ಕನ್ನಡದಲ್ಲೇ ಪ್ರಥಮ ಪೆನ್ ಡ್ರೈವ್ ಆಡಿಯೋ ರಿಲೀಸ್
ಕನಕಪುರದ ಗೆಳೆಯರೆಲ್ಲ ಸೇರಿ ನಿರ್ಮಿಸುತ್ತಿರುವ ಚಿತ್ರ 'ಗೀತಾ ಬ್ಯಾಂಗಲ್ ಸ್ಟೋರ್'. ಹೆಸರಿನಲ್ಲೆ ವಿಶೇಷ ಆಕರ್ಷಣೆ ಹೊಂದಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಸಾಮಾನ್ಯವಾಗಿ ಒಂದು ಚಿತ್ರದ ಹಾಡುಗಳನ್ನು ಕ್ಯಾಸೆಟ್ ಅಥವಾ ಸಿ.ಡಿ.ರೂಪದಲ್ಲಿ ಹೊರತರುವುದು ಎಲ್ಲರಿಗೂ ತಿಳಿದ ವಿಷಯ. ಈ ಚಿತ್ರತಂಡ ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ಎನ್ನಬಹುದಾದ ರೀತಿ ಪೆನ್ ಡ್ರೈವ್ ಮುಖಾಂತರ ಆಡಿಯೋ ರಿಲೀಸ್ ಮಾಡಿದೆ.
ಲಹರಿ ಆಡಿಯೋ ಸಂಸ್ಥೆಯ ವೇಲು ಅವರು ಈ ತಂಡದ ಜೊತೆ ಕೈಜೋಡಿಸಿ ಈ ದಾಖಲೆಗೆ ಕಾರಣರಾಗಿದ್ದಾರೆ. ಪೆನ್ ಡ್ರೈವ್ ಜೊತೆ ಯಥಾ ಪ್ರಕಾರ ಸಿ.ಡಿ.ಗಳನ್ನು ಸಹಾ ಸಿದ್ದಪಡಿಸಲಾಗಿದ್ದು ಸದ್ಯ ಮಾರುಕಟ್ಟೆಯಲ್ಲಿ ಸಿ.ಡಿ.ಗಳು ಮಾತ್ರ ದೊರೆಯಲಿವೆ. ಕನಕಪುರದ ಕೆಂಪರಾಜ್ ಹಾಗೂ ಕಿಶೋರ್ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ವಿ.ಮನೋಹರ್ ರವರ ಸಂಗೀತವಿದೆ. ಚಿತ್ರದ 8 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡ ನಿರ್ದೇಶಕರು ಮುಹೂರ್ತ ಹಾಗೂ ಆಡಿಯೋ ಎರಡನ್ನೂ ಸ್ಪೆಷಲ್ ಆಗಿ ಮಾಡಿದ್ದಾರೆ. ಅವರ ಸಲಹೆ ಮೇರೆಗೆ ಹಳೆಗನ್ನಡದಲ್ಲಿ ಒಂದು ಹಾಡನ್ನು ರೂಪಸಿದ್ದೇನೆ. 'ಬಬ್ರುವಾಹನ' ಚಿತ್ರದ ನಂತರ ಯಾರೂ ಹಳಗನ್ನಡದಲ್ಲಿ ಹಾಡು ಮಾಡಿದ್ದಿಲ್ಲ.
ನಾನೇ ಬರೆದ ಈ ಹಾಡಿಗೆ ರಾಜೇಶ್ ಚೈತ್ರ ಧ್ವನಿಗೂಡಿಸಿದ್ದಾರೆ. ಉಳಿದ ಹಾಡುಗಳನ್ನು ಮಂಜುಮಿತ್ರ ಅವರೇ ಬರೆದಿದ್ದಾರೆ. ಈ ನಿರ್ದೇಶಕರಲ್ಲಿ ಒಬ್ಬ ಸಾಹಿತಿಯೂ ಇದ್ದಾನೆ. ಒಂದಕ್ಕಿಂತ ಒಂದು ಉತ್ತಮ ಹಾಡುಗಳನ್ನು ಬರೆದಿರುವುದೇ ಇದಕ್ಕೆ ಸಾಕ್ಷಿ. ಕನಕಪುರದ ಈ ಗೆಳೆಯರು ಧನಕನಕಪುರದವರಾಗಿ ಬೆಳೆಯಲಿ ಎಂದು ಹಾರೈಸಿದರು.
ಮಠ ಗುರುಪ್ರಸಾದ್ ಮಾತನಾಡುತ್ತ ಈ ಚಿತ್ರದ ಶೀರ್ಷಿಕೆ ನನಗೆ ಬಹಳ ಹಿಡಿಸಿತು. ನಾಯಕ ಪಂಜುಗೆ ಒಳ್ಳೆ ಭವಿಷ್ಯವಿದೆ. ಎದ್ದೇಳು ಮಂಜುನಾಥದಲ್ಲಿ ನಾನು ಹಳಗನ್ನಡದಲ್ಲಿ ಹಾಡು ಮಾಡಬೇಕೆಂದುಕೊಂಡಿದ್ದೆ ಆಗಲಿಲ್ಲ ಎಂದು ಹೇಳಿದರು.
ನಿರ್ದೇಶಕ ಮಂಜುಮಿತ್ರ ಮಾತನಾಡಿ ಓಂ ಪ್ರಕಾಶ್ ರಾವ್ ಹಾಗೂ ಗಿರಿರಾಜ್ ಜೊತೆ ಕೆಲಸ ಕಲಿತ ನನಗೆ ಕೆಂಪರಾಜ್ ಅವರು ನಿರ್ದೇಶಕನಾಗಲು ಅವಕಾಶ ಮಾಡಿಕೊಟ್ಟರು. ಇಲ್ಲಿ ಪಾತ್ರಗಳು ಸೀರಿಯಸ್ ಆಗಿದ್ದರೂ ಪ್ರೇಕ್ಷಕರು ನಗುತ್ತಿರುತ್ತಾರೆ. ಒಂದು ಹಾಡಿನಲ್ಲಿ ಕನ್ನಡ ಕ್ರಿಕೆಟ್ ಕಾಮೆಂಟರಿ ಇದೆ.
ಒಬ್ಬ ರೇಷ್ಮೆ ಬೆಳೆಗಾರ ಹಾಗೂ ಒಬ್ಬ ಬ್ಯಾಂಗಲ್ ಮಾರಾಟಗಾರಳ ಪ್ರೇಮ ಕಥೆಯಿದು. ಕಥೆಯಲ್ಲಿ ಅನೇಕ ಟ್ವಿಸ್ಟ್ ಗಳಿವೆ. ಒಂದು ಹಳ್ಳಿಯಲ್ಲಿ ನಡೆದ ಕಥೆ ಇದಾದ್ದರಿಂದ ಕನಕಪುರ ತಾಲ್ಲೂಕಿನ ಮರಳವಾಡಿಗ್ರಾಮ ಹಾಗೂ ಸುತ್ತಮುತ್ತ ಸುಮಾರು 50 ದಿನಗಳ ಕಾಲ ಶೂಟಿಂಗ್ ನಡೆದಿದೆ.
ರಕ್ಷಣಾ ವೇದಿಕೆಯ ನಾರಾಯಣ ಗೌಡ್ರು ಮಾತನಾಡಿ ಕನಸುಗಳನ್ನು ಹೊತ್ತುಕೊಂಡು ಬಂದಿರುವ ಈ ನಿರ್ಮಾಪಕ ನಿರ್ದೇಶಕರ ಕನಸುಗಳೆಲ್ಲ ಕೈಗೂಡಲಿ, ಆರಂಭದಿಂದಲೂ, ವಿಶೇಷತೆಗಳನ್ನು ಮಾಡಿಕೊಂಡು ಬಂದಿರುವ ಈ ಸಿನಿಮಾ ವಿಶೇಷ ಚಿತ್ರವಾಗಿ 6 ಕೋಟಿ ಕನ್ನಡಿಗರನ್ನು ತಲುಪಲಿ ಎಂದು ಹಾರೈಸಿದರು.
'ಭಜರಂಗಿ' ನಿರ್ಮಾಪಕರಾದ ನಟರಾಜ ಗೌಡ, ಅದ್ವೈತ ನಿರ್ದೇಶಕ ಗಿರಿರಾಜ್, ಸುಂದರ, ವೀಣಾ ಸುಂದರ್ ದಂಪತಿಗಳು, ಸಮಾರಂಭದಲ್ಲಿ ಹಾಜರಿದ್ದರು. ಚಿತ್ರದ ಬಹುತೇಕ ಕೆಲಸ ಮುಗಿದಿದ್ದು ಸದ್ಯದಲ್ಲೇ ತೆರೆಕಾಣಲು ಸಿದ್ಧವಾಗುತ್ತಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











