ಗಾಂಧಿನಗರಕ್ಕೆ ಹಿಂತಿರುಗಿದ ಬೆಳದಿಂಗಳ ಬಾಲೆ!
ಸಾಫ್ಟ್ವೇರ್ ಉದ್ಯೋಗಿ ಗುರು ಕೈಹಿಡಿದ ಬಳಿಕ 'ನಮ್ಮೂರ ಮಂದಾರ ಹೂವೆ' ಸುಮನ್ ನಗರ್ಕರ್ ಸಪ್ತಸಾಗರದಾಚೆಗೆಲ್ಲೋ ಹಾರಿದ್ದರು. ದೂರದ ಸ್ಯಾನ್ಫ್ರಾನ್ಸಿಸ್ಕೊದಲ್ಲಿ ಸೆಟ್ಲ್ ಆಗಿದ್ದ ಆಕೆ ಈಗ ಮತ್ತೆ ಗಾಂಧಿನಗರಕ್ಕೆ ಹಿಂತಿರುಗಿದ್ದಾರೆ. ಸುದೀರ್ಘ ಸಮಯದ ಬಳಿಕ ಗಾಂಧಿನಗರಕ್ಕೆ ಹಿಂತಿರುಗಿದ್ದರೂ ಸುಮನ್ 'ಬೆಳದಿಂಗಳ ' ಕಾಂತಿ ಇನ್ನೂ ಮಸುಕಾಗಿಲ್ಲ.
ಹಿಂದಿ ಚಿತ್ರ 'ಕಗಾರ್'ನಲ್ಲಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ ನಗರ್ಕರ್. ಬಾಲಿವುಡ್ನ ಸರ್ವಕಾಲಿಕ ಶ್ರೇಷ್ಠ ಚಿತ್ರ 'ಕಾಗಜ್ ಕೆ ಪೂಲ್' ಚಿತ್ರದಲ್ಲಿನ ವಹೀದಾ ರೆಹಮಾನ್ ಅವರ ಗೆಟಪ್ನಲ್ಲಿ ಸುಮನ್ ನಗರ್ಕರ್ ಕಾಣಿಸಲಿದ್ದಾರೆ. ಇತ್ತೀಚೆಗೆ ಹೆಸರಘಟ್ಟದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಥೇಟ್ ವಹೀದಾ ರೆಹಮಾನ್ ಅವರಂತೆ ಸುಮನ್ ಕಂಗೊಳಿಸುತ್ತಿದ್ದರು.
"ನಾನು ಗುರುದತ್ ಮತ್ತು ವಹೀದಾ ರೆಹಮಾನ್ ಅವರ ಅಭಿಮಾನಿ. ಈ ರೀತಿಯ ಪಾತ್ರದಲ್ಲಿ ನಟಿಸುತ್ತಿರುವ ಬಗ್ಗೆ ಹೆಮ್ಮೆ ಇದೆ. ಅದರಲ್ಲೂ ಮುಖ್ಯವಾಗಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ವಿ ಕೆ ಮೂರ್ತಿ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ ಎಂದರೆ, ಈ ಛಾನ್ಸ್ ಯಾರಿಗೆ ಸಿಗುತ್ತದೆ ಹೇಳಿ" ಎನ್ನುತ್ತಾರೆ ನಗರ್ಕರ್.
'ಸಂಕಲನ' ಧಾರಾವಾಹಿ ಮೂಲಕ ಸುಮನ್ ನಗರ್ಕರ್ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಬಳಿಕ ಆಕೆ ಕನ್ನಡದ ಕಲ್ಯಾಣ ಮಂಟಪ, ನಿಷ್ಕರ್ಷ, ಬೆಳದಿಂಗಳ ಬಾಲೆ, ನಮ್ಮೂರ ಮಂದಾರ ಹೂವೆ, ಹೂ ಮಳೆ ಚಿತ್ರಗಳಲ್ಲಿ ಮನಮಿಡಿಯುವ ಪಾತ್ರಗಳನ್ನು ಪೋಷಿಸಿದ್ದರು. ಕ್ರೇಜಿ ಸ್ಟಾರ್ ಜತೆ 'ಪ್ರೀತ್ಸು ತಪ್ಪೇನಿಲ್ಲ' ಚಿತ್ರವೇ ಸುಮನ್ ಅಭಿನಯದ ಕೊನೆಯ ಕನ್ನಡ ಚಿತ್ರ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಾನೇನು ಸುಮ್ಮನೆ ಕುಳಿತಿಲ್ಲ ಎನ್ನುವ ಸುಮನ್, ಅಲ್ಲಿನ ಮಕ್ಕಳಿಗೆ ಹಿಂದೂಸ್ತಾನಿ ಸಂಗೀತವನ್ನು ಕಲಿಸುತ್ತಿದ್ದಾರಂತೆ. ಆನಿಮೇಷನ್, ಗ್ರಾಫಿಕ್ಸ್, ಸಂಕಲನ ಹೀಗೆ ತಾಂತ್ರಿಕ ತರಬೇತಿಯನ್ನು ಪಡೆದಿದ್ದಾರೆ. ಬಿಡುವಿನ ವೇಳೆಯಲ್ಲಿ ಚಿತ್ರಗಳನ್ನು ನೋಡುತ್ತಿರುತ್ತೇನೆ. ಮುಂದೊಂದು ದಿನ ಚಿತ್ರವೊಂದನ್ನು ನಿರ್ದೇಶಿಸುವ ಕನಸನ್ನು ಹೊತ್ತಿರುವುದಾಗಿ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಗಾಂಧಿನಗರದಲ್ಲಿ ಹೊಸ ಬೆಳದಿಂಗಳು ಮೂಡಿದೆ. [ಬಾಲಿವುಡ್]


Click it and Unblock the Notifications











