"ಬೇಡ ಅಂತ ಬಿಟ್ಟ ಟ್ಯೂನ್.. ಮಧ್ಯರಾತ್ರಿ ಬರೆದ ಸಾಹಿತ್ಯ 'ಚೈತ್ರದ ಪ್ರೇಮಾಂಜಲಿ'ಗೆ ವರವಾಯ್ತು"
90ರ ದಶಕದಲ್ಲಿ ತೆರೆಕಂಡು ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ಸೇರಿದ ಸಿನಿಮಾ 'ಚೈತ್ರದ ಪ್ರೇಮಾಂಜಲಿ'. ವಿಶೇಷ ಅಂದ್ರೆ, ಇಬ್ಬರು ಹೊಸ ಪ್ರತಿಭೆಗಳನ್ನಿಟ್ಟುಕೊಂಡು ಎಸ್ ನಾರಾಯಣ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಅಂದ್ಹಾಗೆ ಕಲಾ ಸಾಮ್ರಾಟ್ಗೂ ಇದು ಮೊದಲ ಸಿನಿಮಾ ಆಗಿತ್ತು.
'ಚೈತ್ರದ ಪ್ರೇಮಾಂಜಲಿ' ಸಿನಿಮಾದ ನಾಯಕ ರಘುವೀರ್ ಹೀರೊ ಮೆಟಿರಿಯಲ್ ಅಲ್ಲ ಅಂತ ಕಮೆಂಟ್ ಮಾಡುತ್ತಿದ್ದರು. ಹೀಗಾಗಿದ್ದರೂ ಸಿನಿಮಾ ಸೆಟ್ಟೇರಿತ್ತು. ಎಲ್ಲಾ ಹೊಸಬರೇ ಇದ್ದಿದ್ದರಿಂದ ಸಂಗೀತ ಕ್ಷೇತ್ರದ ಸೂಪರ್ಸ್ಟಾರ್ ಹಂಸಲೇಖರಿಂದಲೇ ಟ್ಯೂನ್ ಹಾಕಿಸಬೇಕು ಅಂತ ನಿರ್ಮಾಪಕರು ಪಟ್ಟು ಹಿಡಿದು ಕೂತಿದ್ದರು.
90ರ ದಶಕದಲ್ಲಿ ಹಂಸಲೇಖ ಸಿಕ್ಕಾ ಪಟ್ಟೆ ಬ್ಯೂಸಿಯಾಗಿದ್ದರು. ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕರ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಹೀಗಾಗಿ 'ಚೈತ್ರದ ಪ್ರೇಮಾಂಜಲಿಗೆ ಸಂಗೀತ ನೀಡಲು ಸಾಧ್ಯವಿಲ್ಲ ಎಂದಿದ್ದರು. ಆ ಬಳಿಕ ಏನಾಯ್ತು? ಟ್ಯೂನ್ಗಳು ಸಿಕ್ಕಿದ್ದೇಗೆ? ಮಧ್ಯರಾತ್ರಿಯಲ್ಲಿ ಹಂಸಲೇಖ ಸಾಹಿತ್ಯ ಬರೆದ ರೋಚಕ ಕ್ಷಣಗಳನ್ನು ನಿರ್ದೇಶನ ಎನ್ ನಾರಾಯಣ್ ಈ ಸಂಜೆ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಆ ಸಂದರ್ಶನದ ಹೈಲೈಟ್ ಇಲ್ಲಿದೆ.

ಸ್ಟಾರ್ ನಿರ್ದೇಶಕ ಬಿಟ್ಟ ಟ್ಯೂನ್ ಇಷ್ಟ ಆದರೆ ಬಳಸಿಕೋ
" ನೋಡು ಮರಿ ನನಗೆ ಈಗ ಕೂತುಕೊಂಡು ಕಂಪೋಸ್ ಮಾಡುವುದಕ್ಕೆ ಸಮಯವಿಲ್ಲ. ಅವರು 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಯಾವ ಸಿನಿಮಾ ಬಂದರೂ ಆಗಲ್ಲ ಅಂತ ಹೇಳುತ್ತಿರಲಿಲ್ಲ. ಕೆಲಸ ಮಾಡಿ ಕೊಡೋರು. ರಾಜೇಂದ್ರ ಸಿಂಗ್ ಬಾಬು, ಡಿ ಬಾಬು, ಕೆ ವಿ ರಾಜು, ರವಿಚಂದ್ರನ್ ಕಂಪೋಸಿಂಗ್ ಇದೆ. ಈ ಮಧ್ಯೆ ನಾನು ನಿನಗೆ ಕಂಪೋಸಿಂಗ್ ಮಾಡಲು ಆಗಲ್ಲ ಎಂದಿದ್ರು. ನೀನು ದಿನಾ ಬಾ.. ದೊಡ್ಡ ನಿರ್ದೇಶಕರುಗಳಿಗೆ ಟ್ಯೂನ್ ಹಾಕಿ ಕೊಡುತ್ತಿರುತ್ತೇನೆ. ಅವರ ಬೇಡ ಅಂತ ಬಿಡುತ್ತಾರಲ್ಲ. ಅದರಲ್ಲಿ ನಿನಗೆ ಏನಾದರೂ ಇಷ್ಟ ಆದರೆ, ಅದರಲ್ಲಿ ನೀನು ತಗೋ ಎಂದಿದ್ರು" ಎಂದು ಮಾಹಿತಿ ನಿರ್ದೇಶಕ ಎಸ್ ನಾರಾಯಣ್ ಆ ಕ್ಷಣವನ್ನು ವಿವರಿಸಿದ್ದಾರೆ.

ಕೆವಿ ರಾಜು, ಡಿ ಬಾಬು ಬಿಟ್ಟ ಟ್ಯೂನ್ ಸಿಕ್ಕಿದ್ದೇಗೆ?
"ಕೆವಿ ರಾಜು ಅವರಿಗಾ ಹಾಡು ಕಂಪೋಸ್ ಮಾಡುತ್ತಿದ್ದರು. ಆ ಚೆನ್ನಾಗಿ ಇತ್ತು. ಅವರು ಈ ಹಾಡು ಬಿಡಲಿ ಅಂತ ನಾನು ದೇವರಲ್ಲಿ ಬೇಡಿ ಕೊಳ್ಳುತ್ತಿದ್ದೆ. ಅವರು ಬಿಡುತ್ತಿದ್ದರು. ಈ ಹಾಡು ನನಗೆ ಬೇಕು ಎಂದೆ. ಆಗ ಹಂಸಲೇಖ ಸುಮಾರಾಗಿ ಇದೆ ಎಂದಿದ್ರು. ಹೀಗೆ ಡಿ ಬಾಬು,ರವಿಚಂದ್ರನ್ ಇವೆಲ್ಲ ಬಿಟ್ಟ ಹಾಡುಗಳನ್ನು ಗುಡ್ಡೆ ಹಾಕಿ ಮಾಡಿದ್ವಿ. ಎಲ್ಲವೂ ಸೂಪರ್ ಹಿಟ್ ಆಯ್ತು."

ಹಂಸಲೇಖ ಅವರು ಅಂದು ಹೇಳಿದ್ದು ಕೋಪ ಬಂದಿತ್ತು
"ಹಂಸಲೇಖ ತುಂಬಾನೇ ಬ್ಯುಸಿ ಇದ್ದರು. ನಮ್ಮ ಸಿನಿಮಾಗೆ ಎಲ್ಲಿ ಹಾಡು ಬರೆಯುತ್ತಾರೆ. ನೋಡಪ್ಪ ಚೆನ್ನೈನಲ್ಲಿ ರವಿಚಂದ್ರನ್ ತಂಗಿ ಮದುವೆ. ನಾನು ಕಾರಿನಲ್ಲಿ ಹೋಗುತ್ತಿದ್ದೇನೆ. ನೀನು ಜೊತೆಯಲ್ಲಿಯೇ ಬಾ. ಅಲ್ಲೇ ಕಾರಿನಲ್ಲೇ ಬರೆದುಕೊಂಡು ಹೋಗೋಣ ಅಂದ್ರು. ಹೇಗೂ 5 ಗಂಟೆ ಸಮಯ ಜೊತೆಯಲ್ಲಿಯೇ ಬರೆದು ಬಿಡುತ್ತಾರೆ ಅಂತ ಜೊತೆಯಲ್ಲಿಯೇ ಹೋದೆ. ಯಾರೋ ಜೊತೆ ಮಾತಾಡುತ್ತಾ ಕೂತುಬಿಟ್ರು ಹಾಡು ಬರೆಯೋಕೆ ಆಗಲೇ ಇಲ್ಲ. ನನಗೆ ತುಂಬಾನೇ ಬೇಜಾರು ಆಯ್ತು. ಆಮೇಲೆ ಮದುವೆ ಮುಗಿಸಿಕೊಂಡು ಹೋಗೋಣ. ಆ ಮೇಲೆ ಬರೆಯೋಣ ಅಂದ್ರು ನನಗೆ ಕೋಪ ಬಂದುಬಿಡ್ತು." ಎಂದು ಈ ಸಂಜೆ ಸಂದರ್ಶನದಲ್ಲಿ ಹೇಳಿದ್ದಾರೆ.

'ಒಂದೂವರೆ ಗಂಟೆಯಲ್ಲಿ ಎಲ್ಲಾ ಹಾಡು ಬರೆದ್ರು'
"ಮದುವೆ ಮುಗಿಯೋದು 12 ಗಂಟೆ ಆಯ್ತು. ಇನ್ನು ಇವರು ಬರೆಯುತ್ತಾರಾ? ಅಂತ ಅನಿಸಿತ್ತು. ಒಂದೇ ರೂಮಿನಲ್ಲಿ 4 ಜನರು ಮಲಗಬೇಕು. ಕಂಬಳಿ ಹಾಸಿ, ನೀನು ಇಲ್ಲಿ ಮಲಗಿಕೊ. ನೀನು ಇಲ್ಲಿ ಮಲಗು ಬೇರೆಯವರಿಗೆ ಹೇಳಿ, ನನಗೆ ಹಾಡು ಬರೆಯೋಣ ಬಾ ಅಂತ ಕರೆದರು. ಪೆನ್ನು ಪೇಪರ್ ಹಿಡಿದುಕೊಂಡು ಕೂತು, ಭೂತಾಯಿ ಅಮ್ಮನ.. ಕೈ ಗೂಸು ಅಮ್ಮನ ಅಂತ ಬರೆದರು. ಅದ್ಬುತ ಆರಂಭ ಸಿಕ್ಕಿತು. 15 ನಿಮಿಷದಲ್ಲಿ ಬರೆದು ಮುಗಿಸಿದ್ದರು. ಇನ್ನೊಂದು ಟ್ಯೂನ್ ಎತ್ತಿಕೋ ಅಂತ ಚೈತ್ರದ ಪ್ರೇಮಾಂಜಲಿಯ ಅಂತ ಬರಿ ಹೂವುಗಳನ್ನೇ ಇಟ್ಕೊಂಡು ಬರೆದರು. ಒಂದೂವರೆ ಗಂಟೆಯಲ್ಲಿ ಎಲ್ಲಾ ಹಾಡುಗಳನ್ನು ಬರೆದು ಮುಗಿಸಿದ್ದರು." ಎಂದು ಎಸ್ ನಾರಾಯಣ್ ಸಕ್ಸಸ್ ಸ್ಟೋರಿಯನ್ನು ಹೇಳಿದ್ದಾರೆ.


Click it and Unblock the Notifications











