ಬಳ್ಳಾರಿಯಲ್ಲಿ ಧೂಳೆಬ್ಬಿಸಿದ ಪುನೀತ್ ರಾಜ್ 'ಪವರ್'
ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಆಡಿಯೋ ಬಿಡುಗಡೆ ಸಮಾರಂಭ ಇಷ್ಟು ದೊಡ್ಡ ಮಟ್ಟದಲ್ಲಿ ನಡೆದಿದ್ದಿಲ್ಲ. ಎಲ್ಲೋ ಸರಳ ಸಮಾರಂಭದಲ್ಲಿ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ ನಡೆದು ಹೋಗುತ್ತಿತ್ತು. ಆದರೆ ಪುನೀತ್ ರಾಜ್ ಕುಮಾರ್ ಅವರ 'ಪವರ್' ಆಡಿಯೋ ಮಾತ್ರ ಬಳ್ಳಾರಿಯಲ್ಲಿ ಬಹಳ ಅದ್ದೂರಿಯಾಗಿ ಬಿಡುಗಡೆಯಾಗಿದೆ.
ಶನಿವಾರ (ಜೂ.28) ಸಂಜೆ ಬಳ್ಳಾರಿಯ ಮುನ್ಸಿಪಲ್ ಮೈದಾನ ಜನಜಂಗುಳಿಯಿಂದ ತುಂಬಿ ತುಳುಕುತ್ತಿತ್ತು. ಬಳ್ಳಾರಿಯಲ್ಲಿ ಕನ್ನಡ ಚಿತ್ರಗಳನ್ನು ನೋಡುವುದೇ ಕಷ್ಟ. ಇನ್ನು ಆಡಿಯೋ ಬಿಡುಗಡೆಗೆ ಈ ಪಾಟಿ ಜನವೇ ಎಂದು ಹುಬ್ಬೇರಿಸುವಂತಾಯಿತು. [ದುಷ್ಮನ್ ಅಂದ್ರೆ ದೂಸ್ರಾ ಮಾತೇ ಇಲ್ಲ 'ಪವರ್' ಸ್ಟಾರ್]
ತೆಲುಗಿನ ಹೆಸರಾಂತ ನಟ ಪ್ರಿನ್ಸ್ ಮಹೇಶ್ ಬಾಬು ಈ ಚಿತ್ರದ ಆಡಿಯೋ ಸೀಡಿಯನ್ನು ಬಿಡುಗಡೆ ಮಾಡಿದರು. ಚಿತ್ರದ ಪ್ರಥಮ ಸೀಡಿಯನ್ನು 'ದೂಕುಡು' ಚಿತ್ರದ ನಿರ್ದೇಶಕ ಶ್ರೀನು ವೈಟ್ಲ ಸ್ವೀಕರಿಸಿದರು.
ಕನ್ನಡ ಹಾಗೂ ತೆಲುಗು ಚಿತ್ರರಂಗದ ಇಬ್ಬರೂ ಸೂಪರ್ ಸ್ಟಾರ್ಗಳಾದ ಪವರ್ರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಪ್ರಿನ್ಸ್ ಮಹೇಶ್ಬಾಬು ಒಂದೇ ವೇದಿಕೆಯಲ್ಲಿ ನೋಡುವ ಭಾಗ್ಯ ಬಳ್ಳಾರಿ ಜನತೆಗೆ ಅಂದು ಲಭಿಸಿತು. ಬನ್ನಿ ಫೋಟೋಗಳ ಝಲಕ್ ನೋಡೋಣ.

ತೆಲುಗಿನಲ್ಲೇ ಮಾತು ಆರಂಭಿಸಿದ ಮಹೇಶ್
"ಅಂದರಿಕಿ ನಮಸ್ಕಾರಮಂಡಿ (ಎಲ್ಲರಿಗೂ ನಮಸ್ಕಾರ) ಎಂದು ಮಾತು ಆರಂಭಿಸಿದ ಮಹೇಶ್ ಬಾಬು, ಬಳಿಕ ಮಾತನಾಡುತ್ತಾ, "ಪೋಕಿರಿ ಚಿತ್ರದ ವೇಳೆ ಪುನೀತ್ ರನ್ನು ಭೇಟಿಯಾಗಿದ್ದೆ. ಗ್ರೇಟ್ ರಾಜ್ ಕುಮಾರ್ ಅವರ ಕುಟುಂಬ ಅಷ್ಟು ಸರಳವಾಗಿರುತ್ತದೆ ಎಂದು ಗೊತ್ತಿರಲಿಲ್ಲ. 'ದೂಕುಡು' ಚಿತ್ರ ನನ್ನ ವೃತ್ತಿಜೀವನದಲ್ಲೇ ಅತ್ಯಂತ ದೊಡ್ದ ಮೈಲಿಗಲ್ಲು" ಎಂದರು.

ಸುಮಾರು 50 ಸಾವಿರ ಜನ ಜಂಗುಳಿ
ಕನ್ನಡದ ಪವರ್ ಚಿತ್ರವೂ ಸೂಪರ್ ಡೂಪರ್ ಹಿಟ್ ಆಗಲಿ ಎಂದು ಹಾರೈಸುತ್ತೇನೆ ಎಂದರು ಮಹೇಶ್ ಬಾಬು. ಈ ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನ ಸೇರಿದ್ದರು.

ಮಹಿಳೆಯರು, ಮಕ್ಕಳು ಎನ್ನದೆ ಹರಿದುಬಂದರು
ಮಹಿಳೆಯರು, ಮಕ್ಕಳು ಎನ್ನದೆ ಸಾಕಷ್ಟು ಸಂಖ್ಯೆಯಲ್ಲಿ ಆಡಿಯೋ ಬಿಡುಗಡೆಗೆ ಸಮಾರಂಭಕ್ಕೆ ಜನ ಆಗಮಿಸಿದ್ದರು.

ಪ್ರಮುಖ ಆಕರ್ಷಣೆ ತ್ರಿಷಾ ಗೈರು
ಜನರನ್ನು ನಿಯಂತ್ರಿಸಲು ಪೊಲೀಸರು ತಮ್ಮ ಲಾಠಿಗೂ ಕೆಲಸ ಕೊಡಬೇಕಾಯಿತು. ಆದರೆ ಚಿತ್ರದ ಪ್ರಮುಖ ಆಕರ್ಷಣೆ ತ್ರಿಷಾ ಇಲ್ಲದೆ ಇದ್ದದ್ದು ಅವರ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಯಿತು.

ಮೂಲ ಚಿತ್ರದ ನಿರ್ಮಾಪಕರು
ಮೂಲ ಚಿತ್ರದಲ್ಲಿ ಮಹೇಶ್ ಬಾಬು, ಸಮಂತಾ ಮುಖ್ಯಭೂಮಿಕೆಯಲ್ಲಿದ್ದಾರೆ. 14 ರೀಲ್ಸ್ ಎಂಟರ್ ಟೈನ್ ಮೆಂಟ್ ಪ್ರೈ ಲಿ ಹಾಗೂ ಕೊಲ್ಲ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಗೋಪಿ ಅಚಂಟ, ರಾಮ್ ಅಚಂಟ ಹಾಗೂ ಅನಿಲ್ ಸುಂಕರ ನಿರ್ಮಿಸುತ್ತಿದ್ದಾರೆ.

ಬಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿದ ಚಿತ್ರ
ಶ್ರೀನು ವೈಟ್ಲ ನಿರ್ದೇಶನದ 'ದೂಕುಡು' ಚಿತ್ರ ಬಾಕ್ಸ್ ಆಫೀಸಲ್ಲಿ ರು.100 ಕೋಟಿ ಗಳಿಸುವ ಮೂಲಕ ಟಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿತ್ತು. ಹಳಿತಪ್ಪಿದ್ದ ಮಹೇಶ್ ಬಾಬು ಅವರ ವೃತ್ತಿಜೀವನದಲ್ಲಿ ಮಹತ್ತರ ತಿರುವು ನೀಡಿದ ಚಿತ್ರವಿದು. ನಂದಿ ಪ್ರಶಸ್ತಿ ಸೇರಿದಂತೆ ಫಿಲಂಫೇರ್ ಪ್ರಶಸ್ತಿಗಳಿಗೆ ಚಿತ್ರ ಪಾತ್ರವಾಗಿದೆ.

ಬಳ್ಳಾರಿಯಲ್ಲಿ ಬಂತು ಬಂತು ಕರೆಂಟು ಬಂತು
ಬಳ್ಳಾರಿಯಲ್ಲಿ ಆಗಾಗ ಕರೆಂಟ್ ಇರಲ್ಲ ಅಂತಾರೆ. ಈಗ ಪವರ್ ಬಂದಿದೆ. ಇನ್ಮೇಲೆ ನಿರಂತರವಾಗಿ ಪವರ್ ಇರುತ್ತೆ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು. ಶರತ್ ಲೋಹಿತಾಶ್ವ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು, ತಂತ್ರಜ್ಞರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತೆಲುಗಿನ ಎಸ್ ಎಸ್ ತಮನ್ ಸಂಗೀತ
ಐದು ಹಾಡುಗಳಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡುತ್ತಿದ್ದಾರೆ. ಕನ್ನಡದಲ್ಲಿ ಇದು ಅವರ ಪ್ರಥಮ ಚಿತ್ರ. ಕೃಷ್ಣಕುಮಾರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್.ಚಂಪಕಧಾಮ (ಬಾಬು), ಎಸ್.ಕುಮಾರ್ ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ.

ಕತ್ತಲಾವರಿಸುತ್ತಿದ್ದಂತೆ ಕಣ್ಮನ ತಣಿಸುವ ನೃತ್ಯ
ಜಗಮಗಿಸುವ ಕಲರ್ ಕಲರ್ ಬೆಳಕಿನ ವೇದಿಕೆಯಲ್ಲಿ ಕತ್ತಲಾವರಿಸುತ್ತಿದಂತೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದರಿಂದ ಕಣ್ಮನ ತಣಿಸುವ ನೃತ್ಯ ಕಾರ್ಯಕ್ರಮ ನಡೆಯಿತು.

ಬಳ್ಳಾರಿ ನಗರ ನನಗೆ ಇಷ್ಟವಾದ ಊರು
ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ನನ್ನ ಸ್ನೇಹಿತರು. ಅವರು ಇಲ್ಲಿಗೆ ಬಂದು ನನ್ನ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದು ತುಂಬಾ ಖುಷಿಯಾಗಿದೆ. ಅಲ್ಲದೆ ಬಳ್ಳಾರಿ ನಗರ ನನಗೆ ಇಷ್ಟವಾದ ಊರು. ನನ್ನ ಹಲವಾರು ಚಿತ್ರಗಳ ಚಿತ್ರೀಕರಣ ಇಲ್ಲಿನ ಸುತ್ತಮುತ್ತಲ್ಲ ಪ್ರದೇಶಗಳಲ್ಲಿ ನಡೆದಿದೆ. ಮಾದೇಶ್ ಅವರು ಈ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಿದ್ದಾರೆ ಎಂದು ಚಿತ್ರತಂಡದವರ ಸಹಕಾರವನ್ನು ಪುನೀತ್ ನೆನಪಿಸಿಕೊಂಡರು.


Click it and Unblock the Notifications











