ಮಾರುಕಟ್ಟೆಗೆ 'ಶ್ರಾವಣಿ ಸುಬ್ರಮಣ್ಯ' ಧ್ವನಿಸುರುಳಿ
ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಚಿತ್ರ 'ಶ್ರಾವಣಿ ಸುಬ್ರಮಣ್ಯ'. ಕಳೆದ ಶನಿವಾರ (ಡಿ.7) ಬೆಂಗಳೂರಿನ ಬಸವನಗುಡಿಯಲ್ಲಿ ಸಹಸ್ರಾರು ನೋಡುಗರ ಮುಂದೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿತು.
ಆರು ವರ್ಷಗಳ ಬಳಿಕ 'ಚೆಲುವಿನ ಚಿತ್ತಾರ' ಖ್ಯಾತಿಯ ಜೋಡಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ನಟಿಸಿರುವ 'ಶ್ರಾವಣಿ ಸುಬ್ರಮಣ್ಯ' ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಂಭ್ರಮಕ್ಕೆ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ಆಗಮಿಸಿದರು. ಅಂದಿನ ಸಮಾರಂಭದ ಮುಖ್ಯ ವಿಚಾರ ಅಂದರೆ ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರ ಮ್ಯೂಜಿಕಲ್ ನೈಟ್.
ಜೀ ಕನ್ನಡ ಸಹಯೋಗದೊಂದಿಗೆ ನಡೆದ ವಿ ಹರಿಕೃಷ್ಣ ಮ್ಯೂಜಿಕಲ್ ನೈಟ್ ಕಾರ್ಯಕ್ರಮ ಗಣೇಶ್ ಸ್ತುತಿಯೊಂದಿಗೆ ಪ್ರಾರಂಭವಾಗಿ, ಶಿವ ತಾಂಡವ, ಹೇಮಂತ್ ಅವರ ನಾನು ಕನ್ನಡಿಗ ಹಾಡು; ಸಂತೋಷ್, ಅನುರಾಧ ಭಟ್, ವಾಣಿ ಹರಿಕೃಷ್ಣ, ಹರಿಕೃಷ್ಣ ಅವರ ಹಾಡುಗಳು, ಮೇಘನಾ ಗಾಂವಕರ್ ನೃತ್ಯ ಅಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಅವರು ಚೆಲುವಿನ ಚಿತ್ತಾರ ಹಾಗೂ 'ಶ್ರಾವಣಿ ಸುಬ್ರಮಣ್ಯ' ಚಿತ್ರದ ಹಾಡುಗಳಿಗೆ ನರ್ತನ ನೋಡುಗರ ಕಣ್ಮನ ಸೆಳೆಯಿತು.ನಾಯಕಿ ಪರುಲ್ ಯಾದವ್ ಅವರಿಂದ ನೃತ್ಯ, ಸಂದೀಪ್, ನೇಹಾ ಪಾಟಿಲ್, ಹಾರ್ದಿಕಾ ಶೆಟ್ಟಿ ಅವರ ನೃತ್ಯ, ಕನ್ನಡದ ಹಳೆಯ ಹಾಡುಗಳ ಕಾರ್ಯಕ್ರಮ ನೇಹಾ ಸಕ್ಸೇನಾ ಅವರ ಫ್ಯಾಷನ್ ಶೋ, ಕೃಷ್ಣೇಗೌಡರ ಹಾಸ್ಯದ ರಸದೌತಣ ಹಾಗೂ ಇನ್ನಿತರ ಮನರಂಜನೆ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು. "Mad for each other" ಎಂಬುದು ಚಿತ್ರದ ಅಡಿಬರಹ.
ತಾರಾ, ಗಿರಿಜಾ ಲೋಕೇಶ್, ನೀನಾಸಂ ಅಶ್ವಥ್, ಶಿಲ್ಪಾ ಗಣೇಶ್, ಜೀ ಕನ್ನಡದ ಗೌತಮ್ ಮಚ್ಚಯ್ಯ, ಪರ್ತಕರ್ತ ರವಿ ಹೆಗ್ಡೆ, ನಿರ್ದೇಶಕರುಗಳಾದ ನಾಗತಿಹಳ್ಳಿ ಚಂದ್ರಶೇಖರ್, ಎ ಪಿ ಅರ್ಜುನ್, ಪವನ್ ಒಡೆಯರ್ ಹಾಗೂ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಾಗಿ ಶ್ರಾವಣಿ ಸುಬ್ರಹ್ಮಣ್ಯ ಚಿತ್ರಕ್ಕೆ ಶುಭ ಕೋರಿದರು. (ಒನ್ಇಂಡಿಯಾ ಕನ್ನಡ)


Click it and Unblock the Notifications












