'ರಥಾವರ' ಚಿತ್ರಕ್ಕೆ ಶ್ರೀಮುರಳಿ ಗಾನಬಜಾನ
ನಾಯಕರು ಗಾಯಕರಾಗುತ್ತಿರುವುದು ಗಾಂಧಿನಗರದ ಹೊಸ ಟ್ರೆಂಡ್. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ರಿಂದ ಹಿಡಿದು ಇತ್ತೀಚೆಗಿನ ಯಶ್, ಶರಣ್ ವರೆಗೂ ಬಹುತೇಕ ತಾರೆಯರು ಗಾನಸುಧೆ ಹರಿಸಿದ್ದಾರೆ.
ಈಗ ಶ್ರೀಮುರಳಿಯ ಸರದಿ. 'ಉಗ್ರಂ' ಸೂಪರ್ ಹಿಟ್ ಆದ್ಮೇಲೆ 'ರಥಾವರ' ಚಿತ್ರದಲ್ಲಿ ಅಭಿನಯಿಸುತ್ತಿರುವ ಶ್ರೀಮುರಳಿ, ಅದೇ ಚಿತ್ರದ ಹಾಡೊಂದಕ್ಕೆ ದನಿಯಾಗಲಿದ್ದಾರೆ. ಧರ್ಮವಿಶ್ ಸಂಗೀತ ಸಂಯೋಜನೆಯಲ್ಲಿ ಯೋಗರಾಜ್ ಭಟ್ ಬರೆದಿರುವ ಹಾಡನ್ನ ಶ್ರೀಮುರಳಿ ಹಾಡಲಿದ್ದಾರೆ.

ಹಾಗ್ನೋಡಿದ್ರೆ, ಶ್ರೀಮುರಳಿಗೆ ಹಾಡುವುದೇನು ಹೊಸದಲ್ಲ, ಮುಂಚಿನಿಂದಲೂ ಅವರಿಗೆ ಗಾಯನದಲ್ಲಿ ಆಸಕ್ತಿ ಇದೆ. ಸಹೋದರ ವಿಜಯ್ ರಾಘವೇಂದ್ರ ಕೂಡ ಉತ್ತಮ ಗಾಯಕ. 'ರಥಾವರ' ಚಿತ್ರದಲ್ಲಿ ಧರ್ಮವಿಶ್ ಸೂಚನೆಯ ಮೇರೆಗೆ ಶ್ರೀಮುರಳಿ ತಮ್ಮ ಕಂಠಸಿರಿ ಪ್ರದರ್ಶಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ['ಉಗ್ರಂ' ಶ್ರೀಮುರುಳಿಗೆ ಕಣ್ಬಿಟ್ಟ ಅದೃಷ್ಟ ಲಕ್ಷ್ಮಿ.!]
ಕಳೆದ ಅಕ್ಟೋಬರ್ ನಲ್ಲಿ 'ರಥಾವರ' ಚಿತ್ರ ಸೆಟ್ಟೇರಿತ್ತು. ಯಾವುದೇ ಆಡಂಬರ ಇಲ್ಲದೇ, ಸೈಲೆಂಟ್ ಆಗಿ ಚಿತ್ರೀಕರಣ ನಡೆಸುತ್ತಿರುವ 'ರಥಾವರ' ಚಿತ್ರಕ್ಕೆ 'ಆನೆ ಪಟಾಕಿ' ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಕ.

ಶ್ರೀಮುರಳಿಗೆ 'ರಥಾವರ' ಚಿತ್ರದಲ್ಲಿ ಮೊದಲ ಬಾರಿಗೆ ಜೋಡಿಯಾಗಿರುವುದು 'ಬುಲ್ ಬುಲ್' ಬೆಡಗಿ ರಚಿತಾ ರಾಮ್. ಬಹುತೇಕ ಚಿತ್ರೀಕರಣ ಕಂಪ್ಲೀಟ್ ಮಾಡಿರುವ 'ರಥಾವರ' ಚಿತ್ರ ಜೂನ್ ನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಶ್ರೀಮುರಳಿಯ ಗಾನಸುಧೆ ಸದ್ದು ಮಾಡಲಿದೆ. [ಶ್ರೀಮುರುಳಿಯ 'ರಥಾವರ' ಖಡಕ್ ಗೆಟಪ್ ಔಟ್]
ಈಗಾಗಲೇ ಹಾಡನ್ನ ಪ್ರ್ಯಾಕ್ಟೀಸ್ ಮಾಡುತ್ತಿರುವ ಶ್ರೀಮುರಳಿ, ಸದ್ಯದಲ್ಲೇ ರೆಕಾರ್ಡಿಂಗ್ ಮಾಡಲಿದ್ದಾರೆ. ಗಾಯಕನಾಗುತ್ತಿರುವ ಶ್ರೀಮುರಳಿಗೆ ಆಲ್ ದಿ ಬೆಸ್ಟ್.


Click it and Unblock the Notifications











