ಅಪ್ಪುಗಾಗಿ 'ಮೋಕ್ಷ ದೀಪ' ಹಚ್ಚಿದ ಸಂಗೀತ ಮಾಂತ್ರಿಕ ಇಳಯರಾಜ
ದೊಡ್ಮನೆ ಕುಟುಂಬ ನೆರೆ-ಹೊರೆಯ ಚಿತ್ರರಂಗಗಳ ಜೊತೆಗೆ ಕಲಾವಿದ, ತಂತ್ರಜ್ಞರೊಂದಿಗೆ ಹೊಂದಿದ್ದ ಬಾಂದವ್ಯ ಬಹಳ ಆಪ್ತವಾದುದು. ಹಾಗಾಗಿಯೇ ದೊಡ್ಮನೆ ಕುಟುಂಬದ ಖುಷಿ-ದುಃಖ ಯಾವುದೇ ಸಂದರ್ಭದಲ್ಲಿಯೂ ನೆರೆ-ಹೊರೆಯ ಚಿತ್ರರಂಗದ ದಿಗ್ಗಜರು ಧಾವಿಸುತ್ತಾರೆ, ಸ್ಪಂದಿಸುತ್ತಾರೆ.
ಸಂಗೀತ ನಿರ್ದೇಶಕ ಇಳಯರಾಜಗೆ ಕನ್ನಡ ಸರಿಯಾಗಿ ಬಾರದು ಆದರೆ ಡಾ.ರಾಜ್ಕುಮಾರ್ ಎಂದರೆ ಅವರಿಗೆ ಅಪಾರ ಪ್ರೀತಿ. ಈ ಹಿಂದೆ ಹಲವು ಸಂದರ್ಶನಗಳಲ್ಲಿ ರಾಜ್ಕುಮಾರ್ ವ್ಯಕ್ತಿತ್ವವನ್ನು ಅವರು ಕೊಂಡಾಡಿದ್ದಾರೆ. ಇದೀಗ ಆ ಕುಟುಂಬದ ಕುಡಿಯೊಂದು ಅಸ್ತಂಗತವಾದ ದುಃಖದ ಸಂದರ್ಭದಲ್ಲಿ ಇಳಯರಾಜ ಆ ನೋವಿಗೆ ತಮ್ಮದೇ ರೀತಿಯಲ್ಲಿ ಸ್ಪಂದಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅವರಿಗೆ ಮೋಕ್ಷ ಸಿಗಲಿ ಎಂದು ಸಂಗೀತ ನಿರ್ದೇಶಕ ಇಳಯರಾಜ ಅವರು ಅರುಣಾಚಲ ಕ್ಷೇತ್ರದ ಶ್ರೀ ರಮಣ ಭಗವಾನ್ ಸನ್ನಿಧಿಯಲ್ಲಿ ಮೋಕ್ಷ ದೀಪವನ್ನು ಬೆಳಗಿಸಿದ್ದಾರೆ. ಪುನೀತ್ ಅವರ ಶಾಂತಿ ಸಿಗಲಿ ಎಂದು ಅವರ ಕುಟುಂಬದವರಿಗೆ ನೆಮ್ಮದಿ ಸಿಗಲೆಂದು ಇಳಯರಾಜ ಅವರು ಮೋಕ್ಷ ದೀಪ ಹಚ್ಚಿದ್ದಾರೆ.

ಇಳಯರಾಜ ದೀಪ ಹಚ್ಚಿ ಪೂಜೆ ಸಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀಪದ ಆಶೀರ್ವಾದ ಪಡೆದ ಇಳಯರಾಜ ಅವರು, 'ಪುನೀತ್ ರಾಜ್ಕುಮಾರ್ ಅವರ ಆತ್ಮಕ್ಕೆ ಶಾಂತಿಯಾಗಲಿ, ಶಾಂತಿಯಾಗಲಿ, ಶಾಂತಿಯಾಗಲಿ'' ಎಂದು ಕೈಮುಗಿದಿದ್ದಾರೆ.
ಹಿರಿಯ ಸಂಗೀತ ನಿರ್ದೇಶಕ ಇಳಯರಾಜರ ಈ ಪ್ರೀತಿಗೆ ಅಪ್ಪು ಅಭಿಮಾನಿಗಳು ಹೆಮ್ಮೆ ಪಟ್ಟಿದ್ದಾರೆ. ಇಳಯರಾಜ ಕನ್ನಡದ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಪುನೀತ್ ನಟಿಸಿದ್ದ 'ಮೈತ್ರಿ' ಸಿನಿಮಾಕ್ಕೆ ಇಳಯರಾಜ ಸಂಗೀತ ನೀಡಿದ್ದರು. ಡಾ.ರಾಜ್ಕುಮಾರ್ ನಟನೆಯ ಹಲವು ಸಿನಿಮಾಗಳಿಗೆ ಇಳಯರಾಜ ಸಂಗೀತ ನಿರ್ದೇಶಿಸಿದ್ದರು. ರಾಜ್ಕುಮಾರ್ ಬಗ್ಗೆ ವಿಶೇಷ ಅಭಿಮಾನವನ್ನು ಇಳಯರಾಜ ಹೊಂದಿದ್ದರು.


Click it and Unblock the Notifications











