂದಿವೆ. ಅವುಗಳಲ್ಲಿ ಪ್ರಮುಖವಾಗಿ 'ಸಾಹಸಸಿಂಹ' ಚಿತ್ರದ ಹೇಗಿದ್ದರೂ ನೀನೇ ಚೆನ್ನ, 'ಜಿಮ್ಮಿ ಗಲ್ಲು' ಚಿತ್ರದ ತುತ್ತು ಅನ್ನ ತಿನ್ನೋಕೆ, 'ಸಿಡಿದೆದ್ದ ಸಹೋದರ' ಚಿತ್ರದ ಬೇಡ ಅನ್ನೋರು ಉಂಟೇ, 'ಮೋಜುಗಾರ ಸೊಗಸುಗಾರ' ಚಿತ್ರದ ಕನ್ನಡವೇ ನಮ್ಮಮ್ಮ, 'ಹಂತಕರ ಸಂಚು' ಚಿತ್ರದ ಆಸೆಗಳ ತೋಟ ಮುಂತಾದ ಹಾಡುಗಳನ್ನು ಸ್ಮರಿಸಬಹುದು.
ವಿಷ್ಣುವರ್ಧನ್ ಅವರು ಕೇವಲ ಕಲಾವಿದನಾಗಿಯಷ್ಟೇ ಉಳಿಯದೆ ಗಾಯಕರಾಗಿಯೂ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಇದೀಗ ಅವರ ಹಾಡುಗಳನ್ನು ಮತ್ತೊಮ್ಮೆ ಕೇಳುವ ಅವಕಾಶವನ್ನು ಕಲ್ಪಿಸುತ್ತಿದೆ '7SUR' ಅವರ 'ಈ ಹೃದಯ ಹಾಡಿದೆ' ಕಾರ್ಯಕ್ರಮ. ಏಕ್ತಾ ಶಾ, ಅನಿಕೇತ್ ಪ್ರಭು, ಶ್ಯಾಮ್, ಗಣೇಶ್, ಶೀಲೂ ಮೆಹ್ತಾ, ರಾಜೇಶ್ ಭಟ್ ಸೇರಿದಂತೆ ಮುಂತಾದ ಗಾಯಕರ ಕಂಠಸಿರಿಯಲ್ಲಿ ಹಾಡುಗಳನ್ನು ಕೇಳಬಹುದು.

ಈ ಸಂಗೀತ ಸಂಜೆ ಕಾರ್ಯಕ್ರಮ ಇದೇ ಭಾನುವಾರ ಏಪ್ರಿಲ್ 19ರಂದು ಸಂಜೆ 5.30 ರಿಂದ 8.30ರವರೆಗೆ ನಡೆಯಲಿದೆ. ಸ್ಥಳ - ಬೆಂಗಳೂರು, ಜೆಸಿ ರಸ್ತೆಯ ಎಡಿಎ ರಂಗಮಂದಿರ. ವನವಾಸಿ ಕಲ್ಯಾಣ ಆಶ್ರಮದ ನೆರವಿಗಾಗಿ ಈ ವಿಶೇಷ ಸಂಗೀತ ಕಾರ್ಯಕ್ರಮನ್ನು ಆಯೋಜಿಸಿದೆ '7SUR'.
ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ 1952ರಲ್ಲಿ ಸ್ಥಾಪಿತವಾಗಿದ್ದು ವನವಾಸಿಗಳ ಅಭಿವೃದ್ಧಿಗಾಗಿ ಸತತ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆ. ಈ ವಿಶೇಷ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ರು.100 ಹಾಗೂ ರು.300 ನಿಗದಿಪಡಿಸಲಾಗಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











