ಪೂಜಾಗಾಂಧಿ ಜೊತೆ ಶ್ರೀನಗರ ಕಿಟ್ಟಿ ತಂನಂ ತಂನಂ
ಪೂಜಾಗಾಂಧಿ ಅವರ ಮಹತ್ವಾಕಾಂಕ್ಷಿ ಚಿತ್ರ 'ಅಭಿನೇತ್ರಿ' ಚಿತ್ರಕ್ಕೆ ಹೊಸ ಸ್ಟಾರ್ ಆಗಮನವಾಗಿದೆ. ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಅವರು ಈ ಚಿತ್ರಕ್ಕೆ ಎಂಟ್ರಿ ಕೊಡುವ ಮೂಲಕ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಕೆರಳಿಸಿದ್ದಾರೆ.
ಇದು ಮಿನುಗು ತಾರೆ ಕಲ್ಪನಾ ಅಥವಾ ಮಂಜುಳಾ ಅವರ ಜೀವನ ಕಥೆಯಲ್ಲಾ ಎಂದು ಪೂಜಾಗಾಂಧಿ ಈ ಹಿಂದೆಯೇ ಸ್ಪಷ್ಟಪಡಿಸಿದ್ದರೂ ಚಿತ್ರದ ಸ್ಟಿಲ್ಸ್ ಮಾತ್ರ ಅದೇ ರೀತಿ ಇರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿವೆ. ಇದೀಗ ಶ್ರೀನಗರ ಕಿಟ್ಟಿ ಜೊತೆಗಿನ ತಂನಂ ತಂನಂ ಹಾಡನ್ನು ಚಿತ್ರೀಕರಿಸಲಾಯಿತು. [ಬೆತ್ತಲೆ ಬೆನ್ನು ತೋರಿದ 'ಅಭಿನೇತ್ರಿ' ಪೂಜಾಗಾಂಧಿ]
ಇದು ಸಹ ಕಲ್ಪನಾ ಹಾಗೂ ಡಾ.ರಾಜ್ ಅವರನ್ನು ನೆನಪಿಸುವಂತಿದೆ. 'ಎರಡು ಕನಸು' ಚಿತ್ರದ "ತಂನಂ ತನಂ.." ಹಾಡನ್ನು ಇಲ್ಲಿ ರೀಮಿಕ್ಸ್ ನಲ್ಲಿ ಬಳಸಿಕೊಳ್ಳಲಾಗಿದೆ. ಸುಮಧುರ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಡನ್ನು ಹಾಡಿದ್ದು ಸತೀಶ್ ಪ್ರಧಾನ್ ಆಕ್ಷನ್ ಕಟ್ ಹೇಳಿದ್ದಾರೆ.ಅರುವತ್ತು, ಎಪ್ಪತ್ತರ ದಶಕದ ತಾರೆಯೊಬ್ಬಳ ಕಥೆ ಇದು ಎಂದಿರುವ ಅವರು, ಅಂದಿನ ಚಿತ್ರೋದ್ಯಮ ಹೇಗಿತ್ತು ಎಂಬ ಬಗ್ಗೆಯೂ ಬೆಳಕು ಚೆಲ್ಲುತ್ತಿದ್ದಾರೆ. ಈ ಚಿತ್ರ ಯಾವುದೇ ತಾರೆ ಕುರಿತಾದ ಚಿತ್ರವಲ್ಲ. ಅರುವತ್ತು, ಎಪ್ಪತ್ತರ ದಶಕದಲ್ಲಿ ತಾರೆಯೊಬ್ಬಳ ಕಥೆ ಎಂದಿದ್ದಾರೆ ಪೂಜಾಗಾಂಧಿ.
ಇನ್ನು ಈ ಚಿತ್ರಕ್ಕೆ ಶ್ರೀನಗರ ಕಿಟ್ಟಿ ಅವರು ನಯಾಪೈಸೆ ತೆಗೆದುಕೊಳ್ಳದೆ ಈ ಹಾಡಿನಲ್ಲಿ ಹೆಜ್ಜೆ ಹಾಕಿರುವುದು ವಿಶೇಷ. ಸತೀಶ್ ಪ್ರಧಾನ್ ನಿರ್ದೇಶಿಸುತ್ತಿರುವ ಈ ಚಿತ್ರದ ಪಾತ್ರವರ್ಗದಲ್ಲಿ ಪೂಜಾಗಾಂಧಿ ಜೊತೆ ಮಕರಂದ್ ದೇಶ್ ಪಾಂಡೆ, ರವಿಶಂಕರ್ ಇದ್ದಾರೆ. (ಏಜೆನ್ಸೀಸ್)


Click it and Unblock the Notifications












